Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆ ಮೃತಪಟ್ಟರೂ ವಿದೇಶದಿಂದ ಬಾರದ ಮಕ್ಕಳು; ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ ಚಿಕ್ಕೋಡಿ ಪೊಲೀಸರು!

Chikkodi: ವಿದೇಶದಲ್ಲಿ ವಾಸವಿರುವ ಮಗ ಮತ್ತು ಮಗಳು ತಂದೆಯ ಅಂತ್ಯಕ್ರಿಯೆಗೆ ಬಾರದಿದ್ದಾಗ ಚಿಕ್ಕೋಡಿ ಪೊಲೀಸರೇ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ಮಕ್ಕಳ ಈ ಪ್ರವೃತ್ತಿಗೆ ಜನರು ಹಿಡಿಶಾಪ ಹಾಕುತ್ತಿದ್ದು, ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಂದೆ ಮೃತಪಟ್ಟರೂ ವಿದೇಶದಿಂದ ಬಾರದ ಮಕ್ಕಳು; ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ ಚಿಕ್ಕೋಡಿ ಪೊಲೀಸರು!
ಮೃತ ವೃದ್ಧನ ಅಂತ್ಯಸಂಸ್ಕಾರ ನೆರವೇರಿಸಿದ ಪೊಲೀಸ್​​ ಮತ್ತು ಗ್ರಾಮಸ್ಥರು
Follow us
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Updated By: ವಿವೇಕ ಬಿರಾದಾರ

Updated on:Aug 28, 2023 | 10:19 AM

ಚಿಕ್ಕೋಡಿ: ಈಚಿನ ದಿನಗಳಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ಮಕ್ಕಳು ಹೆತ್ತ ತಂದೆ- ತಾಯಿಯನ್ನ ನೋಡಿಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸುವರ ಸಂಖ್ಯೆ ಹೆಚ್ಚಾಗಿದೆ. ತಂದೆ-ತಾಯಿ ತಮಗೆ ಬಂದ ಕಷ್ಟಗಳನ್ನು ಮಕ್ಕಳಿಗೆ ತಿಳಿಯದಂತೆ ಮರೆಮಾಚಿ, ಮಕ್ಕಳನ್ನು ಸುಖದ ಸುಪ್ಪತ್ತಿಗೆಯಲ್ಲಿ ಬೆಳಸುತ್ತಾರೆ. ಮುಪ್ಪಿನ ಕಾಲಿನಲ್ಲಿ ಮಕಳು ನಮ್ಮನ್ನು ಸಾಕುತ್ತಾರೆ ಎಂಬ ಆಸೆ ಇಟ್ಟುಕೊಂಡಿರುತ್ತಾರೆ. ಆದರೆ ಈ ಆಸೆಗೆ ಮಕ್ಕಳು ತಣ್ಣೀರು ಎರಚುತ್ತಿದ್ದಾರೆ. ಇದೀಗ ಚಿಕ್ಕೋಡಿಯಲ್ಲಿ (Chikkodi) ಅನಾರೋಗ್ಯದಿಂದ ಮೃತಪಟ್ಟ ತಂದೆಯ ಅಂತ್ಯಕ್ರಿಯೆಗೆ ವಿದೇಶದಲ್ಲಿರುವ ಮಕ್ಕಳು ಬಂದಿಲ್ಲ. ಕೊನೆಗೆ ಚಿಕ್ಕೋಡಿ ಪೊಲೀಸರು (Police) ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮಹಾರಾಷ್ಟ್ರದ ಪುಣೆ ಮೂಲದ 72 ವರ್ಷದ ಚಂದ್ರ ಶರ್ಮಾ ಮೃತ ವೃದ್ಧ.

ಮೂಲಚಂದ್ರ ಶರ್ಮಾ ಅವರು ಪಾರ್ಶ್ವವಾಯುವಿಂದ ಬಳಲುತ್ತಿದ್ದರು. ಇವರ ಮಕ್ಕಳು ವಿದೇಶದಲ್ಲಿ ವಾಸವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅವರನ್ನು ಓರ್ವ ವ್ಯಕ್ತಿ ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿರುವ ನಾಗರಮುನ್ನೋಳಿ ಕುಂಬಾರ ಆಸ್ಪತ್ರೆಗೆ ಕರೆ ತಂದು, ಚಿಕಿತ್ಸೆ ಕೊಡಿಸುತ್ತಿದ್ದರು. ಚಿಕಿತ್ಸೆ ನಂತರ ಆಸ್ಪತ್ರೆಗೆ ಹತ್ತಿರದಲ್ಲಿದ್ದ ಶಿವನೇರಿ ಲಾಡ್ಡ್‌ನಲ್ಲಿ ಮೂಲಚಂದ್ರ ಶರ್ಮಾ ಅವರನ್ನು ವ್ಯಕ್ತಿ ಇರಿಸಿದ್ದನು.

ಈ ವ್ಯಕ್ತಿ ಗುತ್ತಿಗೆ ಆಧಾರದಲ್ಲಿ ಮೂಲಚಂದ್ರ ಶರ್ಮಾರ ಆರೈಕೆ ಮಾಡುತ್ತಿದ್ದನು. ಇದೀಗ ತನ್ನ ಗುತ್ತಿಗೆ ವಾಯಿದೆ ಮುಗಿದ ಬಳಿಕ ಮೂಲಚಂದ್ರ ಶರ್ಮಾರನ್ನು ಲಾಡ್ಡ್‌ನಲ್ಲೇ ಬಿಟ್ಟು ತೆರಳಿದ್ದನು. ಬಳಿಕ ಲಾಡ್ಜ್ ಮ್ಯಾನೇಜರ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬಂದು ವಿಚಾರಿಸಿದಾಗ ತಾನು ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಂದು ಮೂಲಚಂದ್ರ ಶರ್ಮಾ ಪರಿಚಯಿಸಿಕೊಂಡಿದ್ದರು.

ಇದನ್ನೂ ಓದಿ: ಚಿಕ್ಕೋಡಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ, ಕುಟುಂಬಸ್ಥರಿಂದ ಠಾಣೆ ಎದುರು ಧರಣಿ

ನನ್ನ ಮಗ ದಕ್ಷಿಣ ಆಫ್ರಿಕಾದಲ್ಲಿ, ಮಗಳು ಕೆನಡಾದಲ್ಲಿ ಉತ್ತಮ ಹುದ್ದೆಯಲ್ಲಿದ್ದಾರೆ ಎಂದು ತಿಳಿಸಿದ್ದರು. ಬಳಿಕ ಪೊಲೀಸರು ಮಕ್ಕಳ ಫೋನ್ ನಂಬರ್ ಪಡೆದು ನಿರಂತರ ಕರೆ ಮಾಡಿದ್ದಾರೆ. ಮಗ ಮತ್ತು ಮಗಳು ಪೊಲೀಸರ ಕರೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಪೊಲೀಸರು ಮೂಲಚಂದ್ರ ಶರ್ಮಾರನ್ನು ಚಿಕ್ಕೋಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು.

ಎರಡು ದಿನಗಳ ಹಿಂದೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೂಲಚಂದ್ರ ಶರ್ಮಾ ಮೃತಪಟ್ಟಿದ್ದಾರೆ. ವಿಷಯ ತಿಳಿಸಲು ಕರೆ ಮಾಡಿದಾಗ ನಮಗೂ ಅವರಿಗೆ ಸಂಬಂಧ ಇಲ್ಲ ಎಂದು ಮಗಳು ಕರೆ ಕಟ್ ಮಾಡಿದ್ದಾರೆ. ಕೊನೆಗೆ ಚಿಕ್ಕೋಡಿ ಪೊಲೀಸರೇ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಚಿಕ್ಕೋಡಿ ಪಿಎಸ್ಐ ಬಸಗೌಡ ನೇರ್ಲಿ, ನಾಗರಮುನ್ನೋಳಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಂತ್ಯಕ್ರಿಯೆಗೆ ಬಾರದ ಮಕ್ಕಳಿಗೆ ಹಿಡಿಶಾಪ ಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:13 am, Mon, 28 August 23