ಆಟವಾಡುತ್ತಿದ್ದಾಗ ಮೊದಲ ಮಹಡಿಯಿಂದ ಬಿದ್ದು 2 ವರ್ಷದ ಕಂದಮ್ಮ ದಾರುಣ ಅಂತ್ಯ!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ದುರಂತ ನಡೆದಿದೆ. ಆಟವಾಡುತ್ತಿದ್ದ 2 ವರ್ಷದ ಮಗು ಕಟ್ಟಡದ ಮೊದಲ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿತ್ತು. 24 ಗಂಟೆಗಳ ಕಾಲ ಕೋಮಾದಲ್ಲಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಪೋಷಕರಿಗೆ ಈ ಘಟನೆ ಆಘಾತ ತಂದಿದೆ.

ಆಟವಾಡುತ್ತಿದ್ದಾಗ ಮೊದಲ ಮಹಡಿಯಿಂದ ಬಿದ್ದು 2 ವರ್ಷದ ಕಂದಮ್ಮ ದಾರುಣ ಅಂತ್ಯ!
ಪ್ರಾತಿನಿಧಿಕ ಚಿತ್ರ
Image Credit source: Getty images

Updated on: Jun 18, 2026 | 4:34 PM

ನೆಲಮಂಗಲ, ಜೂನ್​​ 18: ಆಟವಾಡುತ್ತಿದ್ದಾಗ ಮೊದಲನೇ ಮಹಡಿಯಿಂದ ಬಿದ್ದು 2 ವರ್ಷದ ಮಗು (Child) ಸಾವನ್ನಪ್ಪಿರುವಂತಹ (death) ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೋಟದಗುಡ್ಡದಹಳ್ಳಿಯಲ್ಲಿ ನಡೆದಿದೆ. ದೀಕ್ಷಿತ್ ಮೃತ ಮಗು. 24 ಗಂಟೆಗಳ ಕಾಲ ಕೋಮಾದಲ್ಲಿದ್ದ ದೀಕ್ಷಿತ್ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಮುಖ್ಯಾಂಶಗಳು

  • ಕಟ್ಟಡದ ಮೊದಲ ಮಹಡಿಯಿಂದ ಬಿದ್ದು 2 ವರ್ಷದ ಮಗು ಸಾವು
  • ಆಟವಾಡುತ್ತಿದ್ದಾಗ ಸಂಭವಿಸಿದ ಘಟನೆ
  • ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ, ಪರಿಶೀಲನೆ

ನಡೆದಿದ್ದೇನು? 

ದಾಸರಹಳ್ಳಿಯ ನವೀನ್ ಕುಮಾರ್, ಕಾವ್ಯ ದಂಪತಿ ಮತ್ತು ಮಗು ದೀಕ್ಷಿತ್ ಸೇರಿದಂತೆ ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ಬಂದಿದ್ದರು. ಈ ವೇಳೆ ಆಟವಾಡುತ್ತಿದ್ದಾಗ ಕಟ್ಟಡದ ಮೊದಲ ಮಹಡಿ ಮೆಟ್ಟಿಲು ಮೇಲಿಂದ ದೀಕ್ಷಿತ್ ಉರುಳಿಬಿದ್ದ. ಕೂಡಲೇ ಪೋಷಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ. ಮಗುವನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ವಸತಿ ಶಾಲೆಯಲ್ಲಿ ಅನುಮಾನಾಸ್ಪದವಾಗಿ ವಿದ್ಯಾರ್ಥಿ ಸಾವು

ಅನುಮಾನಾಸ್ಪದವಾಗಿ ವಿದ್ಯಾರ್ಥಿ ಸಾವನ್ನಪ್ಪಿರುವಂತಹ ಘಟನೆ ಧಾರವಾಡ ಜಿಲ್ಲೆಯ ನವಲಗುಂದದ ಅಣ್ಣಿಗೇರಿ ರಸ್ತೆಯಲ್ಲಿರುವ ವಿದ್ಯಾಜ್ಯೋತಿ ವಸತಿ ಶಾಲೆಯಲ್ಲಿ ನಡೆದಿದೆ. ಶಾನವಾಡ ಗ್ರಾಮದ ಆಕಾಶ್ ನೀಲಣ್ಣವರ್(10) ಮೃತ ದುರ್ದೈವಿ.

ಇದನ್ನೂ ಓದಿ: ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಮಗು ಸಾವು

10 ದಿನದ ಹಿಂದೆ ತಂದೆ ವಸಂತ್ ಅವರು ಆಕಾಶ್​​ನನ್ನು 4ನೇ ತರಗತಿಗೆ ವಸತಿ ಶಾಲೆಗೆ ಸೇರಿಸಿದ್ದರು. ಇಂದು ಮುಂಜಾನೆ ಕಾಂಪೌಂಡ್ ಮೇಲಿಂದ ಬಿದ್ದಿದ್ದು, ನವಲಗುಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶಾಲೆಯ ಸಿಬ್ಬಂದಿ ಪೋಷಕರಿಗೆ ಮಾಹಿತಿ ನೀಡಿದ್ದರು. ಆದರೆ ನಿನ್ನೆ ಕರೆ ಮಾಡಿದ್ದಾಗ ಶಿಕ್ಷಕರು ಹೊಡೆದಿರುವುದಾಗಿ ಆಕಾಶ್ ಹೇಳಿದ್ದ.

ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ತಂದೆ

ಇನ್ನು ಮಗನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲು ತಂದೆ ಮುಂದಾಗಿದ್ದು, ನವಲಗುಂದ ಸರ್ಕಾರಿ ಆಸ್ಪತ್ರೆಯಿಂದ ಕಿಮ್ಸ್​ಗೆ ಕರೆತರುವಷ್ಟರಲ್ಲಿ ಆಕಾಶ್​ ಸಾವನ್ನಪ್ಪಿದ್ದಾನೆ. ಸದ್ಯ ಪುತ್ರ ಆಕಾಶ್ ಸಾವಿನ ಬಗ್ಗೆ ವಸಂತ್ ಸಂಶಯ ವ್ಯಕ್ತಪಡಿಸಿದ್ದಾರೆ. ಕಾಂಪೌಂಡ್ ಮೇಲಿಂದ ಬಿದ್ದರೆ ಸಾಯುವುದಿಲ್ಲ ಎಂದಿರುವ ವಸಂತ್, ಮಗ ಕಾಂಪೌಂಡ್ ಮೇಲಿಂದ ಬಿದ್ದಿದ್ನಾ ಅಥವಾ ಶಾಲಾ ಕಟ್ಟಡದಿಂದ ಬಿದ್ದಿದ್ನಾ? ಎಂದು ಸಿಸಿಟಿವಿ ದೃಶ್ಯ ನೋಡಿದ ನಂತರ ನಿರ್ಧರಿಸುತ್ತೇವೆ ಎನ್ನುತ್ತಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ನವಲಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us