
ದೊಡ್ಡಬಳ್ಳಾಪುರ, (ಆಗಸ್ಟ್ 29): ಗಣೇಶ ಮೆರವಣಿಗೆ ವೇಳೆ ಪಟಾಕಿ ಬಾಕ್ಸ್ (firecracker box) ಸ್ಫೋಟಗೊಂಡು ಓರ್ವ ಬಾಲಕ ಸಾವನ್ನಪ್ಪಿದ್ದು, ಪೊಲೀಸ್ ಕಾನ್ಸ್ಸ್ಟೇಬಲ್ ಸೇರಿದಂತೆ ಆರು ಜನರಿಗೆ ಗಂಭೀರ ಗಾಯಗಳಾಗಿವೆ. ಈ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ (Doddaballapur) ಮುತ್ತೂರಿನಲ್ಲಿ ನಡೆದಿದೆ. ಗಣಪತಿ ಮೂರ್ತಿ ವಿಸರ್ಜನಾ (ganesh immersion) ಮೆರವಣಿಗೆ ವೇಳೆ ಏಕಾಏಕಿ ಪಟಾಕಿ ಬಾಕ್ಸ್ ಸ್ಫೋಟಗೊಂಡಿದ್ದು, ಮುತ್ತೂರು ನಿವಾಸಿ ತನುಷ್ ರಾವ್ (15) ಎಂಬ ಬಾಲಕ ಮೃತಪಟ್ಟಿದ್ದಾನೆ.
ಫ್ರೆಂಡ್ಸ್ ಯುವಕರ ಬಳಗದಿಂದ ಇಂದು (ಆಗಸ್ಟ್ 29) ಗಣೇಶ ವಿಸರ್ಜನೆ ಮೆರವಣಿಗೆ ನಡೆಸಲಾಗುತ್ತಿತ್ತು. ಮೆರವಣಿಗೆ ಮಾಡುತ್ತಿದ್ದ ಲಿಫ್ಟಿಂಗ್ ವಾಹನದಲ್ಲಿದ್ದ ಪಟಾಕಿ ಬಾಕ್ಸ್ ಏಕಾಏಕಿ ಸ್ಫೋಟಗೊಂಡಿದೆ. ಲಿಫ್ಟಿಂಗ್ ವಾಹನದ ಸೈಲೆನ್ಸರ್ ಬಿಸಿಯಿಂದ ಬೆಂಕಿ ಹೊತ್ತಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಆದ್ರೆ, ಪಟಾಕಿ ಬಾಕ್ಸ್ ಏಕಾಏಕಿ ಹೇಗೆ ಸ್ಫೋಟಗೊಂಡಿದೆ ಎನ್ನುವ ನಿಖರ ಮಾಹಿತಿ ಇಲ್ಲ.
ಈ ದುರ್ಘಟನೆಯಲ್ಲಿ ಗಣೇಶ್(16), ಯೋಗೇಶ್(15), ಮುನಿರಾಜು(27) ಹಾಗೂ ನಾಗರಾಜು (35), ಚೇತನ್ ಶಾವಿ(13), ಕಾನ್ಸ್ ಸ್ಟೇಬಲ್ ಜಾಕೀರ್ ಹುಸೇನ್ಗೆ ಗಾಯಗಳಾಗಿವೆ. ಗಾಯಾಳುಗಳನ್ನು ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪಿಸಿ ಜಾಕೀರ್ ಕೈ ಮತ್ತು ಭುಜಕ್ಕೆ ಗಾಯವಾಗಿದೆ. ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Published On - 9:34 pm, Fri, 29 August 25