ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್​ ದಾಳಿ ಬೆದರಿಕೆ; ಹಣ ಹಿಂದಿರುಗಿಸುವಂತೆ ಕೇಳಿದ್ದಕ್ಕೆ ಪ್ರಿಯಕರನಿಂದಲೇ ಬ್ಲ್ಯಾಕ್​ಮೇಲ್

ಪ್ರಿಯಕರ ತನಗೆ ಮೋಸ ಮಾಡುತ್ತಿರುವುದು ಗೊತ್ತಾಗುತ್ತಿದ್ದಂತೆಯೇ ಆತನನ್ನು ಎಚ್ಚರಿಸಿದ ಯುವತಿ ತಾನು ನೀಡಿದ 2.1 ಲಕ್ಷ ರೂಪಾಯಿಯನ್ನು ಹಿಂದಿರುಗಿಸುವಂತೆ ಹೇಳಿದ್ದಾರೆ. ಆದರೆ, ಹಣ ಕೇಳುತ್ತಿದ್ದಂತೆಯೇ ವರಸೆ ಬದಲಾಯಿಸಿದ ಪ್ರಿಯಕರ ತನ್ನ ಸಹಚರರಿಂದ ಆ್ಯಸಿಡ್ ದಾಳಿ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ.

ಬೆಂಗಳೂರಿನಲ್ಲಿ ಯುವತಿ ಮೇಲೆ ಆ್ಯಸಿಡ್​ ದಾಳಿ ಬೆದರಿಕೆ; ಹಣ ಹಿಂದಿರುಗಿಸುವಂತೆ ಕೇಳಿದ್ದಕ್ಕೆ ಪ್ರಿಯಕರನಿಂದಲೇ ಬ್ಲ್ಯಾಕ್​ಮೇಲ್
ಸಾಂಕೇತಿಕ ಚಿತ್ರ
Edited By:

Updated on: Jun 14, 2021 | 9:18 AM

ಬೆಂಗಳೂರು: ತಾನು ನೀಡಿದ ಹಣವನ್ನು ಹಿಂದಿರುಗಿಸುವಂತೆ ಕೇಳಿದ ಯುವತಿಗೆ ಪ್ರಿಯಕರನೋರ್ವ ಆ್ಯಸಿಡ್ ದಾಳಿ ಮಾಡುವ ಬೆದರಿಕೆ ಒಡ್ಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತು ಪೊಲೀಸ್ ಠಾಣೆ ಮೆಟ್ಟಿಲೇರಿರುವ 25 ವರ್ಷದ ಯುವತಿ ಪ್ರಿಯಕರ್ನ ವಿರುದ್ಧ ವಂಚನೆ ಹಾಗೂ ಬ್ಲ್ಯಾಕ್​ಮೇಲ್​ಗೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ಯುವತಿಯ ದೂರನ್ನು ಆಧರಿಸಿ ವಿಚಾರಣೆ ನಡೆಸಿರುವ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲಿ ಉಲ್ಲೇಖಿಸಿರುವಂತೆ ಪ್ರತಿಷ್ಠಿತ ಎಂಎನ್​ಸಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಯುವಕನ ಸಂಪರ್ಕಕ್ಕೆ ಬಂದಿದ್ದಾರೆ. ಕೆಲವೇ ದಿನಗಳಲ್ಲಿ ಅವರಿಬ್ಬರ ನಡುವೆ ಪ್ರೀತಿ ಚಿಗುರಿದ್ದು, ಅದನ್ನು ಮನೆಯವರ ಬಳಿ ಹೇಳಿಕೊಂಡು ವಿವಾಹಕ್ಕೂ ಒಪ್ಪಿಗೆ ಗಿಟ್ಟಿಸಿಕೊಂಡಿದ್ದಾರೆ. ಆದರೆ, ವಿವಾಹಕ್ಕೂ ಮುನ್ನವೇ ಪ್ರಿಯಕರನ ಅಸಲಿ ಮುಖ ಬಯಲಾಗಿದ್ದು, ಆತ ಯುವತಿಯನ್ನು ಹಣಕ್ಕಾಗಿ ಪೀಡಿಸಲಾರಂಭಿಸಿದ್ದಾನೆ.

ಮೊದಲಿಗೆ 1.4ಲಕ್ಷ ರೂಪಾಯಿ ಮೌಲ್ಯದ ಐಫೋನ್ 12 ಪ್ರೋ ಮ್ಯಾಕ್ಸ್​ ಸ್ಮಾರ್ಟ್​ಫೋನ್​ಗಾಗಿ ಬೇಡಿಕೆ ಇಟ್ಟ ಪ್ರಿಯಕರ ಅದನ್ನು ಕೊಡಿಸುವಂತೆ ದುಂಬಾಲು ಬಿದ್ದಿದ್ದಾನೆ. ಆದರೆ, ಆಕೆ ತನ್ನ ಬಳಿ ಹಣವಿಲ್ಲವೆಂದು ಕೊಡಿಸಲು ನಿರಾಕರಿಸಿದಾಗ ಆಕೆಯಿಂದ ಕೊಂಚ ದೂರ ಸರಿದಿದ್ದಾನೆ. ನಂತರ ಆತನ ಉದ್ದೇಶವನ್ನು ಅರಿಯದ ಯುವತಿ ಎಲ್ಲಿಂದಲೋ ಸಾಲ ಮಾಡಿ 2ಲಕ್ಷ ರೂಪಾಯಿ ಹಣ ಹೊಂದಿಸಿ ಪ್ರಿಯತಮನಿಗೆ ಮೊಬೈಲ್ ಕೊಡಿಸಿದ್ದಾರೆ.

ಮೊಬೈಲ್​ ಕೈಗೆ ಬಂದ ನಂತರ ಅಷ್ಟಕ್ಕೇ ಸುಮ್ಮನಾಗದ ಪುಣ್ಯಾತ್ಮ 10 ಸಾವಿರ ರೂಪಾಯಿ ಹಣ ಕೊಡುವಂತೆ ಕೇಳಿದ್ದಾನೆ. ಅದಕ್ಕೂ ಒಪ್ಪಿದ ಎಂದ ಯುವತಿ ಹಣ ನೀಡಿದ್ದಾರೆ. ಆದರೆ, ಬರುಬರುತ್ತಾ ದಿನ ಕಳೆದಂತೆ ಆತನ ಬೇಡಿಕೆಯೂ ಹೆಚ್ಚುತ್ತಾ ಹೋಗಿ ಕಡೆಗೊಂದು ದಿನ 2 ಲಕ್ಷ ರೂಪಾಯಿ ನೀಡುವಂತೆ ಪೀಡಿಸಿದ್ದಾನೆ. ಹೀಗೆ ದೊಡ್ಡ ಮೊತ್ತದ ಹಣ ಕೇಳಿದ್ದಕ್ಕೆ ಕಾರಣವೇನು? ಏಕೆ ದುಡ್ಡು ಬೇಕು? ಎಂದು ಯುವತಿ ವಿಚಾರಿಸಿದಾಗ ಮತ್ತೆ ದೂರ ಸರಿದ ಯುವಕ ತನ್ನ ಮಾಜಿ ಪ್ರೇಯಸಿಯನ್ನು ಅರಸಿ ಹೊರಟಿದ್ದಾನೆ.

ಪ್ರಿಯಕರ ತನಗೆ ಮೋಸ ಮಾಡುತ್ತಿರುವುದು ಗೊತ್ತಾಗುತ್ತಿದ್ದಂತೆಯೇ ಆತನನ್ನು ಎಚ್ಚರಿಸಿದ ಯುವತಿ ತಾನು ನೀಡಿದ 2.1 ಲಕ್ಷ ರೂಪಾಯಿಯನ್ನು ಹಿಂದಿರುಗಿಸುವಂತೆ ಹೇಳಿದ್ದಾರೆ. ಒಂದು ವೇಳೆ ಹಣ ನೀಡದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಆದರೆ, ಹಣ ಕೇಳುತ್ತಿದ್ದಂತೆಯೇ ವರಸೆ ಬದಲಾಯಿಸಿದ ಪ್ರಿಯಕರ ತನ್ನ ಸಹಚರರಿಂದ ಆ್ಯಸಿಡ್ ದಾಳಿ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದಾನೆ.

ಅಷ್ಟೆಲ್ಲಾ ಬೆದರಿಕೆಯ ನಂತರವೂ ಯುವತಿ ಹೆದರದೇ ಹಣ ವಾಪಾಸ್ಸು ನೀಡುವಂತೆ ಗಟ್ಟಿಯಾಗಿ ಕೇಳಿದಾಗ ಜೂನ್​ 4ರಂದು ಆಕೆಯನ್ನು ಹೆಣ್ಣೂರಿನ ಲಾಡ್ಜ್ ಒಂದಕ್ಕೆ ಪ್ರಿಯಕರ ಕರೆಸಿಕೊಂಡಿದ್ದಾನೆ. ಅಲ್ಲಿ ಈ ಬಗ್ಗೆ ಒಂದಷ್ಟು ಮಾತುಕತೆ ನಡೆದ ನಂತರ ಯುವತಿಯನ್ನು ಬ್ಲ್ಯಾಕ್​ಮೇಲ್ ಮಾಡಲಾರಂಭಿಸಿದ ಆತ ಖಾಸಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ.

ಆತ ಸಂಪೂರ್ಣ ತಿರುಗಿ ಬಿದ್ದಾಗ ಬೇರೆ ದಾರಿ ಕಾಣದೇ ಪೊಲೀಸ್ ಠಾಣೆಯ ಮಟ್ಟಿಲೇರಿದ ಯುವತಿ ತನಗೆ ಪ್ರಿಯಕರನಿಂದ ಮೋಸ ಆಗಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಆತನನನ್ನು ವಿಚಾರಿಸಿದಾಗ ತಾನು ಆಕೆಗೆ ತಕ್ಕ ಪಾಠ ಕಲಿಸದೇ ಬಿಡುವುದಿಲ್ಲ. ತನ್ನನ್ನು ಪೊಲೀಸ್ ಅಧಿಕಾರಿಯನ್ನಾಗಿಸಲು ಮನೆಯವರು 25ಲಕ್ಷ ರೂಪಾಯಿ ಹಣ ಸಂದಾಯ ಮಾಡಿದ್ದಾರೆ ಎಂದೆಲ್ಲಾ ಮಾತನಾಡಿರುವುದು ತಿಳಿದುಬಂದಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಪೊಲೀಸರು ಯುವಕನ ವಿರುದ್ಧ ಲೈಂಗಿಕ ದೌರ್ಜನ್ಯ, ವಂಚನೆ, ಅವಮಾನ, ಬ್ಲ್ಯಾಕ್​ಮೇಲ್​ ಸೇರಿದಂತೆ ಬೇರೆ ಬೇರೆ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಮಿರರ್ ನೌ ವರದಿ ಮಾಡಿದೆ.

ಇದನ್ನೂ ಓದಿ:
ಗಂಡನಿಗೆ ಅಕ್ರಮ ಸಂಬಂಧದ ವಿಷಯ ತಿಳಿಸಿದ್ದಕ್ಕಾಗಿ ಸ್ವಂತ ಮಕ್ಕಳ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮಹಿಳೆ, ಪ್ರಿಯಕರ ಬಂಧನ

ಯುವತಿ ಸಾವಿಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಕಾರಣವಾಯ್ತು?; ಪ್ರೇಯಸಿಯನ್ನೇ ಕೊಂದ ಪ್ರಿಯಕರ

Follow Us