ರಾಜ್ಯಪಾಲರಿಗೆ ನಿಂದನೆ ಆರೋಪ: ಜಮೀರ್, ಕೃಷ್ಣ ಭೈರೇಗೌಡ ಸೇರಿ ಕಾಂಗ್ರೆಸ್​ ನಾಯಕರ ವಿರುದ್ದ ಬಿಜೆಪಿ ದೂರು

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿದ್ದಾರೆ. ಈ ಹಿನ್ನಲೆ ಕಾಂಗ್ರೆಸ್​ ನಾಯಕರು ಕೆರಳಿದ್ದು, ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಇದೀಗ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್​ ನಾಯಕರ ವಿರುದ್ದ ಬಿಜೆಪಿ ಡಿಜಿ&ಐಜಿಪಿ ಅಲೋಕ್ ಮೋಹನ್​ಗೆ ದೂರು ನೀಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ರಾಜ್ಯಪಾಲರಿಗೆ ನಿಂದನೆ ಆರೋಪ: ಜಮೀರ್, ಕೃಷ್ಣ ಭೈರೇಗೌಡ ಸೇರಿ ಕಾಂಗ್ರೆಸ್​ ನಾಯಕರ ವಿರುದ್ದ ಬಿಜೆಪಿ ದೂರು
ರಾಜ್ಯಪಾಲರ ವಿರುದ್ಧ ನಿಂದನೆ; ಕಾಂಗ್ರೆಸ್​ ನಾಯಕರ ವಿರುದ್ದ ಬಿಜೆಪಿ ದೂರು
Edited By: ಕಿರಣ್ ಹನುಮಂತ್​ ಮಾದಾರ್

Updated on: Aug 20, 2024 | 6:47 PM

ಬೆಂಗಳೂರು, ಆ.20: ಪ್ರಾಸಿಕ್ಯೂಷನ್​ ವಿಚಾರವಾಗಿ ರಾಜ್ಯಪಾಲರ ವಿರುದ್ಧ ಟೀಕೆ ಹಿನ್ನೆಲೆ ಸಚಿವರಾದ ಜಮೀರ್, ಕೃಷ್ಣ ಭೈರೇಗೌಡ, ದಿನೇಶ್ ಗುಂಡೂರಾವ್, MLC ಐವನ್ ಡಿಸೋಜಾ ಹಾಗೂ ಶಾಸಕ ನಂಜೇಗೌಡ ವಿರುದ್ಧ ಡಿಜಿ&ಐಜಿಪಿ ಅಲೋಕ್ ಮೋಹನ್​ಗೆ ಬಿಜೆಪಿ (BJP) ನಿಯೋಗ ದೂರು ನೀಡಿದೆ. ನಿನ್ನೆ(ಆ.19) ಪ್ರತಿಭಟನೆ ವೇಳೆ ರಾಜ್ಯಪಾಲರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ದೂರು ಸಲ್ಲಿಸಲಾಗಿದ್ದು, ಜಾತಿ ನಿಂದನೆ, ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಬಿಜೆಪಿ, ‘ಗೌರವಾನ್ವಿತ ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ಹಾಗೂ ಪೂರ್ವ ನಿಯೋಜಿತ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಇಂದು ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು ಎಂದಿದ್ದಾರೆ.

ಬಿಜೆಪಿ ಟ್ವೀಟ್​

ಇದನ್ನೂ ಓದಿ:ಪ್ರಾಸಿಕ್ಯೂಷನ್​: ರಾಜ್ಯಪಾಲರ ವಿರುದ್ಧ ಪ್ರತಿಭಟಿಸಿದ ಕಾರ್ಯಕರ್ತರಿಗೊಂದು ಸಿದ್ದರಾಮಯ್ಯ ಕಿವಿಮಾತು

ಇತ್ತ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಕಾನೂನು ಪ್ರಕೋಷ್ಠದ ಸಂಚಾಲಕರಾದ ವಸಂತ್ ಕುಮಾರ್, ಎಸ್.ಸಿ.ಮೋರ್ಚಾ ರಾಜ್ಯಾಧ್ಯಕ್ಷರಾದ ಸಿಮೆಂಟ್ ಮಂಜು, ಎಸ್.ಟಿ ಮೋರ್ಚಾ ರಾಜ್ಯಾಧ್ಯಕ್ಷರಾದ ಬಂಗಾರು ಹನುಮಂತು, ಮುಖಂಡರಾದ ಶ್ರೀ ಅನಿಲ್ ಕುಮಾರ್ ಸೇರಿದಂತೆ ಕಾನೂನು ಪ್ರಕೋಷ್ಠಕದ ಪ್ರಮುಖರು ಪೊಲೀಸ್ ನಿರೀಕ್ಷಕ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ‘ಸಚಿವರಾದ ಜಮೀರ್ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಐವಾನ್ ಡಿಸೋಜಾ, ಬೆಳ್ತಂಗಡಿ ಮುಖಂಡ ರಕ್ಷಿತ್ ಶಿವರಾಂ ಅವರುಗಳು ಗೌರವಾನ್ವಿತ ರಾಜ್ಯಪಾಲರ ವಿರುದ್ಧ ಬಾಂಗ್ಲಾ ದೇಶದಲ್ಲಿ ಆದ ಹಿಂಸಾಚಾರದ ಸ್ವರೂಪದಲ್ಲಿ ದಾಳಿ ಮಾಡುವುದಾಗಿ ರಾಷ್ಟ್ರ ವಿರೋಧಿ ಹೇಳಿಕೆ ಮತ್ತು ದುರುದ್ದೇಶ ಪೂರ್ವಕವಾದ ಪ್ರಚೋದನಾತ್ಮಕ ಹೇಳಿಕೆ ನೀಡಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲು

ಇನ್ನು ರಾಜ್ಯಪಾಲರ ವಿರುದ್ದ ಟೀಕೆ ಹಿನ್ನೆಲೆ ಸಚಿವ ಜಮೀರ್ ಅಹಮದ್, ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಮತ್ತು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ರಕ್ಷಿತ್ ಶಿವರಾಂ ವಿರುದ್ಧ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಶಾಸಕ ಸಿಮೆಂಟ್ ಮಂಜು ದೂರು ದಾಖಲು ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:39 pm, Tue, 20 August 24

Loading...
Unable to load recommendations.
Follow Us