
ಬೆಳಗಾವಿ, ಮೇ 30: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿಯ ರಾಮಮಂದಿರ ಮಠವನ್ನು (Ram Mandir Mutt) ಗುರುವಾರ ಸ್ಥಳೀಯಾಡಳಿತ ಧ್ವಂಸಗೊಳಿಸಿದೆ. ರಾಮನ ಆರಾಧನೆ ನಡೆಯುತ್ತಿದ್ದ ಜಾಗದಲ್ಲಿ ಗುರುವಾರ ಜೆಸಿಬಿಗಳ ಘರ್ಜನೆ ಕೇಳಿಸಿತು. ಅಪಹರಣ ಮತ್ತು ಅತ್ಯಾಚಾರ ಆರೋಪದಲ್ಲಿ ಮಠದ ಲೋಕೇಶ್ವರ ಮಹಾರಾಜ ಸ್ವಾಮಿಯನ್ನು (Lokeshwara Swamiji) ಕಳೆದ ವಾರ ಬಂಧಿಸಲಾಗಿತ್ತು. ಅದರ ಬೆನ್ನಲ್ಲೇ, ಮಠ ಕೂಡ ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಸದ್ಯ ಮಠವನ್ನು ತೆರವು ಮಾಡಲಾಗಿದೆ. ಪೊಲೀಸ್ ಬಂದೋಬಸ್ತ್, ತಹಶಿಲ್ದಾರ ಸಮ್ಮುಖದಲ್ಲೇ ಕಾರ್ಯಾಚರಣೆ ನಡೆದಿದೆ.
ಲೋಕೇಶ್ವರ ಮಹಾರಾಜ ಸ್ವಾಮಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ 8-10 ವರ್ಷದ ಹಿಂದೆ ಮಠ ನಿರ್ಮಾಣ ಮಾಡಿ ರಾಮ ಮಂದಿರ ಎಂದು ಹೆಸರಿಟ್ಟಿದ್ದರು. ಆದರೆ, ಅಲ್ಲಿ ಮಾಡಬಾರದ ಕೆಲಸ ಮಾಡುವುದರ ಜೊತೆಗೆ ಬಾಲಕಿಯನ್ನು ರೇಪ್ ಮಾಡಿದ ಕೇಸ್ ಕೂಡ ಅವರ ವಿರುದ್ಧ ದಾಖಲಾಗಿದೆ.
ಸ್ವಾಮಿಯ ಬಂಧನವಾದ ಬೆನ್ನಲ್ಲೇ, ‘ಇಂತಹ ಸ್ವಾಮಿ ನಮ್ಮ ಊರಿಗೆ ಬರುವುದು ಬೇಡ. ಯಾವುದೇ ಕಾರಣಕ್ಕೂ ಆತನನ್ನು ನಮ್ಮೂರು ಸೇರಿಸಲು ಬಿಡಲ್ಲ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಲೋಕೇಶ್ವರ ಸ್ವಾಮಿ ಕಲಬುರಗಿಯಿಂದ ಇಲ್ಲಿಗೆ ಬಂದು ಸರ್ಕಾರಿ ಜಾಗವಾದ ಸರ್ವೇ ನಂಬರ್ 225ರಲ್ಲಿ ಎಂಟು ಎಕರೆ ಜಾಗದಲ್ಲಿ ರಾಮ ಮಂದಿರ ಹಾಗೂ ಮಠವನ್ನ ಕಟ್ಟಿ ಉಳಿದುಕೊಂಡಿದ್ದರು. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡ ಬಗ್ಗೆ ಕಲ ವರ್ಷದ ಹಿಂದೆ ತಹಶಿಲ್ದಾರ್ ಅವರ ಗಮನಕ್ಕೆ ಬಂದಿತ್ತು. ಇದಾದ ಬಳಿಕ ಮಠ ತೆರವು ಮಾಡುವಂತೆ ಹಲವು ಬಾರಿ ಸ್ವಾಮಿಗೆ ನೋಟಿಸ್ ಕೂಡ ನೀಡಿದ್ದರು. ಆದರೆ, ನೋಟಿಸ್ ಅನ್ನು ಸ್ವಾಮಿ ಕ್ಯಾರೇ ಮಾಡಿರಲಿಲ್ಲ.
ಇದನ್ನೂ ಓದಿ: ಬೆಳಗಾವಿ: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ, ಸ್ವಾಮೀಜಿ ಅರೆಸ್ಟ್
ಈ ನಡುವೆ ಸ್ವಾಮಿ ರೇಪ್ ಕೇಸ್ನಲ್ಲಿ ಬಂಧನಕ್ಕೊಳಗಾಗುತ್ತಿದ್ದಂತೆಯೇ ಖುದ್ದು ರಾಯಭಾಗ ತಹಶಿಲ್ದಾರ್ ಸುರೇಶ್ ಮುಂಜೆ ಸಮ್ಮುಖದಲ್ಲಿ ಕಟ್ಟಡ ಕೆಡವಲಾಯಿತು. ಪೊಲೀಸ್ ಭದ್ರತೆಯಲ್ಲಿ ಮೂರು ಜೆಸಿಬಿಗಳಿಂದ ಸಂಪೂರ್ಣವಾಗಿ ಮಠವನ್ನು ಧ್ವಂಸ ಮಾಡಲಾಗಿದೆ. ಸರ್ಕಾರಿ ಜಾಗವನ್ನು ಮುಂದಿನ ದಿನಗಳಲ್ಲಿ ಹೆಸ್ಕಾಂ ಇಲಾಖೆಗೆ ಬಿಟ್ಟು ಕೊಡುವುದಾಗಿ ತಹಶಿಲ್ದಾರ್ ತಿಳಿಸಿದ್ದಾರೆ.