ಪರಪ್ಪನ ಅಗ್ರಹಾರಕ್ಕೆ ಮೊಬೈಲ್ ಜಾಮರ್ ಅಳವಡಿಕೆ, ಸ್ಥಳೀಯರಿಗೆ ಸಂಕಷ್ಟ

| Updated By: ವಿವೇಕ ಬಿರಾದಾರ

Updated on: May 17, 2024 | 8:35 AM

ಮೊಬೈಲ್​, ಕಂಪ್ಯೂಟರ್ ಯುಗದಲ್ಲಿ ನೆಟವರ್ಕ್​ ಬಹಳ ಮುಖ್ಯ. ಸ್ವಲ್ಪ ಇಂಟರ್​​ನೆಟ್​ ಡೌನ್​ ಆದ್ರೆ ಚಡಪಡಾಯಿಸುವ ಜನರಿದ್ದಾರೆ. ಅದರಲ್ಲಂತು ವರ್ಕ್​​ ಫ್ರಾಮ್​ ಹೋಮ್​ ಇದ್ದವರಿಗೆ ಯಾವುದೇ ಕಾರಣಕ್ಕೂ ಇಂಟರ್​ನೆಟ್​ ಸ್ಪೀಡ್​ ಕಡಿಮೆಯಾಗಬಾರದು. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್​ ನಿವಾಸಿಗಳು ನೆಟವರ್ಕ್ ಸಮಸ್ಯೆ ಕಾಡುತ್ತಿದೆ. ಇದಕ್ಕೆ ಕಾರಣವೇನು ಇಲ್ಲಿದೆ ಓದಿ..​​

ಪರಪ್ಪನ ಅಗ್ರಹಾರಕ್ಕೆ ಮೊಬೈಲ್ ಜಾಮರ್ ಅಳವಡಿಕೆ, ಸ್ಥಳೀಯರಿಗೆ ಸಂಕಷ್ಟ
ಬೆಂಗಳೂರು ಕೇಂದ್ರ ಕಾರಾಗೃಹ
Follow us on

ಬೆಂಗಳೂರು, ಮೇ 17: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಆನೆಕಲ್​ನಲ್ಲಿರುವ (Anekal) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ (Bengaluru Central Jail) ಇದ್ದುಕೊಂಡೇ ಕೊಲೆಗೆ ಸುಪಾರಿ ನೀಡಿರುವುದು, ಉಗ್ರ ಚಟುವಟಿಕೆಗಳ ನಂಟು ಹೊಂದಿರುವುದು, ಬ್ಲ್ಯಾಕ್​ ಮೇಲ್​ ಮಾಡಿರುವ ಪ್ರಕರಣಗಳು ವರದಿಯಾಗಿವೆ. ಇತ್ತೀಚಿಗೆ ಬೆಂಗಳೂರಿನ ವೈಟ್​ಫಿಲ್ಡ್​ನಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್​ ಸ್ಫೋಟದ (Rameshwaram Cafe Blast) ಸಂಚನ್ನು ಪರಪ್ಪನ ಅಗ್ರಹಾರದಲ್ಲಿದ್ದುಕೊಂಡೆ ರೂಪಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಎಲ್ಲ ಘಟನೆಗಳಿಗೆ ಸಂಚು ರೂಪಿಸಲು ಮೊಬೈಲ್​ ಬಳಕೆ ಮಾಡಲಾಗಿದೆ. ಜೈಲಿನಲ್ಲಿರುವ ಖೈದಿಗಳು ಮೊಬೈಲ್​ ಬಳಸುತ್ತಿರುವುದು ರಾಜ್ಯ ಗೃಹ ಸಚಿವಾಲಯಕ್ಕೆ ತಲೆನೋವಾಗಿದೆ.

ಹೀಗಾಗಿ ಖೈದಿಗಳು ಮೊಬೈಲ್ ಬಳಸುವುದನ್ನು ಬ್ರೇಕ್ ಹಾಕಲು ಇಲಾಖೆ ಮೊಬೈಲ್ ನೆಟ್ವರ್ಕ್ ಜಾಮರ್ ಅಳವಡಿಸಿದೆ. ಆದರೆ ಇದರಿಂದ ಜೈಲಿನ ಸುತ್ತಮುತ್ತಲಿನ ವಾಸಿಗಳಿಗೆ ತೊಂದರೆಯಾಗಿದೆ. ಕಳೆದ 3-4 ತಿಂಗಳಿನಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಎದುರಾಗಿದೆ. ಜೈಲಿನ ಸುತ್ತಮುತ್ತಲಿನ ನಿವಾಸಿಗಳ ಜೀವನ ದುಸ್ತರವಾಗಿದೆ.

ನೆಟ್ವರ್ಕ್ ಸಮಸ್ಯೆಯಿಂದಾಗಿ ಯಾವುದೇ ತುರ್ತು ಸಂದರ್ಭಗಳಲ್ಲಿ ಪೊಲೀಸ್, ಫೈರ್ ಮತ್ತು ಅಂಬ್ಯುಲೆನ್ಸ್ ಸೇವೆಗೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಬಸ್, ಆಟೋ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ. ಶಾಲೆಯಿಂದ ಮಕ್ಕಳು ಮರಳಿ ಕರೆತರಲು ಸಾದ್ಯವಾಗುತ್ತಿಲ್ಲ. ವರ್ಕ್ ಪ್ರಮ್ ಹೋಮ್ ಕೆಲಸ ಮಾಡಲು ಆಗುತ್ತಿಲ್ಲ. ತುರ್ತು ಕರೆ ಸೇರಿದಂತೆ ಯಾವುದೇ ಕರೆ ಸ್ವೀಕರಿಸಲು ಜೈಲಿನಿಂದ ಸರಿಸುಮಾರು ಎರಡು ಕಿ.ಮಿ ದೂರ ಹೋಗಬೇಕಿದೆ ಎಂದು ಅಪಾರ್ಟ್ಮೆಂಟ್ ವಾಸಿಗಳು ಜೈಲು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: CCB Raid: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ

ಇನ್ನು ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಮೊಬೈಲ್ ಜಾಮರ್ ಅಳವಡಿಕೆ ಮಾಡಿಲ್ಲ. ಬದಲಾಗಿ ಸ್ಥಳೀಯರನ್ನು ಒಕ್ಕಲೆಬ್ಬಿಸಲು ಉದ್ದೇಶ ಪೂರ್ವಕವಾಗಿ ಮೊಬೈಲ್ ಜಾಮರ್ ಅಳವಡಿಕೆ ಮಾಡಲಾಗಿದೆ. ಕಾರಾಗೃಹದ ಅಕ್ಕಪಕ್ಕದ ಆಸ್ತಿಗಳನ್ನು ಖಾಲಿ ಮಾಡಿಸುವ ಸಲುವಾಗಿ ಹೀಗೆ ಮಾಡಲಾಗುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಜೈಲಿನ ಸುತ್ತಮುತ್ತಲಿನ 2 ಕಿ.ಮಿ ವ್ಯಾಪ್ತಿಯಲ್ಲಿ ನೆಟ್ವರ್ಕ್ ಸಿಗದೆ ಮೆಸೇಜ್ ಮತ್ತು ಪೋನ್ ಮಾಡಲು ಆಗುತ್ತಿಲ್ಲ. ಈ ಬಗ್ಗೆ ಜೈಲಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಜೈಲಿನಲ್ಲಿರುವ ಕೈದಿಗಳು ರಾಜರೋಷವಾಗಿ ಮೊಬೈಲ್, ಸೇರಿದಂತೆ ಮಾದಕ ವಸ್ತುಗಳನ್ನ ಎಗ್ಗಿಲ್ಲದೆ ಬಳಕೆ ಮಾಡಲಾಗುತ್ತಿದೆ. ಜೈಲಿನಲ್ಲಿನ ಕೈದಿಗಳು ಇಂದಿಗೂ ಮೊಬೈಲ್ ಬಳಸುತ್ತಿದ್ದು, ಅವರಿಗೆ ಮೊಬೈಲ್ ನೆಟ್ವರ್ಕ್ ಜಾಮರ್ ಯಾವುದೇ ಎಫೆಕ್ಟ್ ಆಗುತ್ತಿಲ್ಲ. ಆದರೆ ಏನೂ ತಪ್ಪು ಮಾಡದ ಸುತ್ತಮುತ್ತಲಿನ ಸಾವಿರಾರು ಸ್ಥಳೀಯ ವಾಸಿಗಳಿಗೆ ಮೊಬೈಲ್ ನೆಟ್ವರ್ಕ್ ಜಾಮರ್​ನಿಂದ ಶಿಕ್ಷೆ ಅನುಭವಿಸುವಂತಾಗಿರುವುದು ಮಾತ್ರ ವಿಪರ್ಯಾಸ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ