ಬೆಳಗಾವಿ ಬಿಜೆಪಿಯಲ್ಲಿ ಮತ್ತೆರಡು ವಿಕೆಟ್ ಪತನ: ಲಕ್ಷ್ಮಣ ಸವದಿ ಬಳಿಕ ಪಕ್ಷ ಬಿಡಲು ಮುಂದಾದ ಮಹಾದೇವಪ್ಪ ಯಾದವಾಡ ಮತ್ತು ಅನಿಲ್ ಬೆನಕೆ

|

Updated on: Apr 14, 2023 | 11:48 AM

ಲಕ್ಷ್ಮಣ ಸವದಿ ಬಳಿಕ ಬೆಳಗಾವಿ ಬಿಜೆಪಿಯಲ್ಲಿ ಮತ್ತೆರಡು  ವಿಕೆಟ್ ಪತನಗೊಳ್ಳಲಿದೆ. ಬಿಜೆಪಿಗೆ ಗುಡ್‌ಬೈ ಹೇಳಲು ರಾಮದುರ್ಗ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಮತ್ತು ಅನಿಲ್ ಬೆನಕೆ ಮುಂದಾಗಿದ್ದಾರೆ.

ಬೆಳಗಾವಿ: ಬೆಳಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಒಂಡಾಯದ ಕಾವು ಹೆಚ್ಚಾಗಿದೆ(Karnataka Assembly Elections 2023) . ಬೆಳಗಾವಿಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಟಿಕೆಟ್ ಸಿಗದ ಆಕಾಂಕ್ಷಿಗಳು ಬಂಡಾಯ ಸಾರಿದ್ದರು. ಆದ್ರೆ ಈಗ ಲಕ್ಷ್ಮಣ ಸವದಿ ಬಳಿಕ ಬೆಳಗಾವಿ ಬಿಜೆಪಿಯಲ್ಲಿ ಮತ್ತೆರಡು  ವಿಕೆಟ್ ಪತನಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಬಿಜೆಪಿಗೆ ಗುಡ್‌ಬೈ ಹೇಳಲು ರಾಮದುರ್ಗ ಹಾಲಿ ಶಾಸಕ ಮಹಾದೇವಪ್ಪ ಯಾದವಾಡ(Mahadevappa Yadawad) ಮತ್ತು ಅನಿಲ್ ಬೆನಕೆ(Anil Benake) ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಅಥಣಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ್ ಸವದಿ ಬಿಜೆಪಿ ತೊರೆದಿದ್ದಾರೆ. ಅಲ್ಲಿ ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದ ಮಹೇಶ್ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಹಾಗಾಗಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಲಕ್ಷ್ಮಣ್ ಸವದಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಇನ್ನು ಮತ್ತೊಂದೆಡೆ ರಾಮದುರ್ಗ ಟಿಕೆಟ್ ಕೈತಪ್ಪಿದಕ್ಕೆ ಆಕ್ರೋಶಗೊಂಡಿರುವ ಮಹಾದೇವಪ್ಪ ಯಾದವಾಡ ಅವರು ಕೂಡು ಬಿಜೆಪಿಗೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ ಟಿಕೆಟ್ ಬದಲಾವಣೆ ಮಾಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ನಾನು ಶಾಸಕನಾಗಿ 3,100 ಕೋಟಿ ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಬಿಜೆಪಿ ಶಿಸ್ತಿನ ಪಕ್ಷ, ಆದ್ರೆ ಕಾಂಗ್ರೆಸ್‌ನಿಂದ ಚಿಕ್ಕರೇವಣ್ಣ ಕರೆತಂದು ಟಿಕೆಟ್ ಘೋಷಣೆ ಮಾಡಿದ್ದಾರೆ. ನಿನ್ನೆ ಬೆಂಬಲಿಗರ ಸಭೆಯಲ್ಲಿ ನಮ್ಮ ಕಾರ್ಯಕರ್ತರು ಬಿಜೆಪಿ ಅನ್ಯಾಯ ಮಾಡಿದೆ ಎಂದಿದ್ದಾರೆ. ನಮ್ಮ ತಾಲೂಕಿನಲ್ಲಿ ನಾಲ್ಕೈದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿದ್ದರು. ಸಿದ್ದರಾಮಯ್ಯ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಮೂಲದ ಚಿಕ್ಕರೇವಣ್ಣಗೆ ಟಿಕೆಟ್ ಹಾಕಿದ್ದಾರೆ. ನನ್ನ ಬದಲು ಸ್ಥಳೀಯರಿಗೆ ಅವಕಾಶ ನೀಡಿದ್ರೆ ನಾನು ಸುಮ್ಮನಿರುತ್ತಿದ್ದೆ. ಹೊರಗಿನ ಚಿಕ್ಕರೇವಣ್ಣಗೆ ಮಣೆ ಹಾಕಿದಕ್ಕೆ ನನಗೆ ಬೇಸರ ಇದೆ. ರಾಜ್ಯ, ರಾಷ್ಟ್ರೀಯ ಮುಖಂಡರು ನನಗೆ ಟಿಕೆಟ್ ನೀಡುವ ಕೆಲಸ ಮಾಡಬೇಕು. ಅವರು ನೀಡಿದ ಭರವಸೆ ಈಡೇರಿಸದಿದ್ರೆ ಬಿಜೆಪಿಗೆ ರಾಜೀನಾಮೆ ಸಲ್ಲಿಸುವೆ. ನಾನು ಬಿಜೆಪಿ ತೊರೆದು ಯಾವುದೇ ಪಕ್ಷ ಸೇರುವುದಿಲ್ಲ. ಸೋಮವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವೆ ಎಂದ ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಅಸಮಾಧಾನ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಇಂದು ಎಂಎಲ್​ಸಿ ಸ್ಥಾನಕ್ಕೆ ಲಕ್ಷ್ಮಣ ಸವದಿ ರಾಜಿನಾಮೆ, ಕಾಂಗ್ರೆಸ್​ ಸೇರ್ಪಡೆ? ಬೆಳಗಾವಿ ರಾಜಕಾರಣದಲ್ಲಿ ಹೊಸ ಅಲೆ

ಬಿಜೆಪಿ ತೊರೆಯಲಿರುವ ಅನಿಲ್ ಬೆನಕೆ

ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅನಿಲ್ ಬೆನಕೆ ಕಾಂಗ್ರೆಸ್ ಹೈಕಮಾಂಡ್ ಸಂಪರ್ಕಿಸಿರುವುದನ್ನ ಖಚಿತ ಪಡಿಸಿದ್ದಾರೆ. ನಾನು ನನ್ನ ಚುನಾವಣೆಯಲ್ಲಿ ಬಿಜಿ ಇದ್ದೇನೆ. ನಮ್ಮ ಹೈಕಮಾಂಡ್ ಜೊತೆಗೆ ಅನಿಲ್ ಬೆನಕೆ ಸಂಪರ್ಕದಲ್ಲಿರಬಹುದು. ಮುಂಬರುವ ದಿನಗಳಲ್ಲಿ ಯಾರು ಬರ್ತಾರೆ ನೋಡೋಣ. ಲಕ್ಷ್ಮಣ ಸವದಿಯವರು ಮೊದಲು ಕಾಂಗ್ರೆಸ್‌ಗೆ ಬರಲಿ ಅವರಿಗೆ ಸ್ವಾಗತ ಮಾಡುತ್ತೇವೆ ನಾವು. ನಮ್ಮ ಜಿಲ್ಲಾ ನಾಯಕರೆಲ್ಲರೂ ಕೂಡಿ ಅವರನ್ನ ಸ್ವಾಗತ ಮಾಡುತ್ತಿದ್ದಾರೆ. ಅವರು ಬರೋದ್ರಿಂದ ಜಿಲ್ಲೆಗೆ ಅಷ್ಟೇ ಅಲ್ಲದೇ ರಾಜ್ಯದಲ್ಲೂ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತೆ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.

ಲಕ್ಷ್ಮಣ ಸವದಿಯನ್ನ ಎಂಎಲ್‌ಸಿ ಚನ್ನರಾಜ ಕರೆದುಕೊಂಡು ಹೋಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಹೈಕಮಾಂಡ್ ಕೊಟ್ಟಿರುವ ನಿರ್ದೇಶನವನ್ನ ಸಹೋದರ ಮಾಡಿದ್ದಾರೆ. ಸವದಿಯವರು ಹಿರಿಯರಿದ್ದಾರೆ. ಅವರು ನಮಗೆ ಮಾರ್ಗದರ್ಶನ ಮಾಡಬೇಕು ಎಂದರು. ಇನ್ನು ಗ್ರಾಮೀಣ ಕ್ಷೇತ್ರದಲ್ಲಿ ರಮೇಶ್ ಆಪ್ತ ನಾಗೇಶ್ ಮನ್ನೋಳ್ಕರ್‌ಗೆ ಟಿಕೆಟ್ ಸಿಕ್ಕಿರುವ ವಿಚಾರಕ್ಕೆ ಸಂಬಂಧಿಸಿ ಪಾಪ ಸಂಜಯ್ ಪಾಟೀಲ್ ಎರಡು ಬಾರಿ ಶಾಸಕರಾಗಿದ್ದವರು. ಧನಂಜಯ್ ಜಾಧವ್ ಕೂಡ ಪಕ್ಷದಲ್ಲಿದ್ದವರು. ಆದ್ರೂ ಅವರಿಗೆ ಟಿಕೆಟ್ ಸಿಕ್ಕಿಲ್ಲ ಅಂದ್ರೇ ಎನೂ ಮಾಡಲು ಆಗಲ್ಲಾ‌. ಯಾರೇ ಅಭ್ಯರ್ಥಿಯಾದ್ರೂ ಹಗುರಾಗಿ ತೆಗೆದುಕೊಳ್ಳುವುದಿಲ್ಲ. ಚುನಾವಣೆ ಮಾಡುತ್ತೇನೆ ಎಂದು ರಮೇಶ್‌ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:28 am, Fri, 14 April 23