ಗೋಕಾಕ್​ನ ಈ ದೇವಸ್ಥಾನದಲ್ಲಿ ದೇವಿಗೆ ಹೆಂಡ, ಸಿಗರೇಟಿನ ಅರ್ಪಣೆ; ಮಂಗಳಮುಖಿಯಿಂದ ಪೂಜೆ

ಇಷ್ಟಗಳನ್ನು ಈಡೇರಿಸುವಂತೆ ದೇವಿಯಲ್ಲಿ ಹರಕೆ ಹೊತ್ತಿಕೊಳ್ಳುವ ಭಕ್ತರು ಈ ದೇವಸ್ಥಾನದ ಹಿಂದಿರುವ ಮರಕ್ಕೆ ತೆಂಗಿನಕಾಯಿ ಕಟ್ಟುತ್ತಾರೆ. ತಮ್ಮ ಬೇಡಿಕೆ ಈಡೇರಿದ ನಂತರ ಚೌಡೇಶ್ವರಿ ದೇವಿಗೆ ಹೂವು, ಹಣ್ಣು, ಕಾಯಿ, ಎಣ್ಣೆಯ ಜೊತೆಗೆ ಹೆಂಡ, ಸಿಗರೇಟ್ ಇಟ್ಟು ಹರಕೆ ತೀರಿಸುತ್ತಾರೆ.

ಗೋಕಾಕ್​ನ ಈ ದೇವಸ್ಥಾನದಲ್ಲಿ ದೇವಿಗೆ ಹೆಂಡ, ಸಿಗರೇಟಿನ ಅರ್ಪಣೆ; ಮಂಗಳಮುಖಿಯಿಂದ ಪೂಜೆ
ಮಂಗಳಮುಖಿ ಸತ್ಯಪ್ಪ

Updated on: Oct 04, 2023 | 3:35 PM

ಬೆಳಗಾವಿ: ಒಂದೊಂದು ದೇವರಿಗೆ ಒಂದೊಂದು ವಸ್ತುಗಳು ಪ್ರಿಯವಾದುದು. ಆ ದೇವರಿಗೆ ಇಷ್ಟವಾದ ವಸ್ತು, ತಿಂಡಿಗಳನ್ನೇ ಭಕ್ತರು ಅರ್ಪಿಸುತ್ತಾರೆ. ದೇವರ ಪೂಜೆಗೆ ಹೋಗುವಾಗ ಹಣ್ಣು-ಕಾಯಿ, ಹೂವು ತೆಗೆದುಕೊಂಡು ಹೋಗುವುದು ಮಾಮೂಲಿ. ಆದರೆ, ಬೆಳಗಾವಿಯ ಗೋಕಾಕ್​ನ ಕಡಬಗಟ್ಟಿ ಗುಡ್ಡದ ಶ್ರೀ ಚೌಡೇಶ್ವರಿ ದೇವಿ ಮಂದಿರದಲ್ಲಿ ದೇವಿಗೆ ಭಕ್ತರು ಹೆಂಡ, ಸಿಗರೇಟು ಅರ್ಪಿಸುತ್ತಾರೆ. ಈ ದೇವಾಲಯದಲ್ಲಿ ಮಂಗಳಮುಖಿಯೊಬ್ಬರು ದೇವಿಗೆ ಪೂಜೆ ಸಲ್ಲಿಸುವುದು ಮತ್ತೊಂದು ವಿಶೇಷ.

ತಮ್ಮ ಬೇಡಿಕೆಗಳನ್ನು, ಇಷ್ಟಗಳನ್ನು ಈಡೇರಿಸುವಂತೆ ದೇವಿಯಲ್ಲಿ ಹರಕೆ ಹೊತ್ತಿಕೊಳ್ಳುವ ಭಕ್ತರು ಈ ದೇವಸ್ಥಾನದ ಹಿಂದಿರುವ ಮರಕ್ಕೆ ತೆಂಗಿನಕಾಯಿ ಕಟ್ಟುತ್ತಾರೆ. ತಮ್ಮ ಬೇಡಿಕೆ ಈಡೇರಿದ ನಂತರ ಚೌಡೇಶ್ವರಿ ದೇವಿಗೆ ಹೂವು, ಹಣ್ಣು, ಕಾಯಿ, ಎಣ್ಣೆಯ ಜೊತೆಗೆ ಹೆಂಡ, ಸಿಗರೇಟ್ ಇಟ್ಟು ಹರಕೆ ತೀರಿಸುತ್ತಾರೆ.

ಇದನ್ನೂ ಓದಿ: ಗದಗದ ನರೇಗಲ್ ಪಟ್ಟಣದಲ್ಲೊಂದು ಐತಿಹಾಸಿಕ ಆಚರಣೆ; ರಾಕ್ಷಸರ, ಕಾಳಿಕಾದೇವಿ ನಡುವೆ ಇಲ್ಲಿ ನಡೆಯುತ್ತೆ ಭೀಕರ ಕಾಳಗ

ಪ್ರತಿವರ್ಷ ಜೋಕುಮಾರ ಹುಣ್ಣಿಮೆ ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಈ ವೇಳೆ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಚಿನ್ನ, ಬೆಳ್ಳಿಗಳಿಂದ ದೇವಿಯನ್ನು ಅಲಂಕರಿಸಲಾಗುತ್ತದೆ. ಈ ವೇಳೆ ದೇವಿಯನ್ನು ನೋಡಲು ಸಾವಿರಾರು ಜನ ಸೇರುತ್ತಾರೆ.

ದೇವಿಯ ದರ್ಶನಕ್ಕೆ ಬಂದ ಭಕ್ತರು ನೀಡುವ ಹೆಂಡವನ್ನು ದೇವಿಗೆ ಕುಡಿಸಲಾಗುತ್ತದೆ. ಆ ದೇವಿಯ ಎದುರು ಸಿಗರೇಟ್ ಕೂಡ ಹಚ್ಚಲಾಗುತ್ತದೆ.ಈ ದೇವಸ್ಥಾನದಲ್ಲಿ ಸತ್ಯಪ್ಪ ಎಂಬ ಮಂಗಳಮುಖಿ ಅರ್ಚಕರಾಗಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಇಂದು 11 ದಿನದ ಸಾರ್ವಜನಿಕ ಗಣೇಶ ವಿಸರ್ಜನೆ ಮೆರವಣಿಗೆ: ನಗರದಲ್ಲಿ ಪೊಲೀಸ್​ ಸರ್ಪಗಾವಲು

ಈ ಚೌಡೇಶ್ವರಿ ದೇವಿ ಬಹಳ ಶಕ್ತಿಶಾಲಿ ಎಂಬುದು ಭಕ್ತರ ನಂಬಿಕೆ. ಈ ದೇವಿ ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕರುಣಿಸಿದ್ದಾಳೆ. ಅನಾರೋಗ್ಯವಿದ್ದವರಿಗೆ ಆರೋಗ್ಯ ನೀಡಿದ್ದಾಳೆ, ಹಲವು ಜನರ ಬದುಕಿಗೆ ದಾರಿದೀಪವಾಗಿದ್ದಾಳೆ. ಕಳೆದ 26 ವರ್ಷಗಳಿಂದ ಇಲ್ಲಿ ಜಾತ್ರೆ ನಡೆಯುತ್ತಿದೆ. ಕರ್ನಾಟಕ ಮಾತ್ರವಲ್ಲದೆ, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಮುಂಬೈ, ಪುಣೆ, ಕೊಲ್ಹಾಪುರ, ಕೇರಳದಿಂದಲೂ ಭಕ್ತರು ಈ ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ. ಕಳೆದ 26 ವರ್ಷಗಳಿಂದಲೂ ಮಂಗಳಮುಖಿ ಸತ್ಯಪ್ಪ ಅವರೇ ಈ ದೇವಿಗೆ ಪೂಜೆ ಸಲ್ಲಿಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us