ಮೊಮ್ಮಗನ ಎದುರಲ್ಲೇ ಅಜ್ಜಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದ ಸಂಬಂಧಿ?
ನೆಲಮಂಗಲದ ಕುದುರಗೆರೆ ಗ್ರಾಮದಲ್ಲಿ 55 ವರ್ಷದ ವೃದ್ಧೆಯನ್ನು ಹಾಡಹಗಲೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿ ಪರಾರಿ ಆಗಿರುವಂತಹ ಘಟನೆ ನಡೆದಿದೆ. ಮೊಮ್ಮಗನ ಎದುರೇ ಅಜ್ಜಿಯ ಹತ್ಯೆ ನಡೆದಿದ್ದು, ಪ್ರಕರಣ ಕುರಿತು ಮಾದನಾಯಕನಹಳ್ಳಿ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ, ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

ನೆಲಮಂಗಲ, ಜನವರಿ 12: ಬೆಂಗಳೂರು ಉತ್ತರ ತಾಲೂಕಿನ ಕುದುರಗೆರೆ ಗ್ರಾಮದ ನಡು ರಸ್ತೆಯಲ್ಲಿ ಇಂದು ಹಾಡಹಗಲೇ ಕೊಡಲಿಯಿಂದ ಕೊಚ್ಚಿ ವೃದ್ಧ ಮಹಿಳೆಯ (old woman) ಬರ್ಬರವಾಗಿ ಹತ್ಯೆ (murder) ಮಾಡಿರುವ ಘಟನೆ ನಡೆದಿದೆ. ದ್ರಾಕ್ಷಾಣಮ್ಮ(55) ಕೊಲೆಯಾದ ವೃದ್ಧೆ. ಮೊಮ್ಮಗನ ಮುಂದೆಯೇ ಅಜ್ಜಿಯನ್ನ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ದುಷ್ಕರ್ಮಿ ಪರಾರಿ ಆಗಿದ್ದಾನೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಸಂಬಂಧಿಯಿಂದಲೇ ಕೊಲೆ ಶಂಕೆ
ಇನ್ನು ಕೊಲೆಯಾದ ದ್ರಾಕ್ಷಾಣಮ್ಮ ಅವರ ಪತಿ ನಾಗರಾಜು 8 ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ ಮೊಮ್ಮಗನನ್ನ ಶಾಲೆಯಿಂದ ಮನೆಗೆ ಕರೆದುಕೊಂಡು ಬರುವಾಗ ಘಟನೆ ನಡೆದಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಯಿಂದಲೇ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಸಕ್ಕರೆ ಕಾರ್ಖಾನೆ ಕ್ರಷಿಂಗ್ ಬೆಲ್ಟ್ನಲ್ಲಿ ಸಿಲುಕಿ ಕಾರ್ಮಿಕ ಸಾವು
ಸಕ್ಕರೆ ಕಾರ್ಖಾನೆ ಕ್ರಷಿಂಗ್ ಬೆಲ್ಟ್ನಲ್ಲಿ ಸಿಲುಕಿ ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿರುವ ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ. ಅಮ್ಮಿನಭಾವಿ ಗ್ರಾಮದ ಕಾರ್ಮಿಕ ಸಚಿನ್ ದ್ಯಾಮಣ್ಣಿ(36) ಮೃತ ಕಾರ್ಮಿಕ.
ಇದನ್ನೂ ಓದಿ: ತುಮಕೂರು: ಮಗಳ ಕಣ್ಣೆದುರೇ ತಂದೆಯನ್ನ ಬರ್ಬರವಾಗಿ ಕೊಂದ ದುಷ್ಕರ್ಮಿಗಳು
ಕ್ರಷಿಂಗ್ ಬೆಲ್ಟ್ನಲ್ಲಿ ಸುಣ್ಣ ಹಾಕುವಾಗ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ. 10 ದಿನದ ಹಿಂದೆ ದಿನಗೂಲಿ ಆಧಾರದ ಮೇಲೆ ಕೆಲಸಕ್ಕೆ ಸೇರಿದ್ದರು. ಘಟನೆ ಸಂಬಂಧ ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ ಕಾನೂನು ವಿವಿಯಲ್ಲಿ ಕೆಲಸ ಮಾಡ್ತಿದ್ದ ಇಂಜಿನಿಯರ್ ಕೊಲೆ
ಹುಬ್ಬಳ್ಳಿ ನಗರದ ನವನಗರದಲ್ಲಿರುವ ಕಾನೂನು ವಿಶ್ವವಿದ್ಯಾಲಯ ಕ್ಯಾಂಪಸ್ನಲ್ಲಿ ವ್ಯಕ್ತಿಯೋರ್ವನ ಕೊಲೆಯಾಗಿದೆ. ಮೂಲತ ವಿಜಯಪುರ ಜಿಲ್ಲೆಯ ಅರಕೇರಾ ತಾಂಡಾ ನಿವಾಸಿಯಾಗಿದ್ದ 60 ವರ್ಷದ ವಿಠ್ಠಲ್ ರಾಠೋಡ್ ಕೊಲೆಯಾದ ವ್ಯಕ್ತಿ. ಇವರು ಕಾನೂನು ವಿವಿಯ ಆಡಳಿತಾತ್ಮಕ ಕಟ್ಟಡ ನಿರ್ಮಾಣ ಕಾಮಗಾರಿಯ ಉಪ ಗುತ್ತಿಗೆಯನ್ನು ಪಡೆದಿದ್ದರು.
ಇದನ್ನೂ ಓದಿ: ಅಶ್ಲೀಲವಾಗಿ ಮೆಸೇಜ್, ವರದಕ್ಷಿಣೆ ಕಿರುಕುಳ: ಪೊಲೀಸ್ ಪತಿ ಕಾಟಕ್ಕೆ ಪತ್ನಿ ಕಂಗಾಲು
ಕುಟುಂಬದ ಮಾತು ಕೇಳಿ ಪೊಲೀಸರು ಅಸಹಜವಾದ ಸಾವು ಅಂದುಕೊಂಡಿದ್ದರು. ಆದರೆ ವಿಚಾರಣೆ ವೇಳೆ ವಿಠ್ಠಲ್ ರಾಠೋಡ್ನದ್ದು ಅಸಹಜ ಸಾವಲ್ಲ, ಬದಲಾಗಿ ಕೊಲೆ ಅನ್ನೋದು ದೃಢಪಟ್ಟಿದೆ. ಕೊಲೆ ಮಾಡಿದ್ದು ಬೇರಾರು ಅಲ್ಲಾ, ಕೊಲೆಯಾದ ವಿಠ್ಠಲ್ ರಾಠೋಡ್ ಕೆಲಸ ನೀಡಿದ್ದ ಕಾರ್ಮಿಕರು ಎಂದು ಗೊತ್ತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
