ಅಯೋಧ್ಯೆ ವಿಶೇಷ ರೈಲಿಗೆ ನುಗ್ಗಿ ಬೆದರಿಕೆ ಪ್ರಕರಣ; ಸರ್ಕಾರ ಸಮಗ್ರ ತನಿಖೆ ನಡೆಸಲಿ- ಸಿಟಿ ರವಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 23, 2024 | 2:56 PM

ಅಯೋಧ್ಯೆ ಪ್ರಭು ಶ್ರೀರಾಮರ ದರ್ಶನ ಪಡೆದು ಯಾತ್ರಿಕರೆಲ್ಲರೂ ಮೈಸೂರು- ಅಯೋಧ್ಯೆ ದಾಮಾ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದರು. ಮಾರ್ಗ ಮಧ್ಯೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಿಲ್ದಾಣದಲ್ಲಿ ರೈಲು ನಿಂತಿದ್ದು, ಈ ವೇಳೆ ರೈಲಿಗೆ ನುಗ್ಗಿದ ವ್ಯಕ್ತಿಯೋರ್ವ ರೈಲಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಸಿಟಿ ರವಿ ಕಿಡಿಕಾರಿದ್ದಾರೆ. ಸರ್ಕಾರ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಅಯೋಧ್ಯೆ ವಿಶೇಷ ರೈಲಿಗೆ ನುಗ್ಗಿ ಬೆದರಿಕೆ ಪ್ರಕರಣ; ಸರ್ಕಾರ ಸಮಗ್ರ ತನಿಖೆ ನಡೆಸಲಿ- ಸಿಟಿ ರವಿ
ಸಿಟಿ ರವಿ
Follow us on

ಬೆಂಗಳೂರು, ಫೆ.23: ಅಯೋಧ್ಯೆಯಿಂದ ವಾಪಸಾಗುತ್ತಿದ್ದ ರಾಮಭಕ್ತರ ರೈಲಿಗೆ ನುಗ್ಗಿ ಬೆದರಿಕೆ ಹಾಕಿದ್ದ ಘಟನೆಗೆ ಸಂಬಂಧಿಸಿದಂತೆ  ‘ರಾಮಭಕ್ತರನ್ನು ಸುಟ್ಟು ಹಾಕುವುದಾಗಿ ಮತಾಂಧ ವ್ಯಕ್ತಿ ಬೆದರಿಸಿದ್ದಾನೆ ಎಂದು ಸಿಟಿ ರವಿ (CT Ravi) ಕಿಡಿಕಾರಿದ್ದಾರೆ. ಬೇಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಘಟನೆ ನಡೆದ ಕೂಡಲೇ ರಾಮಭಕ್ತರು, ಆರೋಪಿಯನ್ನು ಪೊಲೀಸ್ ವಶಕ್ಕೆ ಕೊಟ್ಟಿದ್ದರು. ಆದ್ರೆ, ಯಾವ ಕಾರಣಕ್ಕೋ ಏನೋ ಆರೋಪಿ ತಪ್ಪಿಸಿಕೊಂಡು ಹೋಗಲು ಪೊಲೀಸರು ಅವಕಾಶ ಕೊಟ್ಟಿದ್ದರು, ನಂತರ ಎಲ್ಲರೂ ಪ್ರತಿಭಟನೆ ಮಾಡಿದ ಮೇಲೆ, ಪೊಲೀಸರು ಸಿಸಿಟಿವಿ ಗಮನಿಸಿ ಮತ್ತೆ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನು ಸರ್ಕಾರ ಹಗುರವಾಗಿ ತೆಗೆದುಕೊಳ್ಳಬಾರದು. ಇದರ ಹಿಂದೆ ಯಾರದ್ದೋ ಪಿತೂರಿ ಇರಬಹುದು, ಈ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಕೆ ಹರಿಪ್ರಸಾದ್ ಅವರನ್ನು ತನಿಖೆಗೆ ಒಳಪಡಿಸಬೇಕು

ಈ ಹಿಂದೆ ಬಿಕೆ ಹರಿಪ್ರಸಾದ್ ಅವರು ಮತ್ತೆ ಗೋದ್ರಾ ಮಾದರಿಯ ಹತ್ಯೆ ಆಗುವಂತಿದೆ ಎಂಬ ಹೇಳಿಕೆ, ‘ಅವರು ಸುಮ್ಮನೆ ಹೇಳಿಲ್ಲ,
ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ನಾವು ಆವತ್ತೆ ಹೇಳಿದ್ದೆವು. ಹರಿಪ್ರಸಾದ್ ಹೇಳಿಕೆ ಹಾಗೂ ಈಗ ನಡೆದಿರುವ ಘಟನೆ ಕಾಕತಾಳೀಯ ಅಲ್ಲ, ಹರಿಪ್ರಸಾದ್ ಅವರನ್ನು ಪೊಲೀಸರು ವಿಚಾರಣೆ ಮಾಡಬೇಕಾಗಿತ್ತು. ಈಗ ಆಗಿರುವ ಘಟನೆ ನೋಡಿದಾಗ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ. ಇನ್ನು ರಾಮನಗರದಲ್ಲಿ ವಕೀಲ ಚಾಂದ್‌ಪಾಷ ಎಂಬುವವರು ವಾರಣಾಸಿ ಜ್ಞಾನವ್ಯಾಪಿಗೆ ಸಂಬಂಧಿಸಿದಂತೆ ಕೋರ್ಟ್​ ಕೊಟ್ಟ ತೀರ್ಪನ್ನು ವಿರೋಧಿಸಿ ಬಳಸಿದ ಭಾಷೆ, ಹಾಗೂ ಇದೀಗ ನಡೆದ ಕೃತ್ಯ ಆಕಸ್ಮಿಕ ಅಲ್ಲ, ಇವುಗಳನ್ನು ಗಂಭೀರವಾಗಿ ಸರ್ಕಾರ ನೋಡಲಿ, ಜೊತೆಗೆ ಹೊಸಪೇಟೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ. ಅವರ ಮೇಲೂ ಕ್ರಮ ಕೈಗೊಳ್ಳಲಿ ಎಂದರು.

ಇದನ್ನೂ ಓದಿ:ಅಯೋಧ್ಯೆ ವಿಶೇಷ ರೈಲಿಗೆ ನುಗ್ಗಿ ಬೆಂಕಿ ಹಚ್ಚುವುದಾಗಿ ಬೆದರಿಕೆ ಕೇಸ್​: ಓರ್ವ ಯುವಕ ಅರೆಸ್ಟ್​​

ಕಾಂಗ್ರೆಸ್​ ಸರ್ಕಾರವನ್ನ ತುಘಲಕ್ ಆಡಳಿತಕ್ಕೆ ಹೋಲಿಕೆ

ಇದೇ ವೇಳೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸುವುದು, ಮತ್ತೆ ವಾಪಾಸ್​ ತೆಗೆದುಕೊಳ್ಳುವುದು. ಈ ತರಹ ಹಿಂದೆ ತುಘಲಕ್ ಸರ್ಕಾರ ಇತ್ತು. ಬೆಳಗ್ಗೆ ಒಂದು ಆದೇಶ ಮಾಡ್ತಿದ್ದನಂತೆ, ಸಂಜೆ ಮತ್ತೊಂದು ಆದೇಶ ಮಾಡುತ್ತಿದ್ದನಂತೆ. ಈ ಸರ್ಕಾರವೂ ತುಘಲಕ್​ನಿಂದ ಪ್ರೇರಣೆ ಪಡೆದಿರಬಹುದು. ರಾಷ್ಟ್ರೀಯ ಹಬ್ಬಗಳನ್ನು ಮಾತ್ರ ಆಚರಿಸಬೇಕು ಎನ್ನುವ ಆದೇಶ ಮಾಡಿ ನಂತರ ವಾಪಸ್ ತೆಗೆದುಕೊಂಡರು. ವಸತಿ ಶಾಲೆಗಳಲ್ಲಿ ಕೈಮುಗಿದು ಒಳಗೆ ಬಾ, ಧೈರ್ಯವಾಗಿ ಪ್ರಶ್ನಿಸಿ ಎಂದು ಆದೇಶ ಮಾಡಿ ಮತ್ತೆ ಅದನ್ನೂ ಜನವಿರೋಧ ಬಂತು ಎಂದು ವಾಪಸ್ ಪಡೆದರು. ನಾಡಗೀತೆ ವಿವಾದವೂ ಹೀಗೆಯೇ ಆಯಿತು. ಕಾಂಗ್ರೆಸ್ ನವರ ಮನಸ್ಥಿತಿಯನ್ನು ಹ್ಯಾಕರ್​ಗಳು ಹ್ಯಾಕ್ ಮಾಡಿರಬಹುದು.

ಕಾಂಗ್ರೆಸ್ ರಾಷ್ಟ್ರೀಯ ಪಕ್ಷದ ಮಾನ್ಯತೆ ಕಳೆದುಕೊಂಡಿದೆ. ಅವರ ನಡೆಯಲ್ಲಿ ರಾಷ್ಟ್ರೀಯ ಹಿತ ಕಾಣೆಯಾಗಿದೆ. ತೆರಿಗೆಯಲ್ಲಿ ಅನ್ಯಾಯ ಅಂತ ರಾಷ್ಟ್ರ ವಿರೋಧಿಯಂತೆ ಸಿದ್ಧರಾಮಯ್ಯ ಮಾತಾಡುತ್ತಾರೆ. ಮನಮೊಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಅನ್ಯಾಯ ಆಗುತ್ತಿದೆ ಎಂದು ಇವರು ಯಾರೂ ದನಿ ಎತ್ತಲೇ ಇಲ್ಲ. ಮೋದಿ ಬಂದ ಮೇಲೆ ಅನುದಾನದಲ್ಲಿ ಪ್ರತಿಶತ 10 ರಷ್ಟು ಹೆಚ್ಚಾಗಿದೆ. ಕಾಂಗ್ರೆಸ್ ನವರಿಗೆ ಎಲೆಕ್ಷನ್​ನಲ್ಲಿ ಅಜೆಂಡಾ ಇಲ್ಲ. ಮೋದಿ ವಿರುದ್ಧ ಟೂಲ್ ಕಿಟ್ ರಾಜಕಾರಣದ ಭಾಗವಾಗಿ ಈ ರೀತಿ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಮೋದಿ ಕಳೆದ ಒಂಬತ್ತು ವರ್ಷಗಳಲ್ಲಿ ಎಷ್ಟು ಕೋಟಿ ಅನುದಾನ, ತೆರಿಗೆ ಪಾಲು ಕೊಟ್ಟಿದ್ದಾರೆ ಎಂದು ಹೇಳಲಿ, ಹಾಗೆಯೇ ಮನಮೋಹನ ಸಿಂಗ್ ಅವಧಿಯ ಲೆಕ್ಕವೂ ಹೇಳಲಿ. ಸಿದ್ದರಾಮಯ್ಯ ಸದಾ ಸಂಘರ್ಷದ ಮನಸ್ಥಿತಿಯಲ್ಲಿರುತ್ತಾರೆ. ಅಳಿದುಳಿದ ರಾಜ್ಯಗಳಲ್ಲಿ ಸ್ವಾತಂತ್ರ್ಯ ಘೋಷಿಸಿಕೊಳ್ಳುವ ಜಹಂಗೀರುದಾರರ‌ ಮನಸ್ಥಿತಿ ಇವರದ್ದು ಎಂದು ವಾಗ್ದಾಳಿ ನಡೆಸಿದರು.

ನಾನು ಲೋಕಸಭೆ ಆಕಾಂಕ್ಷಿ ಅಲ್ಲ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಪತ್ರ ಸಮರ ವಿಚಾರ, ‘ನಾನು ಲೋಕಸಭೆ ಆಕಾಂಕ್ಷಿ ಅಲ್ಲ, ಇದನ್ನು ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಕಾರ್ಯಕರ್ತರ ಮೂಲಕ ಒತ್ತಾಯ ಮಾಡಿಸುವ ಕೆಲಸ ನಾನು ಮಾಡಲ್ಲ. ನಾನು ಬೇರೆ ಬೇರೆ ರಾಜ್ಯಗಳಲ್ಲಿ ಉಸ್ತಿವಾರಿಯಾಗಿ ಕೆಲಸ‌ ಮಾಡಿರುವವನು. ಟಿಕೆಟ್ ಹೇಗೆ ಕೊಡುತ್ತಾರೆ ಎನ್ನುವುದು ನನಗೂ ಗೊತ್ತಿದೆ. ಒತ್ತಾಯ, ಒತ್ತಡಗಳು ಪರಿಗಣನೆ ಆಗಲ್ಲ ಎನ್ನುವುದು ಗೊತ್ತಿದೆ. ನಾನು ಟಿಕೆಟ್ ಕೇಳಿ ಪಡೆದಿರುವುದು ಕಡಿಮೆ. ಟಿಕೆಟ್ ಕೊಟ್ಟರೆ ಮಾತ್ರ ನಿಲ್ಲುತ್ತೇನೆ, ಇಲ್ಲದಿದ್ದರೆ ಪಕ್ಷದ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:44 pm, Fri, 23 February 24