
ನೆಲಮಂಗಲ, ಡಿಸೆಂಬರ್ 15: ತಮ್ಮನ ಮದುವೆಗೆ ಅಣ್ಣ ಮಾಡಿಸಿದ್ದ 6 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಖತರ್ನಾಕ್ ಕಳ್ಳ ದೋಚಿರುವಂತಹ (Robbery) ಘಟನೆ ಬೆಂಗಳೂರು ಉತ್ತರ ಕೆಜಿ ಲಕ್ಕೇನಹಳ್ಳಿಯಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಕಳ್ಳತನ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮನೆಯಿಂದ ಹೊರಗೆ ಹೋಗಿ ವಾಪಸ್ ಬರುವಷ್ಟರಲ್ಲಿ ಕಳ್ಳ ತನ್ನ ಕೈಚಳ ತೋರಿಸಿದ್ದಾನೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯೋಗೀಶ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಯೋಗೀಶ್ ಮೂಲತಃ ಹಾಸನ ಜಿಲ್ಲೆಯವರು. ಕಳೆದ 8 ವರ್ಷಗಳ ಹಿಂದೆ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಆಗಮಿಸಿದ್ದರು. ಬೆಂಗಳೂರು ಉತ್ತರ ತಾಲೂಕಿನ ಕೆಜಿ ಲಕ್ಕೆನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಹಾಗೂ ತಮ್ಮನ ಜೊತೆ ವಾಸವಿದ್ದರು. ಡ್ರೈವರ್ ಕೆಲಸ ಮಾಡಿಕೊಂಡಿದ್ದ ಯೋಗೀಶ್, ತಮ್ಮನ ಮದುವೆಗೆ ಎಂದು 55 ಗ್ರಾಂ ನಷ್ಟು ಚಿನ್ನಾಭರಣ ಖರೀದಿಸಿದ್ದ. ಆದರೆ ಖತರ್ನಾಕ್ ಕಳ್ಳ ತನ್ನ ಕೈಚಳಕ ತೋರಿಸಿದ್ದಾನೆ.
ಇದನ್ನೂ ಓದಿ: ಭರ್ಜರಿ ಕಾರ್ಯಚರಣೆ: 4 ಕಳ್ಳತನ ಪ್ರಕರಣ ಭೇದಿಸಿದ ಕಲಬುರಗಿ ಪೊಲೀಸ್; 6 ಖದೀಮರ ಬಂಧನ
ಮನೆಯ ಬೀರುವಿನಲ್ಲಿ ಭದ್ರವಾಗಿ ಚಿನ್ನಾಭರಣ ಇಡಲಾಗಿತ್ತು. ಆದರೆ ಕಳೆದ ಎರಡು ದಿನದ ಹಿಂದೆ ಬೀರು ನೋಡಿದಾಗ ಯೋಗೀಶ್ ಶಾಕ್ ಆಗಿದ್ದಾರೆ. ಏಕೆಂದರೆ ಬೀರುವಿನಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿತ್ತು. ನಂತರ ಸಿಸಿಟಿವಿ ಪರಿಶೀಲನೆ ಮಾಡಿದಾಗ ಕಪ್ಪು ಬಣ್ಣದ ಶರ್ಟ್ ಧರಿಸಿ ಕಳ್ಳತನ ಮಾಡಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಮತ್ತೊಮ್ಮೆ ಸುದ್ದಿಯಾದ ಕಾರವಾರ ಕಾರಾಗೃಹ; ಕೈದಿಗಳ ಬಳಿ ಏಳು ಮೊಬೈಲ್ ಪತ್ತೆ
ಇನ್ನು ಇದೆ ಮನೆಯ ಬೀಗ ಮುರಿಯದೆ ಕಳ್ಳತನವಾಗಿರುವುದರಿಂದ ನಕಲಿ ಕೀ ಬಳಸಿ ಕಳ್ಳತನ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಸದ್ಯ ಘಟನೆ ಸಂಬಂಧ 6 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ಕಳ್ಳತನವಾಗಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಘಟನೆ ಸಂಬಂಧ ಅಣ್ಣ ಯೋಗೀಶ್ ಮಾತನಾಡಿದ್ದು, ಸರ್ ನಾನು ಕಷ್ಟಪಟ್ಟು ದುಡಿದ ಹಣ. ದಯ ಮಾಡಿ ನಮಗೆ ಕಳುವಾದ ಚಿನ್ನಾಭರಣ ಕೊಡಿಸಿ ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವರದಿ: ಮಂಜುನಾಥ್ ಟಿವಿನೈನ್ ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:35 pm, Mon, 15 December 25