ಕೊರೊನಾ ರೂಪಾಂತರಿ ಒಮಿಕ್ರಾನ್ ಆತಂಕ; ಇಂದಿನಿಂದ ಏರ್​ಪೋರ್ಟ್​ಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಜಾರಿ

ಟೆಸ್ಟಿಂಗ್ ನಂತರ ಪಾಸಿಟಿವ್ ಬಂದರೆ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗುತ್ತದೆ. ನೆಗೆಟಿವ್ ಬಂದರೆ 7 ದಿನಗಳ ಕಾಲ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ.

ಕೊರೊನಾ ರೂಪಾಂತರಿ ಒಮಿಕ್ರಾನ್ ಆತಂಕ; ಇಂದಿನಿಂದ ಏರ್​ಪೋರ್ಟ್​ಗಳಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಜಾರಿ
ಪ್ರಾತಿನಿಧಿಕ ಚಿತ್ರ
Edited By: sandhya thejappa

Updated on: Dec 01, 2021 | 10:02 AM

ದೇವನಹಳ್ಳಿ: ಕೊರೊನಾ ರೂಪಾಂತರಿ ಒಮಿಕ್ರಾನ್ ಆತಂಕ ಹಿನ್ನೆಲೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನ ಹೊರಡಿಸಿದೆ. ಇಂದಿನಿಂದ ಏರ್​ಪೋರ್ಟ್​ಗಳಲ್ಲಿ  ಹೊಸ ಗೈಡ್​ಲೈನ್ಸ್ ಜಾರಿಯಾಗಲಿದೆ. ಹೈರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾವಹಿಸಲಾಗುತ್ತದೆ. ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರ ವಿದೇಶಿ ಪ್ರಯಾಣಿಕರಿಗೆ ಹೊಸಮಾರ್ಗಸೂಚಿ ಹೊರಡಿಸಿದ್ದು, ಹೈರಿಸ್ಕ್ ದೇಶಗಳಿಂದ ಬಂದವರಿಗೆ ಏರ್​ಪೋರ್ಟ್​ಗಳಲ್ಲಿ ಕಡ್ಡಾಯವಾಗಿ ಟೆಸ್ಟಿಂಗ್, ಮಾಡಲಾಗುತ್ತದೆ.

ಟೆಸ್ಟಿಂಗ್ ನಂತರ ಪಾಸಿಟಿವ್ ಬಂದರೆ ಆಸ್ಪತ್ರೆಯಲ್ಲಿ ಐಸೋಲೇಷನ್ ಮಾಡಲಾಗುತ್ತದೆ. ನೆಗೆಟಿವ್ ಬಂದರೆ 7 ದಿನಗಳ ಕಾಲ ಹೋಂ ಕ್ವಾರಂಟೈನ್ ಕಡ್ಡಾಯವಾಗಿದೆ. ಬಂದ ಎಲ್ಲಾ ಪ್ರಯಾಣಿಕರ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ಹದ್ದಿನ ಕಣ್ಣಿಡಲು ಸರ್ಕಾರ ಸೂಚಿಸಿದೆ. ಏರ್​ಪೋರ್ಟ್​ಗಳಲ್ಲಿ ವಿಳಾಸ, ಪೋನ್ ನಂಬರ್ ಪಡೆದುಕೊಂಡು ಕಳಿಸಲಾಗುತ್ತದೆ. ಇನ್ನು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಇದೇ ಮಾರ್ಗಚೂಚಿಗಳು ಅನ್ವಯವಾಗುತ್ತದೆ.

ದೇಶದಿಂದ ಬರುವವರು ಕಳೆದ 14 ದಿನಗಳ ಪ್ರಯಾಣದ ಇತಿಹಾಸವನ್ನು ನೀಡಬೇಕು. ನವೀಕರಿಸಿದ ಮಾರ್ಗಸೂಚಿಗಳಲ್ಲಿ ಹೈರಿಸ್ಕ್ ದೇಶಗಳಿಂದ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರು (ಕೊವಿಡ್ ಲಸಿಕೆ ಪಡೆದಿದ್ದರೂ) ಆಗಮನದ ನಂತರ ಕಡ್ಡಾಯವಾಗಿ ಕೊವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ವಿಮಾನ ನಿಲ್ದಾಣದಲ್ಲಿ ಹೊರಡುವ 72 ಗಂಟೆಗಳ ಮೊದಲು ಕೊವಿಡ್-19 ಪರೀಕ್ಷೆ ಮಾಡಿಸಬೇಕು.

ಈ ಪರೀಕ್ಷೆಗಳಲ್ಲಿ ಧನಾತ್ಮಕವಾಗಿ ಕಂಡುಬಂದ ಪ್ರಯಾಣಿಕರಿಗೆ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಅವರ ಮಾದರಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್ ಪ್ರಕಾರ ಅವರನ್ನು ಪ್ರತ್ಯೇಕಿಸಲಾಗುತ್ತದೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ. ನೆಗೆಟಿವ್ ಕಂಡು ಬಂದ ಪ್ರಯಾಣಿಕರು ವಿಮಾನ ನಿಲ್ದಾಣದಿಂದ ನಿರ್ಗಮಿಸಬಹುದು ಆದರೆ 7 ದಿನಗಳವರೆಗೆ ಹೋಮ್ ಐಸೋಲೇಶನ್‌ಗೆ ಒಳಗಾಗಬೇಕಾಗುತ್ತದೆ. ಭಾರತಕ್ಕೆ ಆಗಮಿಸಿದ 8 ನೇ ದಿನದಂದು ಪುನರಾವರ್ತಿತ ಪರೀಕ್ಷೆಯನ್ನು ನಡೆಸಬೇಕು, ನಂತರ 7 ದಿನಗಳ ಸ್ವಯಂ-ಮೇಲ್ವಿಚಾರಣೆಯಲ್ಲಿರಬೇಕು.

ಹೆಚ್ಚು ಆರೋಗ್ಯ ಸಿಬ್ಬಂದಿ ನಿಯೋಜನೆ
ವಿದೇಶಗಳಿಂದ ಬರುವವರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಏರ್‌ಪೋರ್ಟ್‌ನಲ್ಲಿ ಹೆಚ್ಚು ಆರೋಗ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. KIABಯಲ್ಲಿ 30ಕ್ಕೂ ಹೆಚ್ಚು ಆರೋಗ್ಯ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ ಜಿಲ್ಲೆಯ ಆರೋಗ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಅಂತ ಟಿವಿ9ಗೆ ಬೆಂಗಳೂರು ನಗರ ಡಿಸಿ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ.

ಪ್ರಯಾಣಿಕರ ಆಕ್ರೋಶ
ಟೆಸ್ಟಿಂಗ್ ಪದ್ದತಿ ವಿರುದ್ಧ ವಿದೇಶದಿಂದ ಬಂದ ಪ್ರಯಾಣಿಕರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟರ್ಮಿನಲ್​​ನಲ್ಲಿ ಕೋವಿಡ್ ಟೆಸ್ಟಿಂಗ್ ಸರಿಯಾಗಿ ಮಾಡ್ತಿಲ್ಲ. ಪ್ರಯಾಣಿಕರ ನಡುವೆ ಸಾಮಾಜಿಕ ಅಂತರವಿಲ್ಲ ಮಾಹಿತಿ ನೀಡುವವರು ಇಲ್ಲ. ಬೆಳಗ್ಗೆ 5.30 ಕ್ಕೆ ಬಂದರೆ 9.30 ಕ್ಕೆ‌ ಹೊರಗಡೆ ಬಂದಿದ್ದೀನಿ. ಆರ್​ಟಿಪಿಸಿಆರ್ ಟೆಸ್ಟ್​ 500 ರೂಪಾಯಿ ತೆಗೆದುಕೊಳ್ಳುತ್ತಾರೆ. 6 ಗಂಟೆ ನಂತರ ರಿಪೋರ್ಟ್ ಕೊಡುತ್ತಾರೆ. 3 ಸಾವಿರ ನೀಡಿದರೆ 1 ಗಂಟೆಯಲ್ಲಿ ರಿಪೋರ್ಟ್ ನೀಡೋದಾಗಿ ಹೇಳಿದ್ದಾರೆ. 3 ಸಾವಿರ ಕೊಟ್ರು 3 ಗಂಟೆ ನಂತರ ರಿಪೋರ್ಟ್ ಕೊಟ್ಟಿದ್ದಾರೆ. ನಿಯೋಜನೆ ಮಾಡಿರುವ ಸಿಬ್ಬಂದಿಗೆ ಟೆಸ್ಟಿಂಗ್ ಬಗ್ಗೆ ಮಾಹಿತಿಯಿಲ್ಲ. ಲಂಡನ್​ನಲ್ಲಿ ಮಾಡುವ ಟೆಸ್ಟಿಂಗ್​ಗೂ ಇಲ್ಲಿ ಮಾಡುವ ಟೆಸ್ಟಿಂಗ್​ಗೂ ಅಜಗಜಾಂತರ ವ್ಯತ್ಯಾಸವಿದೆ ಅಂತ ಹೇಳಿದ್ದಾರೆ.

ಇದನ್ನೂ ಓದಿ

ಅಂಗಡಿಗಳಿಗೆ ನುಗ್ಗಿ ಲಾಂಗ್ ತೋರಿಸಿ ಸುಲಿಗೆ ಮಾಡಿದ್ದ ಬರ್ನಲ್ ಸಿದ್ದಿಕಿ ಅರೆಸ್ಟ್, ಇವನ ಹೈಡ್ರಾಮಾಕ್ಕೆ ಬೆರಗಾದ ಪೊಲೀಸರು ಜೈಲಿಗಟ್ಟುದ್ರು

ಆಟೋ ದರ ಏರಿಕೆ ಖುಷಿಯಲ್ಲಿದ್ದ ಚಾಲಕರಿಗೆ ಶಾಕ್, ದಿಢೀರನೆ ಏರಿತು ಆಟೋ ಗ್ಯಾಸ್ ದರ! ಹಾಗಾದರೆ ಪ್ರಯಾಣ ದರ ಮತ್ತೆ ಏರುತ್ತದಾ?

Published On - 9:11 am, Wed, 1 December 21

Web contact

TV9 Kannada

Read More
Follow Us