ಕಸ್ಟಮ್ಸ್​​ ಅಧಿಕಾರಿಗಳ ಭರ್ಜರಿ ಬೇಟೆ: ಬೆಂಗಳೂರು ಏರ್​ಪೋರ್ಟ್​​ನಲ್ಲಿ 1.37 ಕೋಟಿ ಮೌಲ್ಯದ ಬಂಗಾರ ವಶಕ್ಕೆ

ದುಬೈನಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿದ್ದ ಪ್ರಯಾಣಿಕನಿಂದ 1.37 ಕೋಟಿ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕ್ಯಾಪ್ಸುಲ್‌ಗಳಲ್ಲಿ ಚಿನ್ನದ ಪೇಸ್ಟ್ ರೂಪದಲ್ಲಿ ಇದನ್ನು ಸಾಗಿಸಲಾಗುತ್ತಿತ್ತು. ಮತ್ತೊಂದೆಡೆ ಬೆಂಗಳೂರು ಉತ್ತರ ತಾಲೂಕಿನ ಕದಿರೇನಹಳ್ಳಿಯಲ್ಲಿ ಒಂಟಿ‌ ಮನೆ ಟಾರ್ಗೆಟ್ ಮಾಡಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯ ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ನಡೆದಿದೆ.

ಕಸ್ಟಮ್ಸ್​​ ಅಧಿಕಾರಿಗಳ ಭರ್ಜರಿ ಬೇಟೆ: ಬೆಂಗಳೂರು ಏರ್​ಪೋರ್ಟ್​​ನಲ್ಲಿ 1.37 ಕೋಟಿ ಮೌಲ್ಯದ ಬಂಗಾರ ವಶಕ್ಕೆ
ಏರ್​ಪೋರ್ಟ್​​ನಲ್ಲಿ ವಶಪಡಿಸಿಕೊಳ್ಳಲಾದ ಬಂಗಾರ
Image Credit source: Bengaluru Customs X Account
Edited By:

Updated on: Jun 10, 2026 | 3:09 PM

ದೇವನಹಳ್ಳಿ, ಜೂನ್​​ 10: ಕಳೆದ ಕೆಲ ದಿನಗಳಿಂದ ಮಾದಕ ವಸ್ತು ಸಾಗಾಟ ಪ್ರಕರಣಗಳನ್ನು ಮೇಲಿಂದ ಮೇಲೆ ಭೇದಿಸುತ್ತಿದ್ದ ಬೆಂಗಳೂರಿನ (Bengaluru) ಕಸ್ಟಮ್ಸ್​​ ಅಧಿಕಾರಿಗಳು ಇದೀಗ ದೊಡ್ಡ ಮೊತ್ತದಲ್ಲಿ ಅಕ್ರಮ ಸಾಗಾಟ ನಡೆಸುತ್ತಿದ್ದ ಚಿನ್ನವನ್ನು ಜಪ್ತಿ ಮಾಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದಿದ್ದ ಪ್ರಯಾಣಿಕನ ಬಳಿಯಿದ್ದ 1.37 ಕೋಟಿ ಮೌಲ್ಯದ 24 ಕ್ಯಾರೆಟ್​​ನ 899.50 ಗ್ರಾಂ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ. ಆ ಮೂಲಕ ಆರೋಪಿಯ ಕಳ್ಳಾಟವನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ.

ಕ್ಯಾಪ್ಸುಲ್‌ಗಳಲ್ಲಿ ಚಿನ್ನದ ಪೇಸ್ಟ್ ಅಡಗಿಸಿ ಸಾಗಟಕ್ಕೆ‌ ಯತ್ನ

ಇನ್ನು ಚಿನ್ನದ ಸಾಗಾಟಕ್ಕೆ ಆರೋಪಿ ಸಖತ್​​ ಪ್ಲ್ಯಾನ್​​ ಮಾಡಿದ್ದ. ನಾಲ್ಕು ಕ್ಯಾಪ್ಸುಲ್‌ಗಳಲ್ಲಿ ಚಿನ್ನದ ಪೇಸ್ಟ್ ಅಡಗಿಸಿ ಸಾಗಟಕ್ಕೆ‌ ಯತ್ನಿಸಿದ್ದ. ಆದರೆ ಅನುಮಾನಾಸ್ಪದ ವರ್ತನೆ ಹಿನ್ನೆಲೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಿನ್ನ ಕಳ್ಳಸಾಗಣೆ ವಿಚಾರ ಬಹಿರಂಗಗೊಂಡಿದೆ. ಕಸ್ಟಮ್ಸ್ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ.‌

ಇದನ್ನೂ ಓದಿ: ಗ್ಯಾಸ್ ಕಟರ್ ಬಳಸಿ ಎಸ್‌ಬಿಐ ಎಟಿಎಂ ದರೋಡೆಗೆ ಯತ್ನ, ಬೆಂಕಿ ಹೊತ್ತಿಕೊಂಡಿದ್ದರಿಂದ ಕಂಗಾಲಾಗಿ ಕಾಲ್ಕಿತ್ತ ಖದೀಮರು

ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯ ಚಿನ್ನಾಭರಣ ಕಳ್ಳತನ

ಒಂಟಿ‌ ಮನೆ ಟಾರ್ಗೆಟ್ ಮಾಡಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯ ಚಿನ್ನಾಭರಣ ಕಳ್ಳತನ ನಡೆಸಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕದಿರೇನಹಳ್ಳಿಯಲ್ಲಿ ನಡೆದಿದೆ. ಅರುಣ್ ಕುಮಾರ್ ಎಂಬುವವರ ಮನೆಯಲ್ಲಿ ಕಳ್ಳರು ಕೈಚಳಕ ತೋರಿದ್ದು, ಮನೆಯಲ್ಲಿದ್ದ 21 ಲಕ್ಷ ಮೌಲ್ಯದ 200 ಗ್ರಾಂ ಚಿನ್ನ ಮತ್ತು 7 ಲಕ್ಷ ಮೌಲ್ಯದ 3 ಕೆಜಿ ಬೆಳ್ಳಿ ಸೇರಿದಂತೆ ರೇಷ್ಮೆ ಸೀರೆ ಕಳ್ಳತನ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಯ ಶುಭಕಾರ್ಯಕ್ಕೆಂದು ಅರುಣ್​​ ಕುಮಾರ್​​ ದಂಪತಿ ತೆರಳಿದ್ದರು. ಈ ವೇಳೆ ಡೋರ್ ಲಾಕ್ ಮುರಿದು ಕಳ್ಳರು ಮನೆಗೆ ನುಗ್ಗಿದ್ದಾರೆ ಎನ್ನಲಾಗಿದ್ದು, ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us