ಬೆಳಗಾವಿ ಅಧಿವೇಶನ 2023: ಸರ್ಕಾರಿ ಹುದ್ದೆಗಳ ನೇಮಕಾತಿ ಅಕ್ರಮ ತಡೆಗಟ್ಟಲು ಸಾರ್ವಜನಿಕ ಪರೀಕ್ಷೆ ವಿಧೇಯಕ ಮಂಡನೆ

|

Updated on: Dec 06, 2023 | 7:41 PM

ಇಂದಿನ (ಡಿ.06) ವಿಧಾನ ಮಂಡಲ ಅಧಿವೇಶನಕ್ಕೆ ತೆರೆ ಬಿದ್ದಿದೆ. ಅಧಿವೇಶನ ಆರಂಭವಾಗಿ ಮೂರು ದಿನಗಳು ಕಳೆದಿವೆ. ಬುಧವಾರದ ಅಧಿವೇಶನ ಕೂಡ ಗದ್ದಲದಿಂದ ಕೂಡಿತ್ತು. ಈ ಗದ್ದಲದ ನಡುವೆಯೂ ವಿಧಾನಸಭೆಯಲ್ಲಿ ವಿಧೇಯಕಗಳು ಮಂಡನೆಯಾಗಿವೆ. ಅದರಲ್ಲಿ ಒಂದು ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಸೂಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ. ಹಾಗಿದ್ದರೇ ಈ ವಿಧೇಯಕದಲ್ಲಿ ಏನು ಅಡಗಿದೆ ಇಲ್ಲಿದೆ ಓದಿ...

ಬೆಳಗಾವಿ ಅಧಿವೇಶನ 2023: ಸರ್ಕಾರಿ ಹುದ್ದೆಗಳ ನೇಮಕಾತಿ ಅಕ್ರಮ ತಡೆಗಟ್ಟಲು ಸಾರ್ವಜನಿಕ ಪರೀಕ್ಷೆ ವಿಧೇಯಕ ಮಂಡನೆ
ಅಧಿವೇಶನ
Follow us on

ಬೆಳಗಾವಿ, ಡಿಸೆಂಬರ್​ 06: ಇಂದಿನ (ಡಿ.06) ವಿಧಾನ ಮಂಡಲ ಅಧಿವೇಶನಕ್ಕೆ (Legislative Session) ತೆರೆ ಬಿದ್ದಿದೆ. ಅಧಿವೇಶನ ಆರಂಭವಾಗಿ ಮೂರು ದಿನಗಳು ಕಳೆದಿವೆ. ಬುಧವಾರದ ಅಧಿವೇಶನ ಕೂಡ ಗದ್ದಲದಿಂದ ಕೂಡಿತ್ತು. ಈ ಗದ್ದಲದ ನಡುವೆಯೂ ವಿಧಾನಸಭೆಯಲ್ಲಿ (Assembly) ವಿಧೇಯಕಗಳು ಮಂಡನೆಯಾಗಿವೆ. ಅದರಲ್ಲಿ ಒಂದು ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಸೂಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ. ಹಾಗಿದ್ದರೇ ಈ ವಿಧೇಯಕದಲ್ಲಿ ಏನು ಅಡಗಿದೆ ಇಲ್ಲಿದೆ ಓದಿ…

ಸಾರ್ವಜನಿಕ ಪರೀಕ್ಷೆ ವಿಧೇಯಕ

ಈ ವಿಧೇಯಕವನ್ನು ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ಅಧಿನಿಯಮ 2023 ಎಂದು ಕರೆಯಲಾಗುತ್ತದೆ.

ಸ್ವಾಯತ್ತ ಸಂಸ್ಥೆಗಳು, ಪ್ರಾಧಿಕಾರಗಳು, ಮಂಡಳಿಗಳು ಅಥವಾ ನಿಗಮಗಳನ್ನು ಒಳಗೊಂಡಂತೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿನ ಅಥವಾ ಅದರಡಿಯಲ್ಲಿನ ಯಾವುದೇ ಹುದ್ದೆಯ ನೇಮಕಾತಿಗೆ ನಡೆಸುವ ಸಾರ್ವಜನಿಕ ಪರೀಕ್ಷೆಗಳಲ್ಲಿ ಅನುಚಿತ ಹಾಗೂ ಭ್ರಷ್ಟಾಚಾರವನ್ನು ಮತ್ತು ಪ್ರಶ್ನೆ ಪತ್ರಿಕೆಗಳ ಸೋರಿಕೆ ಅಥವಾ ಸೋರಿಕೆ ಮಾಡಲು ಯತ್ನಿಸುವುದನ್ನು ತಡೆಗಟ್ಟಲು ಈ ವಿಧೇಯಕವನ್ನು ನಿರ್ಮಿಸಲಾಗಿದೆ. ಅಲ್ಲದೆ ಸಾರ್ವಜನಿಕ ಪರೀಕ್ಷೆಯಲ್ಲಿ ಅಕ್ರಮ ಎಸಗುವವರ ವಿರುದ್ಧ ಕೈಗೊಳ್ಳಲಾಗುವ ಕ್ರಮಗಳ ಬಗ್ಗೆ ಈ ವಿಧೇಯಕದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ಬೆಳಗಾವಿ ಅಧಿವೇಶನ: ವಿಪಕ್ಷ ಸದಸ್ಯರು ಸದನದ ಸಮಯ ಹಾಳು ಮಾಡಿ ರಾಜ್ಯದ ಜನತೆಗೆ ದ್ರೋಹವೆಸಗುತ್ತಿದ್ದಾರೆ: ಸಿದ್ದರಾಮಯ್ಯ

ಸ್ವಾಯತ್ತ ಸಂಸ್ಥೆಗಳು, ಪ್ರಾಧಿಕಾರಗಳು, ಮಂಡಳಿಗಳು ಅಥವಾ ನಿಗಮಗಳಿಗೆ ಸೇರಿದಂತೆ ರಾಜ್ಯ ಸರ್ಕಾರದ ಯಾವುದೇ ಹುದ್ದೆ ನೇಮಕಾತಿಗೆ ನಡೆಯುವ ಪರೀಕ್ಷೆಯಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ, ಓಎಂಆರ್​ ಶೀಟುಗಳ ಮತ್ತು ಫಲಿತಾಂಶ ಪಟ್ಟಿಗಳ ಸಿದ್ಧತೆ, ಮುದ್ರಣ, ಮೇಲ್ವಿಚಾರಣೆ, ಕೋಡಿಂಗ್​, ಪರಿಷ್ಕರಣೆ, ಶೇಖರಣೆ, ಸಾಗಣೆ, ವಿತರಣೆ ಮತ್ತು ಸಂಗ್ರಹಣೆ, ಮೌಲ್ಯಮಾಪನ, ಫಲಿತಾಂಶ ಘೋಷಣೆಯಲ್ಲಿ ನಡೆಯವ ಅಕ್ರಮಗಳನ್ನು ತಡೆಯಲು ಈ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ.

ನೇಮಕಾತಿ ಪರೀಕ್ಷೆಗಳನ್ನು ಪರೀಕ್ಷಾ ಪ್ರಾಧಿಕಾರ, ಪರೀಕ್ಷೆ ನಡೆಯುವ ಕೇಂದ್ರ ಮತ್ತು ಪರೀಕ್ಷಾರ್ಥಿಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ವ್ಯಕ್ತಿ ಅಥವಾ ಗುಂಪಿನಿಂದ ಲಿಖಿತ, ದಾಖಲಿತ, ನಕಲಿತ ಅಥವಾ ಮುದ್ರಿತ ಸಾಮಗ್ರಿ, ಅನಧಿಕೃತ ವಿದ್ಯುನ್ಮಾನ ಅಥವಾ ಯಾಂತ್ರಿಕ ಸಾಧನ ಅಥವಾ ಉಪಕರಣದ ಮೂಲಕ ಸಾಹಾಯವನ್ನು ಪಡೆದರೇ ಶಿಕ್ಷಾರ್ಹ ಅಪರಾಧವಾಗಿದೆ.

ವಿಧಿಸಲಾಗುವ ಶಿಕ್ಷೆ

ಮೇಲೆ ತಿಳಿಸಲಾದ ಕೃತ್ಯಗಳನ್ನು ಎಸಗಿದರೇ, ಎಸಗಲು ಮುಂದಾದರೆ ಅಥವಾ ಸಂಚು ರೂಪಿಸಿದರೇ ಅಂತಹ ವ್ಯಕ್ತಿಗೆ 5 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ದಂಡ ತುಂಬಲು ಸಾಧ್ಯವಾಗದಿದ್ದರೇ 15 ತಿಂಗಳು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಥವಾ 8 ವರ್ಷಗಳು ಕಡಿಮೆಯಿರದ ಮತ್ತು 12 ವರ್ಷಗಳಿಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಸಲಗುತ್ತದೆ. ಇದರ ಜೊತೆಗೆ 15 ಲಕ್ಷ ರೂ. ಕಡಿಮೆಯಿರದ ಆದರೆ 10 ಕೋಟಿ ರೂ.ಗೆ ವಿಸ್ತರಿಸಬಹುದಾದ ದಂಡ ವಿಧಿಸಲಾಗುತ್ತದೆ. ಈ ದಂಡವನ್ನು ತುಂಬಲು ಸಾಧ್ಯವಾಗದಿದ್ದರೇ 2 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು. ಇದು ಮಾತ್ರವಲ್ಲದೆ ಆತನ ಆಸ್ತಿ ಜಪ್ತಿ ಮಾಡಿಕೊಳ್ಳಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:40 pm, Wed, 6 December 23