
ಬೆಳಗಾವಿ, ಏಪ್ರಿಲ್ 11: ಬೆಳಗಾವಿಯ (Belagavi) ನಗರಾಭಿವೃದ್ಧಿ ಕೋಶದ (DUDC) ಎಇಇ ಅಜಯಸಿಂಗ್ ರಜಪೂತ್ (Ajay Singh Rajput) ಮೇಲೆ ನಡೆದ ಲೋಕಾಯುಕ್ತ ದಾಳಿಯ (Lokayukta Raid) ತನಿಖೆ ಮುಂದುವರಿದಂತೆ ಬೆಚ್ಚಿಬೀಳಿಸುವ ಸತ್ಯಗಳು ಹೊರಬರುತ್ತಿವೆ. ಬರೋಬ್ಬರಿ 14 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿರುವ ಈ ಪ್ರಕರಣದಲ್ಲಿ, ಒಬ್ಬ ಸಾಮಾನ್ಯ ದಿನಗೂಲಿ ನೌಕರ ಕೋಟಿ ಕುಬೇರನಾಗಿ ಬೆಳೆದ ಹಾದಿ ಸಿನಿಮೀಯವಾಗಿದೆ.
ಅಜಯಸಿಂಗ್ ರಜಪೂತ್ ವೃತ್ತಿಜೀವನ ಆರಂಭವಾಗಿದ್ದು 1992ರಲ್ಲಿ ಒಬ್ಬ ಸಾಮಾನ್ಯ ದಿನಗೂಲಿ ನೌಕರನಾಗಿ. ಎಂಜಿನಿಯರಿಂಗ್ ಪದವೀಧರರಾಗಿದ್ದ ಅವರು ಮೊದಲಿಗೆ ಗುತ್ತಿಗೆ ಆಧಾರದಲ್ಲಿ ದಿನಗೂಲಿ ನೌಕರನಾಗಿ ಸೇರಿಕೊಂಡಿದ್ದರು. 1992ರಿಂದ 2006ರವರೆಗೆ ಸತತ 14 ವರ್ಷಗಳ ಕಾಲ ಇವರು ದಿನಗೂಲಿ ನೌಕರನಾಗಿಯೇ ಕಾರ್ಯನಿರ್ವಹಿಸಿದ್ದರು. ಆದರೆ, 2006ರಲ್ಲಿ ಪೌರಾಡಳಿತ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಕಾಯಂ ನೇಮಕಾತಿ ಪಡೆದ ನಂತರ ಇವರ ಅದೃಷ್ಟದ ಬಾಗಿಲು ತೆರೆಯಿತು. ಐದು ವರ್ಷಗಳಲ್ಲೇ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಬಡ್ತಿ ಪಡೆದ ಇವರು, ನಗರಾಭಿವೃದ್ಧಿ ಕೋಶಕ್ಕೆ ಎಇಇ ಆಗಿ ವರ್ಗಾವಣೆಗೊಂಡ ನಂತರ ಅಕ್ರಮ ಆಸ್ತಿಯ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ.
ಅಜಯಸಿಂಗ್ ಅವರು ಕೇವಲ ಭೂಮಿಯ ಮೇಲೆ ಮಾತ್ರವಲ್ಲದೆ ಬ್ಯಾಂಕ್ ಲಾಕರ್ಗಳಲ್ಲೂ ಸಂಪತ್ತನ್ನು ಅಡಗಿಸಿಟ್ಟಿದ್ದರು. ಹೆಂಡತಿ ಮತ್ತು ಅತ್ತೆಯ ಹೆಸರಿನಲ್ಲಿರುವ ಎಸ್ಬಿಐ ಲಾಕರ್ಗಳನ್ನು ಅಧಿಕಾರಿಗಳು ತೆರೆದಾಗ ಕಣ್ಣು ಕೋರೈಸುವ ಆಭರಣಗಳು ಪತ್ತೆಯಾಗಿವೆ.
ಸುಳ್ಳು ಆದಾಯದ ಮೂಲಗಳನ್ನು ತೋರಿಸಿ ಇಷ್ಟೊಂದು ಬೃಹತ್ ಪ್ರಮಾಣದ ಆಸ್ತಿ ಸಂಪಾದಿಸಿರುವ ಅಜಯಸಿಂಗ್ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆಂಜನೇಯ ನಗರದ ಮನೆಯಲ್ಲೇ ಅರ್ಧ ಕೆಜಿ ಚಿನ್ನ ಪತ್ತೆಯಾಗಿದ್ದರೆ, ವಿವಿಧ ಬ್ಯಾಂಕ್ಗಳ ಲಾಕರ್ನಲ್ಲಿ ಕೆಜಿಗಟ್ಟಲೆ ಚಿನ್ನದ ಬಿಸ್ಕೇಟ್ಗಳು ದೊರೆತಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:10 pm, Sat, 11 April 26