AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Iran Israel War: ವಿದೇಶಗಳಲ್ಲಿರುವ ಕನ್ನಡಿಗರಿಗೂ ತಟ್ಟಿದ ಯುದ್ಧದ ಬಿಸಿ; ದುಬೈ, ಬಹ್ರಾನ್​ನಲ್ಲಿ ಸಿಲುಕಿಕೊಂಡವರೆಷ್ಟು ಗೊತ್ತಾ?

ಇರಾನ್-ಇಸ್ರೇಲ್ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಭದ್ರತಾ ಆತಂಕ ಹೆಚ್ಚಿದೆ. ವಿಮಾನ ಸಂಚಾರ ವ್ಯತ್ಯಯದಿಂದ ದುಬೈ, ಬಹ್ರೇನ್‌ನಲ್ಲಿ 90ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿದ್ದಾರೆ. ಕುಟುಂಬಸ್ಥರು ಆತಂಕಗೊಂಡಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಿಲುಕಿದವರನ್ನು ಸುರಕ್ಷಿತವಾಗಿ ಕರೆತರಲು ಮನವಿ ಮಾಡಿದ್ದಾರೆ. ಹಲವು ವಿಮಾನಗಳು ರದ್ದಾಗಿದ್ದು, ನೂರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ.

Iran Israel War: ವಿದೇಶಗಳಲ್ಲಿರುವ ಕನ್ನಡಿಗರಿಗೂ ತಟ್ಟಿದ ಯುದ್ಧದ ಬಿಸಿ; ದುಬೈ, ಬಹ್ರಾನ್​ನಲ್ಲಿ ಸಿಲುಕಿಕೊಂಡವರೆಷ್ಟು ಗೊತ್ತಾ?
ವಿದೇಶಗಳಲ್ಲಿರುವ ಕನ್ನಡಿಗರಿಗೂ ತಟ್ಟಿದ ಯುದ್ಧದ ಬಿಸಿ; ದುಬೈ, ಬಹ್ರಾನ್​ನಲ್ಲಿ ಸಿಲುಕಿಕೊಂಡವರೆಷ್ಟು ಗೊತ್ತಾ?
ಭಾವನಾ ಹೆಗಡೆ
|

Updated on:Mar 01, 2026 | 10:48 AM

Share

ಬೆಂಗಳೂರು, ಮಾರ್ಚ್​ 01: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ Iran Israel War ಮಧ್ಯಪ್ರಾಚ್ಯದ ಹಲವು ದೇಶಗಳಿಗೆ ವ್ಯಾಪಿಸಿದ್ದು, ಭದ್ರತಾ ಆತಂಕ ಹೆಚ್ಚಿಸಿದೆ. ವಿಮಾನ ಸಂಚಾರದಲ್ಲಿ ವ್ಯತ್ಯಯದ ಪರಿಣಾಮವಾಗಿ ದುಬೈ, ಬಹ್ರೇನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರತೀಯರು, ವಿಶೇಷವಾಗಿ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇರಾನ್–ಇಸ್ರೇಲ್ ಯುದ್ಧದ ಪರಿಣಾಮವಾಗಿ ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ವಿಶೇಷವಾಗಿ ಬಹ್ರೇನ್ ಮತ್ತು ದುಬೈ ನಗರಗಳು ಭದ್ರತಾ ಕ್ರಮಗಳು ಕಠಿಣಗೊಂಡಿದ್ದು, ವಿಮಾನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಬೆಳವಣಿಗೆಯಿಂದಾಗಿ ವಿದೇಶ ಪ್ರವಾಸದಲ್ಲಿದ್ದ ಮತ್ತು ಉದ್ಯೋಗ ನಿಮಿತ್ತ ತೆರಳಿದ್ದ ಅನೇಕ ಕನ್ನಡಿಗರು ಅಲ್ಲಿ ಸಿಲುಕಿಕೊಂಡಿದ್ದಾರೆ.

ಬಹ್ರೇನ್​ನಲ್ಲಿ ಸಿಲುಕಿದವರೆಷ್ಟು?

ಬಹ್ರೇನ್ ರಾಜಧಾನಿ ಮನಾಮಾ ನಗರದಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅಂಗಡಿಹಳ್ಳಿ ಗ್ರಾಮದ ಪಂಜು, ಜಮುನ, ಸುರೇಂದ್ರ ಪ್ರಸಾದ್, ರತೀಶ್ ಹಾಗೂ ಮೈಸೂರು ಮೂಲದ ನೇತ್ರಾವತಿ ಸೇರಿದಂತೆ ಒಟ್ಟು ಆರು ಮಂದಿ ಕನ್ನಡಿಗರು ಸಿಲುಕಿದ್ದಾರೆ. ತಾವು ವಾಸಿಸುತ್ತಿರುವ ಕಟ್ಟಡದ ಪಕ್ಕದಲ್ಲೇ ಬಾಂಬ್ ಸ್ಫೋಟವಾಗುತ್ತಿರುವುದಾಗಿ ಅವರು ತಿಳಿಸಿದ್ದು, ಅವರ ಕುಟುಂಬಸ್ಥರು ತೀವ್ರ ಆತಂಕದಲ್ಲಿದ್ದಾರೆ. ತಮ್ಮವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ದುಬೈನಲ್ಲಿ ಸಿಲುಕಿ ಕನ್ನಡಿಗರ ಪರದಟ!

ದುಬೈನಲ್ಲಿ ಕೂಡ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಪ್ರವಾಸದ ವೇಳೆ ಅಲ್ಲೇ ಸಿಲುಕಿಕೊಂಡಿದ್ದಾರೆ. ಅವರು ಉಳಿದಿದ್ದ ಹೋಟೆಲ್ ಸಮೀಪ ಮಿಸೈಲ್ ದಾಳಿ ನಡೆದಿದ್ದು, ಅವರು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಶಾಸಕ ಬಿ. ನಾಗೇಂದ್ರ ಅವರು ಮುಖ್ಯಮಂತ್ರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಅವರೊಂದಿಗೆ ಮಾತನಾಡಿ ದುಬೈನಲ್ಲಿ ಸಿಲುಕಿರುವ ಜನರ ಕುರಿತು ಮಾಹಿತಿ ನೀಡಿದ್ದಾರೆ. ಮಾರ್ಚ್ 2ರವರೆಗೆ ವಿಮಾನ ಹಾರಾಟ ಇರುವುದಿಲ್ಲವೆಂದು ತಿಳಿಸಲಾಗಿದೆ.

ಇದನ್ನೂ ಓದಿ ಇರಾನ್-ಇಸ್ರೇಲ್ ಯುದ್ಧ, ಮಂಗಳೂರು–ಗಲ್ಫ್ ವಿಮಾನ ಸೇವೆಗಳಲ್ಲಿ ವ್ಯತ್ಯಯ, ರದ್ದಾದ ಫ್ಲೈಟ್ ವಿವರ ಇಲ್ಲಿದೆ

ಬಳ್ಳಾರಿಯಿಂದ ಫೆಬ್ರವರಿ 24ರಂದು ದುಬೈ ಪ್ರವಾಸಕ್ಕೆ ತೆರಳಿದ್ದ 35 ಮಂದಿ ಪ್ರವಾಸಿಗರು ವಾಪಸ್ಸಾಗಬೇಕಿದ್ದ ವೇಳೆಯಲ್ಲಿ ಯುದ್ಧ ಭೀತಿ ಹಿನ್ನೆಲೆಯಲ್ಲಿ ಅಲ್ಲೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ರೀತಿ ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಯ ಒಟ್ಟು 50 ಮಂದಿ ಪ್ರವಾಸಿಗರು ವಿಮಾನ ರದ್ದಾದ ಪರಿಣಾಮ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಣಕಾಸಿನ ತೊಂದರೆಗೂ ಒಳಗಾಗಿರುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಗಿರೀಶ್ ಕೆರೂರು, ಫ್ರಾನ್ಸ್ ಮೂಲದ IDEMIA ಕಂಪನಿಯಲ್ಲಿ ಟೆಕ್ನಿಕಲ್ ಮ್ಯಾನೇಜರ್ ಆಗಿದ್ದು, ದುಬೈ ಮಾರ್ಗವಾಗಿ ಪ್ಯಾರಿಸ್ ತೆರಳಬೇಕಾಗಿತ್ತು. ಆದರೆ ವಿಮಾನ ರದ್ದಾದ ಕಾರಣ ಅವರು ಅಬುಧಾಬಿಯ ಯಾಸ್ ಪ್ಲಾಜಾ ಹೋಟೆಲ್‌ನಲ್ಲಿ ತಂಗಿದ್ದಾರೆ. ಸದ್ಯ ಸುರಕ್ಷಿತರಾಗಿದ್ದರೂ, ಯಾವಾಗ ವಿಮಾನ ಸಂಚಾರ ಪುನರಾರಂಭವಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲವೆಂದು ತಿಳಿಸಿದ್ದಾರೆ.

ಒಟ್ಟಾರೆ ಲಭ್ಯ ಮಾಹಿತಿಯ ಪ್ರಕಾರ ಬಹ್ರೇನ್‌ನಲ್ಲಿ 6 ಮಂದಿ, ದುಬೈನಲ್ಲಿ ಬಳ್ಳಾರಿ ಮೂಲದ 35 ಮಂದಿ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಯ 50 ಮಂದಿ ಸೇರಿದಂತೆ ಕನಿಷ್ಠ 90ಕ್ಕೂ ಹೆಚ್ಚು ಕನ್ನಡಿಗರು ಮಧ್ಯಪ್ರಾಚ್ಯದಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಭಾರತೀಯ ವಿದೇಶಾಂಗ ಇಲಾಖೆ ಸಹಾಯವಾಣಿ ಆರಂಭಿಸಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಸಿಲುಕಿರುವ ಕನ್ನಡಿಗರನ್ನು ಶೀಘ್ರ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂಬುದು ಕುಟುಂಬಸ್ಥರ ಒತ್ತಾಯವಾಗಿದೆ.

ಇದನ್ನೂ ಓದಿ ಯುದ್ಧಪೀಡಿತ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಯೇ ಆದ್ಯತೆ; ಸಿಎಂ ಸಿದ್ದರಾಮಯ್ಯ

ಬೆಂಗಳೂರು ಏರ್​ಪೋರ್ಟ್​ನಲ್ಲಿ 15 ವಿಮಾನಗಳು ರದ್ದು

ಯುದ್ಧದ ಹಿನ್ನೆಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 15 ವಿಮಾನಗಳು ರದ್ದಾಗಿವೆ. ವಿದೇಶಗಳಿಂದ ಆಗಮಿಸಬೇಕಿದ್ದ 09 ಹಾಗೂ ಬೆಂಗಳೂರಿನಿಂದ ನಿರ್ಗಮಿಸಬೇಕಿದ್ದ 06 ವಿಮಾನಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ದುಬೈ, ಅಬುಧಾಬಿ, ಜಿದ್ದಾ, ದೋಹಾ, ಡಮಾಮ್ ಹಾಗೂ ರಿಯಾದ್ ಸಂಪರ್ಕಿತ ಪ್ಲೈಟ್ಗಳು ರದ್ದಾಗಿವೆ. ಎಮಿರೇಟ್ಸ್, ಕತಾರ್ ಏರ್ವೇಸ್, ಏರ್ ಇಂಡಿಯಾ ಎಕ್ಸ್ಪ್ರೆಸ್, ಇಂಡಿಗೋ ಮತ್ತು ಎತಿಹಾದ್ ಏರ್ವೇಸ್ ವಿಮಾನಗಳು ಸೇವೆ ನಿಲ್ಲಿಸಿವೆ. ಆಗಮಿಸಬೇಕಿದ್ದ ವಿಮಾನಗಳಲ್ಲಿ 1,533 ಪ್ರಯಾಣಿಕರು ಹಾಗೂ ನಿರ್ಗಮಿಸಬೇಕಿದ್ದ ವಿಮಾನಗಳಲ್ಲಿ 806 ಮಂದಿ ಟಿಕೆಟ್ ಬುಕ್ ಮಾಡಿದ್ದು, ರದ್ದತಿ ಬಗ್ಗೆ ಮುಂಚಿತವಾಗಿ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:21 am, Sun, 1 March 26

Follow Us