ಬೆಂಗಳೂರು ಪೋರ್ಟ್ ಬ್ಲೇರ್ ಮಧ್ಯೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಡೈರೆಕ್ಟ್ ಫ್ಲೈಟ್: ಇಲ್ಲಿದೆ ವೇಳಾಪಟ್ಟಿ

Bengaluru Port Blair Flight: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೆಂಗಳೂರು ಮತ್ತು ಪೋರ್ಟ್ ಬ್ಲೇರ್ ನಡುವೆ ದೈನಂದಿನ ನೇರ ವಿಮಾನ ಸೇವೆಯನ್ನು ಆರಂಭಿಸಿದೆ. ಇದರಿಂದ ಕರ್ನಾಟಕದ ಪ್ರವಾಸಿಗರಿಗೆ ಅಂಡಮಾನ್ ದ್ವೀಪಗಳಿಗೆ ಪ್ರಯಾಣಿಸಲು ಅನುಕೂಲವಾಗಲಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪೋರ್ಟ್ ಬ್ಲೇರ್ ವಿಮಾನದ ವೇಳಾಪಟ್ಟಿ ಹಾಗೂ ಇತರ ಮಾಹಿತಿ ಇಲ್ಲಿದೆ.

ಬೆಂಗಳೂರು ಪೋರ್ಟ್ ಬ್ಲೇರ್ ಮಧ್ಯೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಡೈರೆಕ್ಟ್ ಫ್ಲೈಟ್: ಇಲ್ಲಿದೆ ವೇಳಾಪಟ್ಟಿ
ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ (ಸಾಂದರ್ಭಿಕ ಚಿತ್ರ)
Image Credit source: Getty Images

Updated on: Dec 02, 2024 | 8:06 AM

ಬೆಂಗಳೂರು, ಡಿಸೆಂಬರ್ 2: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಭಾನುವಾರ ಬೆಂಗಳೂರು ಮತ್ತು ಶ್ರೀ ವಿಜಯ ಪುರಂ (ಪೋರ್ಟ್ ಬ್ಲೇರ್) ನಡುವೆ ದೈನಂದಿನ ನೇರ ವಿಮಾನಯಾನ ಸೇವೆಯನ್ನು ಪ್ರಾರಂಭಿಸಿದೆ. ಮೊದಲ ವಿಮಾನವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಬೆಳಿಗ್ಗೆ 10:50 ಕ್ಕೆ ಪ್ರಯಾಣ ಬೆಳೆಸಿದೆ.

ಬೆಂಗಳೂರಿನಿಂದ ಬೆಳಗ್ಗೆ 10:50ಕ್ಕೆ ಹೊರಡುವ ವಿಮಾನವು ಮಧ್ಯಾಹ್ನ 1:15ಕ್ಕೆ ಶ್ರೀ ವಿಜಯ ಪುರಂನಲ್ಲಿ ಲ್ಯಾಂಡ್ ಆಗಲಿದೆ. ಮಧ್ಯಾಹ್ನ 1:50 ಕ್ಕೆ ಶ್ರೀ ವಿಜಯ ಪುರಂನಿಂದ ಟೇಕ್ ಆಫ್ ಆಗುವ ವಿಮಾನ, ಸಂಜೆ 4:20 ಕ್ಕೆ ಬೆಂಗಳೂರು ತಲುಪಲಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಇದರೊಂದಿಗೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಬೆಂಗಳೂರಿನಿಂದ ಕಾರ್ಯಾಚರಣೆಯನ್ನು ಮತ್ತಷ್ಟು ವಿಸ್ತರಿಸಿದಂತಾಗಿದೆ. ಸಂಸ್ಥೆಯು ನಗರದಿಂದ 374 ವೀಕ್ಲಿ ಫ್ಲೈಟ್​​ಗಳನ್ನು ನಿರ್ವಹಿಸುತ್ತಿದೆ. 25 ದೇಶೀಯ ಮತ್ತು ಪಶ್ಚಿಮ ಏಷ್ಯಾದ ಪ್ರದೇಶಗಳಾದ ಅಬುಧಾಬಿ ಮತ್ತು ದಮ್ಮಾಮ್ ಅನ್ನು ಸಂಪರ್ಕಿಸುವ 2 ವಿಮಾನಯಾನ ಸೇವೆಯನ್ನ ಸಂಸ್ಥೆ ಒದಗಿಸುತ್ತಿದೆ.

ಬೆಂಗಳೂರು – ಚೆನ್ನೈ ಮಧ್ಯೆ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಡೈರೆಕ್ಟ್ ಫ್ಲೈಟ್

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಯಾನ ಸಂಸ್ಥೆಯು ಜನವರಿ 1 ರಿಂದ ಬೆಂಗಳೂರು ಹಾಗೂ ಚೆನ್ನೈಗೆ ಮಧ್ಯೆ ನೇರ ವಿಮಾನ ಸೇವೆ ಒದಗಿಸಲಿದೆ.

ಪ್ರವಾಸಿ ತಾಣ ಅಂಡಮಾನ್​ಗೆ ಪ್ರಯಾಣ ಸುಲಭ

ದಕ್ಷಿಣ ಅಂಡಮಾನ್ ದ್ವೀಪದಲ್ಲಿರುವ ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳ ರಾಜಧಾನಿಯಾಗಿದೆ. ಇದು ಬಂಗಾಳ ಕೊಲ್ಲಿಯಲ್ಲಿರುವ ಭಾರತೀಯ ಪ್ರದೇಶವಾಗಿದೆ. ದ್ವೀಪದ ಸಮುದ್ರ ತೀರದಲ್ಲಿರುವ ಸೆಲ್ಯುಲಾರ್ ಜೈಲ್ ಬ್ರಿಟಿಷ್ ವಸಾಹತು ಕಾಲದ ಕುರುಹುಗಳನ್ನು ಹೊಂದಿದ್ದು, ಭಾರತೀಯ ಸ್ವಾತಂತ್ರ್ಯ ಹೋರಾಟಗಾರರನ್ನು ಅಲ್ಲಿ ಇರಿಸಲಾಗುತ್ತಿತ್ತು. ಅಲ್ಲಿ ನೀಡುತ್ತಿದ್ದ ಕಾಲಾ ಪಾನಿ ಅಥವಾ ಕರಿನೀರ ಶಿಕ್ಷೆ ಬಗ್ಗೆ ಇಂದಿಗೂ ಚರ್ಚೆಯಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರನ್ನೂ ಇದೇ ಜೈಲಿನಲ್ಲಿ ಇರಿಸಲಾಗಿತ್ತು. ಸದ್ಯ ಸ್ಮಾರಕವಾಗಿ ಪರಿವರ್ತನೆ ಮಾಡಲಾಗಿದೆ. ಇದಲ್ಲದೆ ಇನ್ನೂ ಅನೇಕ ಪ್ರವಾಸಿ ತಾಣಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಲ್ಲಿವೆ.

ಇದನ್ನೂ ಓದಿ: ಖಾಸಗಿ ಕಂಪನಿಗಳಿಗೆ ಕೆ-ರೈಡ್ ಸೆಡ್ಡು: ಸಬ್ ಅರ್ಬನ್ ರೈಲ್ವೆ ಕೋಚ್ ನಿರ್ಮಾಣಕ್ಕೆ ಸರ್ಕಾರದ ಗ್ರೀನ್ ಸಿಗ್ನಲ್

ಕರ್ನಾಟಕದಿಂದಲೂ ಸಾವಿರಾರು ಪ್ರವಾಸಿಗರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹಗಳಿಗೆ ಪ್ರವಾಸ ತೆರಳುತ್ತಾರೆ. ಇದೀಗ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ನೇರ ವಿಮಾನಯಾನ ಸೇವೆ ಆರಂಭಿಸಿರುವುದರಿಂದ ರಾಜ್ಯದ ಪ್ರವಾಸಿಗರಿಗೆ ಪ್ರಯೋಜನವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us