ಉದ್ಯೋಗ ನೇಮಕಾತಿಗೂ AI ಸಂಕಷ್ಟ! ಕಾಪಿ ಪೇಸ್ಟ್ ಅರ್ಜಿಗಳಿಂದ ರಿಕ್ರೂಟರ್​ಗೆ ತಲೆನೋವು

ಕೃತಕ ಬುದ್ಧಿಮತ್ತೆಯಿಂದ ನೇಮಕಾತಿ ಪ್ರಕ್ರಿಯೆ ಕಷ್ಟವಾಗುತ್ತಿದೆ ಎಂದು ಎಕ್ಸ್ ಪೋಸ್ಟ್ ಮಾಡಿರುವ ಬೆಂಗಳೂರಿನ ಟೇಕ್ ಯು ಫಾರ್ವರ್ಡ್ ಸಂಸ್ಥಾಪಕ ರಾಜ್ ವಿಕ್ರಮಾದಿತ್ಯ, ಎಐ ತಯಾರಿಸಿದ ಅರ್ಜಿಗಳು ಗುಣಮಟ್ಟವನ್ನು ಕಡಿಮೆ ಮಾಡುತ್ತಿವೆ ಎಂದಿದ್ದಾರೆ. ಅಭ್ಯರ್ಥಿಗಳು ವೈಯಕ್ತಿಕ ಪರಿಶ್ರಮ, ಸಂಶೋಧನೆ ಮತ್ತು ಆಸಕ್ತಿ ತೋರಿಸದೆ ಕೇವಲ ಕಾಪಿ ಪೇಸ್ಟ್ ಮಾಡಿದ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಇದರಿಂದ ಆಯ್ಕೆ ಪ್ರಕ್ರಿಯೆಯೂ ತಲೆನೋವಾಗಿ ಪರಿಣಮಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಉದ್ಯೋಗ ನೇಮಕಾತಿಗೂ AI ಸಂಕಷ್ಟ! ಕಾಪಿ ಪೇಸ್ಟ್ ಅರ್ಜಿಗಳಿಂದ ರಿಕ್ರೂಟರ್​ಗೆ ತಲೆನೋವು
ಉದ್ಯೋಗ ನೇಮಕಾತಿಗೂ AI ಸಂಕಷ್ಟ! ಕಾಪಿ ಪೇಸ್ಟ್ ಅರ್ಜಿಗಳಿಂದ ರಿಕ್ರೂಟರ್​ಗೆ ತಲೆನೋವು

Updated on: Mar 21, 2026 | 9:53 AM

ಬೆಂಗಳೂರು, ಮಾರ್ಚ್​ 21: ಇಂದಿನ ತಂತ್ರಜ್ಞಾನದ ಯುಗದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಎಐ (AI) ಅಂದರೆ ಕೃತಕ ಬುದ್ಧಿಮತ್ತೆ ಕಂಟಕ ತರಬಹುದು ಎಂಬ ಆತಂಕದ ಜೊತೆಗೆ ಉದ್ಯೋಗಿಗಳ ಕೆಲಸವನ್ನೂ ಕಸಿದುಕೊಳ್ಳಬಹುದೆಂಬ ಭಯ ಈಗಾಗಲೇ ಸೃಷ್ಟಿಯಾಗಿದೆ. ಇದರ ಜೊತೆಗೆ ಎಐನಿಂದ ನೇಮಕಾತಿ ಪ್ರಕ್ರಿಯೆಯೂ ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ ಎಂಬ ಅಭಿಪ್ರಾಯಗಳು ಹರಿದಾಡಿದ್ದು, ಈ ಬಗ್ಗೆ ಬೆಂಗಳೂರು ಮೂಲದ ಟೇಕ್ ಯು ಫಾರ್ವರ್ಡ್​ ಸಂಸ್ಥೆಯ ಸಂಸ್ಥಾಪಕ ರಾಜ್ ವಿಕ್ರಮಾದಿತ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಕಾಪಿ ಪೇಸ್ಟ್ ಅರ್ಜಿಗಳೇ ಹೆಚ್ಚು ಎಂದ ಸಂಸ್ಥಾಪಕ

ಇತ್ತೀಚೆಗೆ ಯೂಸರ್ ಎಕ್ಸ್‌ಪೀರಿಯನ್ಸ್ (UX) ಹುದ್ದೆಗೆ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಉದಾಹರಿಸಿ ಮಾತನಾಡಿದ ಅವರು, ಹೆಚ್ಚಿನ ಅಭ್ಯರ್ಥಿಗಳ ಅರ್ಜಿಗಳು AI ಮೂಲಕ ತಯಾರಿಸಲಾಗಿವೆ. ಅಲ್ಲದೆ ಅವುಗಳು ಕೇವಲ ತಾಂತ್ರಿಕತೆಯನ್ನು ಹೊಂದಿದ್ದು, ಅರ್ಜಿಯನ್ನು ಉತ್ತಮಗೊಳಿಸುವ ಕನಿಷ್ಠ ಪ್ರಯತ್ನವೂ ಕಂಡುಬಂದಿಲ್ಲವೆಂದು ಬರೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಗುಣಮಟ್ಟದ ಅಭ್ಯರ್ಥಿಗಳು ಕಡಿಮೆಯಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

35 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ ಬಳಿಕ ನಡೆದ ಮೊದಲ ಹಂತದ ಮೌಲ್ಯಮಾಪನದಲ್ಲಿ ಬಹುತೇಕರು ಕಾಪಿ-ಪೇಸ್ಟ್ ಅಥವಾ AI ಆಧಾರಿತ ಉತ್ತರಗಳನ್ನು ಸಲ್ಲಿಸಿದ್ದರೆಂದು ಅವರು ಹೇಳಿದ್ದಾರೆ. ಸಂಶೋಧನೆ, ವೈಯಕ್ತಿಕ ಅಭಿಪ್ರಾಯ ಅಥವಾ ಕೆಲಸದ ಮೇಲೆ ಆಸಕ್ತಿ ತೋರಿದವರ ಸಂಖ್ಯೆ ಕಡಿಮೆ ಇರುವುದು ಸ್ಪಷ್ಟವಾಗಿ ಗೋಚರಿಸಿತು ಎಂದು ತಿಳಿಸಿದ್ದಾರೆ. ಈ 35 ಮಂದಿಯಲ್ಲಿ ಕೇವಲ ಒಬ್ಬ ಅಭ್ಯರ್ಥಿ ಮಾತ್ರ ಪ್ರಾಮಾಣಿಕ ಪ್ರಯತ್ನ ತೋರಿದ್ದು, ಆತನನ್ನು ನೇಮಕ ಮಾಡಲಾಗಿದೆ. ಉಳಿದವರು ಮೂಲಭೂತ ಸಿದ್ಧತೆಯನ್ನೂ ತೋರಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಪುಸ್ತಕ ಅನುವಾದಕ್ಕೂ ಬಂತು AI: ತಂತ್ರಜ್ಞಾನದ ಮೂಲಕ ಭಾಷಾಂತರಗೊಂಡ ಮೊದಲ ಬುಕ್​​ ಮಾ.15ರಂದು ಬಿಡುಗಡೆ

ವಿಕ್ರಮಾದಿತ್ಯ ಮಾಡಿದ ಎಕ್ಸ್ ಪೋಸ್ಟ್ ಇಲ್ಲಿದೆ

ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, AI ಉಪಕರಣಗಳಿಂದ ಸಾಮಾನ್ಯ, ಒಂದೇ ಮಾದರಿಯ ಅರ್ಜಿಗಳು ಹೆಚ್ಚಾಗಿವೆ ಎಂದು ಹಲವರು ಒಪ್ಪಿಕೊಂಡಿದ್ದಾರೆ. ನಿಜವಾದ ಸಾಮರ್ಥ್ಯ ತೋರಿಸಲು ಇಂದಿನ ದಿನಗಳಲ್ಲಿ ಆಳವಾದ ಪರಿಶ್ರಮ ಮತ್ತು ವೈಯಕ್ತಿಕತೆ ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Follow Us