AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಜಾನ್ ವಿರುದ್ಧ ಹಿಂದೂಪರ ಸಂಘಟನೆಗಳ ಸಮರ: ಮುತಾಲಿಕ್ ನೇತೃತ್ವದಲ್ಲಿ ಎರಡು ದಿನ ಮಹತ್ವದ ಸಭೆ

ಇಂದು ಆಜಾನ್ ವಿರುದ್ದ ಸುಪ್ರಭಾತ ಮೊಳಗಿಸಿರುವ ಹಿಂದುಪರ ಸಂಘಟನೆಗಳು, ಎರಡು ದಿನಗಳ ಸಭೆ ನಂತರ ಮತ್ತೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗುವ ಸಾಧ್ಯತೆಯಿದೆ. 

ಆಜಾನ್ ವಿರುದ್ಧ ಹಿಂದೂಪರ ಸಂಘಟನೆಗಳ ಸಮರ: ಮುತಾಲಿಕ್ ನೇತೃತ್ವದಲ್ಲಿ ಎರಡು ದಿನ ಮಹತ್ವದ ಸಭೆ
ಆಜಾನ್ ವಿರುದ್ಧ ಹಿಂದೂಪರ ಸಂಘಟನೆಗಳ ಸಮರ: ಮುತಾಲಿಕ್ ನೇತೃತ್ವದಲ್ಲಿ ಎರಡು ದಿನ ಮಹತ್ವದ ಸಭೆ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: May 10, 2022 | 11:30 AM

Share

ಬೆಂಗಳೂರು: ಆಜಾನ್ ವಿರುದ್ಧ ಹಿಂದೂಪರ ಸಂಘಟನೆಗಳ ಸಮರ ರಾಜ್ಯದಲ್ಲಿ ಮತ್ತಷ್ಟು ತೀವ್ರಗೊಳ್ಳುತ್ತಾ ಎನ್ನುವ ಪ್ರಶ್ನೆಗಳು ಉಂಟಾಗಿವೆ. ಆಜಾನ್ ವಿರುದ್ದ ಲೌಡ್ ಸ್ಪೀಕರ್ ಹೋರಾಟ ಕುರಿತು ಎರಡು ದಿನ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಹಿಂದೂಪರ ಸಂಘಟನೆಗಳ ಸಭೆ ನಡೆಯಲಿದೆ. ನಾಳೆ, ನಾಡಿದ್ದು ಎರಡು ದಿನಗಳ ಕಾಲ ಹಿಂದೂಪರ ಸಂಘಟನೆಗಳ ಮುಖಂಡರ ಸಭೆ ನಡೆಯಲಿದೆ. ಶ್ರೀರಾಮ ಸೇನೆ ಮುಖ್ಯಸ್ಥ ಮುತಾಲಿಕ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, 20ಕ್ಕೂ ಹೆಚ್ಚು ಹಿಂದುಪರ ಸಂಘಟನೆಗಳ ಮುಖಂಡರು ಭಾಗಿಯಾಲಿದ್ದಾರೆ. ಮಸೀದಿಯ ನಿಯಮ ಬಾಹಿರ ಲೌಡ್ ಸ್ಪೀಕರ್‌ ವಿರುದ್ದ ಕಾನೂನು ಹೋರಾಟದ ಕುರಿತು ಚರ್ಚೆ ಮಾಡಲಿದ್ದು, ಮುಂದಿನ ಹೋರಾಟದ ಕುರಿತು ಹಿಂದುಪರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಚರ್ಚಿಸಲು ನಿರ್ಧರಿಸಿದ್ದಾರೆ. ಇಂದು ಆಜಾನ್ ವಿರುದ್ದ ಸುಪ್ರಭಾತ ಮೊಳಗಿಸಿರುವ ಹಿಂದುಪರ ಸಂಘಟನೆಗಳು, ಎರಡು ದಿನಗಳ ಸಭೆ ನಂತರ ಮತ್ತೊಂದು ಸುತ್ತಿನ ಹೋರಾಟಕ್ಕೆ ಅಣಿಯಾಗುವ ಸಾಧ್ಯತೆಯಿದೆ.

ಮಸೀದಿಗಳಲ್ಲಿ ಮೈಕ್ ಮೂಲಕ ಆಜಾನ್ ಕೂಗುವ ಪದ್ಧತಿಗೆ ಅಂತ್ಯ ಹಾಡಬೇಕು ಎಂದು ಆಗ್ರಹಿಸಿ ಹಿಂದುತ್ವವಾದಿ ಸಂಘಟನೆಗಳು ನಡೆಸುತ್ತಿರುವ ಅಭಿಯಾನ ಮಂಗಳವಾರ 2ನೇ ದಿನಕ್ಕೆ ಕಾಲಿಟ್ಟಿದೆ. ಬೆಂಗಳೂರು, ಮೈಸೂರು, ಗದಗ ಸೇರಿದಂತೆ ಹಲವು ನಗರಗಳ ದೇಗುಲಗಳಲ್ಲಿ ಮೈಕ್ ಮೂಲಕ ಸುಪ್ರಭಾತ ಹಾಕಲಾಯಿತು. ಕೆಲವೆಡೆ ಭಕ್ತರು ಭಜನೆ ಮಾಡಿದರು. ಆದರೆ ಚಿತ್ರದುರ್ಗ, ಬಾಗಲಕೋಟೆ, ಕಲಬುರ್ಗಿ, ಕೋಲಾರ ವಿಜಯಪುರ ಸೇರಿದಂತೆ ಹಲವು ನಗರಗಳಲ್ಲಿ ದೇಗುಲಗಳ ಕಡೆಗೆ ಹಿಂದುತ್ವ ಪರ ಸಂಘಟನೆಗಳ ಕಾರ್ಯಕರ್ತರು ಬರಲಿಲ್ಲ. ಹೀಗಾಗಿ ಅಭಿಯಾನವೂ ಸದ್ದು ಮಾಡಲಿಲ್ಲ. ವಿವಾದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಧಾರ್ಮಿಕ ಸ್ಥಳಗಳ ಮೈಕ್​ಗಳಿಂದ ಹೊಮ್ಮುವ ಧ್ವನಿಯು ಎಷ್ಟು ಡೆಸಿಬಲ್ ಇರಬೇಕು ಎನ್ನುವ ಬಗ್ಗೆ ಆದೇಶ ಹೊರಡಿಸುವುದಾಗಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್, ರಾಜ್ಯದ ಶಾಂತಿ ಕದಡುವ ಸಂಘಟನೆಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಶೀಘ್ರ ಪ್ರತ್ಯೇಕ ಸರ್ಕಾರಿ ಆದೇಶ: ಸಿಎಂ

ಕರ್ನಾಟಕದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ದೃಷ್ಟಿಯಿಂದ ಶೀಘ್ರ ಪ್ರತ್ಯೇಕ ಸರ್ಕಾರಿ ಆದೇಶ ಹೊರಡಿಸಲಾಗುವುದು. ಈ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸಾರ್ವಜನಿಕ ಧ್ವನಿವರ್ಧಕ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶ ಸ್ಪಷ್ಟವಾಗಿ ಇದೆ. ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶದಂತೆ ಧ್ವನಿವರ್ಧಕ ಬಳಕೆ ಬಗ್ಗೆ ಆಜ್ಞೆ ಮಾಡಿದೆ. ಕರ್ನಾಟಕ ಸರ್ಕಾರವೂ 2002ರಲ್ಲಿ ವಿಶೇಷ ಆದೇಶ ಮಾಡಿದೆ. ಇದರಲ್ಲಿ ಬಹಳ ಸ್ಪಷ್ಟವಾಗಿ ವಿವರ ಇದೆ. ಈ ಆದೇಶಗಳನ್ನು ಪಾಲಿಸಬೇಕೆಂದು ಸರ್ಕಾರ ನಿರ್ಧರಿಸಿದೆ. ಸರ್ಕಾರದ ಸೂಚನೆಗಳನ್ನು ಪ್ರತ್ಯೇಕ ಆದೇಶದ ಮೂಲಕ ತಿಳಿಸಲಾಗುವುದು ಎಂದು ಅವರು ತಿಳಿಸಿದರು. ಮೈಕ್​ನಿಂದ ಹೊರಹೊಮ್ಮುವ ಧ್ವನಿಯ ಪ್ರಮಾಣ ಎಷ್ಟಿರಬೇಕು? ಅನುಷ್ಠಾನದ ಹೊಣೆಯು ಯಾವ ಸಂಸ್ಥೆ ಅಥವಾ ವ್ಯಕ್ತಿಗೆ ಇದೆ? ಪರವಾನಗಿ ಎಲ್ಲಿಂದ ಪಡೆದುಕೊಳ್ಳಬೇಕು ಎಂಬ ಬಗ್ಗೆಯೂ ಮಾಹಿತಿ ಇರುತ್ತದೆ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಪಾಲಿಸಬೇಕು. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಮೈಕ್ ಬಳಕೆ ನಿಯಮಗಳನ್ನು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳು ಅನುಸರಿಸುತ್ತಿವೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು  ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.