ಸಚಿವ ಸತೀಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಇದೆಂತ ಘಟನೆ? ಸಾಲ ತೀರಿಸಿಲ್ಲವೆಂದು ಪತ್ನಿ-ಪುತ್ರನ ಗೃಹಬಂಧನ, ಮನನೊಂದ ರೈತ ಆತ್ಮಹತ್ಯೆ

| Updated By: ಆಯೇಷಾ ಬಾನು

Updated on: May 21, 2024 | 12:56 PM

ರೈತ ರಾಜು ಮಹಿಳೆಯೋರ್ವರ ಬಳಿ ಸಾಲ ಮಾಡಿದ್ದರು ಅದಕ್ಕೆ ಬಡ್ಡಿ ಕೂಡ ಕಟ್ಟುತಿದ್ದರು. ಆದರೆ ಸಾಲ ನೀಡಿದ್ದ ಮಹಿಳೆ ಪೂರ್ತಿ ಹಣ ಪಾವತಿಸು ಇಲ್ಲ ಮಗನನ್ನು ನನ್ನ ಮನೆಗೆ ಬಿಡು ಎಂದು ಹೇಳಿದ್ದಾರೆ. ಮರು ದಿನ ಮಗನನ್ನು ಕರೆದುಕೊಂಡು ಬರಲು ಹೋದ ತಾಯಿಯನ್ನೂ ಗೃಹಬಂಧನದಲ್ಲಿಟಲಾಗಿದೆ. ಇದರಿಂದ ಮನನೊಂದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಚಿವ ಸತೀಶ್ ಜಾರಕಿಹೊಳಿ ಕ್ಷೇತ್ರದಲ್ಲಿ ಇದೆಂತ ಘಟನೆ? ಸಾಲ ತೀರಿಸಿಲ್ಲವೆಂದು ಪತ್ನಿ-ಪುತ್ರನ ಗೃಹಬಂಧನ, ಮನನೊಂದ ರೈತ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Follow us on

ಬೆಳಗಾವಿ, ಮೇ.21: ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ರೈತನೋರ್ವ (Farmer)  ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭೀಕರ ಬರಕ್ಕೆ ಬೆಳೆ ಕೈಕೊಟ್ಟಿದ್ದು ಜೀವನ ನಡೆಸಲು ಸಾಲ ಮಾಡಿದ್ದರು. ಸಾಲ ಮರುಪಾವತಿ ವಿಳಂಬವಾಗಿದ್ದಕ್ಕೆ ಸಾಲ ನೀಡಿದ್ದ ಮಹಿಳೆ ರೈತನ ಪತ್ನಿ, ಪುತ್ರನಿಗೆ ಗೃಹಬಂಧನ ಮಾಡಿದ್ದಾಳೆ. ಪತ್ನಿ-ಪುತ್ರನನ್ನು ಗೃಹಬಂಧನದಲ್ಲಿ ಇಟ್ಟಿದ್ದಕ್ಕೆ ಮನನೊಂದ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಸಾಲದ ಹೊರೆಗೆ ರೈತ ಮೃತಪಟ್ಟಿದ್ದಾನೆ.

ರಾಜು ಖೋತಗಿ‌ ಎಂಬ ರೈತ ಇಸ್ಲಾಂಪುರ ಗ್ರಾಮದ ಸಿದ್ದವ್ವ ಬಯ್ಯನವರ ಎಂಬ ಮಹಿಳೆ ಬಳಿ ಐದು ತಿಂಗಳ ಹಿಂದೆ ಒಂದೂವರೆ ಲಕ್ಷ ಸಾಲ ಪಡೆದಿದ್ದರು. ಪಡೆದಿದ್ದ ಸಾಲಕ್ಕೆ ಪ್ರತಿ ತಿಂಗಳು ಶೇ. 10ರಷ್ಟು ಬಡ್ಡಿ ಸಹ ತುಂಬುತ್ತಿದ್ದರು. ಎರಡು ದಿನಗಳ ಹಿಂದೆ ಸಿದ್ದವ್ವ ಏಕಾಏಕಿ ರಾಜು ಅವರನ್ನು ಮನೆಗೆ ಕರೆದು ಕೊಟ್ಟ ಸಾಲ ಮರಳಿಸುವಂತೆ ತಾಕೀತು ಮಾಡಿದ್ದಾರೆ. ಸಾಲ ಮರಳಿಸಲು ಒಂದೆರಡು ದಿನ ಕಾಲಾವಕಾಶ ಕೇಳಿದಕ್ಕೆ ಆಗುವುದಿಲ್ಲ, ಸಾಲ ವಾಪಾಸ್ ಕೊಡುವವರೆಗೂ ಪುತ್ರನನ್ನ ಮನೆಯಲ್ಲಿ ಬಿಟ್ಟು ಹೋಗುವಂತೆ ಹೇಳಿದ್ದಾರೆ. ಈ ವೇಳೆ ಪುತ್ರ ಬಸವರಾಜ್​ನನ್ನು ತಂದೆ ರಾಜು ಸಿದ್ದವ್ವ ಮನೆಯಲ್ಲಿ ಬಿಟ್ಟು ಬಂದಿದ್ರು. ಮಾರನೇ ದಿನ ಕರೆಯಲು ಹೋದ ದುರ್ಗವ್ವಗೂ ಗೃಹ ಬಂಧನದಲ್ಲಿಟಲಾಗಿತ್ತು. ಇದರಿಂದ ಮನನೊಂದು ರೈತ ರಾಜು ಖೋತಗಿ ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ: Karnataka Dam Water Level: ಘಟಪ್ರಭಾ ಜಲಾಶಯಕ್ಕೆ ಒಳಹರಿವು ಹೆಚ್ಚಳ, ಮೇ 21ರ ರಾಜ್ಯದ ಪ್ರಮುಖ ಡ್ಯಾಂಗಳ ನೀರಿನ ಮಟ್ಟ

ಮತ್ತೊಂದೆಡೆ ರಾಜು ಖೋತಗಿ‌ ಅವರಿಗೆ ಸಾಲ ನೀಡಿದ್ದ ಸಿದ್ದವ್ವ, ರೈತನ ಪತ್ನಿ-ಪುತ್ರನಿಗೆ 2 ದಿನಗಳ ಕಾಲ ಹನಿ ನೀರು, ತುತ್ತು ಅನ್ನ ನೀಡದೇ ಗೃಹ ಬಂಧನದಲ್ಲಿಟ್ಟಿದ್ದರು ಎಂಬ ಆರೋಪ ಕೇಳಿ ಬಂದಿದೆ. ರಾಜು ಪತ್ನಿ ದುರ್ಗವ್ವ ಖೋತಗಿ, ಪುತ್ರ ಬಸವರಾಜ ಖೋತಗಿ ಗೃಹಬಂಧನದಲ್ಲಿರಿಸಿ ಸಿದ್ದವ್ವ ದಬ್ಬಾಳಿಕೆ ನಡೆಸಿದ್ದಾಳೆ ಎನ್ನಲಾಗುತ್ತಿದೆ. ಸಿದ್ದವ್ವಳ ಅನ್ಯಾಯದ ವಿರುದ್ಧ ದೂರು ದಾಖಲಿಸಿಕೊಳ್ಳದೇ ಪೊಲೀಸರು ಸತಾಯಿಸಿದ್ದು ಬೆಳಗ್ಗೆಯಿಂದ ರಾತ್ರಿ ವರೆಗೆ ಠಾಣೆಯಲ್ಲೇ ಕೂರಿಸಿಕೊಂಡು ಬಳಿಕ ದೂರು ದಾಖಲಿಸಿಕೊಂಡಿದ್ದಾರೆ ಎಂದು ಯಮಕನಮರಡಿ ಠಾಣೆ ಪೊಲೀಸರ ವಿರುದ್ಧ ದುರ್ಗವ್ವ, ಪೋಷಕರು ಆರೋಪ ಮಾಡಿದ್ದಾರೆ. ಸದ್ಯ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಘಟನೆ ಸಂಬಂಧ ಮಾತನಾಡಿದ ಎಸ್ಪಿ ಬಿ.ಎಸ್ ನೇಮಗೌಡ, ಮೃತ ರಾಜು ಖೋತಗಿಯವರ ಪತ್ನಿ ದುರ್ಗವ್ವ ದೂರು ಕೊಟ್ಟಿದ್ದಾರೆ. ಅವರು ಕೊಟ್ಟ ದೂರಿನನ್ವಯ ದೂರು ದಾಖಲಿಸಿಕೊಂಡು ತನಿಖೆ ಮಾಡ್ತಿದ್ದೇವೆ. ಎರಡು ಚೆಕ್ ಪಡೆದು ಸಿದ್ದವ್ವ ಬಯ್ಯನವರ ಒಂದೂವರೆ ಲಕ್ಷ ಸಾಲ ಕೊಟ್ಟಿದ್ದರು. ಕೊಟ್ಟ ಸಾಲ ಮರಳಿಸಿ ಕೊಡಿ ಎಂದು ಸಿದ್ದವ್ವ ಹೇಳಿದ್ದರು. ಹಣ ವಾಪಾಸ್ ಕೊಡು ಅಂತಾ ಹಿಂಸೆ ನೀಡಿದ್ದು ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ರಾಜು ಪತ್ನಿ ದುರ್ಗವ್ವ ಹಾಗೂ ಮಗ ಬಸವರಾಜ್ ಗೃಹ ಬಂಧನ ಮಾಡಿದ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಗೃಹ ಬಂಧನಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ನಡೆದಿದೆ. ಗೃಹ ಬಂಧನದಲ್ಲಿಟ್ಟಿದ್ದರು ಎಂಬುದರ ಬಗ್ಗೆಯೂ ತನಿಖೆ ಆಗುತ್ತಿದೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:46 am, Tue, 21 May 24