ಬೆಂಗಳೂರಲ್ಲಿ ನೀರಿನ ಬರ ಎಷ್ಟಿದೆ ಅಂದ್ರೆ ಜನ ಶೌಚ ಮಾಡಲು ಮಾಲ್‌ಗೆ ಹೋಗ್ತಿದ್ದಾರೆ

ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನೀರಿಗಾಗಿ ಹಾಹಾಕಾರ ಶುರುವಾಗಿದೆ. ನಗರದಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ಮಧ್ಯೆ ಜನರು ಶೌಚಾಲಯಗಳನ್ನು ಬಳಸಲು ಹತ್ತಿರದ ಮಾಲ್‌ಗಳಿಗೆ ಹೋಗುತ್ತಿದ್ದಾರೆ ಎಂದು ನಗರದ ನಿವಾಸಿಯೊಬ್ಬರು ಹೇಳಿದ್ದಾರೆ. ಜನರು ಸ್ನಾನ ಮಾಡಲು ಜಿಮ್‌ಗಳಿಗೆ ಹೋಗುತ್ತಿದ್ದಾರೆ ಎಂದು ಮತ್ತೋರ್ವ ವ್ಯಕ್ತಿ ಹೇಳಿರುವುದಾಗಿ ವರದಿ ಆಗಿದೆ.

ಬೆಂಗಳೂರಲ್ಲಿ ನೀರಿನ ಬರ ಎಷ್ಟಿದೆ ಅಂದ್ರೆ ಜನ ಶೌಚ ಮಾಡಲು ಮಾಲ್‌ಗೆ ಹೋಗ್ತಿದ್ದಾರೆ
ಪ್ರಾತಿನಿಧಿಕ ಚಿತ್ರ

Updated on: Mar 08, 2024 | 10:51 PM

ಬೆಂಗಳೂರು, ಮಾರ್ಚ್​ 08: ಟ್ಯಾಂಕಲ್ಲೂ ಇಲ್ಲ, ಸಂಪಲ್ಲೂ ಇಲ್ಲ, ಕುಡಿಯೋಕೂ ನೀರಿಲ್ಲ (water), ತೊಳೆಯೋಕೂ ನೀರಿಲ್ಲ, ಬೆಂಗಳೂರಿನಲ್ಲಿ ನೀರಿಲ್ಲಂದತ್ತಾಗಿದೆ. ನಗರದಲ್ಲಿ ತೀವ್ರ ನೀರಿನ ಬಿಕ್ಕಟ್ಟಿನ ಮಧ್ಯೆ ಜನರು ಶೌಚಾಲಯಗಳನ್ನು ಬಳಸಲು ಹತ್ತಿರದ ಮಾಲ್‌ಗಳಿಗೆ ಹೋಗುತ್ತಿದ್ದಾರೆ ಎಂದು ನಗರದ ನಿವಾಸಿಯೊಬ್ಬರು ಹೇಳಿದ್ದಾರೆ. ಜನರು ಸ್ನಾನ ಮಾಡಲು ಜಿಮ್‌ಗಳಿಗೆ ಹೋಗುತ್ತಿದ್ದಾರೆ ಎಂದು ಮತ್ತೋರ್ವ ವ್ಯಕ್ತಿ ಹೇಳಿರುವುದಾಗಿ ವರದಿ ಆಗಿದೆ. ಒಂದು ತಿಂಗಳಿಂದ ತಮಗೆ ನಿಯಮಿತ ನೀರು ಸರಬರಾಜು ಮಾಡಿಲ್ಲ ಎಂದು ಪ್ರೆಸ್ಟೀಜ್ ಫಾಲ್ಕನ್ ಸಿಟಿಯ ಫ್ಲಾಟ್‌ನಲ್ಲಿ ವಾಸಿಸುತ್ತಿರುವ ನಿವಾಸಿ ಹೇಳಿದ್ದಾರೆ.

ಪ್ರೆಸ್ಟೀಜ್ ಫಾಲ್ಕನ್ ಸಿಟಿಯ ಜನರು 1 ಕೋಟಿ ರೂ. ಇಎಂಐ ಪಾವತಿಸುತ್ತಿದ್ದಾರೆ. ಆದರೆ ಶೌಚಾಲಯದಲ್ಲಿ ಫ್ಲಶ್ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ನೀರಿಲ್ಲ. ನಾವು ಎಲ್ಲಿಗೆ ಬಂದಿದ್ದೇವೆ? ಇದಕ್ಕೆ ನಿಮ್ಮ ದೀರ್ಘಾವಧಿಯ ಪರಿಹಾರವೇನು? ಸೂಕ್ತ ನೀರಿಲ್ಲದ ಫ್ಲಾಟ್​ಗಳ ಖರೀದಿಸುವುದನ್ನು ನಿಲ್ಲಿಸಿ ಎಂದು ನಿವಾಸಿಗಳು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ಗೆ ಮನವಿ ಮಾಡಿದ್ದಾರೆ.


ಹೆಚ್ಚಿನ ಬಾಡಿಗೆದಾರರು ಮನೆ ಖಾಲಿ ಮಾಡಿದ್ದರೆ, ಇತರರು ತಾತ್ಕಾಲಿಕ ವಸತಿಗಳಿಗೆ ತೆರಳಿದ್ದಾರೆ. ನೀರಿಲ್ಲದ ಪರಿಣಾಮ ಶೌಚಾಲಯಗಳು ಸ್ವಚ್ಚಗೊಳಿಸದಿರುವುದರಿಂದ ಗಬ್ಬು ವಾಸನೆ ಬರುತ್ತಿವೆ. ಹೀಗಾಗಿ ಜನರು ತಮ್ಮ ನಿತ್ಯಕರ್ಮಗಳನ್ನು ಮಾಡಲು ಹತ್ತಿರದ ಮಾಲ್‌ಗೆ ಹೋಗುತ್ತಿರುವುದು ಸಾಮಾನ್ಯವಾಗಿದೆ ಎಂದು ನಿವಾಸಿಯೊಬ್ಬರು ಪೋಸ್ಟ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕಾರು ವಾಷಿಂಗ್, ಗಾರ್ಡನ್​ಗೆ ನೀರು ಬಳಕೆ ಮಾಡಿದರೆ 5 ಸಾವಿರ ರೂ. ದಂಡ

ಇನ್ನು ಕೆಲ ಜನರು ಬಟ್ಟೆ ಮತ್ತು ಟವೆಲ್ ಜೊತೆಗೆ ಜಿಮ್‌ಗಳಿಗೆ ತೆರಳುತ್ತಿದ್ದು, ಇಲ್ಲಿಯೇ ಸ್ನಾನ ಮಾಡಿ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ಟ್ಯಾಂಕರ್ ನೀರಿನ ಮೇಲೆ ಅವಲಂಬಿತವಾಗಿರುವ ಫ್ಲಾಟ್‌ಗಳನ್ನು ಖರೀದಿಸದಂತೆ ಫ್ಲಾಟ್‌ ನಿವಾಸಿಗಳು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನೀರಿಗಾಗಿ ಹಾಹಾಕಾರ ಎದ್ದಿದೆ. ಅದೆಷ್ಟರ ಮಟ್ಟಿಗೆ ಅಂದರೆ ಖುದ್ದು ಸಿಎಂ ಸಿದ್ದರಾಮಯ್ಯ ನಿವಾಸಕ್ಕೆ ಟ್ಯಾಂಕರ್ ಮೂಲಕ ನೀರು ಹರಿಸಲಾಗುತ್ತಿದೆ. ಇಷ್ಟೊಂದು ನೀರಿನ ಸಮಸ್ಯೆ ಎದುರಿಸುತ್ತಿರುವ ಬೆಂಗಳೂರಿನಲ್ಲಿ ಜನ ಪರದಾಡುತ್ತಿದ್ದಾರೆ. ಅದ್ರಲ್ಲೂ ಯಶವಂತಪುರ ಕ್ಷೇತ್ರದ ತಿಪ್ಪೇನಹಳ್ಳಿಯಲ್ಲಿ ಜನರಂತೂ ಹಬ್ಬದ ದಿನವೂ ಜೀವ ಜಲಕ್ಕಾಗಿ ಬೀದಿಗಿಳಿದಿದ್ದರು.

ಇದನ್ನೂ ಓದಿ: ಬೆಂಗಳೂರಿನ ಪ್ರಮುಖ ಎರಡು ಕೆರೆಗಳ ಪುನರುಜ್ಜೀವನ ಕಾಮಗಾರಿಯಲ್ಲಿ ವಿಳಂಬ; ಬತ್ತಿದ ಬೋರ್​ವೆಲ್​ಗಳು

ದೊಡ್ಡಬಿದರಕಲ್ಲು ವಾರ್ಡ್ ವ್ಯಾಪ್ತಿಯಲ್ಲಿರೋ ತಿಪ್ಪೇನಹಳ್ಳಿಯಲ್ಲಿ 15 ದಿನಕ್ಕೊಮ್ಮೆ ನೀರು ಬರ್ತಿದೆಯಂತೆ. ಹೀಗಾಗಿ ರಸ್ತೆಯಲ್ಲಿ ಹೋಗ್ತಿದ್ದ ಖಾಸಗಿ ವಾಟರ್ ಟ್ಯಾಂಕರ್ ತಡೆದು ಸ್ಥಳೀಯರು ನೀರು ತುಂಬಿಸಿಕೊಂಡಿದ್ದಾರೆ. ಬಿಂದಿಗೆ, ಕ್ಯಾನ್​ಗಳಲ್ಲಿ ಸ್ಥಳೀಯರು ನೀರು ಕೊಂಡೊಯ್ದಿದ್ದಾರೆ. ಜನರ ಆಕ್ರೋಶಕ್ಕೆ ವಾಟರ್ ಟ್ಯಾಂಕರ್ ಚಾಲಕ ಕಕ್ಕಾಬಿಕ್ಕಿಯಾದ ಘಟನೆ ನಡೆಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us