ಬೆಂಗಳೂರು ನಗರದಲ್ಲಿ 185 ಶಿಥಿಲ ಕಟ್ಟಡಗಳು: ಕಂದಾಯ ಸಚಿವ ಆರ್.ಅಶೋಕ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 30, 2021 | 3:18 PM

ಶಿಥಿಲ ಎಂದು ಗುರುತಿಸಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡುತ್ತೇವೆ. ಬೆಸ್ಕಾಂಗೆ ಪತ್ರ ಬರೆದು ವಿದ್ಯುತ್ ಕಡಿತ ಮಾಡುತ್ತೇವೆ ಎಂದು ಆರ್.ಅಶೋಕ್ ಎಚ್ಚರಿಸಿದರು.

ಬೆಂಗಳೂರು ನಗರದಲ್ಲಿ 185 ಶಿಥಿಲ ಕಟ್ಟಡಗಳು: ಕಂದಾಯ ಸಚಿವ ಆರ್.ಅಶೋಕ್
ಆರ್ ಅಶೋಕ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ನಗರದಲ್ಲಿ ಸುಮಾರು 185 ಶಿಥಿಲ ಕಟ್ಟಡಗಳಿವೆ ಎಂದು 2019ರಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ತಿಳಿದುಬಂದಿತ್ತು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಈ ಕಟ್ಟಡಗಳ ಪೈಕಿ ಕೇವಲ 10 ಕಟ್ಟಡಗಳನ್ನು ಮಾತ್ರ ಈವರೆಗೆ ಒಡೆಯಲಾಗಿದೆ. ಶಿಥಿಲಗೊಂಡಿರುವ 175 ಕಟ್ಟಡಗಳು ಹಾಗೆಯೇ ಇವೆ. ಶಿಥಿಲ ಎಂದು ಗುರುತಿಸಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡುತ್ತೇವೆ. ಬೆಸ್ಕಾಂಗೆ ಪತ್ರ ಬರೆದು ವಿದ್ಯುತ್ ಕಡಿತ ಮಾಡುತ್ತೇವೆ. ಕಟ್ಟಡಗಳ ಮಾಲೀಕರು ಇಷ್ಟಕ್ಕೆ ಅವಕಾಶ ನೀಡದೆ ಸ್ವತಃ ತಾವೇ ತೆರವುಗೊಳಿಸಲು ಮುಂದಾಗಬೇಕು ಎಂದು ಅಶೋಕ್ ಸಲಹೆ ಮಾಡಿದ್ದಾರೆ.

ಶಿಥಿಲಗೊಂಡಿರುವ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಬೇಕು. ನೋಟಿಸ್ ನೀಡದಿದ್ದರೆ ಬಿಬಿಎಂಪಿ ಜಂಟಿ ಆಯುಕ್ತರೇ ಹೊಣೆಯಾಗಬೇಕಾಗುತ್ತದೆ. ನೋಟಿಸ್ ನೀಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಶಿಥಿಲ ಕಟ್ಟಡದ ಬಗ್ಗೆ ಸಾರ್ವಜನಿಕರು ಕೂಡ ಮಾಹಿತಿ ನೀಡಬಹುದು ಎಂದು ಸ್ಪಷ್ಟಪಡಿಸಿದರು.

ಈ ನಡುವೆ ನೆಲಮಂಗಲ ಸಮೀಪದ ಟಿ.ದಾಸರಹಳ್ಳಿಯಲ್ಲಿ ಶಿಥಿಲ ಕಟ್ಟಡವೊಂದು ಕುಸಿಯುವ ಆತಂಕ ವ್ಯಕ್ತವಾಗಿದೆ. ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಕಟ್ಟಡವನ್ನು ಬಿಬಿಎಂಪಿ ದಾಸರಹಳ್ಳಿ ವಲಯದ ಜಂಟಿ ಆಯುಕ್ತರು ಪರಿಶೀಲಿಸಿ, ಕಟ್ಟಡ ತೆರವುಗೊಳಿಸುವಂತೆ ಮನೆ ಮಾಲೀಕನಿಗೆ ಎಚ್ಚರಿಕೆ ನೀಡಿದ್ದಾರೆ.

ಶಿಥಿಲಗೊಂಡಿರುವ ಕಟ್ಟಡವನ್ನು ತೆರವುಗೊಳಿಸದಿದ್ದರೆ ಸಾವು ನೋವಿಗೆ ನೀವೇ ಹೊಣೆಗಾರರು ಎಂದು ಮನೆ ಮಾಲೀಕರಿಗೆ ಬಿಬಿಎಂಪಿ ದಾಸರಹಳ್ಳಿ ವಲಯದ ಜಂಟಿ ಆಯುಕ್ತ ನರಸಿಂಹಮೂರ್ತಿ ಎಚ್ಚರಿಕೆ ವಿಧಿಸಿದ್ದಾರೆ. ನಿಗದಿತ ಶುಲ್ಕ ಪಾವತಿಸಿದಲ್ಲಿ ಬಿಬಿಎಂಪಿ ತೆರವುಗೊಳಿಸುವ ಅವಕಾಶವೂ ಇದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಜತೆಗೆ ಕಟ್ಟಡ ತೆರವುಗೊಳಿಸಲು ವಾರ್ಡ್ ಇಂಜಿನಿಯರ್​ಗೆ ಸೂಚನೆ ನೀಡಿದ್ದಾರೆ. ಈಮೂಲಕ ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸುವ ಶುಲ್ಕ ಪಾವತಿಸಿದರೆ ಬಿಬಿಎಂಪಿಯೇ ತೆರವುಗೊಳಿಸುವುದಾಗಿ ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಆಯುಕ್ತ ಗೌರವ್​ ಗುಪ್ತಾ ಸೂಚನೆ
ಬೆಂಗಳೂರು ನಗರದಲ್ಲಿ ಶಿಥಿಲಗೊಂಡ ಕಟ್ಟಡಗಳ ತೆರವಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​​ ಗುಪ್ತಾ ಸೂಚನೆ ನೀಡಿದ್ದಾರೆ. ವಾಸಿಸಲು ಯೋಗ್ಯವಲ್ಲದ ಕಟ್ಟಡ ಬಾಡಿಗೆಗೆ ನೀಡಬಾರದು. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಹೇಳಿದ್ದಾರೆ. ಒಂದೊಮ್ಮೆ ಕಟ್ಟಡ ಮಾಲೀಕರ ನಿರ್ಲಕ್ಷ್ಯ ಕಂಡುಬಂದರೆ ಅವರ ವಿರುದ್ಧ ಎಫ್​ಐಆರ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಎರಡು ದಿನದ ಅವಧಿಯಲ್ಲಿ ಎರಡು ಕಟ್ಟಡ ಕುಸಿತ ಪ್ರಕರಣ ನಡೆದಿದೆ. ಕಟ್ಟಡ ಶಿಥಿಲಗೊಂಡಿದ್ದರೂ ಅದನ್ನು ಬಳಕೆ ಮಾಡುತ್ತಿದ್ದದ್ದು ಹಾಗೂ ಬಾಡಿಗೆಗೆ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಮೂರು ಅಂತಸ್ತಿನ ಕಟ್ಟಡಗಳು ಕುಸಿತವಾಗಿದ್ದು ಅದೃಷ್ಟವಷಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಹಿನ್ನೆಲೆಯಲ್ಲಿ ಗೌರವ್ ಗುಪ್ತಾ ಇದೀಗ ಅಧಿಕಾರಿಗಳಿಗೆ ಹೀಗೆ ಸೂಚನೆ ಕೊಟ್ಟಿದ್ದಾರೆ.

ಬೆಂಗಳೂರಿನ ಬಮೂಲ್ ಕ್ವಾರ್ಟರ್ಸ್‌ನಲ್ಲಿ ಕಟ್ಟಡ ಕುಸಿತ ಘಟನೆಗೆ ಸಂಬಂಧಿಸಿ ಕಟ್ಟಡ ಕುಸಿತ ಸ್ಥಳಕ್ಕೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಭೇಟಿ ನೀಡಿದ್ದಾರೆ. ಕಟ್ಟಡ ಪರಿಶೀಲನೆ ಬಳಿಕ ಕೆಎಂಎಫ್ ಎಂಡಿ ಸತೀಶ್ ಮಾತನಾಡಿದ್ದಾರೆ. 2016 ರಲ್ಲಿ ಕೆಎಂಎಫ್ ಇಂಜಿನಿಯರ್​ಗಳ ತಂಡ ಕಟ್ಟಡ ಪರಿಶೀಲಿಸಿತ್ತು. 10 ವರ್ಷ ವಾಸಿಸಲು ಯೋಗ್ಯ ಎಂದು ಪ್ರಮಾಣಪತ್ರ ನೀಡಿತ್ತು. ಹೀಗಾಗಿ, ನಿವಾಸಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ನಷ್ಟದ ಬಗ್ಗೆ ಪರಿಶೀಲನಾ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

(185 Old Buildings Facing Collapse Threat Says Revenue Minister R Ashok)

Published On - 3:12 pm, Thu, 30 September 21