
ಬೆಂಗಳೂರು, ಡಿಸೆಂಬರ್ 05: ಇತ್ತೀಚೆಗೆ ಕರ್ನಾಟಕದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ 250ಕ್ಕೂ ಹೆಚ್ಚು ಔಷಧಗಳು (Medicine) ದಾಸ್ತಾನಿಲ್ಲದಿರುವ ವಿಚಾರ ಬೆಳಕಿಗೆ ಬಂದಿತ್ತು. ಇನ್ನು ಕೂಡ ಈ ಕೊರತೆಯನ್ನು ಆರೋಗ್ಯ ಇಲಾಖೆ ಸರಿಪಡಿಸಿಲ್ಲ. ಔಷಧಗಳ ಖರೀದಿಗೆ ಹಣ ನೀಡಿದ್ದೇವೆ ಎಂದು ಆರೋಗ್ಯ ಸಚಿವರು ಹೇಳಿದ್ದರು. ಆದರೂ ಕೂಡ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಸಮಸ್ಯೆ ಇನ್ನೂ ನಿಂತಿಲ್ಲ. ಹೀಗಾಗಿ ರೋಗಿಗಳು ಪರದಾಡುವಂತಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಇದ್ದರೆ, ಮತ್ತೊಂದು ಮಾತ್ರೆ ಇರಲ್ಲ. ಒಂದು ವಾರದಲ್ಲಿ ಮೆಡಿಸಿನ್ ಸ್ಟಾಕ್ ಇರುತ್ತೆ ಬಳಿಕ ಖಾಲಿ ಆಗುತ್ತದೆ. ನಗರದ ಕೆಸಿ ಜನರಲ್, ವಿಕ್ಟೋರಿಯಾ ಸೇರಿದಂತೆ ಅನೇಕ ಆಸ್ಪತ್ರೆಗಳಲ್ಲಿ ಔಷಧಗಳು ದಾಸ್ತಾನಿಲ್ಲ. ಬಿಪಿ, ಶುಗರ್ ಸೇರಿದಂತೆ ಅನೇಕ ಮಾತ್ರೆಗಳು ಸಿಗುತ್ತಿಲ್ಲ.
ಇದನ್ನೂ ಓದಿ: ಕರ್ನಾಟಕ ಸರ್ಕಾರಿ ಆಸ್ಪತ್ರೆಗಳಿಗೆ ಹೋದ್ರೆ ಇಲ್ಲ ಔಷಧ ಗ್ಯಾರಂಟಿ! 250ಕ್ಕೂ ಹೆಚ್ಚು ಔಷಧಗಳು ಔಟ್ ಆಫ್ ಸ್ಟಾಕ್
ಆಸ್ಪತ್ರೆಯ ಔಷಧಾಲಯಗಳಲ್ಲಿ ಕೂಡ ಔಷಧಗಳು ಇಲ್ಲ. ಹೀಗಾಗಿ ಆಸ್ಪತ್ರೆ ಸಿಬ್ಬಂದಿಗಳು ಹೊರಗಡೆ ಚೀಟಿ ಬರೆದು ಕೊಡುತ್ತಿದ್ದು, ರೋಗಿಗಳು ಹಣ ಕೊಟ್ಟು ಹೊರಗೆ ಔಷಧಿ ಖರೀದಿ ಮಾಡುತ್ತಿದ್ದಾರೆ. ಬೇರೆ ಕಡೆಗಳಲ್ಲಿ ಔಷಧಗಳಿಗೆ ಹೆಚ್ಚು ಹಣ ನೀಡಬೇಕು. ನಮ್ಮ ಬಳಿ ಹಣ ಇಲ್ಲ. ನಮಗೆ ಔಷಧಿ ಕೊಡಿಸಿ ಎಂದು ರೋಗಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಹಿಂದೆ 250 ಔಷಧಗಳು ಖಾಲಿಯಾಗಿತ್ತು. ಈಗಲೂ ಸರಿಯಾಗಿ ಔಷಧಗಳು ಸಿಗುತ್ತಿಲ್ಲ.
ಕಳೆದ ಒಂದು ತಿಂಗಳಿಂದ ರೋಗಿಗಳಿಗೆ ಬೇಕಾದ ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಗ್ಲೂಕೋಸ್ ಬಾಟಲ್, ಆ್ಯಂಟಿಬಯೋಟಿಕ್ ಮಾತ್ರೆ, ಪ್ಯಾರಸೆಟೋಮೋಲ್, ಡಯಬಿಟಿಸ್, ಬಿಪಿ, ರಕ್ತಹೀನತೆ, ನ್ಯೂಮೋನಿಯಾ, ಅಸ್ತಮಾ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಔಷಧಿಗಳು ಔಟ್ಆಫ್ ಸ್ಟಾಕ್ ಆಗಿದ್ದು, ಮೆಡಿಕಲ್ಗೆ ಹೋದ ರೋಗಿಗಳು ಹಾಗೂ ಸಂಬಂಧಿಕರು ಬರೀ ಕೈಯಲ್ಲಿ ಬರುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ರಾಜ್ಯದಲ್ಲಿ ಔಷಧಿ ಅಭಾವ ಕುರಿತು ಪ್ರತಿಕ್ರಿಯಿಸಿದ್ದ ಸಚಿವ ದಿನೇಶ್ ಗುಂಡೂರಾವ್, ಕೆಲವು ಔಷಧಿಗಳನ್ನ ಖರೀದಿ ಮಾಡುವ ಪ್ರಕ್ರಿಯೆ ಅಂತಿಮವಾಗಿಲ್ಲ. ಕೆಲ ತಾಂತ್ರಿಕ ಕಾರಣದಿಂದ ಟೆಂಡರ್ ವಿಳಂಬವಾಗಿದೆ. ಹೀಗಾಗಿ ಸ್ಥಳೀಯ ಮಟ್ಟದಲ್ಲಿ ಔಷಧಿ ಖರೀದಿ ಮಾಡಲು ಸೂಚನೆ ಕೊಟ್ಟಿದ್ದೇವೆ. ಔಷಧಿ ಖರೀದಿಸಲು ಹಣ ಕೂಡ ಒದಗಿಸಿದ್ದೇವೆ. ನಮ್ಮ ಸರ್ಕಾರ ಬರುವ ಮುನ್ನ ಕೇಬಲ 40% ಮಾತ್ರ ಔಷಧಿ ಪೂರೈಕೆಯಾಗುತ್ತಿತ್ತು. ಆದರೆ ಇದೀಗಾ 75% KSMSCL ನಿಂದಲೇ ಔಷಧಿ ಸರಬರಾಜು ಮಾಡುತ್ತಿದ್ದೇವೆ. ಸದ್ಯ ನಮ್ಮ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇಲ್ಲ, ಯಾವ ಔಷಧಿಗಳು ಇಲ್ಲ ಅದನ್ನು ಸ್ಥಳೀಯವಾಗಿ ಖರೀದಿ ಮಾಡಲು ಹೇಳಿದ್ದೇವೆ ಎಂದಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.