ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಆಯೋಗದಿಂದ ಮೊದಲ ಸಭೆ; ಏನೇನು ಚರ್ಚೆಯಾಯ್ತು?

ಕಳೆದ ವಾರ ರಾಜ್ಯ ಸರ್ಕಾರ ವಾರ್ಡ್ ಪುನರ್ ವಿಂಗಡಣೆಗಾಗಿ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಸಮಿತಿಯ ಸದಸ್ಯರಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಬಿಡಿಎ ಆಯುಕ್ತರು ಮತ್ತು ಬೆಂಗಳೂರು ನಗರ ಜಿಲ್ಲೆಯ ಉಪ ಆಯುಕ್ತರು ಇದ್ದಾರೆ.

ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಆಯೋಗದಿಂದ ಮೊದಲ ಸಭೆ; ಏನೇನು ಚರ್ಚೆಯಾಯ್ತು?
ಬಿಬಿಎಂಪಿ

Updated on: Jun 29, 2023 | 10:10 PM

ಬೆಂಗಳೂರು: ಬಿಬಿಎಂಪಿಯ ವಾರ್ಡ್ ಪುನರ್ ವಿಂಗಡಣೆಗಾಗಿ ಸರ್ಕಾರ ನೇಮಿಸಿದ ಸಮಿತಿಯು (BBMP ward delimitation panel) ಮೊದಲ ಬಾರಿಗೆ ಸಭೆ ನಡೆಸಿದ್ದು, 12 ವಾರಗಳಲ್ಲಿ ವಾರ್ಡ್​ ಪುನರ್ ವಿಂಗಡಣೆ ವಿಚಾರವಾಗಿ ವರದಿ ಸಲ್ಲಿಸಬೇಕೆಂಬ ಆದೇಶದ ಮೇಲೆ ಗಮನ ಕೇಂದ್ರೀಕರಿಸಿ ಚರ್ಚೆ ನಡೆಯಿತು. ಕಳೆದ ವಾರ ರಾಜ್ಯ ಸರ್ಕಾರ ವಾರ್ಡ್ ಪುನರ್ ವಿಂಗಡಣೆಗಾಗಿ ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿತ್ತು. ಸಮಿತಿಯ ಸದಸ್ಯರಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಬಿಡಿಎ ಆಯುಕ್ತರು ಮತ್ತು ಬೆಂಗಳೂರು ನಗರ ಜಿಲ್ಲೆಯ ಉಪ ಆಯುಕ್ತರು ಇದ್ದಾರೆ.

243 ವಾರ್ಡ್‌ಗಳ ಗಡಿಯನ್ನು ಮರುವಿನ್ಯಾಸ ಮಾಡಲಾಗುತ್ತದೆಯೇ ಅಥವಾ ವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬಿಬಿಎಂಪಿ ಕಾಯ್ದೆಯಲ್ಲಿ ವಾರ್ಡ್‌ಗಳನ್ನು 250ಕ್ಕೆ ಮತ್ತು ವಲಯಗಳನ್ನು 15ಕ್ಕೆ ಹೆಚ್ಚಿಸಲು ಅನುಮತಿ ಇದೆ. ಆದರೆ, ಮೊದಲ ಸಭೆಯಲ್ಲಿ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವ ವಿಷಯ ಚರ್ಚೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ವಾರ್ಡ್​ ಪುನರ್ ವಿಂಗಡಣೆ ಕುರಿತ ವರದಿ ಸಲ್ಲಿಸಲು ಸಮಿತಿಗೆ 12 ವಾರಗಳ ಗಡುವು ನೀಡಲಾಗಿದೆ.

ನಿಗದಿತ ಮಾರ್ಗಸೂಚಿಗಳು ಮತ್ತು ಸಂಬಂಧಿತ ಕಾನೂನುಗಳನ್ನು ಅನುಸರಿಸಿ, ವಾರ್ಡ್ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು ನಡೆಸಲು ನಾವು ರಾಜ್ಯ ಸರ್ಕಾರಕ್ಕೆ 12 ವಾರಗಳ ಕಾಲಾವಕಾಶ ನೀಡುತ್ತೇವೆ. ನ್ಯಾಯಾಲಯವು 12 ವಾರಗಳ ಅವಧಿಯ ನಂತರ ಆ ಕುರಿತು ಪರಿಶೀಲನೆ ನಡೆಸಲಿದೆ ಎಂದು ಕರ್ನಾಟಕ ಹೈಕೋರ್ಟ್‌ ಇತ್ತೀಚಿನ ಆದೇಶದಲ್ಲಿ ಉಲ್ಲೇಖಿಸಿತ್ತು.

ಇದನ್ನೂ ಓದಿ: BBMP Wards: ಬಿಬಿಎಂಪಿ ವಾರ್ಡ್​ ಪುನರ್​ ವಿಂಗಡಣೆಗೆ ಆಯೋಗ ರಚಿಸಿದ ಸರ್ಕಾರ

ಎರಡೂವರೆ ವರ್ಷಗಳಿಂದ ಬಾಕಿ ಉಳಿದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ನಡೆಯಲಿದೆ ಎಂಬ ಊಹಾಪೋಹಗಳು ಹಬ್ಬಿದ್ದವು. ಆದರೆ, ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ವಾರ್ಡ್ ವಿಂಗಡಣೆ ಮಾಡಿ 243ಕ್ಕೆ ನಿಗದಿಮಾಡಿದ್ದಕ್ಕೆ ಪ್ರತಿಯಾಗಿ ವಾರ್ಡ್ ಮರುವಿಂಗಡಣೆ ಮಾಡಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ಹೊಸದಾಗಿ ವಾರ್ಡ್ ಪುನರ್ ವಿಂಗಡಣೆ ಪ್ರಕ್ರಿಯೆಯು ಚುನಾವಣೆಯನ್ನು ವಿಳಂಬಗೊಳಿಸುವ ಸಾಧ್ಯತೆಯಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us