ಡಿ.6ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವರು: ಪ್ರತಿಬಂಧಕಾಜ್ಞೆ ಹೊರಡಿಸುವ ಸುಳಿವು ಕೊಟ್ಟ ಬೊಮ್ಮಾಯಿ

ಡಿ.6ರಂದು ಮಹಾರಾಷ್ಟ್ರ ಸಚಿವರುಬೆಳಗಾವಿ ಪ್ರವಾಸ ಕೈಗೊಂಡಿದ್ದಾರೆ. ಆದ್ರೆ, ಗಡಿ ವಿವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಬ್ರೇಕ್ ಹಾಕುವ ಸುಳಿವು ಕೊಟ್ಟಿದ್ದಾರೆ.

ಡಿ.6ರಂದು ಬೆಳಗಾವಿಗೆ ಮಹಾರಾಷ್ಟ್ರ ಸಚಿವರು: ಪ್ರತಿಬಂಧಕಾಜ್ಞೆ ಹೊರಡಿಸುವ ಸುಳಿವು ಕೊಟ್ಟ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Edited By:

Updated on: Dec 02, 2022 | 3:31 PM

ಬೆಳಗಾವಿ: ಸುಪ್ರೀಂಕೋರ್ಟ್​ನಲ್ಲಿ ಅಂತಿಮ ವಿಚಾರಣೆ ನಡೆಯುವ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ದಶಕಗಳ ಗಡಿ ವಿವಾದ (Karnataka-Maharashtra border dispute)ದ ಮತ್ತೆ ,ಮುನ್ನೆಲೆಗೆ ಬಂದಿದೆ. ಇದರಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ವಿವಾದದ ಕಿಚ್ಚು ಜೋರಾಗಿದೆ. ಈ ವಿವಾದದ ಮಧ್ಯೆ ಮಹಾ ಸಚಿವರು ಇದೆ ಡಿಸೆಂಬರ್ 06ರಂದು ಬೆಳಗಾವಿಗೆ ಭೇಟಿ ನೀಡಲಿದ್ದು, ಇದು ಮತ್ತಷ್ಟು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿಯನ್ನು ತಡೆಯಬೇಕೆಂದು ಆಗ್ರಹಿಸಿವೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಮಹಾರಾಷ್ಟ್ರ ಸಚಿವರ ಬೆಳಗಾವಿ ಪ್ರವಾಸಕ್ಕೆ ಬ್ರೇಕ್​ ಹಾಕುವ ಸುಳಿವು ನೀಡಿದ್ದಾರೆ.

ಇದನ್ನೂ ಒದಿ: ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ: ಬೆಳಗಾವಿ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ

ಇಂದು(ಡಿಸೆಂಬರ್ 02) ಬೆಳಗಾವಿಯ ದೊಡಮಂಗಡಿ ಗ್ರಾಮದಲ್ಲಿ ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಡಿ ವಿವಾದ ಹಿನ್ನೆಲೆ ಮಹಾರಾಷ್ಟ್ರ ಸಚಿವರು ಬರುವುದು ಬೇಡ. ಸದ್ಯದ ಪರಿಸ್ಥಿತಿಯಲ್ಲಿ ಬೆಳಗಾವಿಗೆ ಸಚಿವರು ಬರುವುದು ಬೇಡ. ಈಗಾಗಲೇ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಸಚಿವರು ಬೆಳಗಾವಿಗೆ ಬರುವುದು ಸೂಕ್ತ ಅಲ್ಲ ಎಂದು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಸಂದೇಶ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಹಿಂದೆ ಹಲವಾರು ಬಾರಿ ಈ ರೀತಿ ಪ್ರಯತ್ನ ಮಾಡಿದಾಗ ಕ್ರಮ ತೆಗೆದುಕೊಂಡಿದ್ದೇವೆ. ಹಿಂದೆ ಕರ್ನಾಟಕ ಸರ್ಕಾರ ಏನು ಕ್ರಮ ಕೈಗೊಂಡಿತ್ತೋ ಈಗಲೂ ಅದೇ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ಅವರು ಪರೋಕ್ಷವಾಗಿ ಪ್ರತಿಬಂಧಕಾಜ್ಞೆ ಹೊರಡಿಸುವ ಬಗ್ಗೆ ಸುಳಿವು ನೀಡಿದರು.

ಇದನ್ನೂ ಓದಿ: Kannada Flag: ಬೆಳಗಾವಿಯಲ್ಲಿ ಕನ್ನಡ ಬಾವುಟ ಹಾರಿಸಿದ್ದಕ್ಕೆ ವಿದ್ಯಾರ್ಥಿಗೆ ಥಳಿತ: ನಮ್ಮ ನಾಡಲ್ಲಿ ಇದೆಂಥಾ ದೌರ್ಜನ್ಯ..?

ಡಿಸೆಂಬರ್ 6ಕ್ಕೆ ಬೆಳಗಾವಿಗೆ ಮಹಾ ಸಚಿವರು

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ತೀವ್ರವಾದ ನಂತರ ಅನೇಕ ಅಹಿತಕರ ಘಟನೆಗಳು ಬೆಳಗಾವಿಯಲ್ಲಿ ನಡೆದಿವೆ. ಮೊನ್ನೇ ಅಷ್ಟೇ ಬೆಳಗಾವಿಯ ಕಾಲೇಜ್​ವೊಂದರಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಕನ್ನಡ ಬಾವುಟ ಹಾರಿಸಿದ್ದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದರು. ಇದರಿಂದ ಬೆಳಗಾವಿಯಲ್ಲಿ ಈಗ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದ್ದು, ಸದ್ಯ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಇದರ ಮಧ್ಯೆ ಮಹಾರಾಷ್ಟ್ರ ಸಚಿವರುಗಳಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಅವರು ಬೆಳಗಾವಿಗೆ ಭೇಟಿ ನೀಡಲು ಮುಂದಾಗಿದ್ದಾರೆ.

ಎಂಇಎಸ್​ ಸಂಘನೆ ಮನವಿ ಮೇರೆಗೆ ಡಿಸೆಂಬರ್ 3ರಂದು ಬೆಳಗಾವಿ ಭೇಟಿ ನಿಗದಿಯಾಗಿತ್ತು. ಆದ್ರೆ, ಕೆಲಕಾರಣಾಂತರಗಳಿಂದ ದಿನಾಂಕವನ್ನು ಮುಂದೂಡಿದ್ದು, ಇದೀಗ ಡಿಸೆಂಬರ್ 6ಕ್ಕೆ ಬೆಳಗಾವಿಗೆ ಆಗಮಿಸಲಿದ್ದಾರೆ. ಆದ್ರೆ, ಇತ್ತ ಕನ್ನಡಪರ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಡಿಸುತ್ತಿದ್ದು, ಯಾವುದೇ ಕಾರಣಕ್ಕೂ ಮಹಾರಾಷ್ಟ್ರ ಸಚಿವರನ್ನು ಬೆಳಗಾವಿಗೆ ಬರದಂತೆ ತಡೆಬೇಕೆಂದು ಕರ್ನಾಟಕ ಸರ್ಕಾರಕ್ಕೆ ಆಗ್ರಹಿಸುತ್ತಿವೆ. ಅದರಂತೆ ಇದೀಗ ಸಿಎಂ ಬೊಮ್ಮಾಯಿ ಅವರು ಪ್ರತಿಬಂಧಕಾಜ್ಞೆ ಹೊರಡಿಸುವ ಸುಳಿವು ಕೊಟ್ಟಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:24 pm, Fri, 2 December 22

Follow Us