ಖಾನಾಪುರದಲ್ಲಿ ವರುಣನ ಆರ್ಭಟ; ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಿದ ಡಿಸಿ

ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಶಾಲೆಗಳಿಗೆ ಇಂದು ರಜೆ ನೀಡಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​ ಆದೇಶ ಹೊರಡಿಸಿದ್ದಾರೆ.

ಖಾನಾಪುರದಲ್ಲಿ ವರುಣನ ಆರ್ಭಟ; ತಾಲೂಕಿನ ಶಾಲೆಗಳಿಗೆ ಇಂದು ರಜೆ ಘೋಷಿಸಿದ ಡಿಸಿ
ಬೆಳಗಾವಿಯಲ್ಲಿ ಮುಳುಗಿದ ಸೇತುವೆ
Edited By: ಆಯೇಷಾ ಬಾನು

Updated on: Jul 22, 2023 | 6:58 AM

ಬೆಳಗಾವಿ, ಜುಲೈ 22: ಕುಂದಾನಗರಿ ಬೆಳಗಾವಿ ಜಿಲ್ಲೆಯಾದ್ಯಂತ ನಾಲ್ಕು ದಿನಗಳಿಂದ ಭಾರಿ ಮಳೆ ಆಗ್ತಿದ್ದು ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ(Belagavi Rain). ನಗರದಲ್ಲಿ ಮಳೆಗೆ ರಸ್ತೆಗಳೆಲ್ಲವೂ ನದಿಗಳಂತಾದ್ರೇ ಇತ್ತ ಹಲವು ಗ್ರಾಮಗಳು ಸಂಪರ್ಕ ಕಡಿದುಕೊಳ್ಳುವ ಭೀತಿಯಲ್ಲಿವೆ. ತೂಕು ಸೇತುವೆ ಮೇಲೆ ಜನ ಜೀವ ಭಯದಲ್ಲಿ ಓಡಾಡುವಂತಾಗಿದೆ. ಖಾನಾಪುರ(Kanpur) ಭಾಗದಲ್ಲಿ ವರುಣ ಅತೀ ಹೆಚ್ಚು ಆರ್ಭಟಿಸುತ್ತಿದ್ದಾನೆ. ಹೀಗಾಗಿ ಖಾನಾಪುರ ತಾಲೂಕಿನ ಶಾಲೆಗಳಿಗೆ ಇಂದು(ಜುಲೈ 22) ರಜೆ ಘೋಷಿಸಲಾಗಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಶಾಲೆಗಳಿಗೆ ಇಂದು ರಜೆ ನೀಡಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್​ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ, ಲೋಂಡಾ, ಜಾಂಬೋಟಿ ಭಾಗದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಕಾಡಂಚಿನ ಮಕ್ಕಳು ಶಾಲೆಗೆ ತೆರಳಲು ಪರದಾಟ ಹಿನ್ನೆಲೆ ಖಾನಾಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿದ್ದು ಇದರಿಂದ ಜನಜೀವನ ಅಸ್ತವ್ಯಸ್ತತವಾಗಿದೆ. ಇನ್ನೂ ನಿನ್ನೆ ಒಂದೇ ದಿನ ಖಾನಾಪುರ ತಾಲೂಕಿನ ಕಣಕುಂಬಿ ಭಾಗದಲ್ಲಿ 205 ಮೀಲಿ ಮೀಟರ್ ಮಳೆಯಾಗಿದೆ. ಜಾಂಬೋಟಿಯಲ್ಲಿ 104 ಮೀಲಿ ಮೀಟರ್, ಬೆಳಗಾವಿ ತಾಲೂಕಿನ ರಕ್ಕಸಕೋಪ್ಪದಲ್ಲಿ 90 ಮೀಲಿ ಮೀಟರ್, ಉಚ್ಛಗಾಂವದಲ್ಲಿ 80 ಮೀಲಿ ಮೀಟರ್ ಮಳೆಯಾಗಿದೆ. ಇತ್ತ ಮಲಪ್ರಭಾ ನದಿಯ ನವೀಲು ತೀರ್ಥ ಜಲಾಶಯಕ್ಕೆ 7500 ಕ್ಯೂಸೆಕ್ ನೀರು ಒಳ ಹರಿವಿದ್ರೇ, ಘಟಪ್ರಭಾ ನದಿಯ ಹಿಡಕಲ್ ಜಲಾಶಯಕ್ಕೆ 24 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇದೆ. ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 85 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಇದೆ. ಹೀಗಾಗಿ ನದಿ ಪಾತ್ರಕ್ಕೆ ಇಳಿಯದಂತೆ ಪೊಲೀಸರು ನದಿ ಪಾತ್ರದ ಜನರಿಗೆ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಮಹರಾಷ್ಟ್ರದಲ್ಲಿ ಭಾರಿ ಮಳೆ: ಕೃಷ್ಣೆಯ ಒಡಲಿಗೆ ಒಳಹರಿವು ಏರಿಕೆ; ಚಿಕ್ಕೋಡಿ, ನಿಪ್ಪಾಣಿಯ 7 ಸೇತುವೆಗಳು ಮುಳುಗಡೆ

ಇತ್ತ ಬೆಳಗಾವಿ ನಗರದಲ್ಲೂ ಭಾರಿ ಮಳೆ ಆಗ್ತಿರುವ ಕಾರಣ ಬೆಳಗಾವಿ ಗೋವಾ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ನೀರು ನಿಂತು ನದಿಯಂತಾಗಿದೆ. ಸಾವಿರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು ಜೀವ ಭಯದಲ್ಲೇ ಓಡಾಡುತ್ತಿದ್ದಾರೆ. ಉದ್ಯಮಬಾಗ್ ಬಳಿ ಅರ್ಧ ಕಿಮೀ ದೂರದಷ್ಟು ನೀರು ನಿಂತು ವಾಹನ ಸವಾರರು ಒದ್ದಾಡುತ್ತಿದ್ರೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ತಲೆ ಕೆಡಸಿಕೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನಲ್ಲಿ ಇಂದಿಗೂ 50ಕ್ಕೂ ಹೆಚ್ಚು ಗ್ರಾಮಗಳಿಗೆ ಬಸ್, ರಸ್ತೆ, ಬ್ರಿಡ್ಜ್ ಸೌಲಭ್ಯಗಳೆ ಇಲ್ಲ. ಇಲ್ಲಿನ ನೇರಸೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗವಾಳಿ, ಪಾಸ್ತೋಲಿ, ಗೌಳಿವಾಡ, ಕೊಂಗಾಳ್ ಗ್ರಾಮದ ಜನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ನಾಲ್ಕೂ ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದೇ ಕಟ್ಟಿಗೆಯಿಂದ ನಿರ್ಮಿತವಾದ ಸೇತುವೆ ಮೇಲೆ ಓಡಾಟ ನಡೆಸುತ್ತಿದ್ದಾರೆ. ಮಳೆಯಿಂದ ಉಕ್ಕಿ ಹರಿಯುತ್ತಿರೋ ಬಂಡೂರಿ ನಾಲಾಗೆ ಅಡ್ಡಲಾಗಿ ಕಟ್ಟಿಗೆಯಿಂದ ನಿರ್ಮಿತ ಸೇತುವೆ ಮೇಲೆ ಅಪಾಯಕಾರಿ ಹೆಜ್ಜೆಗಳನ್ನು ಹಾಕುತ್ತಿದ್ದಾರೆ. ದಿನಬಳಕೆಯ ವಸ್ತುಗಳು ಕೊಳ್ಳಲು ಜೀವ ಕೈಯಲ್ಲಿ ಹಿಡಿದು ನಗರ ಪ್ರದೇಶಕ್ಕೆ ಬರುತ್ತಾರೆ. ಸ್ವಲ್ಪ ಹೆಚ್ಚೂಕಮ್ಮಿ ಆದ್ರೂ ಯಮನ ಪಾದ ಗ್ಯಾರೆಂಟಿ ಎನ್ನು ಸ್ಥಿತಿ ಇಲ್ಲಿ ಇದೆ. ಕಟ್ಟಿಗೆಯಿಂದ ನಿರ್ಮಿತವಾದ ತೂಗು ಸೇತುವೆ ಮೇಲೆ ಅಪಾಯಕಾರಿ ಬೈಕ್ ಓಡಾಟ ಮಾಡ್ತಿರೋ ಜನ, ಸರ್ಕಾರ ಹಾಗೂ ಸ್ಥಳೀಯ ಆಡಳಿತದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಗ್ರಾಮಕ್ಕೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಭೇಟಿ ಮಾಡಿ ಸೇತುವೆಗಾಗಿ ಬೇಡಿಕೆ

ಇಲ್ಲಿನ ಸಮಸ್ಯೆ ತಿಳಿದುಕೊಳ್ಳಲು ಸ್ವತಃ ಗ್ರಾಮಕ್ಕೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಭೇಟಿ ನೀಡಿದ್ರು. ಗ್ರಾಮಕ್ಕೆ ಒಂದು ಸೇತುವೆ ಆಗಬೇಕು ಎಂದು ಸಹ ಒತ್ತಾಯ ಮಾಡಿದ್ರು ಅಷ್ಟದ್ರೂ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ. ವನ್ಯಜೀವಿ ರಕ್ಷಿತ ಅರಣ್ಯ ಪ್ರದೇಶ ಹಿನ್ನೆಲೆ ರಸ್ತೆ ಬ್ರಿಡ್ಜ್ ನಿರ್ಮಾಣಕ್ಕೆ ಅನುಮತಿ ಸಿಕ್ಕಿಲ್ಲ. ಹೀಗಾಗಿ ಕಳೆದ ಹಲವಾರು ವರ್ಷಗಳಿಂದ ಜೀವ ಭಯದಲ್ಲೇ ಸೇತುವೆ ಮೇಲೆ ಓಡಾಟವನ್ನು ಜನ ನಡೆಸುತ್ತಿದ್ದಾರೆ. ಗರ್ಭಿಣಿಯರು, ಮಹಿಳೆಯರು ಮಕ್ಕಳಿಗೆ ಸೂಕ್ತ ಚಿಕಿತ್ಸೆಯಿಂದ ವಂಚಿತ ಆಗ್ತಿರೋ ಜನ, ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Loading...
Unable to load recommendations.
Follow Us