ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣಕ್ಕೆ ಹೊರಟವರಿಗೆ ಶಾಕ್: ಖಾಸಗಿ ಬಸ್ ಟಿಕೆಟ್​ ದರ ದುಪ್ಪಟ್ಟು

ಬೆಂಗಳೂರು ಮಂಗಳೂರು ರೈಲು ಸಂಚಾರ ಸ್ಥಗಿತಗೊಂಡಿರುವುದು ಖಾಸಗಿ ಬಸ್​​​ನವರಿಗೆ ವರವಾಗಿ ಪರಿಣಮಿಸಿದೆ! ಆದರೆ, ಪ್ರಯಾಣಿಕರನ್ನು ಸಂಕಷ್ಟಕ್ಕೆ ದೂಡಿದೆ. ಇದೇ ತಕ್ಕ ಸಮಯವೆಂದುಕೊಂಡ ಖಾಸಗಿ ಬಸ್​​ಗಳು ಇದೀಗ ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಟಿಕೆಟ್ ದರವನ್ನು ಎರಡ್ಮೂರು ಪಟ್ಟು ಹೆಚ್ಚಿಸಿವೆ. ಈಗೆಷ್ಟಿದೆ ಬಸ್ ಟಿಕೆಟ್ ದರ ಎಂಬ ಮಾಹಿತಿ ಇಲ್ಲಿದೆ.

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣಕ್ಕೆ ಹೊರಟವರಿಗೆ ಶಾಕ್: ಖಾಸಗಿ ಬಸ್ ಟಿಕೆಟ್​ ದರ ದುಪ್ಪಟ್ಟು
ಖಾಸಗಿ ಬಸ್ ಟಿಕೆಟ್​ ದರ ದುಪ್ಪಟ್ಟು (ಸಾಂದರ್ಭಿಕ ಚಿತ್ರ)
Edited By:

Updated on: Jul 29, 2024 | 10:40 AM

ಬೆಂಗಳೂರು, ಜುಲೈ 29: ಬೆಂಗಳೂರು ಮಂಗಳೂರು ನಡುವಣ ರೈಲು ಸಂಚಾರ ಸ್ಥಗಿತಗೊಂಡಿರುವುದು ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇಗುಲಗಳಿಗೆ ತೆರಳುವ ಭಕ್ತರ ಸಂಕಷ್ಟಕ್ಕೆ ಕಾರಣವಾಗಿದೆ. ಖಾಸಗಿ ಬಸ್​​ಗಳು ಬೇಕಾಬಿಟ್ಟಿಯಾಗಿ ಟಿಕೆಟ್​​ ದರ ನಿಗದಿಪಡಿಸುತ್ತಿದ್ದು, ಪರಿಣಾಮವಾಗಿ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು ಕಡೆ ತೆರಳುವ ಬಸ್ ಟಿಕೆಟ್ ದರ ದುಬಪ್ಪಟ್ಟು ಹಾಗೂ ಅದಕ್ಕಿಂತಲೂ ಹೆಚ್ಚಾಗಿರುವುದು ಗೊತ್ತಾಗಿದೆ.

ರಾಜ್ಯಾದ್ಯಂತ ಭಾರಿ ಮಳೆಯಿಂದ ಹಲವಡೆ ಭೂಕುಸಿತವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎಡಕುಮೇರಿ ಬಳಿ ರೈಲು ಹಳಿ ಇರುವ ಜಾಗದಲ್ಲಿ ಭೂಕುಸಿತ ಉಂಟಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ. ಒಟ್ಟಾರೆಯಾಗಿ 14 ರೈಲುಗಳ ಸಂಚಾರ ಸ್ಥಗಿತಗೊಂಡಿದೆ.

ಖಾಸಗಿ ಬಸ್ ಟಿಕೆಟ್ ದರ ಎಷ್ಟಿದೆ?

ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಟಿಕೆಟ್​ ದರ ದುಪ್ಪಟ್ಟಾಗಿದ್ದು, ಕೆಲವು ಬಸ್​​ಗಳಂತೂ ಎರಡ್ಮೂರು ಪಟ್ಟು ದರ ಏರಿಕೆ ಮಾಡಿವೆ. ಉಭಯ ನಗರಗಳ ಮಧ್ಯೆ ಬಸ್ ಪ್ರಯಾಣಕ್ಕೆ 500-600 ರೂ. ಇದ್ದ ಟಿಕೆಟ್ ದರ ಈಗ 1000 ರೂ.ನಿಂದ 1,200 ರೂ.ಗೆ ಏರಿಕೆಯಾಗಿದೆ.

ಎಸಿ ಬಸ್ ಟಿಕೆಟ್​​ ದರ 2000 ರೂ.ನಿಂದ 4000 ರೂ.ಗೆ ಏರಿಕೆಯಾಗಿದೆ. ಪರಿಣಾಮವಾಗಿ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕಡೆ ಹೊರಟ ಜನರಿಗೆ ತೊಂದರೆಯಾಗಿದೆ.

ಇದೇ ಮೊದಲಲ್ಲ

ಅನಿವಾರ್ಯ ಸಂದರ್ಭಗಳಲ್ಲಿ ಬೆಂಗಳೂರು ಮಂಗಳೂರು ಖಾಸಗಿ ಬಸ್​​ಗಳು ಟಿಕೆಟ್ ದರ ವಿರೀತ ಏರಿಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಹಬ್ಬಗಳ ಸಂದರ್ಭ, ಸರಣಿ ರಜೆಗಳ ಸಂದರ್ಭದಲ್ಲಿ ಖಾಸಗಿ ಬಸ್​​ಗಳು ಟಿಕೆಟ್ ದರವನ್ನು ಎರಡ್ಮೂರು ಪಟ್ಟು ಏರಿಕೆ ಮಾಡುತ್ತವೆ. ಇದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಪ್ರತಿ ಬಾರಿ ವ್ಯಕ್ತವಾಗುತ್ತಿದೆ. ಆದರೆ, ಟಿಕೆಟ್ ದರ ಏರಿಕೆ ಮುಂದುವರಿದೇ ಇದೆ.

ಬೆಂಗಳೂರು ಮಂಗಳೂರು ವಿಮಾನ ಟಿಕೆಟ್ ಕೂಡ ದುಬಾರಿ

ರೈಲು ಸಂಚಾರ ರದ್ದಾದ ಬೆನ್ನಲ್ಲೇ, ಖಾಸಗಿ ಬಸ್​​ಗಳ ಜೊತೆಗೆ ಬೆಂಗಳೂರು ಮಂಗಳೂರು ವಿಮಾನ ಟಿಕೆಟ್ ದರ ಕೂಡ ದುಪ್ಪಟ್ಟಾಗಿದೆ. ಸಾಮಾನ್ಯವಾಗಿ ಉಭಯ ನಗರಗಳ ನಡುವಣ ವಿಮಾನ ಪ್ರಯಾಣ ದರ 3 ರಿಂದ 4 ಸಾವಿರ ರೂ. ಇರುತ್ತಿದ್ದರೆ ಈಗ ಏಕಾಏಕಿ ವಿಮಾನಯಾನ ದರ 10,000 ರೂ.ಗೆ ಏರಿಕೆಯಾಗಿದೆ. ಇಂದಿನ ಕೆಲ ವಿಮಾನಗಳಲ್ಲಿ 7,500 ರಿಂದ 16 ಸಾವಿ ರೂ.ವರಗೆ ಟಿಕೆಟ್ ದರ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು ಮಂಗಳೂರು ರೈಲು ಸಂಚಾರ ಸದ್ಯಕ್ಕೆ ಅನುಮಾನ: ರೈಲ್ವೆ ಇಲಾಖೆ ನೀಡಿದ ಮಹತ್ವದ ಮಾಹಿತಿ ಇಲ್ಲಿದೆ

ಕಳೆದ ವಾರವಷ್ಟೇ ಶಿರಾಡಿ ಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸಿ ರಸ್ತೆ ಸಂಚಾರ ಕೆಲವು ದಿನಗಳ ಕಾಲ ಬಂದ್ ಆಗಿತ್ತು. ಅತ್ತ ಸಂಪಾಜೆ ಘಾಟಿಯಲ್ಲಿಯೂ ರಾತ್ರಿ ಸಂಚಾರ ಬಂದ್ ಆಗಿದ್ದರಿಂದ ಬೆಂಗಳೂರು ಮಂಗಳೂರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆ ವಿಶೇಷ ರೈಲುಗಳನ್ನು ಹೊರಡಿಸಿದ್ದ ರೈಲ್ವೆ ಇಲಾಖೆ ಪ್ರಯಾಣಿಕರ ನೆರವಿಗೆ ಧಾವಿಸಿತ್ತು. ಇದೀಗ ರೈಲು ಸಂಪರ್ಕವೂ ಕಡಿತಗೊಂಡಿರುವುದರಿಂದ ಪ್ರಯಾಣಿಕರಿಗೆ ಬಸ್ಸೇ ಆಧಾರವಾಗಿದೆ. ಆದರೆ ಬಸ್ ಟಿಕೆಟ್ ದರ ವಿಪರೀತ ಏರಿಕೆಯಾಗಿರುವುದು ಸಂಕಷ್ಟ ತಂದೊಡ್ಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:17 am, Mon, 29 July 24

Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Follow Us