ನಿಪ್ಪಾಣಿ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬ ಚುನಾವಣೆಗೆ ಸ್ಪರ್ಧಿಸಲ್ಲ -ಅಚ್ಚರಿ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ

| Updated By: ಆಯೇಷಾ ಬಾನು

Updated on: Nov 07, 2022 | 7:31 AM

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್ ಸಮಾವೇಶದಲ್ಲಿ ಸತೀಶ್ ಜಾರಕಿಹೊಳಿ ತಮ್ಮ ಕುಟುಂಬ ನಿಪ್ಪಾಣಿಯಿಂದ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಿಪ್ಪಾಣಿ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬ ಚುನಾವಣೆಗೆ ಸ್ಪರ್ಧಿಸಲ್ಲ -ಅಚ್ಚರಿ ಹೇಳಿಕೆ ನೀಡಿದ ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
Follow us on

ಬೆಳಗಾವಿ: ನಿಪ್ಪಾಣಿ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮನೆ ಮನೆಗೆ ಬುದ್ಧ, ಬಸವ, ಅಂಬೇಡ್ಕರ್ ಸಮಾವೇಶದಲ್ಲಿ ಭಾಗಿಯಾಗಿದ್ದ ಸತೀಶ್ ಜಾರಕಿಹೊಳಿ ಈ ರೀತಿಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ಮನುಷ್ಯರಾಗಿ ಮನುಷ್ಯರನ್ನ ನೋಡುವುದು ಬಹಳ ಮುಖ್ಯ. ಅವನು ಆ ಜಾತಿ, ಈ ಜಾತಿ ಅಂತಾ ಮುಟ್ಟಿಸಿಕೊಳ್ಳುವುದಿಲ್ಲ. ಅನಿಷ್ಟ ಪದ್ಧತಿಗಳು ಹೋಗಬೇಕು, ಅದಕ್ಕೆ ನಮ್ಮ ಹೋರಾಟ. ದಲಿತ ನೀರು ಮುಟ್ಟಿದ್ರೆ ಅಶುದ್ಧ ಅಂತಾರೆ. ಅದೇ ಒಂದು ಎಮ್ಮೆ ಬೆಳಗ್ಗೆಯಿಂದ ಸಂಜೆವರೆಗೂ ನೀರಲ್ಲೇ ಇರುತ್ತೆ‌. ಇದರ ವಿರುದ್ಧ ನಮ್ಮ ಹೋರಾಟವಿದೆ. ಗುಡಿ ಕಟ್ಟುವವರೂ ನಾವು, ದೇಣಿಗೆ ಕೊಡುವವರೂ ನಾವು. ದೇಗುಲ ರೆಡಿಯಾದ ಮೇಲೆ ದಲಿತರಿಗೆ ಅಲ್ಲಿ ಪ್ರವೇಶ ಇಲ್ಲ ಅಂತೀವಿ. ದೇವಸ್ಥಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಲಿ. ಶಿಕ್ಷಣ ಹಾಗೂ ಜ್ಞಾನ ಒಂದೇ ನಮ್ಮನ್ನ ಬದುಕಿಸಲು ಸಾಧ್ಯವಿಲ್ಲ. ಬದುಕಿನಲ್ಲಿ ಬರುವ ಜ್ಞಾನ ಬಹಳ ಮುಖ್ಯ. ನಿಪ್ಪಾಣಿ ಕಾರ್ಯಕ್ರಮ ಪ್ರಾರಂಭದ ಪಿಕ್ಚರ್, ಮುಂದೆ ಬಾಕಿ ಇದೆ. ಈ ದೇಶ ನಮ್ಮದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭಾಷಣ ಮಾಡಿದರು.

ನಾಲ್ಕು ವರ್ಷದ ನಂತರ ಸೈನ್ಯದಿಂದ ವಾಪಾಸ್ ಕಳುಹಿಸುವ ಕೆಲಸ ನಡೆಯುತ್ತಿದೆ. ಅಲ್ಲಿಯೂ ನಮ್ಮ ಹಕ್ಕುಗಳನ್ನ ಕಸಿದುಕೊಳ್ಳುವ ಪ್ರಯತ್ನ ನಡೆದಿದೆ. ಬೃಹತ್ ಸಭೆಗಳ ಬದಲು ಚಿಕ್ಕ ಚಿಕ್ಕ ಸಭೆ ಮಾಡಿ ಮನೆಗಳಿಗೆ ಬರುವ ಕಾರ್ಯಕ್ರಮ ನಮ್ಮದು. ಬುದ್ಧ, ಬಸವ ಉಳಿಸಿಕೊಳ್ಳಬೇಕು ಅಂದ್ರೇ ಸ್ವಲ್ಪ ಕಷ್ಟದ ಕೆಲಸ ನಾವು ಮಾಡಬೇಕು. ಈ ಕಾರ್ಯಕ್ರಮ ಪದೇ ಪದೇ ಮಾಡುತ್ತೇವೆ ನಿಮ್ಮನ್ನ ಆಹ್ವಾನಿಸುತ್ತೇವೆ. ನಮ್ಮ ವಿಚಾರಗಳು ತಕ್ಷಣ ಸ್ಪಂದನೆ ಆಗುವುದಿಲ್ಲ. ಅವರಲ್ಲಿರುವ ಪರಂಪರೆಗಳಿಂದ ಇದು ವಿಭಿನ್ನವಾಗಿದೆ‌.
ಮಾನವ ಬಂಧುತ್ವ ಕೆಲಸ ವೇದಿಕೆ ಆಯೋಜನೆ ಮಾಡುವುದು ಅಷ್ಟೇ. ಬೆಳಗ್ಗೆ ಎದ್ದ ಕೂಡಲೇ ನಿಪ್ಪಾಣಿಗೆ ಸಾಹುಕಾರ್ ಬರ್ತಾರೆ ಅನ್ನೋದು ಆಗಬಾರದು. ಅವರ ಮಗಳು ಬರ್ತಾರೆ ಅಂತಾ ಚರ್ಚೆ ಪ್ರಾರಂಭ ಆಗಬಾರದು. ನಾವು ಆ ಉದ್ದೇಶಕ್ಕಾಗಿ ಕಾರ್ಯಕ್ರಮ ಮಾಡಿಲ್ಲ. ರಾಜಕೀಯ ಅಧಿಕಾರಕ್ಕಿಂತ ನಮಗೆ ಈ ಅಧಿಕಾರ ಬಹಳ ಮುಖ್ಯ. ಮನುಷ್ಯರಾಗಿ ಮನುಷ್ಯರನ್ನ ನೋಡುವುದು ಬಹಳ ಮುಖ್ಯ. ಅಧಿಕಾರ ಬರುತ್ತೆ ಅಧಿಕಾರ ಹೋಗುತ್ತೆ ಎಂದರು.

ಆಗ್ರಾದಲ್ಲಿ ಬಂಧಿತರಾಗಿದ್ದ ಶಿವಾಜಿ ಅವರನ್ನ ಮುಸ್ಲಿಮರೇ ಬಿಡಿಸಿಕೊಂಡು ಬಂದಿದ್ದು

2 ಸಾವಿರ ವರ್ಷಗಳ ಹಿಂದೆ ಯಾವುದೇ ಜಾತಿ, ಧರ್ಮ ಇರಲಿಲ್ಲ. ನಾವು ಮಾಡುತ್ತಿದ್ದ ಕೆಲಸ ಬೇರೆ ಬೇರೆಯಾಗಿತ್ತು ಅಷ್ಟೇ. ಹೀಗಾಗಿ ಬೇರೆ ಮಾಡಿದ್ರು, ಮತ್ತೆ ಒಂದಾಗುವವರೆಗೆ ಹೋರಾಡೋಣ. ಇದಕ್ಕೆ ರಾಜಕೀಯ ಅಸ್ತಿತ್ವ ಮತ್ತು ಅಧಿಕಾರವೂ ಬಹಳ ಮುಖ್ಯ. ಅಧಿಕಾರ ಇಲ್ಲದೇ ನಾವು ಏನೂ ಮಾಡಲು ಆಗುವುದಿಲ್ಲ. ನಾವು ನೋಡುತ್ತಿರುವ ಇತಿಹಾಸ, ಓದುತ್ತಿರುವ ಇತಿಹಾಸ ತಪ್ಪಾಗಿದೆ. ಹೀಗಾಗಿ ಇದರ ಪರಿಣಾಮಗಳು ಬೇರೆ ಬೇರೆಯಾಗುತ್ತೆ. ಅದಕ್ಕಾಗಿ ಇಂತಹ ಕಾರ್ಯಕ್ರಮಗಳು ಬಹಳ ಅವಶ್ಯಕತೆ ಇದೆ. ಶಿವಾಜಿ ಮಹಾರಾಜರ ಅಂತ್ಯ ಹೇಗಾಯ್ತೆಂದು ಯಾರೂ ಹೇಳಿಲ್ಲ. ಶಿವಾಜಿ ಮಹಾರಾಜರಿಗೆ ಯುದ್ಧದ ವೇಳೆ ಹಿಂದೂ, ಮರಾಠ ಸಲಹೆ ನೀಡಿಲ್ಲ, ಮುಸ್ಲಿಮರು ಸಲಹೆ ನೀಡಿದ್ರು. ಆಗ್ರಾದಲ್ಲಿ ಬಂಧಿತರಾಗಿದ್ದ ಶಿವಾಜಿ ಅವರನ್ನ ಮುಸ್ಲಿಮರೇ ಬಿಡಿಸಿಕೊಂಡು ಬಂದಿದ್ದರು. ಆದ್ರೆ ಈಗ ಮರಾಠ ಮುಸ್ಲಿಂ ಜಗಳ.

ಶಿವಾಜಿ ಅವರ ಪೇಂಟಿಂಗ್ ಪಾಟೀಲ್, ಜಾಧವ್, ದೇಶಪಾಂಡೆ ಬರೆದಿಲ್ಲ. ಮುಸಲ್ಮಾನರಾದ ಮೊಹಮ್ಮದ್ ಮುರಾರಿ ಬರೆದಿದ್ದಾರೆ. ಶಿವಾಜಿ ಮಹಾರಾಜರ ಅಂಗರಕ್ಷಕರು ಮುಸಲ್ಮಾನರಿದ್ದರು ಇದನ್ನ ಮರಾಠರು ತಿಳಿದುಕೊಳ್ಳುವುದು ಬಹಳ ಅವಶ್ಯಕತೆ ಇದೆ. ಪ್ರತಾಪ್‌ಘಡ್ ಕೋಟೆಯಲ್ಲಿ ಶಿವಾಜಿ ಮಹಾರಾಜರು ಮಸೀದಿಯನ್ನ ನಿರ್ಮಾಣ ಮಾಡಿದ್ರು. ಈಗ ನಮಗೆ ಇತಿಹಾಸವನ್ನ ಬೇರೆ ರೀತಿ ತೋರಿಸಲಾಗುತ್ತಿದೆ. ಬಸವಣ್ಣನವರು ಕ್ರಾಂತಿಕಾರಿ, ನೀರಲ್ಲಿ ಮುಳುಗಿ ಸಾಯುತ್ತಾರಾ? ಸಮಾಜಕ್ಕಾಗಿ ಹೋರಾಡುವವರು ಸುಲಭವಾಗಿ ಸಾಯುವುದಿಲ್ಲ. ಇತಿಹಾಸವನ್ನ ಮುಚ್ಚಿಡಲಾಗಿತ್ತು ಅದರ ಬಗ್ಗೆ ಈಗ ಚರ್ಚೆ ಆಗುತ್ತಿದೆ. ಈಗ ತೋರಿಸುತ್ತಿರುವ ಸಿನಿಮಾ ಏನಾಗುತ್ತಿದೆ ಅಂತಾ ಗೊತ್ತಾಗುತ್ತಿಲ್ಲ ಎಂದು ಆರ್‌ಎಸ್‌ಎಸ್ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಮುರುಘಾ ಶ್ರೀ ಪ್ರಕರಣ: ಮಠದ ಕಾರ್ಯವೈಖರಿ ಕುರಿತು ಇಂದು ಜಿಲ್ಲಾಧಿಕಾರಿ ಸರ್ಕಾರಕ್ಕೆ ವರದಿ ಕಳುಹಿಸುವ ಸಾಧ್ಯತೆ

ಹಿಂದೂ ಶಬ್ದದ ಅರ್ಥ ಬಹಳ ಅಶ್ಲೀಲವಾಗಿದೆ

ಹಿಂದೂ ಎಂಬ ಶಬ್ದ ಹೇಗೆ ಬಂತು ಅನ್ನೋದು ಚರ್ಚೆಯಾಗಬೇಕು. ಹಿಂದೂ ಎಂಬ ಶಬ್ದ ಪರ್ಷಿಯನ್ನದ್ದು-. ಇರಾಕ್‌, ಇರಾನ್‌, ಖಜಕಿಸ್ತಾನ್‌ದ್ದು, ಇದಕ್ಕೂ ಭಾರತಕ್ಕೇನು ಸಂಬಂಧ. ಹಿಂದೂ ಶಬ್ದದ ಅರ್ಥ ಗೊತ್ತಾದ್ರೇ ನಿಮಗೆ ನಾಚಿಕೆ ಬರುತ್ತೆ. ಹಿಂದೂ ಶಬ್ದದ ಅರ್ಥ ಬಹಳ ಅಶ್ಲೀಲವಾಗಿದೆ. ಎಲ್ಲಿಂದಲೋ ತಗೊಂಡು ಬಂದು ಒತ್ತಾಯಪೂರ್ವಕವಾಗಿ ಹೇರುತ್ತಿದ್ದಾರೆ. ಹೀಗಾಗಿ ಮೊದಲು ನಾವು ಇತಿಹಾಸ ತಿಳಿದುಕೊಳ್ಳುವುದು ಅಗತ್ಯವಿದೆ. ಸುಳ್ಳು ಯಾರು ಹೇಳ್ತಿದ್ದಾರೆ ಅವರಿಗೆ ಮಹಾನ್ ವ್ಯಕ್ತಿ ಅಂತಾ ಹೇಳ್ತಿದ್ದೇವೆ. ಸುಳ್ಳು ಹೇಳ್ತಿರುವವರಿಗೆ ನಾವು ದೇಶದ ಆದರ್ಶ ಮಾಡುತ್ತಿದ್ದೇವೆ.

ಬುದ್ಧ, ಬಸವ ತತ್ವಗಳನ್ನು ನಾವು ಉಳಿಸಿಕೊಳ್ಳಬೇಕಿದೆ. ಈಗಾಗಲೇ ಗಾಂಧಿ, ನೆಹರು ವಿಚಾರಗಳು ದೂರವಾಗ್ತಿವೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ವಿಚಾರಗಳೂ​ ದೂರವಾಗಬಹುದು. ಅವರ ಜಾಗದಲ್ಲಿ ಗೋಡ್ಸೆ, ಸಾವರ್ಕರ್​​ ವಿಚಾರಗಳು ಬಂದಿವೆ. ನಮಗೋಸ್ಕರ ಹೋರಾಡಿದ ನಾಯಕರನ್ನು ಮರೆಯುತ್ತಿದ್ದೇವೆ. ನಮಗೋಸ್ಕರ ಬರೆದ ಗ್ರಂಥಗಳು ನಮ್ಮಿಂದ ದೂರವಾಗಿವೆ. ಟೈಮ್​ ಪಾಸ್​ಗಾಗಿ ಬರೆದ ಪುಸ್ತಕಗಳು ಇಂದು ಗ್ರಂಥಗಳಾಗಿವೆ. ವ್ಯವಸ್ಥಿತವಾಗಿ ನಿಮ್ಮನ್ನು ಶಿಕ್ಷಣದಿಂದ ದೂರ ಇಡುವ ಪ್ರಯತ್ನ ಆಗ್ತಿದೆ. ಸರ್ಕಾರಿ ಶಾಲೆಗಳಲ್ಲಿ ಬಡ ಮಕ್ಕಳು ಕಲಿಯುತ್ತಿದ್ದಾರೆ. ಈಗ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಯತ್ನ ನಡೆದಿದೆ. ನಮ್ಮ ಕೈ, ಕಾಲಿಗೆ ಬೇಡಿಹಾಕಿಲ್ಲ, ನಮ್ಮ ಮೆದುಳಿಗೆ ಬೇಡಿ ಹಾಕಿದ್ದಾರೆ. ಅದರಿಂದ ಹೊರಬರಲು ಸಾಕಷ್ಟು ಹೋರಾಟ ಮಾಡಬೇಕಿದೆ. ಹೀಗಾಗಿ ಪುಸ್ತಕ ಬರೆದು ಮನೆ ಮನೆಗೆ ತಲುಪಿಸುವ ಕೆಲಸ ಮಾಡ್ತಿದ್ದೇನೆ ಎಂದರು.

ಮತ್ತೆ ನಮ್ಮನ್ನ ಸಮಾಜದಿಂದ ದೂರ ಇಡುವ ಕಾಲ ಬರಬಹುದು. ನಮಗೆ ಯಾವುದು ಬೇಕು ಅದು ನಮ್ಮಿಂದ ದೂರ ಆಗಿದೆ. ಸಂವಿಧಾನ, ಬಸವಣ್ಣನವರ ವಚನದಲ್ಲಿ ಎನಿದೆ ತಿಳಿದುಕೊಳ್ಳಬೇಕಿದೆ. ಈ ಕಾರ್ಯಕ್ರಮ ಒಂದು ವರ್ಷದಲ್ಲಿ ಆಗುವಂತಹದ್ದು ಅಲ್ಲಾ ನಿರಂತರವಾಗಿರುವುದು. ಬುದ್ದ, ಬಸವಣ್ಣ, ಅಂಬೇಡ್ಕರ್, ಶಾಹು ಮಹಾರಾಜರ ದಾರಿಯಲ್ಲಿ ನೀವೆಲ್ಲ ಬರಬೇಕು. ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮವನ್ನ ಮಾಡ್ತೀವಿ. ನೀವು ಎಷ್ಟೇ ಸಾರಿ ತಿರಸ್ಕಾರ ಮಾಡಿದ್ರೂ ನಿಮ್ಮ ಮನೆಗೆ ಬರ್ತೀವಿ. ನಾವು ಸುಳ್ಳು ಹೇಳುವ ಪ್ರಯತ್ನ ಮಾಡಿಲ್ಲ ನಿಜವಾಗಿರುವುದನ್ನ ಹೇಳುತ್ತಿದ್ದೇವೆ. ಸುಮಾರು ಜನ ಸ್ವಾಮೀಜಿ, ಚಿಂತಕರು, ರಾಜಕಾರಣಿಗಳು ನಮಗೆ ಬೆಂಬಲ ನೀಡ್ತಿದ್ದಾರೆ ಎಂದರು.

Published On - 7:31 am, Mon, 7 November 22