ಬೆಂಗಳೂರು ಡಿ06: ಬಸವನಗುಡಿ ಕಡಲೆಕಾಯಿ ಪರಿಷೆ (Basavangudi Kadlekai Parishe) ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿ ನಡೆಯುವ ವಾರ್ಷಿಕ ನೆಲಗಡಲೆ ಜಾತ್ರೆಯಾಗಿದೆ. ಈ ಪರಿಷೆಯನ್ನು ಬುಲ್ ಟೆಂಪಲ್ ರಸ್ತೆಯ ಎರಡೂ ಬದಿಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿವರ್ಷ ಎರಡು ದಿನಗಳ ಕಾಲ ನಡೆಯುತ್ತದೆ. ಬಸವನಗುಡಿ ಕಡಲೆ ಕಾಯಿಪರಿಷೆ (Kadlekai Parishe) ಯಾಕೆ ಇಷ್ಟು ಪ್ರಸಿದ್ದಿ ಪಡೆದಿದೆ? ಬಸವನಗುಡಿಯಲ್ಲೇ ಯಾಕೆ ನಡೆಸುತ್ತಾರೆ? ಇದರ ಇತಿಹಾಸವೇನು? ಈ ವರ್ಷ ಯಾವಗ ನಡೆಯುತ್ತದೆ? ಇಲ್ಲಿದೆ ಮಾಹಿತಿ
ಬೆಂಗಳೂರು ಬೆಳೆದು ಮಹಾ ನಗರವಾಗುವ ಮೊದಲು, ಬಸವನಗುಡಿಯ ಪಕ್ಕದ ಹಳ್ಳಿಗಳಲ್ಲಿ ಸಾಕಷ್ಟು ನೆಲಗಡಲೆ (ಶೇಂಗಾ) ಬೆಳೆಯುತ್ತಿದ್ದರು. ಕಟಾವಿಗೆ ಸಿದ್ಧವಾದ ನೆಲಗಡಲೆಯನ್ನೆಲ್ಲ ಗದ್ದಗೆ ದಾಳಿ ಮಾಡುತ್ತಿದ್ದ ಬಸವೊಂದು ನಾಶಪಡಿಸುತ್ತಿತ್ತು. ಹೀಗಾಗಿ ರೈತರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಿ ಬಸವ (ನಂದಿ)ಯನ್ನು ಪ್ರಾರ್ಥಿಸಲು ಆರಂಭಿಸಿದರು.
ಇದನ್ನೂ ಓದಿ: ಇನ್ನೇನು ಕಡಲೆಕಾಯಿ ಪರಿಷೆ ಬರುತ್ತಿದೆ, ಮಧುಮೇಹಿಗಳು ಕಡಲೆಕಾಯಿ ತಿನ್ನಬಹುದಾ? ತಜ್ಞರು ಏನು ಹೇಳುತ್ತಾರೆ?
ಹೀಗೆ ನಡೆದುಕೊಂಡು ಬರುತ್ತಿದ್ದ ಸಮಯದಲ್ಲೇ ಬಸವನಗುಡಿ ಪ್ರದೇಶದಲ್ಲಿ ನಂದಿಯ ವಿಗ್ರಹವೊಂದು ದೊರಕಿತು. ನಂತರ ಈ ಸ್ಥಳದಲ್ಲಿ ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿ ನಂದಿಯ ವಿಗ್ರಹದ ಸುತ್ತಲೂ ದೇವಾಯವನ್ನು ನಿರ್ಮಿಸಿದರು. ಇದನ್ನು ಬಸವನ ಗುಡಿ ಅಥವಾ ಬಿಗ್ ಬುಲ್ ಟೆಂಪಲ್ ಎಂದು ಕರೆಯಾಗುತ್ತದೆ. ಕಡಲೆಕಾಯಿ ಪರಿಷೆ ಈ ದೇವಾಲಯದ ಸುತ್ತ ಕೇಂದ್ರೀಕೃತವಾಗಿದೆ ಮತ್ತು ಬಸವ ರೈತರು ಅರ್ಪಿಸಿದ ನೆಲಗಡಲೆಯನ್ನು ಸ್ವೀಕರಿಸಿ ಆಶೀರ್ವಗಿಸುತ್ತಾನೆ ಎಂದು ರೈತರ ನಂಬಿಕೆ.
ಪ್ರತಿ ವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿ ಕಡಲೆ ಕಾಯಿ ಪರಿಷೆ ನಡೆಯುತ್ತದೆ. ಕಾರ್ತಿಕ ಮಾಸದ ಸೋಮವಾರವು ಭಗವಾನ್ ಶಿವನ ನೆಚ್ಚಿನ ದಿನವಾಗಿದ್ದು, ನಂದಿಯು ಶಿವನ ವಾಹನವಾಗಿರುವುದರಿಂದ ನಂದಿಗೆ ಈ ದಿನಗಳು ಪ್ರಿಯವಾಗಿದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ಕಡೆಲೆಕಾಯಿ ಪರಿಷೆ ನಡೆಯುತ್ತದೆ.
ಇದು ಸಾಮಾನ್ಯವಾಗಿ ನವೆಂಬರ್ ಕೊನೆಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬರುತ್ತದೆ. ಕಾರ್ತಿಕ ಹಬ್ಬವು ಹಿಂದೂ ಕ್ಯಾಲೆಂಡರ್ ಅನ್ನು ಅನುಸರಿಸುತ್ತದೆ. ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಪರಿಷೆಯ ನಿಖರವಾದ ದಿನಾಂಕವು ಸ್ಥಿರವಾಗಿರುವುದಿಲ್ಲ. ಈ ವರ್ಷ ಅಂದರೆ 2023ರಲ್ಲಿ ಡಿಸೆಂಬರ್ 11 ರಿಂದ ಎರಡು ದಿನಗಳ ಕಾಲ ಕಡಲೆಕಾಯಿ ಪರಿಷೆ ನಡೆಯುತ್ತದೆ. ಪರಿಷೆಗೆ ಬಿಬಿಎಂಪಿ ಸಕಲ ಸಿದ್ದತೆ ಮಾಡಿಕೊಂಡಿದೆ. ‘ಪರಿಷೆಗೆ ಬನ್ನಿ-ಕೈಚೀಲ’ ತನ್ನಿ ಎಂಬ ಆಹ್ವಾನದೊಂದಿಗೆ ಪರಿಸರ ಸ್ನೇಹಿ ಪರಿಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.\
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Wed, 6 December 23