ಬೆಳಗಾವಿ ಮಲಪ್ರಭಾ ನದಿಯಲ್ಲಿ ಮೂರು ಬೈಕ್​​​ ಪತ್ತೆ: ಇದರ ಹಿಂದಿದೆ ಒಂದು ಜಾಲ

ಬೆಳಗಾವಿಯ ಮಲಪ್ರಭಾ ನದಿಯಲ್ಲಿ ಮೂರು ಬೈಕ್‌ಗಳು ಪತ್ತೆಯಾಗಿವೆ. ಡಿಸೆಂಬರ್ 22ರಂದು ಸವದತ್ತಿಯ ಚಿನ್ನದಂಗಡಿ ದರೋಡೆಗೆ ಬಳಸಲಾದ ಬೈಕ್‌ಗಳು ಇವು ಎಂದು ತಿಳಿದುಬಂದಿದೆ. ಚಡ್ಡಿ ಗ್ಯಾಂಗ್ 12 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿ, ಕೃತ್ಯದ ನಂತರ ನದಿಗೆ ಬೈಕ್‌ಗಳನ್ನು ಎಸೆದಿತ್ತು. ಒಂದೂವರೆ ತಿಂಗಳ ನಂತರ ಬೈಲಹೊಂಗಲ ಬಳಿ ಪತ್ತೆಯಾಗಿವೆ.

ಬೆಳಗಾವಿ ಮಲಪ್ರಭಾ ನದಿಯಲ್ಲಿ ಮೂರು ಬೈಕ್​​​ ಪತ್ತೆ: ಇದರ ಹಿಂದಿದೆ ಒಂದು ಜಾಲ
ನದಿಯಲ್ಲಿ ಪತ್ತೆಯಾದ ಬೈಕ್​​
Edited By:

Updated on: Feb 11, 2026 | 8:40 PM

ಬೆಳಗಾವಿ, ಫೆಬ್ರವರಿ 11: ಮಲಪ್ರಭಾ ನದಿ (Malaprabha River) ದಂಡೆ ಮೇಲೆ ವಾಕಿಂಗ್ ಮಾಡುತ್ತಿದ್ದವರಿಗೆ ಕಂಡಿದ್ದು ನದಿಯಲ್ಲಿ ಬೈಕ್ (Bike) ಒಂದು. ಮುಂದೆ ಹೋಗಿ ನೋಡಿದವರಿಗೆ ಸಿಕ್ಕಿದ್ದು ಒಂದಲ್ಲಾ ಎರಡಲ್ಲಾ ಬರೋಬ್ಬರಿ ಮೂರು ಬೈಕ್​ಗಳು. ನದಿ ನೀರಲ್ಲಿ ಬೈಕ್ ಕಂಡು ಶಾಕ್ ಆದವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಬೈಕ್ ಮೂಲ ಪತ್ತೆ ಹಚ್ಚಿದ್ದಾರೆ. ಒಂದೂವರೆ ತಿಂಗಳ ಹಿಂದೆ ಕಳ್ಳತನವಾಗಿದ್ದ ಬೈಕ್​ಗಳು ಇದೀಗ ನದಿಯಲ್ಲಿ ಪತ್ತೆ ಆಗಿವೆ.

ಒಂದೂವರೆ ತಿಂಗಳ ಹಿಂದೇ ಬೈಕ್​ಗಳು ಕಳ್ಳತನ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದ ಹೊರ ವಲಯದಲ್ಲಿ ಹಾದು ಹೋಗುವ ಮಲಪ್ರಭಾ ನದಿಯಲ್ಲಿ ಮೂರು ಬೈಕ್​ಗಳು ಪತ್ತೆ ಆಗಿವೆ. ಇಂದು ಬೆಳಂಬೆಳಗ್ಗೆ ನದಿ ನೀರಲ್ಲಿ ದಂಡೆ ಮೇಲೆ ಬೈಕ್ ಒಂದು ಕಾಣಿಸಿದೆ. ಹತ್ತಿರ ಹೋಗಿ ನೋಡಿ ಯಾರೋ ಬೈಕ್ ಸಮೇತ ಸೇತುವೆ ಮೇಲಿಂದ ಬಿದ್ದಿರಬಹುದು ಅಂತಾ ನದಿಗಿಳಿದು ಹುಡುಕಾಟ ನಡೆಸಿದ್ದಾರೆ. ಅಲ್ಲಿ ಮನುಷ್ಯರ ಬದಲಿಗೆ ಸಿಕ್ಕಿದ್ದು ಮತ್ತೊಂದು ಬೈಕ್, ಇದನ್ನ ಕಂಡು ಶಾಕ್ ಆಗಿ ಮತ್ತೆ ಹುಡುಕಿದಾಗ ಸಿಕ್ಕಿದ್ದು ಮತ್ತೊಂದು ಬೈಕ್. ಹೀಗೆ ಮೂರು ಬೈಕ್​ಗಳು ನದಿ ನೀರಿನಲ್ಲಿ ಸಿಗುತ್ತಿದ್ದಂತೆ ಶಾಕ್ ಆದ ಸ್ಥಳೀಯರು ಕೂಡಲೇ ಬೈಲಹೊಂಗಲ ಠಾಣೆ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಬೈಕ್ ಹೊರ ತೆಗೆದು ಠಾಣೆಗೆ ತೆಗೆದುಕೊಂಡು ಹೋಗಿ ಅವುಗಳ ನಂಬರ್ ಆಧಾರದ ಮೇಲೆ ಮಾಲೀಕನ ಪತ್ತೆ ಹಚ್ಚಿ ಕೇಳಿದಾಗ ಗೊತ್ತಾಗಿದ್ದು ತಮ್ಮ ಬೈಕ್​ಗಳು ಒಂದೂವರೆ ತಿಂಗಳ ಹಿಂದೆ ಕಳ್ಳತನವಾಗಿರುವ ವಿಚಾರ.

ಇದನ್ನೂ ಓದಿ: ಚಡ್ಡಿ ಹೋಗಿ ಲುಂಗಿ ಗ್ಯಾಂಗ್ ಬಂತು: ಕಳ್ಳರ ಹಾವಳಿಗೆ ಆತಂಕಗೊಂಡ ಬಾಗಲಕೋಟೆ ಜನ

ಇಲ್ಲಿ ನದಿಯಲ್ಲಿ ಸಿಕ್ಕ ಬೈಕ್​ಗಳು ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಿಂದ ಒಂದೂವರೆ ತಿಂಗಳ ಹಿಂದೆ ಬೈಕ್ ಕಳ್ಳತನವಾಗಿದ್ದವು. ಬೈಕ್ ಕಳ್ಳತನವಾಗಿರುವ ಕುರಿತು ಠಾಣೆಯಲ್ಲಿ ಮಾಲೀಕರು ಕೇಸ್ ಕೂಡ ನೀಡಿದ್ದರು. ಈ ವಿಚಾರ ತಿಳಿದು ಪೊಲೀಸರು ಮತ್ತಷ್ಟು ತನಿಖೆ ಚುರುಕುಗೊಳಿಸಿದಾಗ ಗೊತ್ತಾಗಿದ್ದು, ಸಿಕ್ಕ ಬೈಕ್ ಬಳಕೆಯಾಗಿದ್ದು ಖದೀಮರಿಗೆ.

ಕಳ್ಳತನಕ್ಕೂ ಮೊದಲು ಮೂರು ಬೈಕ್​​​ಗಳನ್ನ ಕದ್ದಿದ್ದ ಕಳ್ಳರು

ಡಿಸೆಂಬರ್ 22ರಂದು ಸವದತ್ತಿ ಪಟ್ಟಣದ ಅದೊಂದು ಚಿನ್ನದ ಅಂಗಡಿಯಲ್ಲಿ ಚಡ್ಡಿ ಗ್ಯಾಂಗ್ ಕಳ್ಳತನ ಮಾಡುತ್ತೆ. 09 ಜನ ಮೂರು ಬೈಕ್ ಮೇಲೆ ಬಂದು ಚಿನ್ನದಂಗಡಿ ಬಾಗಿಲು ಮುರಿದು 12 ಲಕ್ಷ ರೂ ಮೌಲ್ಯದ ಚಿನ್ನ ಕದ್ದು ಪರಾರಿಯಾಗಿರುತ್ತಾರೆ. ಈ ಎಲ್ಲ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುತ್ತೆ. ಚಿನ್ನದಂಗಡಿ ಕಳ್ಳತನಕ್ಕೂ ಮೊದಲು ಮೂರು ಬೈಕ್​ಗಳನ್ನ ಕದ್ದು ಕಳ್ಳರು ಬಳಿಕ ಚಿನ್ನದಂಗಡಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಹೀಗೆ ಕದ್ದು 25 ಕಿಮೀ ದೂರದಲ್ಲಿರುವ ಮಲಪ್ರಭಾ ನದಿಯಲ್ಲಿ ಮೂರು ಬೈಕ್ ಎಸೆದು ಯಾರಿಗೂ ಗೊತ್ತಾಗದ ಹಾಗೆ ಪರಾರಿಯಾಗಿದ್ದರು.

ಕಳ್ಳತನವಾದ ಬೈಕ್​ಗಳು ಕಳ್ಳತನಕ್ಕೆ ಬಳಕೆ ಮಾಡಿಕೊಂಡು ಬಳಿಕ ನದಿಗೆ ಎಸೆದಿದ್ದು ಒಂದೂವರೆ ತಿಂಗಳ ಬಳಿಕ ಬೈಕ್ ಪತ್ತೆಯಾಗಿವೆ. ಇದರಿಂದ ಕಳ್ಳರು ಪೊಲೀಸರ ದಿಕ್ಕು ತಪ್ಪಿಸಲು ಹೇಗೆಲ್ಲಾ ಪ್ಲ್ಯಾನ್ ಮಾಡ್ತಾರೆ ಅನ್ನೋದಕ್ಕೆ ಈ ಕೇಸ್ ಉದಾಹರಣೆಯಾಗಿದೆ. ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಆದಷ್ಟು ಬೇಗ ಕಳ್ಳರನ್ನು ಬಂಧಿಸುವುದಾಗಿ ಎಸ್​​ಪಿ ಕೆ.ರಾಮರಾಜನ್​ ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಚಡ್ಡಿ ಗ್ಯಾಂಗ್ ಹಾವಳಿಗೆ ಜನರು ತಲ್ಲಣ: ಬಂಧಿಸುವಲ್ಲಿ ಖಾಕಿ ವಿಫಲ?

ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಪೊಲೀಸರು ಕೂಡ ಖದೀಮರ ಹಿಡಿಯಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಖದೀಮರು ಪೊಲೀಸರ ದಿಕ್ಕು ತಪ್ಪಿಸಲು ಹೊಸ ಹೊಸ ಟೆಕ್ನಿಕ್ ಅಳವಡಿಸಿಕೊಂಡು ಕಳ್ಳತನ ಮಾಡುತ್ತಿರುವುದು ಪೊಲೀಸರಿಗೂ ಸವಾಲ್ ಆಗಿ ಪರಿಣಮಿಸಿದೆ. ಒಟ್ಟಿನಲ್ಲಿ ಕಳ್ಳತನವಾಗಿದ್ದ ಬೈಕ್ ನೀರಲ್ಲಿ ಪತ್ತೆಯಾಗಿದ್ದು, ಬೈಕ್ ಕಳೆದುಕೊಂಡವರು ನಿಟ್ಟುಸಿರು ಬಿಟ್ಟಿದ್ದಾರೆ. ಅತ್ತ ಚಿನ್ನದಂಗಡಿ ಮಾಲೀಕ ಮಾತ್ರ ಕಳ್ಳರು ಸಿಗಲಿ ಅಂತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.