ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ-ಮಗು ಸಾವು; ಮೃತದೇಹಗಳನ್ನು ಸ್ವಗ್ರಾಮಕ್ಕೆ ತರಿಸುವಂತೆ ಮೃತರ ಸಂಬಂಧಿಕರಿಂದ ಸಿಎಂಗೆ ಮನವಿ

| Updated By: ವಿವೇಕ ಬಿರಾದಾರ

Updated on: Aug 21, 2023 | 1:06 PM

ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಮೃತರ ಸಂಬಂಧಿಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಅವರು ಎಲ್ಲ ನೆರವು ನೀಡುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದು ಮೃತ ಪ್ರತಿಭಾ ತಾಯಿ ಪ್ರೇಮಾ ಹೇಳಿದರು.

ಅಮೆರಿಕದಲ್ಲಿ ದಾವಣಗೆರೆ ಮೂಲದ ದಂಪತಿ-ಮಗು ಸಾವು; ಮೃತದೇಹಗಳನ್ನು ಸ್ವಗ್ರಾಮಕ್ಕೆ ತರಿಸುವಂತೆ ಮೃತರ ಸಂಬಂಧಿಕರಿಂದ ಸಿಎಂಗೆ ಮನವಿ
ಸಿಎಂ ಭೇಟಿಯಾದ ದಂಪತಿ ಕುಟುಂಬಸ್ಥರು
Follow us on

ಬೆಂಗಳೂರು: ಅಮೆರಿಕದಲ್ಲಿ (America) ದಾವಣಗೆರೆ (Davangere) ಮೂಲದ ದಂಪತಿ ಹಾಗೂ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹಗಳನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ಮೃತರ ಸಂಬಂಧಿಕರು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಲ್ಲಿ ಮನವಿ ಮಾಡಿದ್ದಾರೆ. ಯೋಗೇಶ್ ಹೊನ್ನಾಳ(37), ಪ್ರತಿಭಾ(35), ಯಶ್(6) ಮೃತರು. ಸಿಎಂ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮೃತ ಪ್ರತಿಭಾ ತಾಯಿ ಪ್ರೇಮಾ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಅವರು ಎಲ್ಲ ನೆರವು ನೀಡುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಮಗಳು, ಅಳಿಯ ಐದು ವರ್ಷದ ಹಿಂದೆ ಅಲ್ಲಿ ಹೋಗಿದ್ದರು. ಅಮೆರಿಕಾದಲ್ಲಿ ಅಂತ್ಯಸಂಸ್ಕಾರ ಮಾಡುವ ಮನಸ್ಸಿಲ್ಲ. ನಮ್ಮ ಊರಲ್ಲೇ ಅವರ ಅಂತ್ಯಕ್ರಿಯೆ ಆಗಬೇಕು. ಹೀಗಾಗಿ ಮೃತ ದೇಹ ತರಿಸಿಕೊಳ್ಳಲು ಸಿಎಂಗೆ ಮನವಿ ಮಾಡಿದ್ದೇವೆ ಎಂದರು.

ಮೃತ ಯೋಗೇಶ್ ಸೋದರ ಮಾವ ಜಯಣ್ಣ ಮಾತನಾಡಿ ನಮಗೆ ಶುಕ್ರವಾರ ಮಾಹಿತಿ ಸಿಕ್ಕಿತ್ತು. ಮೃತ ದೇಹ ಇಂದು ಮನೆಯಿಂದ ಆಸ್ಪತ್ರೆಗೆ ಶಿಫ್ಟ್ ಆಗಿರುವ ಮಾಹಿತಿ ಇದೆ. ಶನಿವಾರ, ಭಾನುವಾರ ಅಲ್ಲಿ ರಜೆ ಇರುತ್ತೆ. ಸೋಮವಾರ ಮೃತ ದೇಹ ಕೊಡುತ್ತೇವೆ ಎಂದಿದ್ದಾರೆ. ಹೀಗಾಗಿ ಇಂದು ಸಿಎಂ ಭೇಟಿ ಮಾಡಿ ಮೃತ ದೇಹ ತರಲು ಮನವಿ ಮಾಡಿದ್ದೇವೆ. ಸಿಎಂ ಅಲ್ಲಿನ ಅಂಬಾಸಿಡರ್ ಅವರ ಜೊತೆ ಸಂಪರ್ಕ ಮಾಡಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಗಗನಸಖಿ ಮೇಲೆ ಕೈ ಹಾಕಿ, ನಿನ್ನ ರೇಟ್ ಎಷ್ಟು, ಎಷ್ಟಕ್ಕೆ ಬರುತ್ತೀಯಾ? ಎಂದಿದ್ದ ವಿದೇಶಿ ಪ್ರಜೆಯ ಬಂಧನ

ಸ್ವಾತಂತ್ರ್ಯ ದಿನಾಚರಣೆಯಂದೇ ದಂಪತಿ ಹಾಗೂ ಮಗು ಸಾವು

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ಯೋಗೇಶ್ ಹೊನ್ನಾಳ(37) ಮತ್ತು ಪ್ರತಿಭಾ(35) ದಂಪತಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದು ಕಳೆದ ಐದು ವರ್ಷಗಳಿಂದ ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್​ನಲ್ಲಿ ವಾಸವಾಗಿದ್ದರು. ದಂಪತಿಗೆ ಯಶ್(6) ಎಂಬ ಹೆಸರಿನ ಮುದ್ದಾದ ಮಗು ಇದೆ.

ಆಗಸ್ಟ್​ 15 ರಂದು ರಾತ್ರಿ ಯೋಗೇಶ್ ಮಗ ಯಶ್​ ಹಾಗೂ ಪತ್ನಿ ಪ್ರತಿಭಾಗೆ ಗುಂಡುಹಾರಿಸಿ ಕೊಲೆಮಾಡಿ ನಂತರ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಇನ್ನು ಮೃತದೇಹಗಳನ್ನು ಸ್ವಗ್ರಾಮಕ್ಕೆ ತರಿಸಿಕೊಡುವಂತೆ ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅವರಿಗೆ ಮೃತ ಯೋಗೇಶ್ ತಾಯಿ ಶೋಭಾ ಮನವಿ ಮಾಡಿಕೊಂಡಿದ್ದರು. ಈ ಮನವಿ ಪತ್ರ ಸ್ವೀಕರಿಸಿ ಜಿಲ್ಲಾಧಿಕಾರಿಗಳು ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ರವಾನೆ ಮಾಡಿದ್ದರು.

ಇನ್ನು ಮೃತದೇಹಗಳನ್ನು ಭಾರತಕ್ಕೆ ತರುವ ಜವಾಬ್ದಾರಿ ಅಮೆರಿಕಾದಲ್ಲಿಯೇ ಇರುವ ಮೃತ ಪ್ರತಿಭಾಳ ಸಹೋದರ ಸಂಬಂಧಿ ಸೋಮಶೇಖರ ಎಂಬುವರಿಗೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:55 pm, Mon, 21 August 23