ACB Raid: ‘ಮಾಯ’ದಂತಹ ಭ್ರಷ್ಟಾಚಾರ: ನಕಲಿ ಬಿಲ್‌ ಸೃಷ್ಟಿ ಪರಿಣತ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಜಿಲ್ಲಾಧ್ಯಕ್ಷನೂ ಹೌದು!

ಕಳೆದ ಏಳು ವರ್ಷಗಳಿಂದ ಒಂದೇ ವಿಭಾಗದಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಮಾಯಣ್ಣ ಹಲವು ಬಾರಿ ವರ್ಗಾವಣೆ ಮಾಡಿದ್ದರೂ ಪ್ರಭಾವ ಬಳಸಿ ವರ್ಗಾವಣೆ ರದ್ದುಪಡಿಸಿಕೊಂಡು ಪಾಲಿಕೆಯಲ್ಲೇ ಉಳಿದಿದ್ದಾರೆ. ಸದ್ಯ ಈಗ ಇವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿದ್ದು ಬೆಳ್ಳಂ ಬೆಳಗ್ಗೆ ಎಸಿಬಿ ಶಾಕ್ ಕೊಟ್ಟಿದೆ.

ACB Raid: ‘ಮಾಯ’ದಂತಹ ಭ್ರಷ್ಟಾಚಾರ: ನಕಲಿ ಬಿಲ್‌ ಸೃಷ್ಟಿ ಪರಿಣತ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಜಿಲ್ಲಾಧ್ಯಕ್ಷನೂ ಹೌದು!
ಮಾಯಣ್ಣನ ಮನೆ ಮೇಲೆ ಎಸಿಬಿ ದಾಳಿ
Edited By: ಆಯೇಷಾ ಬಾನು

Updated on: Nov 24, 2021 | 11:48 AM

ಬೆಂಗಳೂರು: ನಕಲಿ ಬಿಲ್‌ ಸೃಷ್ಟಿಸಿ ಸರಕಾರ ಹಾಗೂ ಪಾಲಿಕೆಗೆ ಕೋಟ್ಯಾಂತರ ರೂ. ನಷ್ಟ ಮಾಡಿರುವ ಆರೋಪ ಬಿಬಿಎಂಪಿ ಪ್ರಥಮ ದರ್ಜೆ ಗುಮಾಸ್ತನಾಗಿರುವ ಎಂ.ಮಾಯಣ್ಣನ ಮೇಲೆ ಕೇಳಿ ಬಂದಿದೆ. ಮಾಜಿ ಕನ್ನಡ ಸಾಹಿತ್ಯ ಪರಿಷತ್‌ ಬೆಂಗಳೂರು ನಗರ ಜಿಲ್ಲಾಧ್ಯಕ್ಷರೂ ಆಗಿರುವ ಮಾಯಣ್ಣ ನಕಲಿ ಸಹಿ, ಬಿಲ್‌, ದಾಖಲೆಗಳನ್ನು ಸೃಷ್ಟಿಸಿ ಸರಕಾರ ಹಾಗೂ ಪಾಲಿಕೆಗೆ ನೂರಾರು ಕೋಟಿ ರೂ. ವಂಚನೆ ಮಾಡಿದ್ದಾರಂತೆ. ಸದ್ಯ ಈಗ ಇವರಿಗೆ ಎಸಿಬಿ ಶಾಕ್ ಕೊಟ್ಟಿದೆ. ಕಳೆದ ಏಳು ವರ್ಷಗಳಿಂದ ಒಂದೇ ವಿಭಾಗದಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಮಾಯಣ್ಣ ಹಲವು ಬಾರಿ ವರ್ಗಾವಣೆ ಮಾಡಿದ್ದರೂ ಪ್ರಭಾವ ಬಳಸಿ ವರ್ಗಾವಣೆ ರದ್ದುಪಡಿಸಿಕೊಂಡು ಪಾಲಿಕೆಯಲ್ಲೇ ಉಳಿದಿದ್ದಾರೆ. ಸದ್ಯ ಈಗ ಇವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿದ್ದು ಬೆಳ್ಳಂ ಬೆಳಗ್ಗೆ ಎಸಿಬಿ ಶಾಕ್ ಕೊಟ್ಟಿದೆ. ಡಿವೈಎಸ್ ಪಿ ರವಿಕುಮಾರ್ ನೇತೃತ್ವದಲ್ಲಿ ಮಾಯಣ್ಣ ಮನೆ‌ ಮೇಲೆ ಎಸಿಬಿ ದಾಳಿ ನಡೆದಿದೆ.

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆಸಿದ್ದು ಅಧಿಕಾರಿಗಳು, ಸಿಬ್ಬಂದಿ ಸೇರಿ ನಾಲ್ವರ ಮನೆ ಮೇಲೆ ರೇಡ್ ಆಗಿದೆ. ಸಕಾಲ ಕೆಎಎಸ್ ಅಧಿಕಾರಿ ನಾಗರಾಜ್, ಯಲಹಂಕ ಸರ್ಕಾರಿ ಆಸ್ಪತ್ರೆ, ಫಿಸಿಯೋಥೆರಪಿಸ್ಟ್ ರಾಜಶೇಖರ, ಬಿಬಿಎಂಪಿ ಸಿಬ್ಬಂದಿ ಮಾಯಣ್ಣ, ಬಿಬಿಎಂಪಿ ಸಿಬ್ಬಂದಿ ಬಾಗಲಗುಂಟೆಯ ಗಿರಿ ಮನೆಗಳ ಮೇಲೆ ಎಸಿಬಿ ರೇಡ್ ಆಗಿದೆ. ಒಟ್ಟು ನಾಲ್ವರ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಾಯಣ್ಣ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ, ದಾಖಲೆ ಪತ್ತೆ
ಇನ್ನು ಮಾಯಣ್ಣ ಮನೆ ಮೇಲೆ ದಾಳಿ ವೇಳೆ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿದೆ. ಮಾಯಣ್ಣ ಅಕ್ರಮ ಆಸ್ತಿ ಗಳಿಕೆ ಮಾಡಿರುವ ಬಗ್ಗೆ ದಾಖಲೆಯಿಲ್ಲದ ಹಣ, ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ. ಹೀಗಾಗಿ ಮಾಯಣ್ಣ ಮನೆಗೆ ಅಕ್ಕಸಾಲಿಗರನ್ನು ಕರೆತಂದು ಪರಿಶೀಲನೆ ನಡೆಸಲಾಗುತ್ತಿದೆ. ಸದ್ಯ ಅರ್ಧ ಕೆಜಿ ಚಿನ್ನಾಭರಣ ಮತ್ತು ಸುಮಾರು ಒಂದೂವರೆ ಕೆಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಮಾಯಣ್ಣ ಆಪ್ತರ ಮನೆ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೆಬ್ಬಾಳ ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡ್ತಿರುವ ನಂದಿನಿ‌ ಲೇಔಟ್‌ನಲ್ಲಿರುವ ಉಮಾದೇವಿ ಮನೆ ಮೇಲೆ ದಾಳಿ ನಡೆದಿದೆ.

ಈಗಾಗಲೇ ಮಾಯಣ್ಣಗೆ ಸಂಬಂಧಿಸಿದ ಕಚೇರಿಗಳಲ್ಲಿ ಶೋಧ ಕಾರ್ಯ ಶುರುವಾಗಿದ್ದು ಚಾಮರಾಜಪೇಟೆಯಲ್ಲಿರುವ ಮಾಯಣ್ಣನ ಎರಡು ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಗುಮಾಸ್ತನಾಗಿ ಖಾಸಗಿ ಕಚೇರಿಗಳನ್ನ ಮಾಯಣ್ಣ ಹೊಂದಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಚಾಮರಾಜಪೇಟೆಯ ಕಚೇರಿಯಲ್ಲಿ ಮಹತ್ವದ ದಾಖಲೆಗಳನ್ನ ಇಟ್ಟಿರುವ ಮಾಯಣ್ಣ ಈಗಾಗಲೇ ಹಲವು ಎಫ್​ಐಆರ್​ಗಳನ್ನ ಎದುರಿಸಿದ್ದಾರೆ.

ಬಿಬಿಎಂಪಿಗೆ 135 ಕೋಟಿ ನಷ್ಟವುಂಟು ಮಾಡಿದ್ದ ಮಾಯಣ್ಣ
ಬಿಬಿಎಂಪಿಗೆ ಹಾಗೂ ಸರ್ಕಾರಕ್ಕೆ ಮಾಯಣ್ಣ 135 ಕೋಟಿ ನಷ್ಟವುಂಟು ಮಾಡಿದ್ದಾರೆ. ಹೀಗಾಗಿ 2017ರಲ್ಲಿ ಮಾಯಣ್ಣ ವಿರುದ್ಧ ಶಿಸ್ತುಕ್ರಮಕ್ಕೆ ನಗರಾಭಿವೃದ್ಧಿ ಇಲಾಖೆ ಆದೇಶ ಮಾಡಿತ್ತು. ಹಾಗೂ ನಷ್ಟವನ್ನ ಮಾಯಣ್ಣನಿಂದ ವಸೂಲಿಗೂ ಆದೇಶ ಮಾಡಿತ್ತು. ಆದರೆ ಈವರೆಗೂ ಮಾಯಣ್ಣ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಇದೀಗ ಮಾಯಣ್ಣ ಮನೆ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ಆಗಿದೆ.

ಎಸಿಬಿ ದಾಳಿಯ ಬಗ್ಗೆ ಮಾಯಣ್ಣನಿಗೆ ಮೊದಲೇ ಮಾಹಿತಿ
ಎಸಿಬಿ ಸೇರಿದಂತೆ ಇತರೆ ದಾಳಿಗಳ ಬಗ್ಗೆ‌ ಮೊದಲೇ ಮಾಯಣ್ಣನಿಗೆ ಮಾಹಿತಿ ಇತ್ತು. ಹೀಗಾಗಿ ಕಳೆದ ಹಲವು ವರ್ಷಗಳಿಂದ ಅಲರ್ಟ್ ಆಗಿದ್ದ. ತಮ್ಮ ಆಪ್ತರ ಹೆಸರಿನಲ್ಲಿ ಆಸ್ತಿ ನೋಂದಣಿ ಮಾಡಿಸಿದ್ದ. ಪತ್ನಿ ಹೆಸರಲ್ಲಿ, ಅತ್ತೆ-ಮಾವನ ಹೆಸರಲ್ಲಿ, ಸಂಪೂರ್ಣ ಆಸ್ತಿ ಆಪ್ತರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದ.

ಮಾಯಣ್ಣನ ಆಸ್ತಿ ಎಲ್ಲೆಲ್ಲಿ ಇದೆ?
ಜೋಸೆಫ್ ಎಂಬಾತ ಮಾಯಣ್ಣನ ಆಸ್ತಿ ಎಲ್ಲೆಲ್ಲಿ ಇದೆ ಎಷ್ಟಿದೆ ಎಂಬ ಬಗ್ಗೆ ಎಸಿಬಿಗೆ ದೂರು ನೀಡಿದ್ದ. ಅದರ ವಿವರ ಇಲ್ಲಿದೆ. ಮಾಯಣ್ಣ ಪತ್ನಿ ಉಮಾ ಅವರ ಹೆಸರಿನಲ್ಲಿ ಉಲ್ಲಾಳದಲ್ಲಿ 4 ಹಂತಸ್ತಿನ ಕಟ್ಟಡ, ಮಾಯಣ್ಣ ಹೆಸರಲ್ಲಿ ವೀರಭ್ರನಗರದಲ್ಲಿ ನಾಲ್ಕು ಅಂತಸ್ತಿನ ಬಂಗಲೆ, ಹಾರ್ತಿಕ್ ಗೌಡ ಎಂಬ ಗುತ್ತಿಗೆ ದಾರರ ಹೆಸರಲ್ಲಿ ಬೇನಾಮಿ ಆಸ್ತಿ, ಮಾಯಣ್ಣ ಹೆಸರಿನಲ್ಲಿ ಕೆಂಗೇರಿ ಬಳಿ 2 ನಿವೇಶನ, ಮಾಯಣ್ಣ ಹೆಸರಲ್ಲಿ ಚಾಮರಾಪೇಟೆಯಲ್ಲಿ ಕಚೇರಿ, ಬಿಬಿಎಂಪಿ ಕಚೇರಿಯಿಂದ ಟೇಬಲ್, ಜೆರಾಕ್ಸ್ ಮಿಷನ್ ಪಡೆದು ತಮ್ಮ ಮನೆಗೆ ತೆಗೆದುಕೊಂಡು ಹೋಗಿರುವ ಬಗ್ಗೆ ದೂರು ನೀಡಿದ್ದ. ಇನ್ನು ಮಾಯಣ್ಣ ಬೆಂಗಳೂರಿನ country club ಶ್ರೀನಗರದಲ್ಲಿ ಸದಸ್ಯನಾಗಿದ್ದ. ಬೇನಾಮಿ ಹೆಸರಲ್ಲಿ ಒಂದು ಇನೋವಾ ಕ್ರಿಸ್ಟಾ, ಒಂದು ಬೆನ್ಸ್, ಹೊಂದಿದ್ದ. ಪ್ರಸಿದ್ಧ ದೇವಸ್ಥಾನಗಳಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದ ಎಂದು ಜೋಸೆಫ್ ಕೊಟ್ಡ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ACB massive raid: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ: ಬೆಂಗಳೂರು ಸೇರಿದಂತೆ ರಾಜ್ಯದ 60 ಕಡೆ ಎಸಿಬಿ ದಾಳಿ

Published On - 8:59 am, Wed, 24 November 21

Web contact

TV9 Kannada

Read More
Follow Us