ಬೆಂಗಳೂರು: ಧೂಮಪಾನದ ಬಗ್ಗೆ ದೂರು ನೀಡುವುದಾಗಿ ಹೆದರಿಸಿ ವಾಹನ ಸವಾರನಿಂದ 95,000 ರೂ. ಸುಲಿಗೆ

ಸ್ಕೂಟರ್ ಚಾಲಕನೊಬ್ಬ, ಕಾರಿನೊಳಗೆ ಧೂಮಪಾನ ಮಾಡುವುದನ್ನು ವಿರೋಧಿಸಿ ಪೊಲೀಸರಿಗೆ ದೂರು ದಾಖಲಿಸುವುದಾಗಿ ಬೆದರಿಸಿ 95,000 ಹಣ ಮತ್ತು 30 ಗ್ರಾಂ ಚಿನ್ನವನ್ನ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನ ಬೆನ್ನಿಗಾನಹಳ್ಳಿ ಅಂಡರ್‌ಪಾಸ್‌ನಲ್ಲಿ ನಡೆದಿದೆ.

ಬೆಂಗಳೂರು: ಧೂಮಪಾನದ ಬಗ್ಗೆ ದೂರು ನೀಡುವುದಾಗಿ ಹೆದರಿಸಿ ವಾಹನ ಸವಾರನಿಂದ 95,000 ರೂ. ಸುಲಿಗೆ
ಸಾಂದರ್ಭಿಕ ಚಿತ್ರ
Edited By: ಕಿರಣ್ ಹನುಮಂತ್​ ಮಾದಾರ್

Updated on: Feb 25, 2023 | 12:13 PM

ಬೆಂಗಳೂರು: ಪೂರ್ವ ಬೆಂಗಳೂರಿನ ಬೆನ್ನಿಗಾನಹಳ್ಳಿ ಅಂಡರ್‌ಪಾಸ್‌ನಲ್ಲಿ ಸ್ಕೂಟರ್ ಚಾಲಕನೊಬ್ಬ, ಕಾರಿನೊಳಗೆ ಧೂಮಪಾನ ಮಾಡುವುದನ್ನು ವಿರೋಧಿಸಿ ಪೊಲೀಸರಿಗೆ ದೂರು ದಾಖಲಿಸುವುದಾಗಿ ಬೆದರಿಸಿ 95,000 ರೂ. ಮತ್ತು 30 ಗ್ರಾಂ ಚಿನ್ನವನ್ನ ಸುಲಿಗೆ ಮಾಡಿದ್ದಾನೆ ಎಂದು ಬಹುರಾಷ್ಟ್ರೀಯ ಬ್ಯಾಂಕಿಂಗ್ ಮತ್ತು ಹಣಕಾಸು ಸೇವಾ ಕಂಪನಿಯ 31 ವರ್ಷದ ಕ್ರೆಡಿಟ್ ಅಸೆಸ್‌ಮೆಂಟ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.

ಪೊಲೀಸರ ಪ್ರಕಾರ ನಾಗವಾರ ಪಾಳ್ಯದ ನಿವಾಸಿಯಾದ ಧನಂಜಯ್​ ನಾಯರ್​ ಅವರು ತಮ್ಮ ಕಾರಿನಲ್ಲಿ ಕಚೇರಿಗೆ ಹೋಗುತ್ತಿದ್ದರು. ಈ ವೇಳೆ ನಾಯರ್ ಕಾರಿನೊಳಗೆ ಸಿಗರೇಟ್ ಸೇದುತ್ತಿದ್ದುದನ್ನು ದುಷ್ಕರ್ಮಿ ಗಮನಿಸಿದ್ದಾನೆ. ಕೂಡಲೇ ಕಾರಿನ ಬಳಿ ಬಂದು, ಧೂಮಪಾನ ಮಾಡಿದ್ದಕ್ಕಾಗಿ ಪೊಲೀಸರು ಬಂಧಿಸುವುದಾಗಿ ದುಷ್ಕರ್ಮಿಯು ನಾಯರ್‌ಗೆ ಬೆದರಿಕೆ ಹಾಕಿದ್ದಾನೆ. ಬಳಿಕ ನಾಯರ್ ಅವರ ಕಾರಿನ ಬಾಗಿಲನ್ನ ಬಲವಂತವಾಗಿ ತೆರೆದು, ಒಳಗೆ ಹತ್ತಿದ್ದಾನೆ. ದುಷ್ಕರ್ಮಿಯು ಕೆಲವು ಗುರುತಿನ ಚೀಟಿಗಳನ್ನು ತೋರಿಸಿ, ನನಗೆ ಪೊಲೀಸ್ ಅಧಿಕಾರಿಗಳ ಪರಿಚಯವಿದೆ ಎಂದು ಹೇಳಿಕೊಂಡಿದ್ದಾನೆ. ಇದಲ್ಲದೆ ತನ್ನ ಬಳಿ ಗನ್​ ಇದೆ. ನಾನು ಹೇಳಿದ ಹಾಗೆ ಮಾಡು ಎಂದು ಹೆದರಿಸಿದ್ದಾನೆ.

ಇದನ್ನೂ ಓದಿ:ನಿಲ್ದಾಣದಿಂದ ಕಳ್ಳತನವಾಗಿದ್ದ ಸರ್ಕಾರಿ ಬಸ್: 13 ಗಂಟೆಯಲ್ಲೇ ಪತ್ತೆ ಹಚ್ಚಿದ ಪೊಲೀಸರು

ಬಳಿಕ ನಾಯರ್ ಅವರ ಮೊಬೈಲ್ ಫೋನ್ ಮತ್ತು ವ್ಯಾಲೆಟ್ ಅನ್ನು ಕಸಿದುಕೊಂಡು, ಎಟಿಎಂ ಬಳಿ ಅವರ ಕಾರನ್ನು ನಿಲ್ಲಿಸಿ ಹಣ ಡ್ರಾ ಮಾಡುವಂತೆ ಒತ್ತಾಯಿಸಿದ್ದಾನೆ. ನಾಯರ್ ಅವರ ಕ್ರೆಡಿಟ್ ಕಾರ್ಡ್ ಬಳಸಿ 50,000 ಮತ್ತು ಡೆಬಿಟ್ ಕಾರ್ಡ್‌ನಿಂದ 45,000 ರೂ. ಒಟ್ಟು 95,000 ರೂಪಾಯಿ ಜೊತೆಗೆ ಸುಮಾರು 30 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನು ಕಿತ್ತುಕೊಂಡಿದ್ದಾನೆ. ನಂತರ ದುಷ್ಕರ್ಮಿಯು ನಾಯರ್‌ಗೆ ಕೊಲೆ ಬೆದರಿಕೆ ಹಾಕಿ, ಈ ಘಟನೆಯನ್ನು ಯಾರಿಗಾದರೂ ಹೇಳಿದರೆ ನಿನ್ನ ಕುಟುಂಬವನ್ನ ನಾಶ ಮಾಡುವುದಾಗಿ ಎಚ್ಚರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ನಂತರ ಆತ ಬೆನ್ನಿಗಾನಹಳ್ಳಿ ಅಂಡರ್‌ಪಾಸ್‌ನಲ್ಲಿ ಬಿಟ್ಟು, ಸ್ಕೂಟರ್‌ನಲ್ಲಿ ವೇಗವಾಗಿ ಹೋಗಿದ್ದಾನಂತೆ. ಈ ವಿಷಯವನ್ನ ನಾಯರ್ ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಅವರು ಪೊಲೀಸ್ ಠಾಣೆಗೆ ದೂರು ದಾಖಲಿಸಲು ಹೇಳಿದರಂತೆ. ಬಳಿಕ ನಾಯರ್​ ರಾಮಮೂರ್ತಿನಗರ ಪೊಲೀಸ ಠಾಣೆಗೆ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 384 ರ ಅಡಿಯಲ್ಲಿ ಸುಲಿಗೆ ಪ್ರಕರಣವನ್ನು ದಾಖಲಿಸಿದ್ದಾರೆ.  ಅಂಡರ್‌ಪಾಸ್ ಮತ್ತು ಎಟಿಎಂ ನಡುವಿನ ವಿಸ್ತರಣೆಯಿಂದ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. ಆದರೆ ದುಷ್ಕರ್ಮಿ ಇನ್ನು ಸೆರೆಯಾಗಿಲ್ಲ. ಆರೋಪಿಯನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Web contact

TV9 Kannada

Read More
Follow Us