ಗ್ಯಾರಂಟಿಗಳಿಗಾಗಿ NDRF ಹಣವೂ ಬಳಕೆ: ವಿಪಕ್ಷ ನಾಯಕ ಅಶೋಕ್ ಆರೋಪ
ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸಿಎಂ ಮತ್ತು ಡಿಸಿಎಂ ಮಜಾಮಾಡಿಕೊಂಡು ಇದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 4 ತಿಂಗಳಿಗೊಮ್ಮೆ ಬರುವ ಎನ್ಡಿಆರ್ಎಫ್ ಹಣವನ್ನೂ ಗ್ಯಾರಂಟಿಗಳಿಗಾಗಿ ಬಳಸಿಕೊಳ್ಳಲಾಗ್ತಿದೆ. ಇವರಿಗೆ ನಾಚಿಕೆ ಆಗಬೇಕು ಎಂದು ಅವರು ಕಿಡಿ ಕಾರಿದ್ದಾರೆ.

ಚಿಕ್ಕೋಡಿ, ಅಕ್ಟೋಬರ್ 03: ರಾಜ್ಯದಲ್ಲಿ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದ್ದು, 4 ತಿಂಗಳಿಗೊಮ್ಮೆ ಬರುವ ಎನ್ಡಿಆರ್ಎಫ್ ಹಣವನ್ನೂ ಗ್ಯಾರಂಟಿಗಳಿಗಾಗಿ ಬಳಸಿಕೊಳ್ಳಲಾಗ್ತಿದೆ. ಅತಿವೃಷ್ಟಿಯಿಂದಾಗಿ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದರೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಇನ್ನೂ ಪತ್ರ ಬರೆದಿಲ್ಲ. ಇವರೂ ಹಣ ಕೊಡ್ತಿಲ್ಲ. ಸಿಎಂ ಮತ್ತು ಡಿಸಿಎಂ ಮಜಾಮಾಡಿಕೊಂಡು ಇದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R. Ashok) ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾತನಾಡಿದ ಅಶೋಕ್, ನವೆಂಬರ್ ಕ್ರಾಂತಿ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ. ಈಗಾಗಲೇ ರಾಜಣ್ಣರಿಗೆ ಗೇಟ್ ಪಾಸ್ ಕೊಟ್ಟಿದ್ದಾರೆ. ಶಿವರಾಮೇಗೌಡ, ರಂಗನಾಥ ಇಬ್ಬರೂ ಡಿಕೆಶಿ ಸಿಎಂ ಆಗ್ತಾರೆ ಅಂತಾ ಹೇಳಿದ್ದು, ಸಿದ್ದರಾಮಯ್ಯನವರು ಸದ್ಯ ಔಟ್ ಗೋಯಿಂಗ್ ಮುಖ್ಯಮಂತ್ರಿ. ಈ ದಸರಾ ಸಿದ್ದರಾಮಯ್ಯನವರ ಕೊನೆಯ ದಸರಾ. ಡಿಕೆಶಿ, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಯಾರೇ ಮುಖ್ಯಮಂತ್ರಿ ಆದರೂ ನಮಗೇನು ಆಗ್ಬೇಕಿಲ್ಲ. ಒಟ್ಟಿನಲ್ಲಿ ಸಿದ್ದರಾಮಯ್ಯ ಹೋಗ್ತಾರೆ ಎಂದು ಅವರು ತಿಳಿಸಿದ್ದಾರೆ.
ನೆರೆ ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮೊದಲು ಪರಿಹಾರ ಘೋಷಿಸಿ, ಹೆಚ್ಚಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವುದು ಶಿಷ್ಟಾಚಾರ. ಆದರೆ ಇಲ್ಲಿ ಮನವಿಯನ್ನೂ ಮಾಡಿಲ್ಲ, ಪರಿಹಾರ ಘೋಷಣೆಯನ್ನೂ ಮಾಡಿಲ್ಲ, ಇದರಿಂದ ಸಂತ್ರಸ್ತರಿಗೆ ಅನ್ಯಾಯವಾಗಿದೆ. ಗ್ಯಾರಂಟಿ ದುಡ್ಡೂ ಇಲ್ಲ, ರೈತರಿಗೆ ಪರಿಹಾರವೂ ಇಲ್ಲ. pic.twitter.com/aEBlgLx5s3
— R. Ashoka (@RAshokaBJP) October 3, 2025
2 ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯನವರ ಹೇಳಿಕೆಗೂ ಪ್ರತಿಕ್ರಿಯಿಸಿದ ಅಶೋಕ್, ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಶನಿ ಹೆಗಲೇರಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ದೇವಸ್ಥಾನ ಸುತ್ತುತ್ತಾ ಹೋಮ-ಹವನ, ಮಾಟ ಮಂತ್ರ ಎಲ್ಲಾ ಮಾಡಿಸ್ತಿದ್ದಾರೆ. ನವೆಂಬರ್ನಲ್ಲಿ ಎಲ್ಲವೂ ಗೊತ್ತಾಗುತ್ತೆ ಎಂದು ಅಶೋಕ್ ಭವಿಷ್ಯ ನುಡಿದಿದ್ದಾರೆ. ಲೇಖಕಿ ಬಾನು ಮುಷ್ತಾಕ್ ಕರೆಸಿ ಮೈಸೂರು ದಸರಾ ಉದ್ಘಾಟಿಸಿದ್ದು ಸರಿಯಲ್ಲ. ಅವರು ನಡೆಸಿದ ಉದ್ಘಾಟನೆಯನ್ನ ಜನರೇ ಒಪ್ಪಿಲ್ಲ ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



