ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ‘ದೃಶ್ಯ’ ಸಿನಿಮಾ ಸ್ಟೈಲ್ನಲ್ಲಿ ಎಂಜಿನಿಯರ್ ಮರ್ಡರ್
ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಸೇಮ್ ಟು ಸೇಮ್ ‘ದೃಶ್ಯ’ ಸಿನಿಮಾ ಸ್ಟೈಲ್ನಲ್ಲಿಇಂಜಿನಿಯರ್ನನ್ನು ಹತ್ಯೆಗೈದಿರುವ ಘಟನೆ ನಡೆದಿದೆ. ಪತಿ ನಾಪತ್ತೆಯಾಗಿದ್ದಾರೆ ಎಂದು ಪತ್ನಿ ನೀಡಿದ ದೂರು ಬೆನ್ನತ್ತಿದ್ದ ಪೊಲೀಸರಿಗೆ ಶಾಕ್ ಆಗಿದ್ದು, ನಟೋರಿಯಸ್ಗಳ ಪ್ಲ್ಯಾನ್ ಕಂಡು ದಂಗಾಗಿದ್ದಾರೆ. ಸಿಕ್ಕ ಚಿಕ್ಕ ಸುಳಿವಿನ ಬೆನ್ನತ್ತಿ ಆರೋಪಿಗಳನ್ನು ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.

ಆನೆಕಲ್, ನವೆಂಬರ್ 18: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ‘ದೃಶ್ಯ’ ಸಿನಿಮಾ ಸ್ಟೈಲ್ನಲ್ಲಿ ದುರುಳರು ಇಂಜಿನಿಯರ್ನನ್ನು ಹತ್ಯೆಗೈದಿರುವ ಪ್ರಕರಣವನ್ನು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪೊಲೀಸರು ಭೇದಿಸಿದ್ದಾರೆ. ಇಂಜಿನಿಯರ್ ನಾಪತ್ತೆ ಪ್ರಕರಣ ಬೆನ್ನತ್ತಿದ ಪೊಲೀಸರು, ಕೊಲೆಮಾಡಿ ಬಳಿಕ ಮೃತದೇಹವನ್ನ ಆರೋಪಿ ಮನೆಯಲ್ಲಿ ಹೂತು ಹಾಕಿದ್ದ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಆ ಮೂಲಕ ನಾಪತ್ತೆ ಕೇಸ್ ಕೊಲೆ ಪ್ರಕರಣವಾಗಿ ಮಾರ್ಪಟ್ಟಿದೆ.
ಆಂಧ್ರಪ್ರದೇಶದ ಕುಪ್ಪಂ ಮೂಲದ ಶ್ರೀನಾಥ್(30) ಬರ್ಬರ ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿ ಪ್ರಭಾಕರ್ ಮತ್ತು ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ತಿಬೆಲೆಯ ನೆರಳೂರಿನಲ್ಲಿ ಪತ್ನಿ, ಮಗುವಿನೊಂದಿಗೆ ವಾಸವಿದ್ದ ಎಂಜಿನಿಯರ್ ಶ್ರೀನಾಥ್ಗೆ ಕೈತುಂಬ ಸಂಬಳ ಬರುತ್ತಿತ್ತು. ಹಣ ಡಬಲ್ ಮಾಡಿಕೊಡುವುದಾಗಿ ಹೇಳಿದ್ದ ಹಂತಕ ಪ್ರಭಾಕರ್, ಸೋದರ ಸಂಬಂಧಿ ಶ್ರೀನಾಥ್ ಬಳಿ 40 ಲಕ್ಷ ರೂ. ಹಣ ಪಡೆದಿದ್ದ. ಇತ್ತೀಚೆಗೆ ಆ ಹಣ ವಾಪಸ್ ಕೊಡುವಂತೆ ಪ್ರಭಾಕರ್ಗೆ ಶ್ರೀನಾಥ್ ಕೇಳಿದ್ದ ಕಾರಣ, ಅವರ ಹತ್ಯೆಗೆ ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿತ್ತು. ಹಣ ಕೊಡ್ತೀನಿ ಬಾ ಅಂತಾ ಆಂಧ್ರದ ಕುಪ್ಪಂಗೆ ಶ್ರೀನಾಥ್ರನ್ನ ಆರೋಪಿ ಕರೆಸಿಕೊಂಡಿದ್ದ. ಕುಪ್ಪಂನಲ್ಲಿ ಶ್ರೀನಾಥ್ ಮನೆಯೊಳಗೆ ಬರುತ್ತಿದ್ದಂತೆ ಅವರ ತಲೆಗೆ ಸುತ್ತಿಗೆಯಿಂದ ಹೊಡೆದು ಪ್ರಭಾಕರ್ ಮತ್ತು ಆತನ ಸ್ನೇಹಿತ ಜಗದೀಶ್ ಸೇರಿ ಹತ್ಯೆಗೈದಿದ್ದರು. ಕೊಲೆ ಬಳಿಕ ಅದೇ ಮನೆಯಲ್ಲೇ ಗುಂಡಿ ತೆಗೆದು ಹೂತಾಕಿದ್ದರು.
ಇದನ್ನೂ ಓದಿ: ಕುಡಿಯಬೇಡ ಅಂದಿದ್ದೇ ತಪ್ಪಾಯ್ತು, ಹೆಂಡತಿ ಜೀವವನ್ನೇ ಬಲಿ ಪಡೆದ ಪಾಪಿ ಪತಿ
ಕುಪ್ಪಂಗೆ ಹೋಗುವ ವಿಷಯವನ್ನು ಶ್ರೀನಾಥ್ ಪತ್ನಿಗೆ ತಿಳಿಸಿ ಹೋಗಿದ್ದು, ಈ ಬಗ್ಗೆ ಅವರು ಪ್ರಭಾಕರ್ನನ್ನು ಪ್ರಶ್ನಿಸಿದರೂ ಏನೂ ಗೊತ್ತಿಲ್ಲದಂತೆ ಆತ ನಾಟಕವಾಡಿದ್ದ. 2 ದಿನವಾದ್ರೂ ಪತಿ ಮನೆಗೆ ಬಾರದೆ ಇದ್ದಾಗ ಅತ್ತಿಬೆಲೆ ಠಾಣೆಗೆ ಶ್ರೀನಾಥ್ ಪತ್ನಿ ದೂರು ನೀಡಿದ್ದಾರೆ. ಪ್ರಕರಣ ಸಂಬಂಧ ಪ್ರಭಾಕರ್ ಮತ್ತು ಜಗದೀಶ್ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಹೊರಗೆ ಬಂದಿದೆ. ಶ್ರೀನಾಥ್ರನ್ನು ಕೊಂದು ಕುಪ್ಪಂನ ಮನೆಯಲ್ಲಿ ಹೂತು ಹಾಕಿರೋದಾಗಿ ಹಂತಕರು ಬಾಯ್ಬಿಟ್ಟಿದ್ದಾರೆ. ಕುಪ್ಪಂ ತಹಶೀಲ್ದಾರ್ ನೇತೃತ್ವದಲ್ಲಿ ಶ್ರೀನಾಥ್ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ.
ಆರೋಪಿಗಳ ಕ್ರೈಂ ಹಿಸ್ಟರಿ ಭಯಾನಕ
ಇನ್ನು ಶ್ರೀನಾಥ್ ಅವರನ್ನು ಕೊಲೆ ಮಾಡಿರುವ ಆರೋಪಿಗಳ ಕ್ರೈಂ ಹಿಸ್ಟರಿ ಭಯಾನಕವಾಗಿದ್ದು, ಈ ಹಿಂದೆ ತನ್ನ ಪತ್ನಿಯನ್ನೇ ಪ್ರಭಾಕರ್ ಕೊಲೆ ಮಾಡಿದ್ದ. ಹಣದ ವಿಚಾರವಾಗಿ ನಡೆದ ಕೊಲೆ ಪ್ರಕರಣ ಸಂಬಂಧ ಜೈಲಿಗೆ ಹೋಗಿದ್ದ. ಎ2 ಜಗದೀಶ್ ಕೂಡ ತನ್ನ ಪ್ರೇಯಸಿಯನ್ನ ಮರ್ಡರ್ ಮಾಡಿದ್ದ. ಒಮ್ಮೆ ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದ ಇವರು ಮತ್ತೆ ಅಂತಹುದೇ ಕೆಲಸ ಮಾಡಿದ್ದಾರೆ. ಜೈಲಿನಿಂದ ಹೊರಬಂದ ಬಳಿಕ ಶ್ರೀನಾಥ್ ಬಳಿ ಪ್ರಭಾಕರ್ ಹಣ ಪಡೆದಿದ್ದ ಎನ್ನಲಾಗಿದ್ದು, ದೊಡ್ಡಪ್ಪನ ಮಗ ಅಂತ ನಂಬಿ ಪ್ರಭಾಕರ್ಗೆ ಶ್ರೀನಾಥ್ ಹಣ ಕೊಟ್ಟಿದ್ದರು. ಹಣ ವಾಪಸ್ ಕೇಳಿದಾಗ ದುಡ್ಡಿನ ವಿಚಾರವಾಗಿ ಫೋನ್ನಲ್ಲಿ ಮಾತಾನಾಡಬೇಡ, ಐಟಿ ಪ್ರಾಬ್ಲಮ್ ಆಗುತ್ತೆ. ಬದಲಾಗಿ ವಾಟ್ಸ್ಯಾಪ್ ಸ್ಟೇಟಸ್ ಹಾಕುವ ಮೂಲಕ ಮಾತಾಡಿಕೊಳ್ಳೋಣ ಎಂದು ಪ್ರಭಾಕರ್ ಹೇಳಿದ್ದ. ಅಕ್ಟೋಬರ್ 27ರಂದು ಹಣ ವಾಪಸ್ ಕೊಡೋದಾಗಿ ತಿಳಿಸಿದ್ದ.
ಇವಿಷ್ಟೇ ಅಲ್ಲದೆ, ಕುಪ್ಪಂಗೆ ಬರುವಾಗ ಮೊಬೈಲ್ ಮನೆಯಲ್ಲಿಯೇ ಬಿಟ್ಟು ಬಾ. ಇಲ್ಲದಿದ್ದರೆ ಸಮಸ್ಯೆ ಆಗುತ್ತೆ ಎಂದೂ ಶ್ರೀನಾಥ್ ಅವರಿಗೆ ಪ್ರಭಾಕರ್ ತಿಳಿಸಿದ್ದ. ಹೀಗಾಗಿ ಮೊಬೈಲ್ ಮನೆಯಲ್ಲೇ ಬಿಟ್ಟು ಶ್ರೀನಾಥ್ ತೆರಳಿದ್ದರು. ಪೊಲೀಸರ ವಿಚಾರಣೆ ಸಂದರ್ಭವೂ ಶ್ರೀನಾಥ್ ತನಗೆ ಸಿಗಲೇ ಇಲ್ಲ. ಬೇಕಿದ್ರೆ ಮೊಬೈಲ್ ಚೆಕ್ ಮಾಡಿ ಎಂದು ಪ್ರಭಾಕರ್ ಹೇಳಿದ್ದ. ಪ್ರಭಾಕರ್ನ ಒಂದು ತಿಂಗಳ ಕಾಲ್ ಮಾಹಿತಿ ಪಡೆದರೂ ಘಟನೆ ಬಗ್ಗೆ ಯಾವುದೇ ಸುಳಿವು ಸಿಗದ ಕಾರಣ ಪೊಲೀಸರು 2 ತಿಂಗಳ ಮಾಹಿತಿ ಪರಿಶೀಲಿಸಿದ್ದಾರೆ. ಈ ವೇಳೆ ಜಗದೀಶ್ ಜೊತೆಗಿನ ಲಿಂಕ್ ಪತ್ತೆಯಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



