ದೇವನಹಳ್ಳಿ: ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆ ಯತ್ನ; ಇಬ್ಬರ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ
ಅದು ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿಯ ಪುರೋಹಿತರ ಕುಟುಂಬ. ಅಪ್ಪ-ಅಮ್ಮ, ಇಬ್ಬರು ಗಂಡು ಮಕ್ಕಳು ಇರುವ ಮಾರ್ಯದಸ್ಥರ ಸಂಸಾರ. ಚೆನ್ನಾಗಿದ್ದ ಆ ಕುಟುಂಬಕ್ಕೆ ಅದೇನಾಯ್ತೋ ಏನೋ, ಮುಸ್ಸಂಜೆ ವೇಳೆಗೆ ಇಡೀ ಕುಟುಂಬವೇ ಸಾವಿನ ಮನೆ ಸೇರುವ ನಿರ್ಧಾರ ಮಾಡಿದೆ. ಇಬ್ಬರು ಮೃತಪಟ್ಟಿದ್ದರೆ, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ.

ದೇವನಹಳ್ಳಿ, ಅಕ್ಟೋಬರ್ 31: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ (Devanahalli) ತಾಲೂಕಿನ ಹೆಗ್ಗನಹಳ್ಳಿಯಲ್ಲಿ ಪೌರೋಹಿತ್ಯ ಮಾಡ್ಕೊಂಡಿದ್ದ ಬ್ರಾಹ್ಮಣ ಸಮುದಾಯದ ಕುಮಾರಪ್ಪ ಎಂಬವರ ಇಡೀ ಕುಟುಂಬ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದು, ಇಡೀ ಗ್ರಾಮದ ಜನತೆಯನ್ನು ಬೆಚ್ಚಿಬೀಳಿಸಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ದೇವರ ಪೂಜೆ ಮಾಡಿಕೊಂಡು ಇದ್ದ ಕುಟುಂಬದಲ್ಲಿ ಏಕಾಏಕಿ ಅದೇನಾಯಿತೋ ಗೊತ್ತಿಲ್ಲ, ಗುರುವಾರ ಸಂಜೆ ಇದ್ದಕ್ಕಿದ್ದಂತೆ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
60 ವರ್ಷ ವಯಸ್ಸಿನ ಕುಮಾರಪ್ಪ, ಇವರ ಪತ್ನಿ 55 ವರ್ಷದ ರಮಾ ಮತ್ತು ಗಂಡು ಮಕ್ಕಳಾದ ಅಕ್ಷಯ್ ಹಾಗೂ ಅರುಣ್ ಸಾಮೂಹಿಕವಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಹಿರಿಯ ಮಗ ಕ್ರೀಮಿನಾಶಕ ಸೇವಿಸಿ ನಂತರ ನೇಣಿಗೆ ಶರಣಾಗಿದ್ದಾನೆ. ತಂದೆ ಕುಮಾರಪ್ಪ ಹಾಗೂ ಹಿರಿಯ ಮಗ ಅರುಣ್ ಸಾವನ್ನಪ್ಪಿದ್ದು, ಅರಚಾಡುತ್ತಾ ವಿಲವಿಲ ಒದ್ದಾಡುತ್ತಿದ್ದ ತಾಯಿ ರಮಾ ಹಾಗೂ ಕಿರಿಯ ಮಗನನ್ನು ಸ್ಥಳೀಯರು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ.
ಸಾಲ ಬಾಧೆಯಿಂದ ಸಾಮೂಹಿಕ ಆತ್ಮಹತ್ಯೆ ನಿರ್ಧಾರ ಶಂಕೆ
ಮನೆಯ ಹಾಲ್ನಲ್ಲಿ ಮದ್ಯದ ಬಾಟಲಿ ಮತ್ತು ಕ್ರಿಮಿನಾಶಕಗಳ ಬಾಟಲಿಗಳು ಪತ್ತೆಯಾಗಿವೆ. ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಮನೆಕೆಲಸದಾಕೆಗೆ ಕೋಟಿ ರೂ ಮನೆ ಕೊಟ್ಟ ಒಡತಿ: ಆದ್ರೂ ತಿಂದ ಮನೆಗೆ ದ್ರೋಹ ಬಗೆದ್ಲು
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಚಿಕ್ಕಜಾಲ ಪೊಲೀಸರು ಹಾಗೂ ದೇವನಹಳ್ಳಿ ಎಸಿಪಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣವೇನಿರಬಹುದು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಲದಬಾಧೆಯೇ, ಬೇರೆ ಕಾರಣವೋ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.



