
ನೆಲಮಂಗಲ, ಏಪ್ರಿಲ್ 16: ಪರ ಸ್ತ್ರೀ ವ್ಯಾಮೋಹಕ್ಕೆ ಬಿದ್ದ ಪತಿಯೊಬ್ಬ ತನ್ನ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿ, ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ದಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಬೈಲಪ್ಪನ ಪಾಳ್ಯ ನಿವಾಸಿ ಪುನೀತ್ ಕುಮಾರ್ ಹಾಗೂ ಪವಿತ್ರಾ ಅವರ ವಿವಾಹ ಐದು ವರ್ಷಗಳ ಹಿಂದೆ ನಡೆದಿತ್ತು. ಪವಿತ್ರಾ ಅವರ ಪೋಷಕರು ಮಗಳ ಮದುವೆಗೆ 200 ಗ್ರಾಂ ಚಿನ್ನಾಭರಣ ನೀಡಿ ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ಮದುವೆಯಾದ ಒಂದು ವರ್ಷ ದಂಪತಿಗಳು ಅನ್ಯೋನ್ಯವಾಗಿದ್ದರು. ಆದರೆ, ನಂತರದ ದಿನಗಳಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಜಗಳ ಶುರುವಾಗಿದ್ದು, ಪುನೀತ್ ಪತ್ನಿಯ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದ ಎನ್ನಲಾಗಿದೆ.
ಈ ಮಧ್ಯೆ ಪುನೀತ್ ಬೇರೊಬ್ಬ ಯುವತಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ ಎನ್ನಲಾಗಿದ್ದು, ಇದೇ ಕಾರಣಕ್ಕೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಇದೆ. ಪತಿಯ ಕಿರುಕುಳ ತಾಳಲಾರದೆ ಪವಿತ್ರಾ ಕಳೆದ ನಾಲ್ಕು ವರ್ಷಗಳಿಂದ ದಾಬಸ್ಪೇಟೆಯಲ್ಲಿರುವ ತನ್ನ ಅಜ್ಜಿ-ತಾತನ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಈ ನಡುವೆ ಪುನೀತ್ ಪತ್ನಿಗೆ ವಿಚ್ಛೇದನ ನೀಡುವಂತೆ ಒತ್ತಾಯಿಸುತ್ತಿದ್ದಾನೆ ಎನ್ನಲಾಗಿದೆ.
ಪವಿತ್ರಾ ಅವರ 200 ಗ್ರಾಂ ಒಡವೆಗಳು ಪತಿಯ ಮನೆಯಲ್ಲೇ ಇವೆ. ಸಮಾರಂಭಗಳಿಗೆ ಹೋಗಲು ಒಡವೆ ಕೇಳಿದಾಗ ಪುನೀತ್ ಮತ್ತು ಆತನ ಕುಟುಂಬಸ್ಥರು ಒಡವೆ ನೀಡದೆ ಗಲಾಟೆ ಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಪವಿತ್ರಾ ದೂರಿದ್ದಾರೆ. ಈ ಬಗ್ಗೆ ದಾಬಸ್ಪೇಟೆ ಪೊಲೀಸರಿಗೆ ದೂರು ನೀಡಿದ್ದರೂ ಸರಿಯಾಗಿ ಸ್ಪಂದಿಸದ ಕಾರಣ, ಅನಾಥೆಯಾಗಿರುವ ತನಗೆ ನ್ಯಾಯ ಕೊಡಿಸುವಂತೆ ಪವಿತ್ರಾ ಅವರು ನೆಲಮಂಗಲ ಡಿವೈಎಸ್ಪಿ ಕಚೇರಿಯ ಮೆಟ್ಟಿಲೇರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ವರದಿ: ಮಂಜುನಾಥ್, ಟಿವಿ9 ನೆಲಮಂಗಲ