AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀಲಗಳಲ್ಲಿ ದೇಹ ತೂರಿಸಿಕೊಂಡು ರಸ್ತೆ ಬದಿಯಲ್ಲೇ ನಡುಗುತ್ತಾ ಮಲಗಿದ್ದ ನಿರ್ಗತಿಕರಿಗೆ ಬೆಡ್​ಶೀಟ್ ಹಂಚಿದ ಬೆಂಗಳೂರು ಪೊಲೀಸರು

ಕೆಲವರಂತೂ ದೊಡ್ಡ ದೊಡ್ಡ ಪ್ಲಾಸ್ಟಿಕ್​ ಚೀಲಗೊಳಗೆ ದೇಹ ತೂರಿಸಿಕೊಂಡು ನಡುಗುತ್ತಾ ಮಲಗಿದ್ದರು. ಅಲ್ಲೇ ಅಕ್ಕಪಕ್ಕದಲ್ಲಿ ಬೀದಿ ನಾಯಿಗಳೂ ಅಲೆದಾಡಿಕೊಂಡಿದ್ದವು. ಅಂತಹವರನ್ನು ನೋಡಿದ ಪೊಲೀಸರು ಅವರ ಪರಿಸ್ಥಿತಿಗೆ ಮರುಗಿದ್ದಾರೆ. ತಾವೇ ಖುದ್ದಾಗಿ ಚೀಲಗಳನ್ನೆಲ್ಲಾ ತೆಗೆದು ಬೆಡ್​ಶೀಟ್ ಹೊದೆಸಿದ್ದಾರೆ.

ಚೀಲಗಳಲ್ಲಿ ದೇಹ ತೂರಿಸಿಕೊಂಡು ರಸ್ತೆ ಬದಿಯಲ್ಲೇ ನಡುಗುತ್ತಾ ಮಲಗಿದ್ದ ನಿರ್ಗತಿಕರಿಗೆ ಬೆಡ್​ಶೀಟ್ ಹಂಚಿದ ಬೆಂಗಳೂರು ಪೊಲೀಸರು
ನಿರ್ಗತಿಕರಿಗೆ ಪೊಲೀಸರಿಂದ ಬೆಡ್​ಶೀಟ್ ವಿತರಣೆ
Follow us
TV9 Web
| Updated By: Skanda

Updated on: Jun 17, 2021 | 7:45 AM

ಬೆಂಗಳೂರು: ಕೊರೊನಾ ದೆಸೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತ್ವ್ಯಸ್ತವಾಗಿದೆ. ಅದರಲ್ಲೂ ಮನೆ, ಮಠವಿಲ್ಲದೇ ನಿರ್ಗತಿಕರಾಗಿರುವವರ ಪರಿಸ್ಥಿತಿ ದಯನೀಯ ಹಂತಕ್ಕೆ ತಲುಪಿದೆ. ಯಾರೋ ಪುಣ್ಯಾತ್ಮರು ನೀಡುತ್ತಿದ್ದ ಬಿಡಿಗಾಸನ್ನು ನಂಬಿ ಬದುಕುತ್ತಿದ್ದವರು ಈಗ ಸಂಕಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಠಾಣೆ ಪೊಲೀಸರು ರಸ್ತೆಯಲ್ಲಿ ಚಳಿಯಿಂದ ನಡುಗುತ್ತಾ ಮಲಗಿದ್ದ ನಿರ್ಗತಿಕರಿಗೆ ಬೆಡ್​ಶೀಟ್ ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ನಗರದಲ್ಲಿ ಮಳೆ ಸುರಿದ ನಂತರ ಚಳಿಯ ವಾತಾವರಣ ಆರಂಭವಾಗಿದ್ದು, ಪಾದಾಚಾರಿ ಮಾರ್ಗಗಳಲ್ಲಿ, ರಸ್ತೆಯ ಪಕ್ಕದಲ್ಲಿ ಅನೇಕ ಮಂದಿ ನಡುಗುತ್ತಾ ಮಲಗಿರುತ್ತಾರೆ. ಮನೆಯಿಲ್ಲದೇ ದಾರಿ ಬದಿ ಮಲಗಿ ಕಾಲ ಕಳೆಯುವ ಇಂತಹ ಜನರಿಗೆ ಸಹಾಯ ಹಸ್ತ ಚಾಚಿರುವ ಪೊಲೀಸರು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ ಪಾಟೀಲರ ಮೂಲಕ ಕೆ.ಆರ್.ಮಾರ್ಕೆಟ್, ಮೆಟ್ರೋ ಸ್ಟೇಶನ್ ಸಮೀಪವಿದ್ದ 100ಕ್ಕೂ ಹೆಚ್ಚು ನಿರ್ಗತಿಕರಿಗೆ ಬೆಡ್​ಶೀಟ್ ಹಂಚಿ ಸಹಾಯ ಮಾಡಿದ್ದಾರೆ.

BENGALURU POLICE HELP

ಚೀಲದೊಳಗೆ ಮಲಗಿದ್ದವರನ್ನು ಕಂಡು ಮರುಗಿದ ಪೊಲೀಸರು

ಅದರಲ್ಲೂ ಕೆಲವರಂತೂ ದೊಡ್ಡ ದೊಡ್ಡ ಪ್ಲಾಸ್ಟಿಕ್​ ಚೀಲಗೊಳಗೆ ದೇಹ ತೂರಿಸಿಕೊಂಡು ನಡುಗುತ್ತಾ ಮಲಗಿದ್ದರು. ಅಲ್ಲೇ ಅಕ್ಕಪಕ್ಕದಲ್ಲಿ ಬೀದಿ ನಾಯಿಗಳೂ ಅಲೆದಾಡಿಕೊಂಡಿದ್ದವು. ಅಂತಹವರನ್ನು ನೋಡಿದ ಪೊಲೀಸರು ಅವರ ಪರಿಸ್ಥಿತಿಗೆ ಮರುಗಿದ್ದಾರೆ. ತಾವೇ ಖುದ್ದಾಗಿ ಚೀಲಗಳನ್ನೆಲ್ಲಾ ತೆಗೆದು ಬೆಡ್​ಶೀಟ್ ಹೊದೆಸಿದ್ದಾರೆ. ಡಿಸಿಪಿ ಸಂಜೀವ ಪಾಟೀಲ, ಇನ್ಸ್​ಪೆಕ್ಟರ್ ಕುಮಾರಸ್ವಾಮಿ ಹಾಗೂ ಎಲ್ಲಾ ಸಿಬ್ಬಂದಿ ಈ ಕಾರ್ಯದಲ್ಲಿ ಕೈಜೋಡಿಸಿದ್ದು ಜನರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

BENGALURU POLICE HELP

ತಾವೇ ಮುಂದೆ ನಿಂತು ಬೆಡ್​ಶೀಟ್​ ಹೊದೆಸಿದ ಪೊಲೀಸರು

ವೈರಲ್​ ಆಗಿತ್ತು ಉತ್ತರಪ್ರದೇಶ ಪೊಲೀಸ್​ ಅಧಿಕಾರಿಯೊಬ್ಬರ ವಿಡಿಯೋ ಕೆಲದಿನಗಳ ಹಿಂದೆಯಷ್ಟೇ ಮನೆಯಿಲ್ಲದೇ ಬೀದಿಯ ಪಕ್ಕದ ಮರದ ಕೆಳಗೆ ಅಸಹಾಯಕತೆಯಿಂದ ಕುಳಿತಿದ್ದ ವೃದ್ಧೆಗೆ ಪೊಲೀಸ್ ಅಧಿಕಾರಿಯೊಬ್ಬರು ಆಹಾರ ತಿನ್ನಿಸಿದ ದೃಶ್ಯವೊಂದು ವೈರಲ್​ ಆಗಿತ್ತು. ಉತ್ತರಪ್ರದೇಶದಲ್ಲಿ ನಡೆದ ಘಟನೆ ಅದಾಗಿದ್ದು, ಅಲ್ಲಿನ ಪೊಲೀಸ್​ ಅಧಿಕಾರಿ ವೃದ್ಧೆಯ ಪಕ್ಕದಲ್ಲೇ ಕುಳಿತು ತಿಂಡಿ ತಿನಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಗಿಟ್ಟಿಸಿಕೊಂಡು ವೈರಲ್​ ಆದ ವಿಡಿಯೋವನ್ನು ನೋಡಿ ಜನರು ಚಪ್ಪಾಳೆ ತಟ್ಟಿದ್ದರು. ಕೊರೊನಾ ಕಾಲದಲ್ಲಿ ಪೊಲೀಸರು ಹಗಲಿರುಳೆನ್ನದೇ ಶ್ರಮಿಸಿ, ಅವ್ಯವಸ್ಥೆಯ ವಿರುದ್ಧ ಸದಾ ಹೋರಾಡುತ್ತಲೇ ಮಾನವೀಯ ಕಾರ್ಯಗಳನ್ನು ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ: ಕೊರೊನಾ ಕಾಲದಲ್ಲಿ ನೆರವಿಗೆ ನಿಂತ ಮಾಲೂರಿನ ಮಾರಿಕಾಂಭ; ನಿರ್ಗತಿಕರಿಗೆ ಮೂರು ಹೊತ್ತಿನ ಊಟ ನೀಡಿ ಸಹಾಯ 

Viral Video: ಅಸಹಾಯಕ ವೃದ್ಧೆಗೆ ತಿಂಡಿ ತಿನ್ನಿಸಿದ ಪೊಲೀಸ್​; ಮಾನವೀಯ ಕಾರ್ಯಕ್ಕೆ ನೆಟ್ಟಿಗರಿಂದ ಪ್ರಶಂಸೆ