Air India: ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಆರೋಪಿಗಾಗಿ ದೆಹಲಿ ಪೊಲೀಸರಿಂದ ಬೆಂಗಳೂರಿನಲ್ಲೂ ಶೋಧ, ಸಹೋದರಿಯ ವಿಚಾರಣೆ

| Updated By: ನಯನಾ ರಾಜೀವ್

Updated on: Jan 06, 2023 | 5:45 PM

ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಆರೋಪ ಎದುರಿಸುತ್ತಿರುವ ಶಂಕರ್ ಮಿಶ್ರಾ ಸಹೋದರಿಯನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Air India: ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ ಆರೋಪಿಗಾಗಿ ದೆಹಲಿ ಪೊಲೀಸರಿಂದ ಬೆಂಗಳೂರಿನಲ್ಲೂ ಶೋಧ, ಸಹೋದರಿಯ ವಿಚಾರಣೆ
ಸಾಂದರ್ಭಿಕ ಚಿತ್ರ: ದೆಹಲಿ ಪೊಲೀಸ್
Image Credit source: NDTV
Follow us on

ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಆರೋಪ ಎದುರಿಸುತ್ತಿರುವ ಶಂಕರ್ ಮಿಶ್ರಾ ಸಹೋದರಿಯನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಆರು ವಾರಗಳ ಹಿಂದೆ ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಶಂಕರ್ ಮಿಶ್ರಾ ತಲೆಮರೆಸಿಕೊಂಡಿದ್ದು, ದೆಹಲಿ ಪೊಲೀಸರ ಎರಡು ತಂಡಗಳು ಆತನನ್ನು ಹಿಂಬಾಲಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಮಿಶ್ರಾ  ಪತ್ತೆಗಾಗಿ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದಾರೆ ಮತ್ತು ಅವರಲ್ಲಿ ತಂಡ   ಬೆಂಗಳೂರಿನಲ್ಲಿ  ಬೀಡುಬಿಟ್ಟಿದೆ. ಮಿಶ್ರಾ ಸಹೋದರಿ ಬೆಂಗಳೂರಿನಲ್ಲಿಯೇ ವಾಸಿಸುತ್ತಿರುವ ಕಾರಣ ಮಿಶ್ರಾ ಬೆಂಗಳೂರಿಗೆ ಬಂದಿರಬಹುದಾ ಅಥವಾ ಮಿಶ್ರಾ ಎಲ್ಲಿದ್ದಾರೆ ಎನ್ನುವ ಮಾಹಿತಿ ಅವರ ಬಳಿ ಇದೆಯಾ ಎಂದು ವಿಚಾರಣೆ ನಡೆಸಲಾತ್ತಿದೆ.

ಇನ್ನೊಂದು ಪೊಲೀಸ್  ತಂಡವನ್ನು ಶಂಕರ್ ಮಿಶ್ರಾ ಅವರ ತಂದೆ ವಾಸಿಸುತ್ತಿರುವ ಮುಂಬೈಗೆ ಕಳುಹಿಸಲಾಗಿದೆ.  ಆತ ದೇಶ ಬಿಟ್ಟು ಹೋಗದಂತೆ ಲುಕ್​ಔಟ್ ನೋಟಿಸ್ ಹೊರಡಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ತನಿಖಾಧಿಕಾರಿಗಳು ಆತ ಇರುವ ಸ್ಥಳದ ಬಗ್ಗೆ ಕೆಲವು ಸುಳಿವುಗಳನ್ನು ಹೊಂದಿದ್ದು, ಅದರ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಮಿಶ್ರಾಗೆ  30 ದಿನಗಳ ಕಾಲ ಏರ್​ಇಂಡಿಯಾ ವಿಮಾನದಲ್ಲಿ ಪ್ರಯಾಣಿಸದಂತೆ ನಿರ್ಬಂಧ ಹೇರಲಾಗಿತ್ತು, ಆರೋಪಿಯನ್ನು ಮುಂಬೈ ನಿವಾಸಿ ಎಸ್.ಮಿಶ್ರಾ ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷ ನವೆಂಬರ್ 26 ರಂದು ಅಮೆರಿಕದ ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನದಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದ.  ಆರೋಪಿಯನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ನಿವಾಸ ಮುಂಬೈ ಆಗಿದೆ, ಆದರೆ ಆತನ ಲೋಕೇಶನ್ ಇತರ ರಾಜ್ಯಗಳನ್ನು ತೋರಿಸುತ್ತಿದೆ. ಪೊಲೀಸರು ಅಲ್ಲಿಗೆ ತಲುಪಿದ್ದು, ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಏರ್ ಇಂಡಿಯಾ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.

ಈವರೆಗೂ ವಿಮಾನದಲ್ಲಿದ್ದ ನಾಲ್ವರು ಸಿಬ್ಬಂದಿ ಮಾತ್ರ ವಿಚಾರಣೆಗೆ ಸಹಕರಿಸಿದ್ದಾರೆ. ಇಂದು ಇತರರ ವಿಚಾರಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಗುರುವಾರ ಲುಕ್‌ಔಟ್‌ ನೋಟಿಸ್‌ ಹೊರಡಿಸುವಂತೆ ಕೋರಿ ವಲಸೆ ಅಧಿಕಾರಿಗಳಿಗೆ ದೆಹಲಿ ಪೊಲೀಸರು ಪತ್ರ ಬರೆದಿದ್ದರು.

 

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 3:46 pm, Fri, 6 January 23