ಇಡಿ ದಾಳಿ ಮಾಡಿದ ವೈ ಮಂಜುನಾಥ ಯಾರು? ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಡಿಟೇಲ್ಸ್ ಇಲ್ಲಿದೆ

ಬೆಳಗಾವಿ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ನಿವಾಸದ ಮೇಲೆ ಇಡಿ ದಾಳಿಯಾಗಿದ್ದು, ಇವರು ಸಚಿವ ಸತೀಶ್ ಜಾರಕಿಹೊಳಿ ಅವರ ತಂಗಿ ಗಂಡ ಹಾಗೂ ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರರಾಗಿದ್ದಾರೆ. ಪಿಎಸ್ಐ ಆಗಿ ವೃತ್ತಿ ಆರಂಭಿಸಿ ನಂತರ ಕೆಎಎಸ್ ಅಧಿಕಾರಿಯಾದ ಇವರ ಸಂಪೂರ್ಣ ಹಿನ್ನೆಲೆ, ರಾಜ್ಯಾದ್ಯಂತ ಹೊಂದಿರುವ ಬೇನಾಮಿ ಬಾರ್ ಜಾಲ ಹಾಗೂ ಹವಾಲಾ ದಂಧೆಯ ಗಂಭೀರ ಆರೋಪಗಳ ಸಂಪೂರ್ಣ ವರದಿ ಇಲ್ಲಿದೆ.

ಇಡಿ ದಾಳಿ ಮಾಡಿದ ವೈ ಮಂಜುನಾಥ ಯಾರು? ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಡಿಟೇಲ್ಸ್ ಇಲ್ಲಿದೆ
ವೈ. ಮಂಜುನಾಥ
Edited By:

Updated on: Jun 26, 2026 | 2:48 PM

ಮುಖ್ಯಾಂಶಗಳು

  • ಮಾಜಿ ಸಂಸದ ದೇವೇಂದ್ರಪ್ಪ ಪುತ್ರ ವೈ.ಮಂಜುನಾಥ್ ಸಚಿವ ಸತೀಶ್ ಜಾರಕಿಹೊಳಿ ಬಾಮೈದ.
  • ಮೈಸೂರಲ್ಲಿ ಓದಿದ್ದ ಮಂಜುನಾಥ್ ಪಿಎಸ್ಐ ಆಗಿ ಬಳಿಕ ಕೆಎಎಸ್ ಅಧಿಕಾರಿಯಾದರು.
  • 11 ವರ್ಷ ಬೆಳಗಾವಿಯಲ್ಲಿದ್ದು ಬೇನಾಮಿ ಬಾರ್, ಹವಾಲಾ ಆರೋಪದಡಿ ಇಡಿ ದಾಳಿಗೊಳಗಾಗಿದ್ದಾರೆ.

ಬೆಳಗಾವಿ, ಜೂನ್ 26: ವಿಭಾಗದ ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ (Y Manjunath) ನಿವಾಸದ ಮೇಲೆ ED (ಜಾರಿ ನಿರ್ದೇಶನಾಲಯ) ನಡೆಸಿರುವ ಭರ್ಜರಿ ದಾಳಿ ಇಡೀ ರಾಜ್ಯ ರಾಜಕೀಯ ಹಾಗೂ ಅಧಿಕಾರಿ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಸತತ 25 ಗಂಟೆಗಳ ಕಾಲ ನಡೆದ ಈ ದಾಳಿಯಿಂದಾಗಿ ಸಚಿವ ಸತೀಶ್ ಜಾರಕಿಹೊಳಿ ಅವರ ತಂಗಿ ಗಂಡನೇ ಆಗಿರುವ ಈ ವೈ. ಮಂಜುನಾಥ್ ಯಾರು? ಅವರ ಹಿನ್ನೆಲೆ ಏನು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಆ ವಿವರ ಇಲ್ಲಿದೆ.

ರಾಜಕೀಯ ಹಿನ್ನೆಲೆಯ ಕುಟುಂಬ, ಜಾರಕಿಹೊಳಿ ಮನೆತನದ ಅಳಿಯ!

ವೈ. ಮಂಜುನಾಥ್ ಮೂಲತಃ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸಿಕೇರಿ ಗ್ರಾಮದವರು. ಇವರು ಮಾಜಿ ಸಂಸದ ದೇವೇಂದ್ರಪ್ಪ ಅವರ ಪುತ್ರ. ಸುಮಾರು 15 ವರ್ಷಗಳ ಹಿಂದೆ ಗೋಕಾಕ್‌ನ ಪ್ರಭಾವಿ ಜಾರಕಿಹೊಳಿ ಮನೆತನದ ಕೊನೆಯ ಮಗಳು, ಅಂದರೆ ಸಚಿವ ಸತೀಶ್ ಜಾರಕಿಹೊಳಿ ಅವರ ತಂಗಿಯನ್ನು ಮದುವೆಯಾಗುವ ಮೂಲಕ ಜಾರಕಿಹೊಳಿ ಕುಟುಂಬದ ಅಳಿಯನಾದರು.

ಪಿಎಸ್ಐ ಟು ಕೆಎಎಸ್ ಅಧಿಕಾರಿ

ಮಂಜುನಾಥ್ ತಮ್ಮ ಉನ್ನತ ವ್ಯಾಸಂಗವನ್ನು ಮೈಸೂರಿನಲ್ಲಿ ಮುಗಿಸಿದ್ದರು. ವೃತ್ತಿ ಜೀವನದ ಆರಂಭದಲ್ಲಿ ಇವರು ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ (PSI) ಆಗಿ ಕೆಲಸಕ್ಕೆ ಸೇರಿದ್ದರು. ಆ ಬಳಿಕ ಕೆಎಎಸ್ (KAS) ಪರೀಕ್ಷೆ ಪಾಸ್ ಮಾಡಿ, ಅಬಕಾರಿ ಇಲಾಖೆಗೆ ಹೆಜ್ಜೆಯಿಟ್ಟರು. 2012-13ರ ಅವಧಿಯಲ್ಲಿ ಮೈಸೂರು ಜಿಲ್ಲೆಯ ಅಬಕಾರಿ ಡಿಸಿಯಾಗಿ (DC) ಕಾರ್ಯನಿರ್ವಹಿಸಿದ್ದರು.

ಬೆಳಗಾವಿಯಲ್ಲೇ 11 ವರ್ಷ ಸಾಮ್ರಾಜ್ಯ!

2015ರಲ್ಲಿ ಬೆಳಗಾವಿಗೆ ವರ್ಗಾವಣೆಯಾಗಿ ಬಂದ ಮಂಜುನಾಥ್, ಕಳೆದ 11 ವರ್ಷಗಳಿಂದ ಅದೇ ಭಾಗದಲ್ಲಿ ಆಧಿಪತ್ಯ ಸ್ಥಾಪಿಸಿದ್ದಾರೆ. ಅಲ್ಲೇ ಹಂತ ಹಂತವಾಗಿ ಪ್ರಮೋಷನ್ ಪಡೆಯುತ್ತಾ ಸದ್ಯ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇಡಿ ರೇಡಾರ್‌ಗೆ ಸಿಲುಕಿದ್ದು ಯಾಕೆ?

ರಾಜ್ಯಾದ್ಯಂತ ಬೇನಾಮಿ ಬಾರ್‌ಗಳು: ಮಂಜುನಾಥ್ ಅವರು ತಮ್ಮ ಪ್ರಭಾವ ಬಳಸಿ ಸಂಬಂಧಿಕರು ಹಾಗೂ ಆಪ್ತರ ಹೆಸರಿನಲ್ಲಿ ಬೆಳಗಾವಿ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಬಾರ್‌ ಲೈಸೆನ್ಸ್‌ಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ಲಂಚ ಹಾಗೂ ಹವಾಲಾ ದಂಧೆ: ಹೊಸ ಬಾರ್ ಲೈಸೆನ್ಸ್ ನೀಡಲು ಹಾಗೂ ಹಳೆಯ ಲೈಸೆನ್ಸ್ ನವೀಕರಿಸಲು ಕೋಟ್ಯಂತರ ರೂಪಾಯಿ ಲಂಚ ಪಡೆದ ಆರೋಪ ಇವರ ಮೇಲಿದೆ. ಹೀಗೆ ಬಂದ ಅಕ್ರಮ ಹಣವನ್ನು ವಿದೇಶದಲ್ಲಿ ಹೂಡಿಕೆ ಮಾಡಿರುವುದು ಹಾಗೂ ಹವಾಲಾ ದಂಧೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಇಡಿ ಇವರ ಆಸ್ತಿ ಕೋಟೆಯನ್ನು ಬೇಟೆಯಾಡಿದೆ.

ಇದನ್ನೂ ಓದಿ ವೈ. ಮಂಜುನಾಥ್​​ ಮತ್ತು ಆಪ್ತರ ಮನೆಗಳ ಮೇಲೆ ಇಡಿ ದಾಳಿ ಕೇಸ್​​: ರೇಡ್​​ ವೇಳೆ ಲಂಚದ ಹಣ ಹಂಚಿಕೆಯ ಲೆಕ್ಕ ಪುಸ್ತಕವೇ ಪತ್ತೆ!

ಸದ್ಯ 25 ಗಂಟೆಗಳ ಇಡಿ ದಾಳಿ ಮುಕ್ತಾಯವಾಗಿದ್ದು, ಕೆಜಿಗಟ್ಟಲೆ ಚಿನ್ನ ಹಾಗೂ ಬೇನಾಮಿ ಆಸ್ತಿ ಪತ್ರಗಳು ಪತ್ತೆಯಾಗಿವೆ. ಜಾರಕಿಹೊಳಿ ಕುಟುಂಬದ ನಿಕಟ ಸಂಬಂಧಿಯಾಗಿರುವುದರಿಂದ ಈ ದಾಳಿ ಸದ್ಯ ಸ್ಯಾಂಡಲ್ ವುಡ್ ನಗರಿ ಮತ್ತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Fri, 26 June 26

Follow Us