
ಬೆಳಗಾವಿ, ಏಪ್ರಿಲ್ 15: ಜಿಲ್ಲೆಯ ಹುಕ್ಕೇರಿ ತಾಲೂಕಿನ ನದಿಗುಡಿ ಪ್ರದೇಶದಲ್ಲಿ ನಡೆದ ಮರ್ಯಾದೆ ಹತ್ಯೆ (Honor Killing) ಪ್ರಕರಣವು ರಾಜ್ಯದಾದ್ಯಂತ ಆತಂಕ ಮೂಡಿಸಿದೆ. ಸತ್ತೆವ್ವಾ ಹೆಳವರ್ (25) ಎಂಬ ಯುವತಿಯನ್ನು ಕುಟುಂಬಸ್ಥರೇ ವಿಷ ನೀಡಿ ಹತ್ಯೆ ಮಾಡಿ, ಬಳಿಕ ಸಾಕ್ಷಿ ನಾಶಪಡಿಸಲು ಶವವನ್ನು ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಸತ್ತೆವ್ವಾ ನದಿಗುಡಿ ಗ್ರಾಮದ ಕೃಷ್ಣಾ ಪಾಟೀಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ಸಂಬಂಧ ಕುಟುಂಬಕ್ಕೆ ತಿಳಿದ ನಂತರ, ನಾಲ್ಕು ವರ್ಷಗಳ ಹಿಂದೆ ರಾಯಬಾಗ ತಾಲೂಕಿನ ಹನಬರಟ್ಟಿ ಗ್ರಾಮದ ಸಂತೋಷ ಹೆಳವಿ ಜೊತೆ ವಿವಾಹ ಮಾಡಲಾಗಿತ್ತು. ಆದಾಗ್ಯೂ, ಮದುವೆಯಾದ ಬಳಿಕವೂ ಸತ್ತೆವ್ವಾ ತನ್ನ ಪ್ರಿಯಕರ ಕೃಷ್ಣಾ ಜೊತೆ ಸಂಪರ್ಕದಲ್ಲಿದ್ದು, 17 ಫೆಬ್ರವರಿ 2026ರಂದು ಇಬ್ಬರೂ ಮನೆ ಬಿಟ್ಟು ಓಡಿ ಹೋಗಿ, ಸವದತ್ತಿ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಸುಮಾರು ಹದಿನೈದು ದಿನಗಳ ಹಿಂದೆ ಕುಟುಂಬಸ್ಥರು ಅವರನ್ನು ಪತ್ತೆಹಚ್ಚಿ ಮನೆಗೆ ಕರೆತಂದಿದ್ದರು. ಬಳಿಕ ಎರಡು ಕುಟುಂಬಗಳ ನಡುವೆ ರಾಜಿ ಸಂಧಾನವೂ ನಡೆದಿತ್ತು. ಕೃಷ್ಣನನ್ನು ಮರೆಯುವಂತೆ ಸತ್ತೆವ್ವಾಳ ಮೇಲೆ ಒತ್ತಡ ಹಾಕಲಾಗಿತ್ತು. ಆಕೆ ಒಪ್ಪದ ಹಿನ್ನೆಲೆಯಲ್ಲಿ, ಮೊದಲಿಗೆ ಮಹಾರಾಷ್ಟ್ರದ ಶಿರೋಳದಲ್ಲಿರುವ ಅಕ್ಕನ ಮನೆಗೆ ಕಳುಹಿಸಲಾಯಿತು. ಅಲ್ಲಿಯೂ ಒತ್ತಡ ಮುಂದುವರೆದ ಹಿನ್ನೆಲೆಯಲ್ಲಿ, ಸಾಂಗ್ಲಿ ಜಿಲ್ಲೆಯ ಅರಗ ಗ್ರಾಮಕ್ಕೆ ಕರೆದುಕೊಂಡು ಹೋಗಿ ಮಾರ್ಚ್ 21ರಂದು ವಿಷ ನೀಡಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಸತ್ತೆವ್ವಾಳ ಅಣ್ಣ ಶಾನೂರ ಹೆಳವರ್, ಚಿಕ್ಕಪ್ಪ ಪ್ರಕಾಶ್ ಹೆಳವರ್ ಮತ್ತು ಸಂಬಂಧಿ ಮಾಯಪ್ಪ ಹೆಳವಿ ಈ ಕೃತ್ಯವನ್ನೆಸಗಿದ್ದು, ಬಳಿಕ ಶವವನ್ನು ಸ್ಮಶಾನದಲ್ಲಿ ಸುಟ್ಟು ಹಾಕಿ, ಹಾಸಿಗೆ ಬಟ್ಟೆ ಸೇರಿಸಿ ಸಾಕ್ಷಿ ನಾಶಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ ಛತ್ತೀಸ್ಗಢದ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ; 9 ಕಾರ್ಮಿಕರು ಸಾವು, 15 ಜನರಿಗೆ ಗಾಯ
ಸತ್ತೆವ್ವಾ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪ್ರಿಯಕರ ಕೃಷ್ಣಾ, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಈ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಸತ್ತೆವ್ವಾಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೃಷ್ಣಾ ಮನವಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:54 am, Wed, 15 April 26