ಪತ್ರಕರ್ತರ ಜೊತೆ ಮಾತನಾಡಲು ಪ್ರಧಾನಿ ಮೋದಿ ಹೆದರುತ್ತಾರೆ: ಬಿಟ್‌ಕಾಯಿನ್ ಫಲಾನುಭವಿಗಳು ಈ ಸರ್ಕಾರ ನಡೆಸುತ್ತಿದ್ದಾರೆ -ಆಮ್ ಆದ್ಮಿ ಭಾಸ್ಕರ್ ರಾವ್

ಇವರೆಲ್ಲ ಸೋಷಿಯಲ್ ಮಿಡಿಯಾ ಪೈಲ್ವಾನರು. ಸೋಷಿಯಲ್ ಮಿಡಿಯಾದಲ್ಲಿ ಗೂಂಡಾಗಳನ್ನು ಸೃಷ್ಟಿ ಮಾಡಿದ್ದಾರೆ. ಲೋಕಾಯುಕ್ತ ಬಗ್ಗೆ ಇವರು ನೀಡಿದ ವಾದ ವಿಫಲವಾಯಿತು. ಎಸಿಬಿ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ ಆಗಿಲ್ಲ.

ಪತ್ರಕರ್ತರ ಜೊತೆ ಮಾತನಾಡಲು ಪ್ರಧಾನಿ ಮೋದಿ ಹೆದರುತ್ತಾರೆ: ಬಿಟ್‌ಕಾಯಿನ್ ಫಲಾನುಭವಿಗಳು ಈ ಸರ್ಕಾರ ನಡೆಸುತ್ತಿದ್ದಾರೆ -ಆಮ್ ಆದ್ಮಿ ಭಾಸ್ಕರ್ ರಾವ್
ಆಮ್ ಆದ್ಮಿ ಭಾಸ್ಕರ್ ರಾವ್
Edited By: ಆಯೇಷಾ ಬಾನು

Updated on: Sep 01, 2022 | 4:26 PM

ಬೆಳಗಾವಿ: ಬೆಳಗಾವಿಯಲ್ಲಿ ಆಮ್ ಆದ್ಮಿ ಪಕ್ಷದ(Aam Aadmi Party) ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್(Bhaskar Rao), ಪ್ರಧಾನಿ ನರೇಂದ್ರ ನೋದಿ(Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪತ್ರಕರ್ತರ ಜೊತೆ ಮಾತನಾಡಲು ಪ್ರಧಾನಿ ಮೋದಿ ಹೆದರುತ್ತಾರೆ. ಬಿಟ್‌ಕಾಯಿನ್ ಫಲಾನುಭವಿಗಳು ಈ ಸರ್ಕಾರ ನಡೆಸುತ್ತಿದ್ದಾರೆ. ಬಿಟ್‌ಕಾಯಿನ್ ಹಗರಣ ಅಂತಾರಾಷ್ಟ್ರೀಯ ಹಗರಣ. ಈ ಹಗರಣ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಏಕೆ ಸುಮ್ಮನಿದ್ದಾರೆ. ಕೇಸರಿ ಸರ್ಕಾರ ಎನ್ನೋರು ಕೇಸರೀಕರಣ ಮಾಡೋಕೂ ಧೈರ್ಯ ಇಲ್ಲ ಎಂದು ವ್ಯಂಗ್ಯ ವಾಗಿದ್ದಾರೆ.

ಇವರೆಲ್ಲ ಸೋಷಿಯಲ್ ಮಿಡಿಯಾ ಪೈಲ್ವಾನರು. ಸೋಷಿಯಲ್ ಮಿಡಿಯಾದಲ್ಲಿ ಗೂಂಡಾಗಳನ್ನು ಸೃಷ್ಟಿ ಮಾಡಿದ್ದಾರೆ. ಲೋಕಾಯುಕ್ತ ಬಗ್ಗೆ ಇವರು ನೀಡಿದ ವಾದ ವಿಫಲವಾಯಿತು. ಎಸಿಬಿ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ ಆಗಿಲ್ಲ. ಕಳೆದ 20 ದಿನಗಳಿಂದ ಭ್ರಷ್ಟಾಚಾರ ಬಗ್ಗೆ ಯಾವುದೇ ತನಿಖೆ ಆಗಿಲ್ಲ. ಕೆಂಪುಕೋಟೆ ಮೇಲೆ ನಿಂತು ಪ್ರಧಾನಿ ಭಾಷಣ ಮಾಡ್ತಾರೆ. ಮನೀಷ್ ಸಿಸೋಡಿಯಾ ಮನೆ ಮೇಲೆ ದಾಳಿ ಮಾಡಿದಾಗ ಏನು ಸಿಕ್ತು ತೋರಿಸಿ. ರಾಜ್ಯದಲ್ಲಿ 50ರಷ್ಟು ಕಮಿಷನ್ ಆರೋಪ ಕೇಳಿ ಬಂದಿದೆ. ಸಚಿವ ಮುನಿರತ್ನ ಬಗ್ಗೆ ಸರ್ಕಾರ ಇನ್ನೂ ಕ್ರಮ ವಹಿಸಿಲ್ಲ. ಮಂಗಳೂರಿನ ಕಾರ್ಯಕ್ರಮದಲ್ಲಿ ಈ ಬಗ್ಗೆ ಉತ್ತರ ಕೊಡಬೇಕು. ಬೆಂಗಳೂರಿನಲ್ಲಿ ಅನೇಕ ಮಾಫಿಯಾಗಳು ಸಕ್ರಿಯ ಆಗಿವೆ ಎಂದು ಬೆಳಗಾವಿಯಲ್ಲಿ ಎಎಪಿ ಉಪಾಧ್ಯಕ್ಷ ಭಾಸ್ಕರ್ ರಾವ್ ಆರೋಪಿಸಿದ್ದಾರೆ.

ಸಾವರ್ಕರ್​ರನ್ನು ಬೀದಿಗೆ ತಂದು ಬಿಜೆಪಿ ಅವಮಾನ ಮಾಡುತ್ತಿದೆ

ಗಣೇಶೋತ್ಸವದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಭಾಸ್ಕರ್​ ರಾವ್, ಸಾವರ್ಕರ್​ರನ್ನು ಬೀದಿಗೆ ತಂದು ಬಿಜೆಪಿ ಅವಮಾನ ಮಾಡುತ್ತಿದೆ. ಬ್ರಿಟಿಷರು ಅಂಡಮಾನ್ ಜೈಲಿನಲ್ಲಿಟ್ಟಿದ್ದು ಎಲ್ಲರಿಗೂ ಗೊತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಸಾವರ್ಕರ್ ಜೈಲಿಗೆ ಹೋಗಿದ್ದರು. ಸಾರ್ವಜನಿಕ ಗಣೇಶೋತ್ಸವಕ್ಕೆ ತಿಲಕ್ ಚಾಲನೆ ನೀಡಿದ್ದರು. ಬಾಲಗಂಗಾಧರ ತಿಲಕ್​, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಕೆಂಪೇಗೌಡರ ಭಾವಚಿತ್ರವನ್ನು ಗಣೇಶೋತ್ಸವದಲ್ಲಿ ಇಡಬೇಕು. ಸಿಕ್ಕ ಸಿಕ್ಕ ಕಡೆ ವಿ.ಡಿ.ಸಾವರ್ಕರ್​ ಪೋಸ್ಟರ್ ಅಂಟಿಸುತ್ತಿದ್ದಾರೆ. ಈ ಮೂಲಕ ಕಸದ ತೊಟ್ಟಿಗೆ ಹಾಕುವ ಸ್ಥಿತಿಗೆ ತಲುಪಿದ್ದಾರೆ. ಕಾಂಗ್ರೆಸ್‌ ಪಕ್ಷದವರು ಸಾವರ್ಕರ್​​ ಬಗ್ಗೆ ತಿಳಿದುಕೊಳ್ಳಬೇಕು. ಸಾವರ್ಕರ್ ಸ್ವಾತಂತ್ರ್ಯ ಸೇನಾನಿ, ತ್ಯಾಗ ಬಲಿದಾನ ಮಾಡಿದ್ದಾರೆ ಎಂದರು.

ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಪ್ರಾಮಾಣಿಕವಾಗಿ ತನಿಖೆ ಮುಕ್ತಾಯವಾಗಲಿ ಎಲ್ಲರಿಗೂ ನ್ಯಾಯ ಬೇಕು. ಸ್ವಾಮೀಜಿಗೂ ನ್ಯಾಯ ಬೇಕು, ಆ ಹೆಣ್ಣು ಮಕ್ಕಳಿಗೂ ನ್ಯಾಯ ಬೇಕು, ಸತ್ಯ ಹೊರಗೆ ಬರಲಿ. ರಾಜ್ಯದ ಜನ ಮಹಿಳೆಯರಿಗೂ ನ್ಯಾಯ ಬೇಕು ಅಂತಾ ಬಯಸುತ್ತಾರೆ. ಪೂಜ್ಯರ ಮೇಲೆ ಆಗಿರುವ ಆರೋಪ ಏನಾದರೂ ಅಂಶ ಇದೆಯಾ ಹೊರಬರಲಿ ಅಂತಾ ಬಯಸುತ್ತಾರೆ. ಪೋಕ್ಸೋ ಕೇಸ್ ದಾಖಲಾದರೂ ಸ್ವಾಮೀಜಿ ಬಂಧನ ಆಗಿಲ್ಲ ಎಂದು ಮಾಧ್ಯಮಗಳು ಪ್ರಶ್ನೆ ಮಾಡುತ್ತಿವೆ. ಉಡುಪಿಯಲ್ಲಿ ಐಪಿಸಿ ಸೆಕ್ಷನ್‌ನಲ್ಲಿ 306ರಡಿ ಈಶ್ವರಪ್ಪ ಬಂಧನ ಮಾಡಲಿಲ್ವಲ್ಲ. ತನಿಖಾ ಸಂಸ್ಥೆ ಸರ್ಕಾರದ ಕೈ ಕೆಳಗೆ ಡೈರೆಕ್ಟ್ ಆಗಿ ಕೆಲಸ ಮಾಡುತ್ತಿದೆ. ನಾವು ಯಾರ ಮೇಲೂ ಆರೋಪ ಮಾಡಲ್ಲ.
ಈ ಸುದ್ದಿ ಕೇಳಿದ ತಕ್ಷಣ ಕರ್ನಾಟಕಕ್ಕೆ ಆಘಾತವಾಗಿದೆ. ಒಂದು ಕಡೆ ಶ್ರೀಗಳ ಮೇಲೆ ಆರೋಪ, ಒಂದೆಡೆ ಮಹಿಳೆಯರ ದೂರು. ಸತ್ಯ ಹೊರಗೆ ಬರಲಿ,ಇಬ್ಬರಿಗೂ ನ್ಯಾಯ ಸಿಗಲಿ ಎಂದರು.

ಇಲಾಖೆ ಒಂದು ಯಂತ್ರ ಇದ್ದಂಗೆ, ಯಂತ್ರದ ನಿಯಂತ್ರಣ ಸರ್ಕಾರದ ಕೈಯಲ್ಲಿ ಇದೆ. ದಿನದಿನಕ್ಕೂ ನಿಯಂತ್ರಣ ದುರುಪಯೋಗ, ನಿಷ್ಪ್ರಯೋಗ ಮಾಡಿದ್ರೆ ಏನ್ ಮಾಡಕ್ಕಾಗುತ್ತೆ. ಒಂದು ದೂರು ಬಂದ ಮೇಲೆ ಸರಿಯಾದ ತನಿಖೆ ಆಗಬೇಕು. ಮುಕ್ತವಾದ ವಾತಾವರಣ ಪೊಲೀಸ್ ಇಲಾಖೆಗೆ ಕೊಡಿ,ಅವರು ತನಿಖೆ ಮಾಡಲಿ. ಕೇಸ್ ಸುಳ್ಳು ಅನ್ನಬೇಡಿ. ಮೌನವಾಗಿರಿ ತನಿಖೆಯಿಂದ ಹೊರಗೆ ಬರುತ್ತೆ. ಸರ್ಕಾರಕ್ಕೆ ಭಯ ಕಾಡ್ತಿಲ್ಲ, ಸರ್ಕಾರದ ಮಾನ ಮರ್ಯಾದೆ ಹೋಗಿಬಿಟ್ಟಿದೆ. ಅಷ್ಟು ದೊಡ್ಡ ಪ್ರಕರಣ ಆಗಿದೆಯಲ್ಲ, ಹಿರಿಯ ಅಧಿಕಾರಿ ಹಾಕಿ ಧೈರ್ಯದಿಂದ ತನಿಖೆ ಮಾಡಿಸಲಿ. ಪೂಜ್ಯ ಸ್ವಾಮೀಜಿ ಬಗ್ಗೆ ಕರ್ನಾಟಕದಲ್ಲಿ ಬಹಳ ಗೌರವ ಇದೆ. ಆ ಮಕ್ಕಳ ಬಗ್ಗೆಯೂ ಬಹಳ ಬೇಸರ ಇದೆ. ತನಿಖೆ ಮಾಡಿ ನ್ಯಾಯ ದೊರಕಿಸಿಕೊಡಿ ಎಂದರು ಭಾಸ್ಕರ್ ರಾವ್.

Published On - 4:08 pm, Thu, 1 September 22

Web contact

TV9 Kannada

Read More
Follow Us