ಮುಸುಕು ಧರಿಸಿ ಕೈಯಲ್ಲಿ ಗನ್​ ಹಿಡಿದು ಚಿನ್ನದ ಅಂಗಡಿಗೆ ಎಂಟ್ರಿ; ಕ್ಷಣಾರ್ಧದಲ್ಲಿ ಲಕ್ಷಾಂತರ ಮೌಲ್ಯದ ಬಂಗಾರ ದೋಚಿ ಎಸ್ಕೇಪ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 26, 2024 | 10:23 PM

ಅದು ಥೇಟ್ ಸಿನಿಮಾ ಸ್ಟೈಲ್ ರಾಬರಿ. ಮುಖಕ್ಕೆ ಮುಸುಕು ಹಾಕಿಕೊಂಡು, ಕೈಯಲ್ಲಿ ಗನ್ ಹಿಡಿದುಕೊಂಡಿದ್ದ ಕ್ರಿಮಿಗಳು, ಸೀದಾ ಚಿನ್ನದ ಅಂಗಡಿಗೆ ನುಗ್ಗಿದ್ದರು. ಏನಾಗ್ತಿದೆ ಎಂದು ಮಾಲೀಕರಿಗೆ ಅರ್ಥವಾಗುವಷ್ಟರಲ್ಲೇ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಮಾಯವಾಗಿತ್ತು. ಪೊಲೀಸರನ್ನೇ ಬೆಚ್ಚಿ ಬೀಳಿಸಿರೋ ಕಳ್ಳತನದ ಕಹಾನಿ ಇಲ್ಲಿದೆ ನೋಡಿ.

ಮುಸುಕು ಧರಿಸಿ ಕೈಯಲ್ಲಿ ಗನ್​ ಹಿಡಿದು ಚಿನ್ನದ ಅಂಗಡಿಗೆ ಎಂಟ್ರಿ; ಕ್ಷಣಾರ್ಧದಲ್ಲಿ ಲಕ್ಷಾಂತರ ಮೌಲ್ಯದ ಬಂಗಾರ ದೋಚಿ ಎಸ್ಕೇಪ್​
ಜ್ಯುವೆಲರಿ ಶಾಪ್​ ಕಳ್ಳತನ
Follow us on

ಬೆಂಗಳೂರು, ಜೂ.26: ಸಿನಿಮಾ ಸ್ಟೈಲ್​ಲ್ಲಿ ಜ್ಯುವೆಲರಿ ಶಾಪ್(Jewellery shop)​ಗೆ ನುಗ್ಗಿದ ಮೂವರು ಮುಸುಕುಧಾರಿಗಳು ಜ್ಯುವೆಲರಿ ಶಾಪ್ ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ದರೋಡೆಗೈದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ(Madanayakanahalli) ಬಳಿಯ ದೊಂಬರಹಳ್ಳಿಯಲ್ಲಿ ನಡೆದಿದೆ. ನಿನ್ನೆ(ಜೂ.25) ರಾತ್ರಿ 9.15ರ ಸುಮಾರಿಗೆ ಪದಮ್ ಎಂಬುವರಿಗೆ ಸೇರಿದ ಪದಮ್ ಜ್ಯುವಲರಿ ಶಾಪ್​​ಗೆ ಇಬ್ಬರು ಮುಸುಕು ಧಾರಿಗಳು ಒಳ ನುಗ್ಗಿ, ಗನ್ ತೋರಿಸಿ ಜಸ್ಟ್ 30 ಸೆಂಕೆಂಡ್​ಗಳಲ್ಲಿ ಶೋಕೇಸ್​ನಲ್ಲಿದ್ದ 6 ಡಿಸ್‌ಪ್ಲೇ, ಟ್ರೇ ಬಾಕ್ಸ್​ನಲ್ಲಿದ್ದ ಸುಮಾರು 65 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ದೋಚಿದ್ರೆ, ಮತ್ತೊಬ್ಬ ಬೈಕ್ ಬಳಿ ಇವರಿಗೆ ಕಾಯುತ್ತಾ ನಿಂತಿದ್ದು, ಕೃತ್ಯದ ಬಳಿಕ ಕ್ಷಣಾರ್ಧದಲ್ಲಿ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಈ ಕೃತ್ಯದ ಸಂಪೂರ್ಣ ದೃಶ್ಯ ಶಾಪ್​ನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಕೂಡಲೇ ಸ್ಥಳೀಯ ಮಾದನಾಯಕನಹಳ್ಳಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡುತ್ತಿದ್ದಂತೆ, ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ತೆರಳಿದ್ದಾರೆಂದು ಮಾಲಿಕ ಹಾಗೂ ಪ್ರತ್ಯಕ್ಷದರ್ಶಿ ರಾಹುಲ್ ತಿಳಿಸಿದ್ದಾರೆ. ಇನ್ನು ಈ ಕೃತ್ಯದಲ್ಲಿ ಒಟ್ಟು ಮೂವರು ಆರೋಪಿಗಳು ಭಾಗಿಯಾಗಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೃತ್ಯ ನೆಡೆಸಿದ್ದಾರೆ.

ಇದನ್ನೂ ಓದಿ:ಐರಾವತ ಬಸ್​ನಲ್ಲಿ ಕಳ್ಳರ ಕೈಚಳಕ: 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ

ಒಬ್ಬ ಗನ್ ತೋರಿಸಿದ್ದಾನೆ, ಇನ್ನೊಬ್ಬ ತಾನು ತಂದಿದ್ದ ಪ್ಲಾಸ್ಟಿಕ್ ಚೀಲದಲ್ಲಿ ಚಿನ್ನಾಭರಣ ತುಂಬಿಕೊಂಡು ಪರಾರಿಯಾಗಿದ್ದಾರೆ. ಇವರು ತಂದಿದ್ದ ಬೈಕ್ ನಂಬರ್‌ ಕಾಣದಂತೆ ಟವಲ್ ಕಟ್ಕೊಂಡು ಬಂದು ರಾಬರಿ ಮಾಡಿದ್ದಾರೆ. ಮಾಲೀಕರ ದೂರಿನ ಪ್ರಕಾರ 750 ಗ್ರಾಂ ಚಿನ್ನಭರಣ ದರೋಡೆಯಾಗಿದೆ ಎಂದು ದೂರು ಕೊಟ್ಟಿದ್ದಾರೆ. ಆದಷ್ಟೂ ಬೇಗ ಈ ಪ್ರಕರಣವನ್ನ ಬೇಧಿಸುತ್ತೇವೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿಕೆ ನೀಡಿದ್ದಾರೆ. ಸಧ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ನೆಲಮಂಗಲ ಡಿವೈಎಸ್ಪಿ ಜಗದೀಶ್ ಹಾಗೂ ಮಾದನಾಯಕನಹಳ್ಳಿ ಇನ್ಸ್‌ಪೆಕ್ಟರ್ ಮುರಳೀಧರ್ ನೇತೃತ್ವದಲ್ಲಿ ಎರಡು ತಂಡ ರಚನೆ ಮಾಡಿ ಪ್ರಕರಣ ಭೇದಿಸಲು ಪೊಲೀಸರು ಮುಂದಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ