
ಬೆಳಗಾವಿ, ಡಿಸೆಂಬರ್ 17: ಗೃಹಲಕ್ಷ್ಮೀ ಯೊಜನೆ ವಿಚಾರವಾಗಿ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ್ದ ಮಾಹಿತಿ ತಪ್ಪು ಎಂಬ ಕಾರಣಕ್ಕೆ ವಿಪಕ್ಷಗಳು ಕೋಲಾಹಲವನ್ನೇ ಎಬ್ಬಿಸಿವೆ. ವಾಗ್ಯುದ್ಧ, ಸಭಾತ್ಯಾಗದಂತಹ ಘಟನೆಗಳು ನಡೆದು ಸಚಿವರು ವಿಷಾದ ವ್ಯಕ್ತಪಡಿಸಿದ ಪ್ರಸಂಗವೂ ನಡೆದಿದೆ. ಹೀಗಿದ್ದರೂ ಪ್ರತಿಪಕ್ಷಗಳ ಆಕ್ರೋಶ ಮಾತ್ರ ಕಡಿಮೆಯಾಗಿಲ್ಲ. ಈ ನಡುವೆ ರಾಜ್ಯ ಸರ್ಕಾರದ ಮತ್ತೊಂದು ಬೇಜವಾಬ್ದಾರಿ ಸದನದಲ್ಲಿ ಬಟಾ ಬಯಲಾಗಿದೆ. ಪರಿಷತ್ ಸದಸ್ಯರಿಗೆ ಉತ್ತರ ನೀಡುವ ವಿಚಾರದಲ್ಲೂ ಎಡವಟ್ಟು ನಡೆದಿರೋದೀಗ ಬಹಿರಂಗಗೊಂಡಿದೆ.
ವಿಧಾನ ಪರಿಷತ್ನ ಬಿಜೆಪಿ ಸದಸ್ಯ ನವೀನ್ ಕಲಾಪದಲ್ಲಿ ಪ್ರಶ್ನೆಯೊಂದನ್ನು ಕೇಳಿದ್ದು, ಇದಕ್ಕೆ ಉತ್ತರ ಇದೆ ಎಂದು ನೀಡಿದ್ಧ ಪೆನ್ಡ್ರೈವ್ ಖಾಲಿಯಾಗಿತ್ತು ಎಂಬ ಆರೊಪ ಕೇಳಿಬಂದಿದೆ. ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ನೀಡಿದ್ದ ಉತ್ತರದ ಬಗ್ಗೆಸದಸ್ಯ ನವೀನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ನೀಡಿದ್ದ ಪೆನ್ಡ್ರೈವ್ನಲ್ಲಿ ಏನೂ ಇರಲಿಲ್ಲ ಎಂದು ಅವರು ಬೇಸರ ಹೊರಹಾಕಿದ ಪ್ರಸಂಗ ನಡೆದಿದೆ.
ಇದನ್ನೂ ಓದಿ: ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ, ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್
ಸದಸ್ಯರ ಆರೋಪದ ಮೇರೆಗೆ ಈ ರೀತಿಯ ಲೋಪ ಆಗದಂತೆ ನೋಡಿಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಸಭಾಪತಿ ಪೀಠ ಖಡಕ್ ಸೂಚನೆ ನೀಡಿದೆ. ಇಂತಹ ವಿಚಾರಗಳು ಮುಂದೆ ಮುರುಕಳಿಸಬಾರದು ಎಂದು ಸಭಾಪತಿ ಪೀಠದಲ್ಲಿದ್ದ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ತಾಕೀತು ಮಾಡಿದ್ದಾರೆ. ಅಲ್ಲದೆ, ನಿಮಗೆ ಸೂಕ್ತ ಉತ್ತರ ಪೆನ್ಡ್ರೈವ್ನಲ್ಲೇ ಸಿಗುತ್ತೆಂದು ಬಿಜೆಪಿ ಸದಸ್ಯ ನವೀನ್ಗೆ ಉಪಸಭಾಪತಿ ಅವರು ಭರವಸೆ ನೀಡಿದ ಹಿನ್ನೆಲೆ ವಿಷಯ ಸುಖಾಂತ್ಯ ಕಂಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:56 pm, Wed, 17 December 25