
ಬೆಂಗಳೂರು, ಜುಲೈ 21: ಸಿಎಂ ಡಿ.ಕೆ. ಶಿವಕುಮಾರ್ ಬೆಳಗಾವಿ ಪ್ರವಾಸದ ವೇಳೆ ಡಿಹೆಚ್ಒ ಯಡವಟ್ಟು ಮಾಡಿದ್ದು, ಅಡ್ವಾನ್ಸ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ ಮತ್ತು ತಜ್ಞ ವೈದ್ಯರ ನೇಮಿಸದೇ ಬೇಜವಾಬ್ದಾರಿ ತೋರಿರುವ ಆರೋಪ ಕೇಳಿಬಂದಿದೆ. ಸರ್ಕಾರ ನಿರ್ದೇಶನವಿದ್ದರೂ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ ನೀಡದೆ ಸಾಮಾನ್ಯ ಆ್ಯಂಬುಲೆನ್ಸ್ ನಿಯೋಜಿಸದ ಜೊತೆಗೆ ವೈದ್ಯಕೀಯ ತಂಡದೊಂದಿಗೆ ನಿರಂತರ ಸಂಪರ್ಕ ಸಾಧಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಅಲ್ಲದೆ, ಸಿಎಂ ವಾಸ್ತವ್ಯ ಸ್ಥಳದಲ್ಲಿ ತಜ್ಞ ವೈದ್ಯರ ಬದಲು ಪಿಜಿ ವೈದ್ಯರ ನಿಯೋಜನೆ ಮಾಡುವ ಮೂಲಕ ಕರ್ತವ್ಯಲೋಪ ಎಸಗಿರುವ ಹಿನ್ನೆಲೆ ಶಿಷ್ಟಾಚಾರ ಉಲ್ಲಂಘಿಸಿದ ಡಿಹೆಚ್ಒ ಈಶ್ವರ ಗಡಾದಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಮುಖ್ಯಮಂತ್ರಿಗಳ ಪ್ರವಾಸದ ವೇಳೆ ಅವರ ಭದ್ರತೆಗೆ ಅಗತ್ಯವಾಗಿದ್ದ ಅಡ್ವಾನ್ಸ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್ ಮತ್ತು ತಜ್ಞ ವೈದ್ಯರ ನೇಮಿಸದೇ ಇರುವುದು ಪರಿಶೀಲನೆ ವೇಳೆ ದೃಢಪಟ್ಟಿದೆ. ಅಲ್ಲದೆ ಆ ವೇಳೆ ತಾವು ಕೂಡ ಹಾಜರಿಲ್ಲದೆ ಇರುವುದು ಗಮನಕ್ಕೆ ಬಂದಿದ್ದು, ಕನಿಷ್ಠ ಸೌಲಭ್ಯಗಳಾದ ಗ್ಲುಕೋಮೀಟರ್ ಮತ್ತು ಬಿಪಿ ಅಪಾರ್ಚರ್ಸ್ ಸಹ ಇಲ್ಲದಿರೋದು ಗೊತ್ತಾಗಿದೆ. ವಿಐಪಿ/ವಿವಿಐಪಿ ಪ್ರೋಟೋಕಾಲ್ಗೆ ಅನುಗುಣವಾಗಿ ಸುಸಜ್ಜಿತ ಜೀವ ರಕ್ಷಕ ವಾಹನ ಹಾಗೂ ಅಗತ್ಯ ಉಪಕರಣಗಳನ್ನು ಒದಗಿಸದೆ ಕರ್ತವ್ಯಲೋಪ ಎಸಗಲಾಗಿದೆ ಎಂದು ಶೋಕಾಸ್ ನೋಟಿಸ್ನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ವಿಮೆ ಆಸೆಗೆ ತನ್ನದೇ ಅಂಗಡಿಯಲ್ಲಿ ಕಳ್ಳತನ ಮಾಡಿದ ಚಿನ್ನದಂಗಡಿ ಮಾಲೀಕ! ಕೊನೆಗೂ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ನಿಮ್ಮ ವಿರುದ್ಧ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದು ಎಂಬುದರ ಕುರಿತು ಈ ನೋಟಿಸ್ ಸ್ವೀಕರಿಸಿದ ದಿನಾಂಕದಿಂದ ಏಳು ದಿನಗಳ ಒಳಗಾಗಿ ಲಿಖಿತ ಸಮಜಾಯಿಷಿಯನ್ನು ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಕಾಲಮಿತಿಯೊಳಗೆ ಸಮರ್ಪಕ ಉತ್ತರ ಸಲ್ಲಿಸದಿದ್ದಲ್ಲಿ ಅಥವಾ ಉತ್ತರ ತೃಪ್ತಿಕರವಾಗಿರದಿದ್ದಲ್ಲಿ ಅನ್ವಯಿಸುವ ನಿಯಮಗಳಡಿ ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಸೂಚಿಸೋದಾಗಿ ಬೆಳಗಾವಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೋಟಿಸ್ನಲ್ಲಿ ತಿಳಿಸಿದ್ದಾರೆ.
Published On - 2:00 pm, Tue, 21 July 26