‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡದವರು ದೇಶವಿರೋಧಿಗಳು; ವಿವಾದಾತ್ಮಕ ಹೇಳಿಕೆ ಕೊಟ್ಟ ಶಾಸಕ ರೇಣುಕಾಚಾರ್ಯ

| Updated By: ಆಯೇಷಾ ಬಾನು

Updated on: Mar 15, 2022 | 10:15 PM

ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು ವಿಕೃತ ಮನಸ್ಸಿನವರು. ಸ್ಪೀಕರ್ ಆಹ್ವಾನಿಸಿದ್ದರಿಂದ ಸೌಜನ್ಯಕ್ಕಾದರೂ ಸಿನಿಮಾಗೆ ಬರಬೇಕಿತ್ತು. ಇಲ್ಲಿರುವವರು ವೋಟ್ ಬ್ಯಾಂಕ್, ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಜನ ಇದನ್ನ ಒಪ್ಪಲ್ಲ. ಯಾರು ಹಿಂದುತ್ವ ರಾಷ್ಟ್ರೀಯ ಮನೋಭಾವ, ದೇಶವನ್ನು ಪ್ರೀತಿಸುವವರು ಈ ಸಿನಿಮಾ ನೋಡಬಹುದು. -ಶಾಸಕ ರೇಣುಕಾಚಾರ್ಯ

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡದವರು ದೇಶವಿರೋಧಿಗಳು; ವಿವಾದಾತ್ಮಕ ಹೇಳಿಕೆ ಕೊಟ್ಟ ಶಾಸಕ ರೇಣುಕಾಚಾರ್ಯ
ಎಂ.ಪಿ ರೇಣುಕಾಚಾರ್ಯ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ಕಥಾವಸ್ತು, ಸಿನಿಮಾದಲ್ಲಿ ತೋರಿಸಿರೋ ವಿಚಾರಗಳು ಅನೇಕ ಚರ್ಚೆಗಳನ್ನು ಹುಟ್ಟುಹಾಕಿವೆ. ಸದ್ಯ ಈಗ ‘ದಿ ಕಾಶ್ಮೀರ್ ಫೈಲ್ಸ್’(The Kashmir Files) ಸಿನಿಮಾ ನೋಡದವರು ದೇಶವಿರೋಧಿಗಳು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದ ಶಾಸಕರು, ಮುಖಂಡರು ವಿಕೃತ ಮನಸ್ಸಿನವರು. ಸ್ಪೀಕರ್ ಆಹ್ವಾನಿಸಿದ್ದರಿಂದ ಸೌಜನ್ಯಕ್ಕಾದರೂ ಸಿನಿಮಾಗೆ ಬರಬೇಕಿತ್ತು. ಇಲ್ಲಿರುವವರು ವೋಟ್ ಬ್ಯಾಂಕ್, ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಜನ ಇದನ್ನ ಒಪ್ಪಲ್ಲ. ಯಾರು ಹಿಂದುತ್ವ ರಾಷ್ಟ್ರೀಯ ಮನೋಭಾವ, ದೇಶವನ್ನು ಪ್ರೀತಿಸುವವರು ಈ ಸಿನಿಮಾ ನೋಡಬಹುದು. ಸಿನಿಮಾ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟ ಸ್ಪೀಕರ್ಗೆ ಧನ್ಯವಾದ. ಕಾಶ್ಮೀರದಲ್ಲಿ ಉಗ್ರವಾದಿಗಳ ಅಟ್ಟಹಾಸದ ವೀಕ್ಷಣೆ ಮಾಡ್ತಾ ಇದ್ದರೆ ಮೈ ಜುಮ್ ಎನ್ನುತ್ತೆ. ಕಾಶ್ಮೀರ ಪಂಡಿತರ ಚಿತ್ರಹಿಂಸೆ ಕಾಶ್ಮೀರದಲ್ಲಿನ ಪಂಡಿತರ ಮಾರಣಹೋಮಕ್ಕೆ ಹಿಂದಿನ ಸರ್ಕಾರವೇ ಕಾರಣ. ಹಿಂದಿನ ಸರ್ಕಾರ ವೋಟಿಗೋಸ್ಕರ ಭಯೋತ್ಪಾದಕರಿಗೆ, ಉಗ್ರಗಾಮಿಗಳಿಗೆ ಬೆಂಬಲಕೊಟ್ಟು ಮಾರಣಹೋಮ ಆಗಿದೆ. ನಮ್ಮ ಕೇಂದ್ರ ಸರ್ಕಾರ ಬಂದ ಬಳಿಕ ಮೋದಿಯವರ ಭರವಸೆಯಂತೆ ಕಾಶ್ಮೀರದಲ್ಲಿ ಉಸಿರಾಡಲು ಅವಕಾಶ ಆಗಿದೆ. ಪ್ರತಿಯೊಬ್ಬರೂ ಈ ಚಿತ್ರ ವೀಕ್ಷಣೆ ಮಾಡಿ. ಇಂತಹ ಸಿನಿಮಾ ವೀಕ್ಷಣೆಯಲ್ಲಿ ರಾಜಕಾರಣ, ಸ್ವಾರ್ಥ ಮುಖ್ಯವಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

‘ಇದನ್ನು ಎಲ್ಲರೂ ನೋಡಬೇಕು’; ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಪ್ರಧಾನಿ ಮೋದಿ ವಿಶೇಷ ಮಾತು
‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರ ದೇಶಾದ್ಯಂತ ಸಖತ್ ಸುದ್ದಿಯಾಗಿದೆ. ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿರುವ ಈ ಸಿನಿಮಾವನ್ನು ಬಹುತೇಕರು ಇಷ್ಟಪಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರನ್ನು (PM Narendra Modi) ಚಿತ್ರತಂಡ ಭೇಟಿ ಮಾಡಿತ್ತು. ಈ ವೇಳೆ ಅವರು ಚಿತ್ರದ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿತ್ತು. ಇದೀಗ ಖುದ್ದು ಪ್ರಧಾನಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಬಹಿರಂಗವಾಗಿ ಶಹಬ್ಬಾಸ್​ಗಿರಿ ಕೊಟ್ಟಿದ್ದಾರೆ. ದೆಹಲಿಯಲ್ಲಿ ನಡೆದ ಸಂಸದೀಯ ಮಂಡಳಿ ಸಭೆಯಲ್ಲಿ ಅವರು ಮಾತನಾಡುತ್ತಾ, ‘ದಿ ಕಾಶ್ಮೀರ್ ಫೈಲ್ಸ್’ ಉತ್ತಮ ಚಿತ್ರ. ಅಂತಹ ಸಿನಿಮಾಗಳು ನಿರ್ಮಾಣವಾಗಬೇಕು ಎಂದು ಹೇಳಿದ್ದಾರೆ. ಜತೆಗೆ ‘ದಿ ಕಾಶ್ಮೀರ್ ಫೈಲ್ಸ್’ ವೀಕ್ಷಿಸಲು ಬಿಜೆಪಿ ಸಂಸದರಿಗೆ ಪ್ರಧಾನಿ ಸಲಹೆಯನ್ನೂ ನೀಡಿದ್ದಾರೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ ಫೈಲ್ಸ್’ ಮಾರ್ಚ್ 11 ರಂದು ತೆರೆಕಂಡಿತ್ತು. 1990ರ ದಶಕದಲ್ಲಿ ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಪಂಡಿತರ ವಲಸೆಯನ್ನು ಆಧರಿಸಿ ಚಿತ್ರ ತಯಾರಾಗಿದೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ರವನ್ನು ವೀಕ್ಷಿಸಿ ಹೊಗಳಿಕೆಯ ಮಾತುಗಳನ್ನಾಡಿದ್ದರು. ಅಲ್ಲದೇ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನೂ ಘೋಷಿಸಿದ್ದರು. ಈ ವೇಳೆ ಅವರು ಚಿತ್ರ ವೀಕ್ಷಿಸಲು ಪಕ್ಷದ ವರಿಷ್ಠರು ಸೂಚಿಸಿದ್ದಾರೆ ಎಂದು ತಿಳಿಸಿದ್ದರು. ಇಂದು ವಿಧಾನಸಭೆ ಸಚಿವಾಲಯದ ವತಿಯಿಂದ ರಾಜ್ಯದ ಸಚಿವರು ಹಾಗೂ ಶಾಸಕರಿಗೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಧಾನ ಪರಿಷತ್​ನಲ್ಲಿ ಇದೇ ವಿಷಯದ ಕುರಿತಂತೆ ಪ್ರತಿಪಕ್ಷಗಳು ತೀವ್ರ ಗದ್ದಲವನ್ನೂ ನಡೆಸಿವೆ.

ಇದನ್ನೂ ಓದಿ: ಪ್ರತಿಯೊಂದು ವಾರ್ಡ್‌ನಲ್ಲಿ ನೂರಾರು ಮಂದಿಗೆ ‘ದಿ ಕಾಶ್ಮೀರ್ ಫೈಲ್ಸ್’ ಫ್ರೀ ಟಿಕೆಟ್ ನೀಡಲು ಮುಂದಾದ ಬಿಜೆಪಿ ಶಾಸಕ ಅಭಯ್ ಪಾಟೀಲ್