
ಬೆಳಗಾವಿ: ಜಿಲ್ಲೆಗೆ ನಾಳೆ (ಫೆ.27) ಪ್ರಧಾನಿ ಮೋದಿ(Narendra Modi) ಭೇಟಿ ಹಿನ್ನೆಲೆ ಪಿಯುಸಿ ಪ್ರಥಮ ವರ್ಷದ ವಾರ್ಷಿಕ ಪರೀಕ್ಷೆ ಮುಂದೂಡಿ(PUC Exams) ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಜೊತೆಗೆ ಬೆಳಗಾವಿ ನಗರದ ಹಲವೆಡೆ ವಾಹನ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ನಿಪ್ಪಾಣಿಯಿಂದ ಖಾನಾಪುರ, ಗೋವಾಕ್ಕೆ ತೆರಳುವ ಮಾರ್ಗ ಬದಲಾವಣೆ ಮಾಡಲಾಗಿದ್ದು ಬಾಕ್ಸೈಟ್ ರಸ್ತೆ, ಹಿಂಡಲಗಾ ಗಣಪತಿ ದೇವಸ್ಥಾನ, ಶೌರ್ಯ ಸರ್ಕಲ್, ಕಾಂಗ್ರೆಸ್ ರಸ್ತೆ ಮೂಲಕ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಅನುದಾನಿತ, ಅನುದಾನ ರಹಿತ ಕಾಲೇಜುಗಳಿಗೆ ಪರೀಕ್ಷೆ ಮುಂದೂಡುವಂತೆ ಆದೇಶ ನೀಡಿದೆ. ಫೆ.27ರಂದು ನಡೆಯುವ ಪರೀಕ್ಷೆಯನ್ನ ಮಾರ್ಚ್ 6ರಂದು ನಡೆಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದ್ದು ಬೆಳಗಾವಿ ಜಿಲ್ಲೆಯ ಪಿಯು ಕಾಲೇಜುಗಳಿಗೆ ಈ ಆದೇಶ ಅನ್ವಯವಾಗಲಿದೆ. ಬಸ್ ಸಂಚಾರ ವ್ಯತ್ಯಯ, ನಗರದಲ್ಲಿ ಎಲ್ಲೆಂದರಲ್ಲಿ ರೂಟ್ ಬದಲಾವಣೆ ಸೇರಿ ಸಕಾಲದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಮುಟ್ಟಲು ಆಗುವುದಿಲ್ಲ ಎಂದು ಪರೀಕ್ಷೆ ಮುಂದೂಡಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ.
ಶಿವಮೊಗ್ಗದಲ್ಲಿ ಬಹು ದಿನಗಳ ಕನಸಿನ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ದವಾಗಿದೆ. ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನದಂದೇ (ಫೆಬ್ರವರಿ 27) ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಹೀಗಾಗಿ ಫೆ.27ರಂದು ಮೋದಿ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದು ಇದರ ಜೊತೆಗೆ ಶಿವಮೊಗ್ಗ, ಬೆಳಗಾವಿಗೆ ತೆರಳಿ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಹೀಗಾಗಿ ಅನೇಕ ಕಡೆ ಮಾರ್ಗ ಬದಲಾವಣೆ ಮಾಡಲಾಗಿದೆ.
ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ಹತ್ತು ಕಿಮೀ ರೋಡ್ ಶೋ ನಡೆಸಲಿದ್ದಾರೆ. ಮಧ್ಯಾಹ್ನ 2.45ಕ್ಕೆ ಶಿವಮೊಗ್ಗದಿಂದ ವಿಶೇಷ ವಿಮಾನದಲ್ಲಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಏರ್ಪೋರ್ಟ್ದಿಂದ ಹೆಲಿಕಾಪ್ಟರ್ ಮೂಲಕ ನಗರದ ಕೆಎಸ್ಆರ್ಪಿ ಮೈದಾನಕ್ಕೆ ಬಂದಿಳಿದು ಅಲ್ಲಿಂದ ವೈ ಜಂಕ್ಷನ್ ಮಾರ್ಗವಾಗಿ ಚನ್ನಮ್ಮ ವೃತ್ತಕ್ಕೆ ಆಗಮಿಸಲಿದ್ದಾರೆ. ಬಳಿಕ ಚನ್ನಮ್ಮ ವೃತ್ತದಿಂದ ಹತ್ತು ಕಿಮೀ ರೋಡ್ ಶೋ ನಡೆಸಲಿದ್ದಾರೆ. ಕಾಲೇಜು ಮಾರ್ಗವಾಗಿ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ಶನಿ ಮಂದಿರ, ಕಪಿಲೇಶ್ವರ ದೇವಸ್ಥಾನ ರಸ್ತೆ, ಶಿವಾಜಿ ಗಾರ್ಡನ್, ಓಲ್ಡ್ ಪಿಬಿ ರೋಡ್ ಮಾರ್ಗವಾಗಿ ಮಾಲಿನಿ ಸಿಟಿವರೆಗೂ ರೋಡ್ ಶೋ ನಡೆಸಲಿದ್ದಾರೆ. ಅರ್ಧ ಗಂಟೆಗೂ ಅಧಿಕ ಕಾಲ ರೋಡ್ ಶೋ ನಡೆಯಲಿದ್ದು ರೋಡ್ ಶೋ ಬಳಿಕ ಮಾಲಿನಿ ಸಿಟಿಯಲ್ಲಿ ಆಯೋಜನೆ ಮಾಡಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: Baarisu Kannada Dim Dimava: ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿದ ಪ್ರಧಾನಿ ಮೋದಿ
ಪೊಲೀಸ್ ಇಲಾಖೆ, ನಗರದ ಸಂಚಾರದಲ್ಲಿ ಹಲವು ಬದಲಾವಣೆ ಮಾಡಿದ್ದಾರೆ. ನಿಪ್ಪಾಣಿಯಿಂದ ಖಾನಾಪುರ ಹಾಗೂ ಗೋವಾಕ್ಕೆ ತೆರಳುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಬಾಕ್ಸೈಟ್ ರಸ್ತೆ, ಹಿಂಡಲಗಾ ಗಣಪತಿ ದೇವಸ್ಥಾನ, ಶೌರ್ಯ ಸರ್ಕಲ್ ಮೂಲಕ ಕಾಂಗ್ರೆಸ್ ರಸ್ತೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಶಹಾಪುರ ಕಡೆಯಿಂದ ಬರುವ ವಾಹನಗಳು ಇದೇ ಮಾರ್ಗವಾಗಿ ನಿಪ್ಪಾಣಿ ಕಡೆಗೆ ತೆರಳಬೇಕು.
ಸಂಚಾರಿ ಪೊಲೀಸರು ನಗರದ ಹಲವು ಮಾರ್ಗದಲ್ಲಿ ಸಂಚಾರಕ್ಕೆ ನಿಷೇಧ ವಿಧಿಸಿದ್ದಾರೆ. ಸೋಮವಾರ ಬೆಳಗ್ಗೆ 8ರಿಂದ ಸಂಜೆ 8 ಗಂಟೆಯ ವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಶನಿ ಮಂದಿರ, ಎಸ್ಬಿಎಂ ರಸ್ತೆ, ಓಲ್ಡ್ ಪಿಬಿ ರೋಡ್, ಯಡಿಯೂರಪ್ಪ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದೆ.
ಪ್ರಧಾನಿಗಳ ಕಾರ್ಯಕ್ರಮಕ್ಕೆ ಮೂರು ವಸ್ತುಗಳ ತರೋದು ನಿಷಿದ್ಧ. ಭದ್ರತೆಯ ದೃಷ್ಟಿಯಿಂದ ಕೈಚೀಲ, ನೀರಿನ ಬಾಟಲಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಪ್ರಧಾನಿ ಕಾರ್ಯಕ್ರಮಕ್ಕೆ ತರುವಂತಿಲ್ಲ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಹತ್ವದ ಆದೇಶ ಹೊರಡಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:48 am, Sun, 26 February 23