Gas Cylinder Blast: ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ! ಸಿಲಿಂಡರ್ ಸ್ಫೋಟ, ಮೂವರ ದೇಹಗಳು ಛಿದ್ರ ಛಿದ್ರ

Bengaluru Fire accident: ಚಾಮರಾಜಪೇಟೆಯ ರಾಯನ್ ಸರ್ಕಲ್​ನಲ್ಲಿ ಈ ದುರ್ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟದಲ್ಲಿ ಮೂವರ ದೇಹಗಳು ಛಿದ್ರ ಛಿದ್ರವಾಗಿದೆ.

Gas Cylinder Blast: ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ! ಸಿಲಿಂಡರ್ ಸ್ಫೋಟ, ಮೂವರ ದೇಹಗಳು ಛಿದ್ರ ಛಿದ್ರ
ಸ್ಫೋಟಗೊಂಡ ಸ್ಥಳ
Edited By: sandhya thejappa

Updated on: Sep 23, 2021 | 1:53 PM

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಘೋರ ದುರಂತ ನಡೆದಿದೆ. ಚಾಮರಾಜಪೇಟೆಯ ರಾಯನ್ ಸರ್ಕಲ್​ನಲ್ಲಿ ಸಿಲಿಂಡರ್ ಸ್ಫೋಟವಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ಗಾಯವಾಗಿದೆ. ಸಿಲಿಂಡರ್ ಸ್ಫೋಟದಲ್ಲಿ ಮೂವರ ದೇಹಗಳು ಛಿದ್ರ ಛಿದ್ರವಾಗಿದೆ. ಇಬ್ಬರು ಗಾಯಾಳುಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಂಕ್ಚರ್​ ಶಾಪ್​ ಮಾಲೀಕ ಅಸ್ಲಮ್ ಎಂಬುವವರು​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿವೆ.  ಪಂಕ್ಚರ್​ ಅಂಗಡಿಯಲ್ಲಿದ್ದ ಕಂಪ್ರೆಸರ್​ ಬ್ಲಾಸ್ಟ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ನಂತರ ಗೋದಾಮಿನಲ್ಲಿದ್ದ ಪಟಾಕಿಗೆ ಬೆಂಕಿ ತಗುಲಿರಬಹುದು.

ಸ್ಪೋಟಗೊಂಡ ವೇಳೆ ಅಲ್ಲಿನ ಸಿಬ್ಬಂದಿಯ ಸಹಾಯಕ್ಕೆ ಬಂದ ಜನ, ಪೊಲೀಸ್ ಬರುವಷ್ಟರಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ. ಸುತ್ತಮುತ್ತಲಿನ 100 ಮೀಟರ್ ದೂರದವರೆಗೆ ಶಬ್ದ ಕೇಳಿದೆ. ಭಯದಿಂದ ಸ್ಥಳೀಯರು ಮನೆಯಿಂದ ಹೊರಬಂದು ನೋಡಿದ್ದಾರೆ.  ಭೂಕಂಪನದ ರೀತಿಯಲ್ಲಿ ಜನರಿಗೆ ಅನುಭವವಾಗಿದೆ. ಸ್ಫೋಟದ ತೀವ್ರತೆಗೆ 3 ಮೀಟರ್ ದೂರಕ್ಕೆ ದೇಹಗಳು ಹಾರಿವೆ. ಮೂವರ ದೇಹಗಳು ಗೋದಾಮಿನಿಂದ ಹೊರಗೆ ಹಾರಿಬಿದ್ದಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ, ಗೋದಾಮಿನಲ್ಲಿದ್ದ ಇಬ್ಬರು, ಪಂಕ್ಚರ್​ ಶಾಪ್​ನಲ್ಲಿದ್ದ ಒಬ್ಬ ಸಾವನ್ನಪ್ಪಿದ್ದಾರೆ. ಕಂಪ್ರೆಸರ್ ಅಥವಾ ಸಿಲಿಂಡರ್ ಸ್ಫೋಟದ ಬಗ್ಗೆ ಮಾಹಿತಿಯಿಲ್ಲ. ಮೇಲ್ನೋಟಕ್ಕೆ ಪಟಾಕಿ ಸ್ಫೋಟದ ರೀತಿಯಲ್ಲಿ ಕಾಣುತ್ತಿದೆ. ಘಟನಾ ಸ್ಥಳಕ್ಕೆ ಎಫ್​ಎಸ್​ಎಲ್​ ತಜ್ಞರು ಬರುತ್ತಿದ್ದಾರೆ. ಟ್ರಾನ್ಸ್​ಪೋರ್ಟ್​​ ಗೋದಾಮಿನಲ್ಲಿ ಪಟಾಕಿ ಸಂಗ್ರಹದ ಮಾಹಿತಿಯಿದೆ. ಇದೇ ಗೋದಾಮಿನಲ್ಲಿ 15 ಬಾಕ್ಸ್​ ಪಟಾಕಿಯಿದೆ ಎಂದು ತಿಳಿಸಿದರು.

ಸ್ಫೋಟಕ್ಕೆ ಕಾರಣ ಏನು ಎಂಬುದು ಇನ್ನು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಬಾಂಬ್​ ಪತ್ತೆ ದಳ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದೆ. ನಿಗೂಢ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದಾರೆ. ಇಬ್ಬರು ಪಟಾಕಿ ಅಂಗಡಿಯವರು, ಮತ್ತೊಬ್ಬರು ಪಂಕ್ಚರ್ ಅಂಗಡಿಯಲ್ಲಿದ್ದವರು. ಘಟನೆಗೆ ಹೇಗೆ ಸಂಭವಿಸಿದೆ, ಕಾರಣವೇನೆಂದು ಗೊತ್ತಿಲ್ಲ ಅಂತ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಇಮ್ರಾನ್ ಹೇಳಿಕೆ ನೀಡಿದ್ದಾರೆ.

ಸುಟ್ಟು ಕರಕಲಾಗಿರುವ ಬೈಕ್​​ಗಳು
ಘಟನೆಯಲ್ಲಿ 10ಕ್ಕೂ ಹೆಚ್ಚು ಬೈಕ್​​ಗಳು ಸುಟ್ಟು ಕರಕಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಕ್ಕಪಕ್ಕದ ಮನೆಗಳಲ್ಲಿದ್ದವರಿಗೂ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಮನೆಗಳ ಕಿಟಕಿ ಗಾಜು ಪುಡಿಪುಡಿಯಾಗಿವೆ. ಸ್ಫೋಟದಿಂದ ಚಿಲ್ಲರೆ ಅಂಗಡಿ ಸಂಪೂರ್ಣ ಜಖಂ ಆಗಿದೆ. ಟೀ ಕುಡಿಯಲು ಬಂದಿದ್ದ ವ್ಯಕ್ತಿಯ ಮೃತದೇಹವೂ ಛಿದ್ರ ಛಿದ್ರವಾಗಿದೆ.

ಘೋರ ಅನಾಹುತ ನೋಡಿದ ಪ್ರತ್ಯಕ್ಷದರ್ಶಿ ಸುರೇಶ್ ಎಂಬುವವರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಯನ್​ವೃತ್ತದಲ್ಲಿ ದಿಢೀರ್​ ಸ್ಫೋಟದ ಶಬ್ದವಾಯಿತು. ಮಧ್ಯಾಹ್ನ 12.10ರ ಸುಮಾರಿಗೆ ದುರಂತ ಸಂಭವಿಸಿದೆ. ನಾನು ಸ್ಥಳಕ್ಕೆ ಹೋದಾಗ ದಟ್ಟವಾದ ಹೊಗೆ ಆವರಿಸಿತ್ತು. ಪಂಕ್ಚರ್​ ಅಂಗಡಿಯಲ್ಲಿದ್ದ ಕಂಪ್ರೆಸರ್​ ಸ್ಫೋಟದ ಶಂಕೆ ವ್ಯಕ್ತವಾಗಿದೆ. ಬಾಂಬ್ ಸ್ಫೋಟವಾಗಿದೆ ಎಂದು ಜನರು ಓಡುತ್ತಿದ್ದರು ಎಂದು ತಿಳಿಸಿದರು.

ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿಯಾಗಿದೆ. ಸದ್ಯ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸುತ್ತಿದ್ದಾರೆ. ಗೋಡೌನ್ ತುಂಬಾ ಹೆಚ್ಚು ಪಟಾಕಿ ಇರುವ ಹಿನ್ನೆಲೆಯಲ್ಲಿ ಮತ್ತೆ ಸ್ಪೋಟವಾಗುವ ಸಾಧ್ಯತೆ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಫೈರ್ ಇಂಜಿನ್ ಮೂಲಕ ನೀರು ಹಾಕಲಾಗುತ್ತಿದೆ. ಸದ್ಯ ದಕ್ಷಿಣ ವಿಭಾಗದ ಡಿಸಿಪಿ ಹರಿಶ್ ಪಾಂಡೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ

ಉತ್ತರ ಪ್ರದೇಶ: ಚಲಿಸುತ್ತಿದ್ದ ಬಸ್​ನಲ್ಲಿ 14ರ ಹರೆಯದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಂಡಕ್ಟರ್; ಸಂತ್ರಸ್ತೆಯ ಅಮ್ಮನಿಗೂ ಕಿರುಕುಳ

Bitcoin Price Today: ಎವರ್​ಗ್ರ್ಯಾಂಡ್​ ಹೊಡೆತಕ್ಕೆ ಬಿಟ್​ಕಾಯಿನ್​ ಸೇರಿದಂತೆ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯೇ ಥಂಡಾ ಥಂಡಾ

(Bangalore Cylinder Blast Three burnt alive, 2 injured in cylinder blast at Chamrajpet in Bengaluru report)

Published On - 12:35 pm, Thu, 23 September 21

Web contact

TV9 Kannada

Read More
Follow Us