AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪ ಕೈಯಲ್ಲಿದ್ದ ಹೂಗುಚ್ಛ ವಿಜಯೇಂದ್ರನಿಗೆ ನೀಡುವಂತೆ ಹೇಳಿದ ಶಾ; ಬಿಎಸ್​ವೈ ಪುತ್ರನಿಗೆ ಆದ್ಯತೆ

ಯಡಿಯೂರಪ್ಪ ಮನೆಗೆ ಬಂದ ಅಮಿತ್ ಶಾ ಅವರು ಯಡಿಯೂರಪ್ಪ ತಮ್ಮನ್ನು ಸ್ವಾಗತಿಸಲು ತಂದ ಹೂಗುಚ್ಛವನ್ನು ಅವರ ಪುತ್ರ ವಿಜಯೇಂದ್ರನಿಗೆ ನೀಡುವಂತೆ ಹೇಳಿ ವಿಜಯೇಂದ್ರನ ಬೆನ್ನು ತಟ್ಟಿದ್ದಾರೆ.

ಆಯೇಷಾ ಬಾನು
|

Updated on:Mar 24, 2023 | 12:07 PM

Share

ಬೆಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆಗೆ(Karnataka Assembly Elections 2023) ಕೌಂಟ್ ಡೌನ್ ಶುರುವಾಗಿದೆ. ಹೀಗಾಗಿ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸಿವೆ. ಸದ್ಯ ಗುರುವಾರ (ಮಾರ್ಚ್ 23) ರಾತ್ರಿ ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit shah) ಅವರು ಇಂದು (ಮಾರ್ಚ್ 24) ಬೆಳಗ್ಗೆ ಬಿಎಸ್ ಯಡಿಯೂರಪ್ಪನವರ(BS Yediyurappa) ನಿವಾಸಕ್ಕೆ ಭೇಟಿ ನೀಡಿ ಉಪಹಾರ ಸೇವಿಸಿದ್ದಾರೆ. ಆದ್ರೆ ಇದಕ್ಕೂ ಮುನ್ನ ಕುಮಾರಕೃಪಾ ರಸ್ತೆಯಲ್ಲಿರುವ ಯಡಿಯೂರಪ್ಪ ಮನೆಗೆ ಬಂದ ಅಮಿತ್ ಶಾ ಅವರು ಯಡಿಯೂರಪ್ಪ ತಮ್ಮನ್ನು ಸ್ವಾಗತಿಸಲು ತಂದ ಹೂಗುಚ್ಛವನ್ನು ಅವರ ಪುತ್ರ ವಿಜಯೇಂದ್ರನಿಗೆ(BY Vijayendra) ನೀಡುವಂತೆ ಹೇಳಿ ವಿಜಯೇಂದ್ರರ ಬೆನ್ನು ತಟ್ಟಿದ್ದಾರೆ. ಈ ದೃಶ್ಯಗಳು ವಿಶೇಷವಾಗಿದ್ದವು.

ಬೆಂಗಳೂರಿನ ರೇಸ್​ ಕೋರ್ಸ್​ ರಸ್ತೆಯ ಹೋಟೆಲ್​ನಲ್ಲಿ ತಂಗಿದ್ದ ಅಮಿತ್ ಶಾ ಬೆಳಗ್ಗೆ ಬಿಎಸ್ ಯಡಿಯೂರಪ್ಪನವರ ಮನೆಗೆ ತೆರಳಿದರು. ಅಮಿತ್ ಶಾ ಸ್ವಾಗತಿಸಲು ಯಡಿಯೂರಪ್ಪನವರು ಹೂಗುಚ್ಛ ಹಿಡಿದು ಕಾಯುತ್ತಿದ್ದರು. ಈ ವೇಳೆ ಕಾರಿನಿಂದ ಇಳಿದ ಅಮಿತ್ ಶಾರಿಗೆ ಸ್ವಾಗತಿಸಲು ಮುಂದಾದ ಬಿಎಸ್​ವೈಗೆ ನಗುತ್ತಲೇ ನಿಮ್ಮ ಕೈಯಲ್ಲಿರುವ ಹೂಗುಚ್ಛವನ್ನು ನಿಮ್ಮ ಮಗನ ಕೈಗೆ ನೀಡಿ ಎಂದರು. ಇದು ಅರ್ಥ ಆಗದ ಬಿಎಸ್​ವೈ ತಬ್ಬಿಬ್ಬಾದರು. ಬಳಿಕ ಮತ್ತೆ ಅಮಿತ್ ಶಾ ಕೈ ತೋರಿಸಿ ಹೂಗುಚ್ಛವನ್ನು ವಿಜಯೇಂದ್ರನಿಗೆ ಕೊಡುವಂತೆ ಹೇಳಿದರು. ಆಗ ಯಡಿಯೂರಪ್ಪನವರು ತಮ್ಮ ಕೈಯ್ಯಲ್ಲಿದ್ದ ಗುಲಾಬಿ ಹೂಗುಚ್ಛವನ್ನು ವಿಜಯೇಂದ್ರ ಅವರಿಗೆ ಕೊಟ್ಟರು.

ಇದನ್ನೂ ಓದಿ: ಯಡಿಯೂರಪ್ಪಗಿಂತ ವಿಜಯೇಂದ್ರಗೆ ಮೊದಲ ಪ್ರಾಮುಖ್ಯತೆ ಕೊಟ್ಟ ಅಮಿತ್‌ ಶಾ, ಬಿಎಸ್​ವೈ ನಿವಾಸದಲ್ಲಿ ‘ಕೇಸರಿ ಬಾತ್’

ಆಗ, ವಿಜಯೇಂದ್ರ ಅವರು ಹೂಗುಚ್ಛವನ್ನು ಪಡೆದು ಅಮಿತ್​ ಶಾಗೆ ನೀಡಲು ಮುದಾದ್ರು. ಆಗ ಶಾ, ವಿಜಯೇಂದ್ರ ಅವರ ಬೆನ್ನು ತಟ್ಟಿದರು. ಬಳಿಕ ಬಿಎಸ್​ವೈ ಪ್ರತ್ಯೇಕವಾಗಿ ಹೂಗುಚ್ಛ ನೀಡಿ ಅಮಿತ್ ಶಾ ಸ್ವಾಗತಿಸಿದರು. ಈ ಘಟನೆ ರಾಜಕೀಯ ವಲಯದಲ್ಲಿ ವಿಶೇಷವಾಗಿ ಚರ್ಚೆಯಾಗುತ್ತಿದೆ. ಬಿಎಸ್​ ಯಡಿಯೂರಪ್ಪನವರು ರಾಜಕಾರಣದಿಂದ ದೂರ ಸರಿದಿದ್ದು ಚುನಾವಣೆಗ ಹಿನ್ನೆಲೆ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇನ್ನು ಮತ್ತೊಂದೆಡೆ ಬಿವೈ ವಿಜಯೇಂದ್ರ ಅವರು ಕೂಡ ಚುನಾವಣೆಗಾಗಿ ಬಹಳಷ್ಟು ಶ್ರಮವಹಿಸುತ್ತಿದ್ದಾರೆ. ಬಿಜೆಪಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವ ನಾಯಕರು, ಶಾಸಕರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ವಿಜಯೇಂದ್ರರ ಕಾರ್ಯ ವೈಖರಿಗೆ ಮೆಚ್ಚಿರುವ ಅಮಿತ್​ ಶಾ ಪರೋಕ್ಷವಾಗಿ ಮೆಚ್ಚುಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೂ ಬಿಎಸ್​ವೈ ವಿಜಯೇಂದ್ರ ಅವರನ್ನು ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಇದು ಹೈಕಮಾಂಡ್ ಗೂ ಅರ್ಥವಾಗಿದೆ. ಇದನ್ನು ಅಮಿತ್​ ಶಾ ಅವರು ಯಡಿಯೂರಪ್ಪನವರಿಗೆ ಪರೋಕ್ಷವಾಗಿ ಕೊಟ್ಟ ಸಂದೇಶ ಎಂದೂ ಹೇಳಲಾಗುತ್ತಿದೆ.

ಅಮಿತ್ ಶಾ ನಮ್ಮ ಮನೆಗೆ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ

ಇನ್ನು ಈ ಬಗ್ಗೆ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ B.Y.ವಿಜಯೇಂದ್ರ, ಅಮಿತ್ ಶಾ ನಮ್ಮ ಮನೆಗೆ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ನಾಯಕರು ಚರ್ಚೆ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅತಂತ್ರ ಸೃಷ್ಟಿಸಲು ಬಿಡಲ್ಲ. ಯೋಜನೆಗಳನ್ನ ಮನೆ ಮನೆಗೆ ತಲುಪಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಬಿಎಸ್​ವೈ, ಅಮಿತ್ ಶಾ ನಡುವೆ ರಾಜಕೀಯ ಬಿಟ್ಟು ಬೇರೆ ಚರ್ಚೆ ಇಲ್ಲ ಎಂದರು.

ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಷಯದಲ್ಲೂ ಕೂಡಾ ಒತ್ತಡ ಇಲ್ಲ ಎಂದಿದ್ದರು. ಹಿಂದಿನ ಅದೇ ಉತ್ಸಾಹದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಕೆಲವರು ಪಕ್ಷ ತೊರೆಯುವ ಬಗ್ಗೆ ಊಹಾಪೋಹದ ಚರ್ಚೆ ನಡೆಯುತ್ತಿವೆ. ಇದೆಲ್ಲದಕ್ಕೂ ಇತಿಶ್ರೀ ಹಾಡುವ ಕೆಲಸ ಮಾಡಲಾಗುತ್ತದೆ. ಅಮಿತ್ ಶಾ ನನ್ನನ್ನು ಬಹಳ ಪ್ರೀತಿಯಿಂದ ಮಾತನಾಡಿಸಿದರು. ಸಚಿವ ಸೋಮಣ್ಣ ಹಿರಿಯರಿದ್ದಾರೆ, ಚಾಮರಾಜನಗರ ಉಸ್ತುವಾರಿಯೂ ಇದ್ದಾರೆ. ಅವರಿಗೆ ಅಲ್ಲಿಗೆ ಹೋಗಲು ಅಮಿತ್ ಶಾ ಹೇಳಿದ್ದರೆ ಅದಕ್ಕೆ ಕಾರಣ ಇರಲಿದೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:50 am, Fri, 24 March 23